Advertisement

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

01:15 PM Dec 29, 2023 | Team Udayavani |

ಸಂಪತ್ತಿನ ಅಹಮಿಕೆ ಮತ್ತು ವರ್ತನೆ ಯಲ್ಲಿನ ಉದ್ಧಟತನದ ಬಗೆಗಿನ ಪೋಷಕ ರೊಬ್ಬರ ಹತಾಶೆಯನ್ನು ಗ್ರಹಿಸಿದೆ. ವಿಚಿತ್ರ ವೆಂದರೆ ಅದು ತಮ್ಮದೇ ಮಕ್ಕಳು, ಮೊಮ್ಮಕ್ಕಳ ಬಗೆಗಿನ ಹತಾಶೆ!. ವಿಷಯ ಇಷ್ಟೇ, ಒಂದರವತ್ತೋ-ಎಪ್ಪತ್ತೋ ವರ್ಷ ಬದುಕುವ ಮನುಷ್ಯನಿಗೆ ಮಕ್ಕಳು, ಮೊಮ್ಮಕ್ಕಳು ಪರಸ್ಪರ ಪ್ರೀತಿಪಾತ್ರರಾಗಿರಬಹುದು, ಅದರಾಚೆಯ ತಲೆಮಾರಿಗೆ ಅವನೊಬ್ಬ ಅನಾಮಿಕ, ಮೂರನೇ ವ್ಯಕ್ತಿ.

Advertisement

ಜೀವಿತದುದ್ದಕ್ಕೂ ಅನ್ನನೀರು ಬಿಟ್ಟು, ನಿದ್ದೆಗೆಟ್ಟು, ದುರಾಸೆಯಲ್ಲಿ ಅಷ್ಟಿಷ್ಟು ಕೂಡಿಟ್ಟು ಹೋದವರನ್ನು ಅವರದೇ ಮೂರನೇ ತಲೆ ಮಾರಿಗೆ ಸ್ಮರಿಸಿಕೊಳ್ಳಲೂ ಅಸಾಧ್ಯ ವಾಗಿರುವ ಸಂದರ್ಭದಲ್ಲಿ ಅತಿಯಾದ ಸಂಪತ್ತಿನ ಕ್ರೋಡೀ ಕರಣವೊಂದು ವ್ಯರ್ಥ ಸಾಧನೆಯಲ್ಲವೇ!?. ಕೆಲವರಂತೂ ಕಡುಸ್ವಾರ್ಥಿಗಳಾಗಿ, ದುರ್ಬಲರನ್ನು ಶೋಷಿಸಿ, ಶ್ರಮಿಕವರ್ಗದ ಬೆವರು-ನೆತ್ತರು ಹೀರಿದವರಿದ್ದಾರೆ. ಹಾಗೆ ಮೋಸ-ವಂಚನೆ, ಅಕ್ರಮ ದಂಧೆಗಳಲ್ಲಿ ಕಾನೂನು ಕಣ್ಣಿಗೆ ಮಣ್ಣೆರಚಿ ಹತ್ತಾರು ತಲೆ ಮಾರು ಕೂತು ತಿಂದರೂ ಕರಗದಷ್ಟು ಹಣ- ಆಸ್ತಿಗಳನ್ನೆಲ್ಲ ಸಂಪಾದಿಸಿಟ್ಟು ಸತ್ತರದು ಪಾಪಕರ್ಮವಲ್ಲದೆ ಮತ್ತೇನು!?.

