ವಿಜಯಪುರ: ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದು ಮಹಿಳಾ ವಿಶ್ವಕಪ್ನಲ್ಲಿ ತಂಡವನ್ನು ಅಂತಿಮ ಘಟ್ಟಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜಯಪುರದ ಬೌಲರ್ ರಾಜೇಶ್ವರಿ ಗಾಯಕವಾಡ ಅವರಿಗೆ ರಾಜ್ಯ ಸರ್ಕಾರ ವಿಶೇಷ ಗೌರವ ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಬಿ. ಪಾಟೀಲ ತಿಳಿಸಿದ್ದಾರೆ. ಗುಮ್ಮಟ ನಗರಿ ಬಾಲೆ ರಾಜೇಶ್ವರಿ ಗಾಯಕವಾಡ ಸಾಧನೆ ಕುರಿತು ಹೆಮ್ಮೆ ಎನಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿರುವ ಸಚಿವರು, ರಾಜೇಶ್ವರಿ ಬಿಎಲ್ಡಿಇ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿ ಆಗಿದ್ದಾಗಲೇ ಕ್ರಿಕೆಟ್ ಆಟದಲ್ಲಿ ಮಿಂಚಿದ್ದರು. ಬಡ ಕುಟುಂಬದಿಂದ ಬಂದು ಇಡಿ ದೇಶವೇ ಬೆರಗಾಗುವಂತೆ ಸಾಧನೆ ತೋರಿದ ರಾಜೇಶ್ವರಿಯ ಕ್ರೀಡಾ ಕಾರ್ಯಗಳಿಗೆ ಬಿಎಲ್ಡಿಇ ಸಂಸ್ಥೆ ಅಗತ್ಯ ಪ್ರೋತ್ಸಾಹ ನೀಡಿತ್ತು ಎಂದಿದ್ದಾರೆ. ರಾಜ್ಯ ಸರ್ಕಾರ ಗೌರವ ಮಾತ್ರವಲ್ಲದೇ ವಿಜಯಪುರ ನಗರದಲ್ಲೂ ಶೀಘ್ರವೇ ಸನ್ಮಾನಿಸುವುದಾಗಿ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.