Advertisement

ಹೊಸಲು ಮಾರಮ್ಮದೇವಿ ಜಾತ್ರಾ ಮಹೋತ್ಸವ : ಜೀವಂತ ಕೋಳಿ ಎಸೆದು ಹರಕೆ ತೀರಿಸಿಕೊಂಡ ಭಕ್ತರು

08:14 PM Mar 21, 2022 | Team Udayavani |

ಹುಣಸೂರು : ಕೊರೋನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಸರಳವಾಗಿ ಆಚರಿಸಿಕೊಂಡು ಬಂದಿದ್ದ ಹುಣಸೂರು-ಮೈಸೂರು ಹೆದ್ದಾರಿಯ ಬಿಳಿಕೆರೆ ಜಂಕ್ಷನ್‌ನ ಮಲ್ಲಿನಾಥಪುರ ಬಳಿಯ ಹೊಸಲು ಮಾರಮ್ಮದೇವಿ ಜಾತ್ರಾ ಮಹೋತ್ಸವವನ್ನು ಭಕ್ತರು ಸಂಭ್ರಮ-ಸಡಗರದಿಂದ ಆಚರಿಸಿದರು.

Advertisement

ಮಾರಮ್ಮ ದೇವಸ್ಥಾನದ ಮೇಲೆ ಜೀವಂತ ಕೋಳಿ ಎಸೆದು ಹರಕೆ ತೀರಿಸುವ ವಿಶಿಷ್ಠಜಾತ್ರೆಗಾಗಿ ದೇವಾಲಯದಲ್ಲಿ ದೇವಿಗೆ ಸೋಮವಾರ ಮುಂಜಾನೆಯಿಂದಲೇ ವಿವಿಧ ಪೂಜಾಕೈಂಕರ್ಯ ನಡೆದವು. ಆನಂತರ ಸಂಪ್ರದಾಯದಂತೆ ಮಲ್ಲಿನಾಥಪುರ ಗ್ರಾಮದಲ್ಲಿರುವ ಬೀರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಚಿನ್ನಾಭರಣ, ಕಡಗದೊಂದಿಗೆ ಶೃಂಗರಿಸಿ, ಬೆಳ್ಳಿಯ ಮುಖವಾಡ ಹಾಕಿ ಅಲಂಕರಿಸಿ 2 ಕಿ.ಮಿದೂರದ ದೇವಾಲಯಕ್ಕೆ ಮಲ್ಲಿನಾಥಪುರದಿಂದ ಬಿರುಬಿಸಿಲ ನಡುವೆಯೇ ಬರಿಗಾಲಲ್ಲಿ ಮೆರವಣಿಗೆ ಮೂಲಕ ದೇವಸ್ಥಾನದವರಗೆ ಬಾಯಿಗೆ ಬೀಗಹಾಕಿದ್ದವರು, ದೇವರ ಅವಹಾಗಾನೆಗೆ ಒಳಗಾದ ಭಕ್ತರು ಕೊಂಬು, ಕಹಳೆ, ತಮಟೆ ಹಾಗೂ ಮಂಗಳ ವಾದ್ಯಕ್ಕೆ ತಕ್ಕಂತೆ ಕುಣಿಯುತ್ತಾ ದಾರಿಯುದ್ದಕ್ಕೂ ಈಡುಗಾಯಿ ಒಡೆಯುತ್ತಾ ಜಾತ್ರಾಮಾಳಕ್ಕೆ ಆಗಮಿಸಿದರು. ಸುತ್ತಮುತ್ತಲಿನ ಏಳೂರಿನ ಜನರು ಮಾತ್ರ ಸಂಭ್ರಮದಿಂದ ಭಾಗವಹಿಸಿದ್ದರು.

ದಾರಿಯುದ್ದಕ್ಕೂ ಇಡುಗಾಯಿ: ಪಾರಂಪಾರಿಕವಾಗಿ ನಡೆದು ಬಂದಂತೆ ಮಲ್ಲಿನಾಥಪುರದಿಂದ ಮಾರಮ್ಮನ ಆಯುಧ, ಒಡವೆ ಇಡುವ ಪೆಟ್ಟಿಗೆ(ಕುರ್ಜು)ಯನ್ನು ಹುಲಿವಾಹದಲ್ಲಿರಿಸಿ, ನಂದಿಕಂಬಹೊತ್ತು ಉತ್ಸವಮೂರ್ತಿಯೊಂದಿಗೆ ರಸ್ತೆಯುದ್ದಕ್ಕೂ ಇಡುಗಾಯಿ ಒಡೆಯುತ್ತಾ ಸಾಗಿ ಬಂದರೆ, ಮತ್ತೊಂದೆಡೆ ವೀರಗಾಸೆಕುಣಿತ, ಕುಣಿಯುವ ಗುಡ್ಡರಕುಣಿತ, ಕಾಡುಗುಡ್ಡರ ಕುಣಿತ ದೊಂದಿಗೆ ಬೀರೇಶ್ವರಸ್ವಾಮಿಗೆ ಉಘೇ ಉಘೇ ಎನ್ನುತ್ತಾ ಘೋಷಣೆ ಹಾಕುತ್ತಾ ಭಕ್ತಿ-ಭಾವ ಮೆರೆದರು. ಮಹಿಳೆಯರು ತಲೆ ಮೇಲೆ ತಂಬಿಟ್ಟು ಹೊತ್ತಿದ್ದರೆ, ಕೆಲವರು ಹರಕೆಯ ಬಾಯಿಗೆ ಬೀಗ ಹಾಕಿಸಿಕೊಂಡಿದ್ದರು.