ಬದುಕಿನ ನಿರ್ವಹಣೆ ದುಡ್ಡು ದೊಡ್ಡದೆ ನಿಸಿದರೂ, ಅದೇ ಎಲ್ಲವೂ ಅಲ್ಲವಲ್ಲ. ಅತಿ ಯಾದ ಧನದಾಹವು ಯಾವಾಗಲೂ ಅಪಾಯ ಕಾರಿಯೇ. ಆದ್ದರಿಂದ ಇವತ್ತಿನ ಜಮಾನವು ಹಣ, ಆಸ್ತಿ, ಅಧಿಕಾರ, ಅಂತಸ್ತುಗಳೆಲ್ಲ ಅದೆಷ್ಟು ಕ್ಷಣಿಕ ಅನ್ನೋದನ್ನು ಶೀಘ್ರವಾಗಿ ಅರ್ಥೈಸಿ ಕೊಳ್ಳಬೇಕು. ದಿಢೀರ್‌ ಶ್ರೀಮಂತಿಕೆಯು ಮೋಸ, ವಂಚನೆ, ದುರಾಸೆ, ದೌರ್ಜನ್ಯಗಳ ಮೊತ್ತ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಅರಿಯಬೇಕು. ಅಡ್ಡದಾರಿಯಲ್ಲಿ ಹೋದವರಿಗೆ ಮಾತ್ರ ದಿಢೀರ್‌ ಹಣ-ಯಶಸ್ಸು ಪ್ರಾಪ್ತವಾ ಗುತ್ತದೆಂಬ ಅರಿವಿನಲ್ಲಿ ಬಾಹ್ಯಾಡಂಬರ, ಡಾಂಭಿಕತೆಗಳನ್ನು ಮೀರಬಲ್ಲ ಘನವ್ಯಕ್ತಿತ್ವದ ಕಡೆಗೆ ಎಳೆಮನಸುಗಳು ಹೆಚ್ಚೆಚ್ಚು ಆಕರ್ಷಿ ತರಾಗಬೇಕು. ಸಹಜತೆ ಮತ್ತು ಸರಳತೆಗಳಲ್ಲಿ ಬದುಕಿನ ಸೌಂದರ್ಯವನ್ನು ಗುರುತಿಸುವ ಸೂಕ್ಷ್ಮತೆ, ಸಂವೇದನೆಗಳು ಸಮಾಜದಲ್ಲಿ ಬೆಳೆಯುವುದು ಅಪೇಕ್ಷಣೀಯ. ಇರುವವರು ಇಲ್ಲದವರೊಟ್ಟಿಗೆ ಹಂಚಿಕೊಳ್ಳುವ ಪ್ರಯತ್ನ ದಲ್ಲಿಯೇ ಋಣಭಾರ ಕಳೆದುಕೊಳ್ಳುವ ಮತ್ತು ದೇವರನ್ನು ತಲುಪುವ ಮಾರ್ಗವನ್ನು ಕಂಡುಕೊಳ್ಳಬೇಕು.

“ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ’ ಎನ್ನುವ ಹಿರಿಯರ ಮಾತಿನ ನೈಜ ಕಳಕಳಿ ಅರ್ಥವಾದರೆ ಚೆನ್ನ. ಮಕ್ಕಳಿಗೆ ಆಸ್ತಿ ಮಾಡಿಟ್ಟರೆ ಅವರೇನು ಮಾಡಬೇಕು?!. ಅಗಾಧ ಸಾಮರ್ಥ್ಯ, ಅವಕಾಶಗಳೊಂದಿಗೆ ಹುಟ್ಟಿ ಬರುವ ಮಕ್ಕಳು ತಮ್ಮ ಆಶಯ, ನಿರೀಕ್ಷೆಯ ಬದುಕು ಕಟ್ಟಿ ಕೊಳ್ಳುವ ಮನೋಮಿತಿಗೆ ನಿಯಂತ್ರಣ ಯಾಕೆ?. ಕೇಳುವ ಮೊದಲೇ ಜಗತ್ತಿನ ಸಕಲ ಸೌಲಭ್ಯಗಳನ್ನೂ ತಮ್ಮ ಮಕ್ಕಳಿಗೆ ಒದಗಿಸಬೇಕೆನ್ನುವ ಹಪಾಹಪಿಯಲ್ಲಿ ತಮ್ಮ ಅಮೂಲ್ಯ ಬಾಳನ್ನೇ ತೇದಿಕೊಳ್ಳುವ ಬಹುತೇಕ ಪೋಷಕರು ನಿರೀಕ್ಷೆ ಈಡೇರದಿದ್ದಾಗ ಹತಾಶ ರಾಗುವುದು ಸಹಜವೇ. ಬದಲಾಗಿ, ಮಕ್ಕಳನ್ನು ಚೆನ್ನಾಗಿ ಸಾಕಿ, ವಿಶಾಲ ಸಾಧ್ಯತೆ ಗಳನ್ನು ಅವರಿಗೇ ಬಿಟ್ಟು, ಬಾಳ್ವೆಗೆ ಬೇಕಿರುವ ಕೌಶಲ, ಅರಿವು, ವ್ಯಕ್ತಿತ್ವವನ್ನು ಕರುಣಿಸಬೇಕು. ಬದುಕಿನ ಸಾರ್ಥಕತೆಗೆ ಅಷ್ಟು ಸಾಕು. ಜೀವಮಾನವಿಡೀ ತಾವು ಸಂಪತ್ತಿನ ಕ್ರೋಡೀಕರಣವನ್ನೇ ವ್ರತದಂತೆ ಆಚರಿಸುತ್ತಾ ಹೋದರೆ ಎಳೆಯ ಕುಡಿಗಳಿಗೆ ಬದುಕಿನ ಅರ್ಥ ತಿಳಿಯುವುದಾದರೂ ಹೇಗೆ?.

