Advertisement

ಹೊಸಬೆಟ್ಟು: ಗ್ರಾಮಸ್ಥರ ಶ್ರಮದಿಂದ ತುಂಬಿತು ಜೀವಜಲ

10:25 AM Dec 24, 2018 | Team Udayavani |

ಮೂಡುಬಿದಿರೆ: ನೀರಿನ ಬಗ್ಗೆ ಕಾಳಜಿ ವಹಿಸಬೇಕಾದ ಸಮಯ ಸನ್ನಿಹಿತವಾಗಿದೆ. ಹಾಗೆಂದು ಎಲ್ಲದಕ್ಕೂ ಸರಕಾರವನ್ನಾಗಲಿ, ಜನಪ್ರತಿನಿಧಿಗಳನ್ನಾಗಲಿ ನೆಚ್ಚಿಕೊಂಡರೆ ಸಾಧ್ಯವಿಲ್ಲ. ಆದ್ದರಿಂದ ಯಾರನ್ನೂ ಕಾಯದೆ, ಸರಕಾರದ ಅನುದಾನವನ್ನೂ ಉಪಯೋಗಿಸದೆ ಗ್ರಾಮಸ್ಥರೇ ಒಗ್ಗಟ್ಟಿನಿಂದ ಶ್ರಮದಾನದ ಮೂಲಕ ಜೀವಜಲವನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿ ಯಶಸ್ಸು ಕಂಡವರ, ಕಾಣುತ್ತಿರುವವರ ಸಾಲಿಗೆ ಈಗ ಮೂಡುಬಿದಿರೆ ತಾಲೂಕಿನ ಹೊಸಬೆಟ್ಟು ಪ್ರದೇಶದ ಗ್ರಾಮಸ್ಥರೂ ಸೇರುತ್ತಾರೆ.

Advertisement

ಹೊಸಬೆಟ್ಟು ಗ್ರಾಮದ ಶೇಡಿಗುರಿ ಬಳಿಯ ಗುಡ್ಡದಲ್ಲಿ ಹುಟ್ಟುವ ಜಲಧಾರೆಯೊಂದು ಮುಂದೆ ತೋಡು ಆಗಿ ಬಲಗೊಂಡು ಗ್ರಾಮದ ಮಧ್ಯಭಾಗದಲ್ಲಿ ಹರಿಯುತ್ತಾ ಟೆಲ್ಲಿಸ್‌ ನಗರ ಮೂಲಕ ಹಾದು ಪುಚ್ಚಮೊಗರು ಗ್ರಾಮದಲ್ಲಿ ಫಲ್ಗುಣಿ ನದಿಯನ್ನು ಸೇರುತ್ತದೆ. ಈ ಜಲಧಾರೆ ಹೊಸಬೆಟ್ಟು ಗ್ರಾಮಸ್ಥರ  ಜೀವಜಲವಾಗಿದೆ. ಶೇ.90ಕ್ಕೂ ಹೆಚ್ಚು ಕೃಷಿಕರಿಂದಲೇ ತುಂಬಿರುವ ಹೊಸಬೆಟ್ಟು ಗ್ರಾಮಕ್ಕೆ ಬೇರೆ ಯಾವುದೇ ನೀರಿನ ಆಸರೆ ಇಲ್ಲ. 

ಕಳಪೆ ಕಾಮಗಾರಿ
2006-07ನೇ ಸಾಲಿನಲ್ಲಿ ರಾಷ್ಟ್ರೀಯ ಜಲಾನಯನ ಯೋಜನೆಯಡಿಯಲ್ಲಿ ಈ ತೋಡಿಗೆ ಅಡ್ಡಲಾಗಿ ಕೆಲವು ಕಡೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು. ಟೆಲ್ಲಿಸ್‌ ನಗರ ಬಳಿಯ ಬೋರಹಿತ್ಲು ಮತ್ತು ಹೊಸಬೆಟ್ಟು- ಪುಚ್ಚಮೊಗರು ಗಡಿಭಾಗದಲ್ಲಿರುವ ಮೆಂಡೋನ್ಸರ ಕೋಡಿ ಕಿಂಡಿ ಅಣೆಕಟ್ಟುಗಳೂ ಸೇರಿವೆ. ಆದರೆ ಕಳಪೆ ಕಾಮಗಾರಿಯಿಂದಾಗಿ ಈ ಅಣೆಕಟ್ಟುಗಳು ದುರ್ಬಲವಾಗಿ, ನಿರ್ಮಾಣವಾದ ಒಂದೇ ವರ್ಷಕ್ಕೆ ಮಧ್ಯದ ಪಿಲ್ಲರ್‌ ಬಿಟ್ಟರೆ ಉಳಿದ ಭಾಗವೆಲ್ಲ ನೀರುಪಾಲಾಗಿ ಹೋಗುವಂತಾಯಿತು. ಇದರ ಪರಿಣಾಮ ಕಳೆದ ಒಂದು ದಶಕದಿಂದ ಇಲ್ಲಿನ ಕೃಷಿ ಆಧಾರಿತ ಕುಟುಂಬಗಳು ನೀರಿಗಾಗಿ ಪರದಾಡುವಂತಾಗಿತ್ತು.

