Advertisement

ಮೋಜಿನ ಜೀವನಕ್ಕಾಗಿ ಮನೆಗಳ್ಳತನ: ನಾಲ್ವರ ಬಂಧನ

12:30 PM Dec 15, 2018 | Team Udayavani |

ಬೆಂಗಳೂರು: ಮನೆ ನಿರ್ವಹಣೆ ಹಾಗೂ ಮೋಜಿನ ಜೀವನಕ್ಕಾಗಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್‌ ಅಲಿಯಾಸ್‌ ಜಂಗ್ಲಿ ಅಲಿಯಾಸ್‌ ರವಿಕುಮಾರ್‌ (30) ಬಂಧಿತ.

Advertisement

ಆರೋಪಿ ಕಳೆದ ಐದಾರು ವರ್ಷಗಳಿಂದ ಮನೆಗಳ್ಳತನ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದು, ಈತನ ವಿರುದ್ಧ ಕೊಡಿಗೆಹಳ್ಳಿ, ಸಿ.ಕೆ.ಅಚ್ಚುಕಟ್ಟು ಠಾಣೆ, ಗಿರಿನಗರ, ವಿಜಯನಗರ, ಬಸವೇಶ್ವರನಗರ ಮತ್ತು ಅನ್ನಪೂರ್ಣೇಶ್ವರಿನಗರ ಠಾಣೆ ಸೇರಿ ನಗರದ ವಿವಿಧ ಠಾಣೆಗಳಲ್ಲಿ 40ಕ್ಕೂ ಹೆಚ್ಚು ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ.

ಈತನಿಂದ 16,500 ಲಕ್ಷ ರೂ. ಮೌಲ್ಯದ 520 ಗ್ರಾಂ ತೂಕದ ಚಿನ್ನಾಭರಣ ಮತ್ತು 3 ಕೆ.ಜಿ. ಬೆಳ್ಳಿಯ ವಸ್ತುಗಳು ವಶಕ್ಕೆ ಪಡೆಯಲಾಗಿವೆ ಎಂದು ಪೊಲೀಸರು ಹೇಳಿದರು. ಆರೋಪಿ ಕೆಲ ತಿಂಗಳ ಹಿಂದೆ ಮನೆಗಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ.

ಈ ವೇಳೆ ಪರಿಚಯವಾದ ಪ್ರತಾಪ್‌ ಮತ್ತು ಸೆಲ್ವ ಜತೆಗೂಡಿ ಅನ್ನಪೂರ್ಣೇಶ್ವರಿನಗರ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮನೆಯೊಂದರ ಬೀಗ ಮುರಿದು ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ಕಳವು ಮಾಡಿದ್ದ. ಕಾರ್ಯಾಚರಣೆ ವೇಳೆ ಆರೋಪಿಯನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಪ್ರತಾಪ್‌ ಮತ್ತು ಸೆಲ್ವನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಜೀವನ ನಿರ್ವಹಣೆ, ಮೋಜು: ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಒಂದು ಮಗು ಇದೆ. ಕೆ.ಆರ್‌.ಪುರದಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬ ಸಮೇತ ವಾಸವಾಗಿದ್ದಾನೆ. ಯಾವುದೇ ಕೆಲಸಕ್ಕೆ ಹೋಗದ ಪ್ರಕಾಶ್‌, ಮನೆಗಳ್ಳತನ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾನೆ.

Advertisement

ಈ ಕೃತ್ಯದಿಂದ ಬಂದ ಹಣದಲ್ಲಿ ಮನೆ ಬಾಡಿಗೆ, ಕುಟುಂಬ ನಿರ್ವಹಣೆ, ಮಗುವಿನ ವಿದ್ಯಾಭ್ಯಾಸಕ್ಕೆ ವ್ಯಯಿಸುತ್ತಿದ್ದ. ಜತೆಗೆ ತನ್ನ ಮೋಜಿನ ಜೀವನಕ್ಕೂ ಬೇಕಾಬಿಟ್ಟಿ ಖರ್ಚು ಮಾಡುತ್ತಿದ್ದ. ಮನೆಗಳ್ಳತನ ಎಸಗಿ ಜೈಲು ಸೇರಿದ್ದ ಪ್ರಕಾಶ್‌, ಕೆಲ ತಿಂಗಳ ಬಳಿಕ ಜಾಮೀನು ಪಡೆದು ಹೊರಬಂದು ಮತ್ತೆ ಅದೇ ಕೃತ್ಯದಲ್ಲಿ ತೊಡಗುತ್ತಿದ್ದ ಎಂದು ಪೊಲೀಸರು ಹೇಳಿದರು.