ಮಕ್ಕಳು ಹಿರಿಯರ ನುಡಿಗಳಿಗಿಂತ ನಡೆ ಗಳನ್ನೇ ಹೆಚ್ಚು ಅನುಕರಿಸುವವರು ಮತ್ತು ಅನುಸರಿಸುವವರು. ಹಾಗಾಗಿ ಮನೆಯ ಹಿರಿ ಯರು ತಮ್ಮ ತಿಳಿವಳಿಕೆ ಮತ್ತು ನಡವಳಿ ಕೆಗಳನ್ನು ಮೊದಲು ತಿದ್ದಿಕೊಳ್ಳಬೇಕು. ಖಲೀಲ್‌ ಗಿಬ್ರಾನ್‌ ಹೇಳುವಂತೆ “ಬಿಲ್ಲು ಬಾಗಿದಷ್ಟೂ ಬಾಣ ಮುಂದೆ ಹೋಗುತ್ತದೆ’. ತಾವು ಸದಾ ಮೊಬೈಲ್‌, ಟಿವಿ ರಿಮೋಟ್‌ ಹಿಡಿದು ಮಕ್ಕಳ ಕೈಲಿ ಪುಸ್ತಕವಿರಲಿ ಅಂತ ಬಯಸುವುದು ಸರಿಯಲ್ಲ. ಆರೋಗ್ಯಕರ ಅಭ್ಯಾಸ- ಹವ್ಯಾ ಸಗಳಿಗೆ ಮನೆಮಂದಿಯೇ ಮೊದಲ ಪ್ರೇರಣೆಯಾಗಬೇಕಾದ್ದು. ಮನೆಯ ಪರಿಸರವೇ ತಾಜಾ ಮಾದರಿಯಾಗಿ ಪೊರೆಯಬೇಕು.

Advertisement

ಮಕ್ಕಳಿಗೆ ಸಂಸ್ಕಾರ, ಹೊಣೆಗಾರಿಕೆ ಮತ್ತು ಆತ್ಮವಿಶ್ವಾಸಗಳನ್ನು ಬಿತ್ತಬೇಕಾದ ಮೊದಲ ಪ್ರಶಸ್ತ ಜಾಗ ಮನೆಯೇ. ಬಂಧುತ್ವದ ಮಹತ್ವ ಮತ್ತು ಗುರುಹಿರಿಯರೆಡೆಗೆ ಗೌರವಾ ದರಗಳು ಒಡಮೂಡಬೇಕಾದ್ದು ಅಲ್ಲಿಯೇ. ಹಾಗಾಗಿ ಬಂಧುಮಿತ್ರರನ್ನು ಮನೆಗೆ ಆಹ್ವಾನಿಸುವುದು ಮತ್ತು ಅವರ ಮನೆಗಳಿಗೆ ಕುಟುಂಬದೊಂದಿಗೆ ಅಗಾಗ ಭೇಟಿ ನೀಡುವ ಪರಿಪಾಠ ಬೆಳೆಸಿಕೊಳ್ಳುವುದು ಉತ್ತಮ.

ಮನೆಯ ಹೊಸ್ತಿಲಲ್ಲಿ ನಿಂತ ಅತಿಥಿಗಳನ್ನು ಒಳಗೆ ಸ್ವಾಗತಿಸಿ, ಸತ್ಕರಿಸುವ ಸೌಜನ್ಯತೆಯೇ ಇತ್ತೀಚಿನ ಮಕ್ಕಳಲ್ಲಿ ಮಾಯವಾಗಿರುವ ಬಗ್ಗೆ ಹಲವು ಹಿರಿಯರಲ್ಲಿ ಕಳವಳವಿದೆ. ಮೊಬೈಲ್‌-ಟಿವಿ ಗೀಳಿನಿಂದ ತಮ್ಮದೇ ಲೋಕದಲ್ಲಿ ವಿಹರಿಸುವ ಮಕ್ಕಳಲ್ಲಿ ಸಮುದಾಯ ಪ್ರಜ್ಞೆ-ಬಂಧುತ್ವ ಪ್ರಜ್ಞೆಯನ್ನು ಬೆಳೆಸುವುದು ಮುಖ್ಯ. ಆದರೆ ಮಾನವೀಯತೆ ಮರೆತು ದುಡ್ಡಿನ ಹಿಂದೆ ದಿಕ್ಕೆಟ್ಟು ಓಡುವ ಜನಮನ, ಬೇರೂರಿದ ಧನದಾಹ, ಯಾಂತ್ರಿಕ ಜೀವನಕ್ರಮವು ಬಾಂಧವ್ಯದ ತಂತುವನ್ನು ಸಡಿಲಗೊಳಿಸುತ್ತಿದೆ.

