Advertisement

Hit and run: ಪರಿಹಾರ ಹೆಚ್ಚಳ ಸುಪ್ರೀಂ ಆದೇಶ ಸ್ವಾಗತಾರ್ಹ; ಅನುಷ್ಠಾನಯೋಗ್ಯ

12:23 AM Jan 15, 2024 | Team Udayavani |

ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನೀಡಲಾಗುತ್ತಿರುವ ಪರಿಹಾರ ಮೊತ್ತವನ್ನು ಹೆಚ್ಚಿಸುವಂತೆ ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. ಇತ್ತೀಚೆಗೆ ಕೇಂದ್ರ ಸರಕಾರ ಹೊಸದಾಗಿ ರೂಪಿಸಿದ ಭಾರತೀಯ ನ್ಯಾಯ ಸಂಹಿತಾ ಕಾಯಿದೆಯಲ್ಲಿ ಹಿಟ್‌ ಆ್ಯಂಡ್‌ ರನ್‌ ಪ್ರಕರಣದಲ್ಲಿ ಶಿಕ್ಷೆಗೀಡಾಗುವ ಚಾಲಕರಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 7 ಲಕ್ಷ ರೂ.ಗಳ ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇದನ್ನು ವಿರೋಧಿಸಿ ದೇಶಾದ್ಯಂತ ಟ್ರಕ್‌, ಟ್ಯಾಂಕರ್‌ ಚಾಲಕರು ಮುಷ್ಕರ ನಡೆಸಿದ್ದರು. ಈ ಬೆಳವಣಿಗೆಯ ನಡುವೆಯೇ ಈಗ ಸುಪ್ರೀಂ ಕೋರ್ಟ್‌ ಕೇಂದ್ರ ಸರಕಾರಕ್ಕೆ ನೀಡಿರುವ ಈ ನಿರ್ದೇಶನ ಹೆಚ್ಚಿನ ಮಹತ್ವವನ್ನು ಪಡೆದಿದೆ.

Advertisement

ಸದ್ಯ ದೇಶದಲ್ಲಿ ಜಾರಿಯಲ್ಲಿರುವ ಮೋಟಾರು ವಾಹನಗಳ ತಿದ್ದುಪಡಿ ಕಾಯಿದೆ ಅನ್ವಯ ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ 2ಲಕ್ಷ ರೂ., ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರವನ್ನು ನೀಡಲಾಗುತ್ತಿದೆ. ಆದರೆ ಸರಕಾರ ಇಂತಹ ಪ್ರಕರಣಗಳ ಸಂತ್ರಸ್ತರಿಗೆ ನೀಡಲಾ ಗುತ್ತಿರುವ ಪರಿಹಾರ ಮೊತ್ತವನ್ನು ಹೆಚ್ಚಿಸುವ ಸಂಬಂಧ, ಪ್ರತೀ ವರ್ಷ ಪರಿಷ್ಕರಿಸುವ ಬಗೆಗೆ ಗಂಭೀರ ಚಿಂತನೆ ನಡೆಸಬೇಕು ಎಂದು ಕೇಂದ್ರ ಸರಕಾರಕ್ಕೆ ಸಲಹೆ ನೀಡಿದೆ.

ಸದ್ಯ ದೇಶದಲ್ಲಿ ದಾಖಲಾಗುತ್ತಿರುವ ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನಿಗದಿತ ಪರಿಹಾರ ಮೊತ್ತವೂ ಲಭಿಸುತ್ತಿಲ್ಲ. ಬಹುತೇಕ ಸಂದರ್ಭಗಳಲ್ಲಿ ಅರಿವಿನ ಕೊರತೆಯಿಂದಾಗಿ ಸಂತ್ರಸ್ತ ಕುಟುಂಬಗಳು ಪರಿಹಾರಕ್ಕಾಗಿ ಪ್ರಾಧಿಕಾರಕ್ಕೆ ಅರ್ಜಿಯನ್ನೂ ಸಲ್ಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳ ಸಂದರ್ಭದಲ್ಲಿ ಪೊಲೀಸರೇ ಸ್ವತಃ ಕ್ಲೇಮು ಪ್ರಾಧಿಕಾರಕ್ಕೆ ವಿವರ ಸಲ್ಲಿಸಬೇಕು ಎಂದು ನಿರ್ದೇಶ ನೀಡಿದ್ದು, ಇದರಿಂದ ಸಂತ್ರಸ್ತರಿಗೆ ಕಾನೂನು ರೀತಿಯಲ್ಲಿ ಪರಿಹಾರ ಮೊತ್ತ ಲಭಿಸುವುದು ಖಾತರಿಯಾಗಲಿದೆ.
ಒಂದೆಡೆಯಿಂದ ಹಿಟ್‌ ಆ್ಯಂಡ್‌ ರನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಕಾನೂನನ್ನು ಬಿಗಿಗೊಳಿಸಿ ಭಾರೀ ಪ್ರಮಾಣದ ದಂಡವನ್ನು ವಿಧಿಸಿ ಹೊಸ ಕಾನೂನನ್ನು ಜಾರಿಗೊಳಿಸಲು ಮುಂದಾದಾಗ ಟ್ರಕ್‌ ಚಾಲಕರು ಪ್ರತಿಭಟನೆ ನಡೆಸಿ ಈ ಕಾನೂನಿನ ಜಾರಿಗೆ ತಡೆ ಒಡ್ಡಿದ್ದರು. ಈಗ ಸುಪ್ರೀಂ ಕೋರ್ಟ್‌ ನೀಡಿರುವ ಈ ಆದೇಶದಿಂದ ಸರಕಾರದ ಹೊಸ ಕಾನೂನಿಗೆ ಮತ್ತಷ್ಟು ಬಲ ಬಂದಂತಾಗಿದ್ದು, ಟ್ರಕ್‌ ಚಾಲಕ ಸಂಘಟನೆಗಳ ಮುಂದಿನ ನಡೆಯ ಕುರಿತಂತೆ ಸಹಜವಾಗಿಯೇ ಕುತೂಹಲ ಮೂಡಿದೆ.

ಸಂತ್ರಸ್ತರಿಗೆ ನೀಡಲಾಗುವ ಪರಿಹಾರ ಮೊತ್ತವನ್ನು ಸರಕಾರ ಹೆಚ್ಚಿಸಿದ್ದೇ ಆದಲ್ಲಿ ಆ ಮೊತ್ತವನ್ನು ಸರಕಾರ ಭರಿಸಬೇಕಾಗುತ್ತದೆ. ಇದರಿಂದ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಬೀಳಲಿದೆ. ಹೀಗಾಗಿ ಕೇಂದ್ರ ಸರಕಾರ ತನ್ನ ಮೇಲೆ ಬೀಳಲಿರುವ ಹೆಚ್ಚುವರಿ ಹೊರೆಯನ್ನು ತಪ್ಪಿತಸ್ಥರ ಹೆಗಲಿಗೆ ವರ್ಗಾಯಿಸಲೇಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತದೆ. ಹಿಟ್‌ ಆ್ಯಂಡ್‌ ರನ್‌ ಪ್ರಕರಣಗಳ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ದೊರಕಿಸಿಕೊಡುವ ದಿಸೆಯಲ್ಲಿ ಸುಪ್ರೀಂ ಕೋರ್ಟ್‌ನ ಈ ಆದೇಶ ಅತ್ಯಂತ ಪ್ರಾಮುಖ್ಯವನ್ನು ಪಡೆದುಕೊಂಡಿದೆಯಲ್ಲದೆ ತನ್ಮೂಲಕ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವಲ್ಲಿಯೂ ನೆರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next