ಮೋಜಿನ ಜೀವನಕ್ಕಾಗಿ ಸುಲಿಗೆ-ಮೂವರ ಬಂಧನ: ಮತ್ತೂಂದು ಪ್ರಕರಣದಲ್ಲಿ ಮೋಜಿನ ಜೀವನಕ್ಕಾಗಿ ಸಾರ್ವಜನಿಕರನ್ನು ಸುಲಿಗೆ ಮಾಡುತ್ತಿದ್ದ ಮೂವರು ಯುವಕರು ಚಂದ್ರಲೇಔಟ್‌ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಗಂಗೊಂಡನಹಳ್ಳಿ ನಿವಾಸಿ ಸೈಯದ್‌ ಮಜಾಹಿದ್‌ ಅಲಿಯಾಸ್‌ ಸೈಲೆಂಟ್‌(19), ಅರ್ಬಾಜ್‌ ಖಾನ್‌ ಅಲಿಯಾಸ್‌ ಗಿಡ್ಡ (19), ಉಮರ್‌ ಫಾರೂಕ್‌(19) ಬಂಧಿತರು.

ಇವರಿಂದ 3,50 ಲಕ್ಷ ರೂ. ಮೌಲ್ಯದ 3 ಮೊಬೈಲ್‌, 3 ದ್ವಿಚಕ್ರ ವಾಹನಗಳು ಮತ್ತು 11,500 ರೂ. ನಗದು ವಶಪಡಿಸಿಕೊಳ್ಳಲಾಗಿದೆ.  ಆರೋಪಿಗಳು ತಮ್ಮ ಮೋಜಿನ ಜೀವನ ಹಾಗೂ ಬೈಕ್‌ ವಿಲ್ಹಿಂಗ್‌ ಮಾಡುವ ಸಲುವಾಗಿ ಸಾರ್ವಜನಿಕರನ್ನು ಅಡ್ಡಗಟ್ಟಿ ಮೊಬೈಲ್‌ ಹಾಗೂ ನಗದು ಸುಲಿಗೆ ಮಾಡುತ್ತಿದ್ದರು.

ಈ ಹಿಂದೆಯೂ ಮೂವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದರು. ಆದರೆ, ಅಪ್ರಾಪ್ತರಾಗಿದ್ದರಿಂದ ಪ್ರಕರಣ ದಾಖಲಾಗಿರಲಿಲ್ಲ.ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು. ಆದರೆ, ಇದೀಗ ಮತ್ತೆ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.

ಬೈಕ್‌ ವಿಲ್ಹಿಂಗ್‌: ಆರೋಪಿಗಳ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಈ ಮಧ್ಯೆ ಮೂವರು ಮೋಜಿನ ಜೀವನಕ್ಕೆ ಮಾರು ಹೋಗಿದ್ದು, ರಾತ್ರಿ ವೇಳೆ ಬೈಕ್‌ ವಿಲ್ಹಿಂಗ್‌ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದರು.

ಆದರೆ, ಮೂವರ ಬಳಿ ಬೈಕ್‌ಗಳಿಲ್ಲ. ಹೀಗಾಗಿ ರಾತ್ರಿ ವೇಳೆ ಸಾರ್ವಜನಿಕರನ್ನು ಅಡ್ಡಗಟ್ಟಿ ಹಣ, ಮೊಬೈಲ್‌ ಮಾತ್ರವಲ್ಲದೆ, ಬೈಕ್‌ಗಳನ್ನು ಕಳವು ಮಾಡಿ, ವಿಲ್ಹಿಂಗ್‌ ಮಾಡುತ್ತ ಮೋಜು ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು. ಪ್ರಕರಣ ಚಂದ್ರಲೇಔಟ್‌ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next