ಅನಿವಾರ್ಯವೆಂಬಂತೆ ಎಳವೆಯಲ್ಲೇ ಮಕ್ಕಳನ್ನು ಕಾನ್ವೆಂಟ್‌ ಸಂಸ್ಕೃತಿಗೆ ತಳ್ಳಿ, ಅಂಕ-ರ್‍ಯಾಂಕ್‌ಗಳ ಭ್ರಮೆಯಲ್ಲಿ ಕೇವಲ ಕಾಸು ತರುವ ಉದ್ಯೋಗದ ಬೆನ್ನು ಬೀಳುತ್ತಿ ರುವುದರ ಪರಿಣಾಮವಿದು. ಪಾಶ್ಚಾತ್ಯ ತೆಯ ಮರುಳು ಆವರಿಸಿರುವ ಮತ್ತು ಯಂತ್ರಗಳೇ ನಮ್ಮನ್ನಾಳುತ್ತಿರುವ ವರ್ತಮಾನದ ವಿಚಿತ್ರ ಸನ್ನಿವೇಶವಿದು. ಮುಕ್ತತೆ, ಪ್ರೀತಿ- ವಿಶ್ವಾಸದ ಜಾಗದಲ್ಲೀಗ ಸ್ವಾರ್ಥ -ಪ್ರತಿಷ್ಟೆಗಳ ಮೆರೆದಾ ಟವಿದೆ. ಮಕ್ಕಳಿಗೆ ನೆಲದ ನಂಟನ್ನೂ, ಕೂಡು ಕುಟುಂಬದ ಒಡನಾಟವನ್ನೂ ವಂಚಿಸಿದ ಹೆತ್ತವರದು ಸ್ವಯಂಕೃತ ಅಪರಾಧವೂ ಹೌದು. ಹಾಗಾದ್ದರಿಂದಲೇ ಮನೆಗಳು ತಮ್ಮ ವೈಭವ ಹಾಗಿರಲಿ ಸಹಜ ಗುಣ ಚೈತನ್ಯವನ್ನೂ ಕಳೆದುಕೊಂಡು ನಿತ್ರಾಣಗೊಳ್ಳುತ್ತಿರುವುದು.

ಹಾಗಾಗಿ ಅವನೀಗ ತನ್ನ ಅಲ್ಪಾಯುಷ್ಯ ಕ್ಕೊಂದು ಸಾರ್ಥಕ್ಯದ ಜಾಡು ಹುಡುಕು ವಷ್ಟಾದರೂ ಸೂಕ್ಷ್ಮಮತಿಯಾಗಬೇಕು. ಪುಟ್ಟ ಜೀವಿತಾವಧಿಗೆ ಅರ್ಥ ತುಂಬಿಕೊಳ್ಳಬೇಕೆಂದರೆ ಕೃತಕತೆ, ಆಡಂಬರಗಳಿಗೆ ಲಗಾಮು ಹಾಕಿ, ವಿಚಾರಗಳನ್ನು ಎತ್ತರಿಸಿಕೊಂಡು ಪ್ರಬುದ್ಧತೆಯ ಹಾದಿಗೆ ಹೊರಳಬೇಕು. ಜೀವದಯೆ, ಮನುಷ್ಯಪ್ರೀತಿ, ಸಮತೆ, ಸೋದರತೆಗಳನ್ನು ಎದೆಯೊಳಗೆ ಸಾಕಿಕೊಳ್ಳಬೇಕು.

ನಾಳೆಗಳು ಸಹನೀಯವಾಗಿ ಉಳಿಯ ಬೇಕೆಂದರೆ ಸಹನೆ, ಸರಳತೆಗಳೆಂಬ ಸಾತ್ವಿಕ ಬದುಕಿನ ತಾತ್ವಿಕ ಮೂಲಸೆಲೆಯು ಎದೆಯೊಳಗೆ ಬತ್ತಗೂಡದು. ಹಾಗೆಯೇ ಉದಾತ್ತ ಚಿಂತನೆಗಳನ್ನು ಕೃತಿಯಲ್ಲಿ ಬಾಳುವ ಧೈರ್ಯವನ್ನೂ, ಬೆಂಬಲಿಸುವ ಔದಾರ್ಯವನ್ನೂ ತೋರುವುದು ಮುಖ್ಯ. ಹಾಗಾದಾಗ ಮಾತ್ರವೇ ಸಮಾಜದ ಒಳಪದರ ಸಂತುಷ್ಠಿಯನ್ನು ಅನುಭವಿಸಲು ಸಾಧ್ಯ.

-ಸತೀಶ್‌ ಜಿ.ಕೆ., ತೀರ್ಥಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next