ಚರ್ಚ್‌ ಧರ್ಮಗುರುಗಳ ಮಾರ್ಗದರ್ಶನ
ಜನರ ಬವಣೆಯನ್ನು ಅರಿತ ಹೊಸಬೆಟ್ಟು ಚರ್ಚ್‌ ಧರ್ಮಗುರು ವಂ| ಸಂತೋಷ್‌ ರೋಡ್ರಿಗಸ್‌ ಅವರು ಸೂಕ್ತ ಮಾರ್ಗದರ್ಶನದ ಮೂಲಕ ಈಗ ಇಲ್ಲಿಗೆ ಜೀವ ಜಲ ಸಿಕ್ಕಿದಂತಾಗಿದೆ. ಅವರ ಮಾರ್ಗದರ್ಶನದಲ್ಲಿ, ಕೆಥೋಲಿಕ್‌ ಸಭಾ ಹೊಸಬೆಟ್ಟು ಘಟಕದ ಮುಂದಾಳತ್ವದಲ್ಲಿ ಹೊಸಬೆಟ್ಟು ಗ್ರಾಮದ 25ಕ್ಕೂ ಹೆಚ್ಚು ಮಂದಿ ಒಟ್ಟು ಸೇರಿ ಊರಿನ ಹಿತಕ್ಕಾಗಿ ಶ್ರಮದಾನ ಮಾಡುವ ಪಣತೊಟ್ಟರು. ಕೆಥೋಲಿಕ್‌ ಸಭಾದ ಅಧ್ಯಕ್ಷ ವಿನ್ಸೆಂಟ್‌ ಸಾಂತ್ಮಯರ್‌ ಅವರ ನೇತೃತ್ವದಲ್ಲಿ ಒಗ್ಗಟ್ಟಾದ ಸ್ಥಳೀಯ ಶ್ರಮಿಕರು ಎರಡು ದಿನಗಳ ಶ್ರಮದಾನದ ಮೂಲಕ ಟೆಲ್ಲಿಸ್‌ ನಗರದ ಬೋರಹಿತ್ಲು ಕಿಂಡಿ ಅಣೆಕಟ್ಟು ಮತ್ತು ಹೊಸಬೆಟ್ಟು- ಪುಚ್ಚಮೊಗರು ಗ್ರಾಮಗಳ ಗಡಿಭಾಗದ ಮೆಂಡೋನ್ಸರ ಕೋಡಿಯಲ್ಲಿ ಕಿಂಡಿ ಅಣೆಕಟ್ಟುಗಳಿದ್ದ ಜಾಗದಲ್ಲಿ ಅಣೆಕಟ್ಟಿನ ಪಳೆಯುಳಿಕೆಗಳನ್ನು ಬಳಸಿಕೊಂಡು ತಾತ್ಕಾಲಿಕ ಕಟ್ಟಗಳನ್ನು ನಿರ್ಮಿಸುವ ಮೂಲಕ ಹೊಸಬೆಟ್ಟು ಗ್ರಾಮಕ್ಕೆ ಜೀವಜಲವನ್ನು ತುಂಬಿಸಿಕೊಟ್ಟಿದ್ದಾರೆ.

ಬಾವಿ, ಕೆರೆಗಳಲ್ಲಿ ಜಲಮರುಪೂರಣ
ಗಟ್ಟಿಮುಟ್ಟಾದ ಅಡಿಕೆ ಮರಗಳನ್ನು ಎರಡು ಭಾಗವಾಗಿ ಸೀಳಿ ಸಲಾಕೆ ಮತ್ತು ಮಣ್ಣನ್ನು ಉಪಯೋಗಿಸಿ ಈ ನೀರಿನ ಕಟ್ಟಗಳನ್ನು ನಿರ್ಮಿಸಲಾಗಿದೆ. ಸುಮಾರು 8 ಅಡಿ ಆಳ ಮತ್ತು 25 ಅಡಿ ಅಗಲವಿರುವ ಈ ತೋಡಿನಲ್ಲಿ ಈಗ ಟೆಲ್ಲಿಸ್‌ ನಗರ ಬಳಿ ಸುಮಾರು 800 ಮೀಟರ್‌ ಉದ್ದಕ್ಕೆ ನೀರು ಶೇಖರಣೆಯಾಗಿದೆ. ಹೊಸಬೆಟ್ಟು- ಪುಚ್ಚಮೊಗರು ಗಡಿ ಭಾಗದಲ್ಲೂ ಸುಮಾರು 500 ಮೀಟರ್‌ ಉದ್ದಕ್ಕೆ ತೋಡಿನಲ್ಲಿ ನೀರಿನ ಶೇಖರಣೆಯಾಗಿದೆ. ಇಷ್ಟರಲ್ಲೇ ಬತ್ತಿ ಹೋಗಬೇಕಾಗಿದ್ದ ಈ ಪರಿಸರದ ಬಾವಿಗಳು ಮತ್ತು ಕೆರೆಗಳಿಗೆ ಅಂತರ್ಜಲದ ಮೂಲಕ ನೀರಿನ ಮರುಪೂರಣವಾಗಿದ್ದು, ಇಲ್ಲಿನ ಬಾವಿಗಳು ತುಂಬಿ ತುಳುಕುತ್ತಿವೆ. ಪರಿಶ್ರಮಪಟ್ಟವರ ಮುಖದಲ್ಲಿ ನಗು ಚಿಮ್ಮುತ್ತಿದೆ.

Advertisement

 ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next