ಜೀವಂತ ಕೋಳಿ ಎಸೆದರು: ಮದ್ಯಾಹ್ನದ ವೇಳೆಗೆ ದೇವರ(ಕುರ್ಜು) ಮೆರವಣಿಗೆ ದೇವಸ್ಥಾನದ ಬಳಿಗಾಗಮಿಸುತ್ತಿದ್ದಂತೆ ಹರಕೆ ಹೊತ್ತಿದ್ದ ಭಕ್ತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಸಾಂಕೇತಿಕವಾಗಿ ಜೀವಂತಕೋಳಿಯನ್ನು ದೇವಾಲಯದ ಮೇಲೆಸೆದರೆ, ದೇವಸ್ಥಾನದ ಎದುರು ದೇವಾಲಯಕ್ಕೆ ಸಂಬಂಧಿಸಿದ ಸುತ್ತಮುತ್ತಲ ಏಳೂರಿನ ಮುಖಂಡರು ಸಂಪ್ರದಾಯದಂತೆ ಕುರಿಮರಿ(ದೂಳುಮರಿಬಲಿ) ಬಲಿ ಕೊಟ್ಟು ಹರಕೆ ಸಲ್ಲಿಸಿದರು. ೮ ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಪೂಜೆ ಸಲ್ಲಿಸಿ ಧನ್ಯತಾಭಾವ ಮೆರೆದರು. ಪ್ರಸಾದ ವಿನಿಯೋಗ ಆಯೋಜಿಸಲಾಗಿತ್ತು.

Advertisement

ಏಳೂರಿನ ಗ್ರಾಮದೇವತೆ: ಹೊಸಲುಮಾರಮ್ಮ ದೇವಸ್ಥಾನ ಸುತ್ತ ಮುತ್ತಲಿನ ಏಳು ಗ್ರಾಮಕ್ಕೆ ಸೇರಿದ್ದಾಗಿದ್ದು, ಜಾತ್ರಾ ಮಹೋತ್ಸವಕ್ಕೆ ಮಲ್ಲಿನಾಥಪುರ, ಬಿಳಿಕೆರೆ, ಬೋಳನಹಳ್ಳಿ-ರಾಮೇನಹಳ್ಳಿ, ರಂಗಯ್ಯನಕೊಪ್ಪಲು, ಎಮ್ಮೆಕೊಪ್ಪಲು, ಮೈದನಹಳ್ಳಿ, ರಾಮಸ್ಥರು ಸೇರಿ ದೇವಾಲಯದ ಆವರಣದ ಸುತ್ತಲಿನಲ್ಲಿರುವ ಮರದ ನೆರಳಲ್ಲಿ ನಿಂತು ದೇವರ ಮೆರವಣಿಗೆ ವೀಕ್ಷಿಸಿ, ದೆವಾಲಯದಲ್ಲಿ ಪೂಜೆ ಸಲ್ಲಿಸಿದರು. ಸಂಜೆ ಮತ್ತೆ ದೇವರಿಗೆ ಸಂಬಂಧಿಸಿದ ಒಡವೆ(ಭಂಡಾರ) ಆಯುಧಗಳು ಸೇರಿದಂತೆ ಎಲ್ಲವನ್ನೂ ಮೆರವಣಿಗೆಯಲ್ಲಿ ತಂದು ಗ್ರಾಮದಲ್ಲಿ ಪೂಜೆ ಸಲ್ಲಿಸಿದ ನಂತರ ಸ್ವಸ್ಥಾನದಲ್ಲಿರಿಸಿದರು. ಯಜನಾನ್‌ರಾಜೇಗೌಡ, ಎಂ.ಎಸ್.ಸ್ವಾಮಿಗೌಡ, ಮುಖಂಡ ಸಣ್ಣಬೀರೇಗೌಡ, ಎಸ್.ಕುಮಾರ್, ಪೂಜಾರಿ ಹಾಲೇಗೌಡ, ಮಾದೇಗೌಡ, ಅರುಣ್ ಕುಮಾರ್, ನವೀನ್ ಮತ್ತಿತರರು ಜಾತ್ರಾಯಶಸ್ವಿಗಾಗಿ ದುಡಿದರು.

ದಣಿವಾರಿಸಿದ ಮಜ್ಜಿಗೆ: ಹುಣಸೂರಿನ ಶಾಸಕ ಎಚ್.ಪಿ.ಮಂಜುನಾಥ್ ನೇತೃತ್ವದ ಸ್ನೇಹಜೀವಿ ಸಂಸ್ಥೆವತಿಯಿಂದ ಜಾತ್ರೆಗಾಗಮಿಸಿದ್ದ ಭಕ್ತರಿಗೆ ಮಸಾಲೆ ಮಜ್ಜಿಗೆ ವಿತರಿಸಿ ದಣಿವಾರಿಸಿದರು. ಪೊಲೀಸ್‌ನಿರೀಕ್ಷಕ ರವಿಕುಮಾರ್ ನೇತೃತ್ವದಲ್ಲಿ ಪೋಲೀಸರು ಬಿಗಿಬಂದೋಬಸ್ತ್ ಏರ್ಪಡಿಸಿದ್ದರು.

ಇಷ್ಟವರ್ಷ ಜಾತ್ರೆಯಲ್ಲಿ ಅಂಗಡಿ ಹಾಕಲು ಹರಾಜು ಕೂಗಿ ಜಾತ್ರಾಮಾಳದಲ್ಲಿ ಹಾಕವ ಅಂಗಡಿಗಳಿಂದ ಸುಂಕ ಎತ್ತಲಾಗುತ್ತಿತ್ತು. ಎರಡು ವರ್ಷಗಳ ಹಿಂದೆ ಮುಜರಾಯಿ ಇಲಾಖೆ ಒಳಪಟ್ಟ ನಂತರ ಸುಂಕ ಎತ್ತುವುದಕ್ಕೆ ವಿನಾಯತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next