Advertisement

ಅಯೋಧ್ಯೆ –ಉಡುಪಿ ಐತಿಹಾಸಿಕ ನಂಟು

09:11 AM May 22, 2020 | mahesh |

ಉಡುಪಿ: ಅಯೋಧ್ಯೆಯಲ್ಲಿ ಉತ್ಖನನ ನಡೆಸುವಾಗ ದೇವಸ್ಥಾನವಿದ್ದ ಕುರುಹುಗಳು ಪತ್ತೆಯಾಗಿರುವುದಕ್ಕೂ ಅಯೋಧ್ಯೆಯಿಂದಲೇ ನಾಲ್ಕೈದು ಶತಮಾನಗಳ ಹಿಂದೆ ಶ್ರೀ ವಾದಿರಾಜ ಸ್ವಾಮಿಗಳು ಮುಖ್ಯಪ್ರಾಣ ಮತ್ತು ಗರುಡ ದೇವರ ವಿಗ್ರಹಗಳನ್ನು ಉಡುಪಿ ಶ್ರೀಕೃಷ್ಣ ಮಠಕ್ಕೆ ತಂದು ಪ್ರತಿಷ್ಠಾಪಿಸಿದರು ಎಂಬ ಐತಿಹ್ಯಕ್ಕೂ ತಾಳೆಯಾಗುತ್ತಿದೆ.

Advertisement

1522ರಲ್ಲಿ ಎರಡು ವರ್ಷಗಳ ಪರ್ಯಾಯವನ್ನು ಪಲಿಮಾರು ಮಠದಿಂದ ಆರಂಭಿಸಿದ ಬಳಿಕ 1532ರಲ್ಲಿ ವಾದಿರಾಜ ಸ್ವಾಮಿಗಳು ಸ್ವತಃ ಪರ್ಯಾಯ ಪೀಠವನ್ನು ಅಲಂಕರಿಸಿದರು. ಪರ್ಯಾಯವಾದ ಬಳಿಕ 1538-39ರ ವೇಳೆ ವಿಜಯನಗರ ಸಾಮ್ರಾಜ್ಯದ ಕಡೆ ಸಂಚಾರಾರ್ಥ ವಾದಿರಾಜರು ತೆರಳಿದರು. 1541-42ರಲ್ಲಿ ಉತ್ತರ ಭಾರತ ಯಾತ್ರೆ ಕೈಗೊಂಡರು. ಆಗ ದಿಲ್ಲಿ, ಬದರಿಗೆ ಹೋದರು. ಅದೇ ವೇಳೆ ಅಯೋಧ್ಯೆಗೆ ತೆರಳಿ ಅಲ್ಲಿ ಉತ್ಖನನ ಮಾಡಿಸಿ ಹನುಮ-ಗರುಡನ ವಿಗ್ರಹವನ್ನು ತಂದು ಸುಮಾರು 1545ರ ವೇಳೆ ಪ್ರತಿಷ್ಠೆ ಮಾಡಿದರು.

ಅನಂತರ 1548-49ರಲ್ಲಿ ತಮ್ಮ ಸರದಿಯ ಎರಡನೇ ಪರ್ಯಾಯವನ್ನು ನಡೆಸಿದರು. ಹೀಗೆ ಮೊದಲ ಪರ್ಯಾಯದ ಬಳಿಕ ಎರಡನೆಯ ಪರ್ಯಾಯದೊಳಗೆ ಈ ಕೆಲಸ ಮಾಡಿದರು ಎನ್ನುವುದನ್ನು ಸಂಶೋಧಕ ಬಳ್ಳಾರಿ ವೀರಶೈವ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ| ಜಿ.ಕೆ. ನಿಪ್ಪಾಣಿ ಬೆಟ್ಟು ಅವರು ಮಾಡುತ್ತಾರೆ.

ಇದು ವಾದಿರಾಜಗುರುಚರಿತಾಮೃತದಲ್ಲಿ ಹೀಗೆ ಉಲ್ಲೇಖವಿದೆ: ಪುನಃ ಸಂಚರಣಾಸಕ್ತೋ ಗತೋ ಯೋಧ್ಯಾಂ ಪುರೀಂ ಮುನಿಃ| ತತ್ರತ್ಯಹನುಮತ್ತಾಕ್ಷ ಪ್ರತಿಮೇ ರೂಪ್ಯಪೀಠಕಮ್‌|…
ವಾದಿರಾಜರ ದಿವ್ಯದೃಷ್ಟಿ

ಈ ದಾಖಲೆಗೆ ಹೊರತಾದ ಒಂದು ವಿಷಯವಿದೆ: ತ್ರೇತಾ
ಯುಗದಲ್ಲಿ ದಶರಥನ ಅರಮನೆಯಲ್ಲಿ ರಾಮಚಂದ್ರನಿಗೆ ಪಟ್ಟಾಭಿಷೇಕವಾಗುವಾಗ ಸಿಂಹಾಸನದ ಮೆಟ್ಟಿಲಿನ ಬಲಭಾಗದಲ್ಲಿ ಹನುಮಂತ ಮತ್ತು ಎಡಭಾಗದಲ್ಲಿ ಗರುಡನ ಪ್ರತಿಮೆಗಳಿದ್ದವು. ಇದನ್ನು ದಿವ್ಯದೃಷ್ಟಿಯಿಂದ ತಿಳಿದ ವಾದಿರಾಜರು ಉತ್ಖನನ ನಡೆಸಿ ಉಡುಪಿಗೆ ತಂದು ಪ್ರತಿಷ್ಠಾಪಿಸಿದರು ಎನ್ನುವುದನ್ನೂ ತಮಗೆ ಪೀಳಿಗೆಯಿಂದ ಪೀಳಿಗೆಗೆ ತಿಳಿದುಬಂದಂತೆ ಶ್ರೀ ಸೋದೆ ಮಠಾಧಿಪತಿಗಳಾಗಿದ್ದ  ಶ್ರೀ ವಿಶ್ವೊತ್ತಮ ತೀರ್ಥರು ತಿಳಿಸಿದ್ದರು ಎನ್ನುವುದನ್ನು ಡಾ| ನಿಪ್ಪಾಣಿ ಹೇಳುತ್ತಾರೆ.

Advertisement

1980ರ ದಶಕದಿಂದಲೂ ಅಯೋಧ್ಯಾ ರಾಮಜನ್ಮಭೂಮಿ ಚಳವಳಿ ಮುಂಚೂಣಿಯಲ್ಲಿದ್ದ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು 1992ರ ಡಿಸೆಂಬರ್‌ 6ರ ರಾತ್ರಿ ಹಳೆಯ ಕಟ್ಟಡ ಉರುಳಿದ ಮರುದಿನ ಬೆಳಗ್ಗೆ ಆಕಸ್ಮಿಕವಾಗಿ ರಾಮಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪಿಸುವ ಭಾಗ್ಯವನ್ನು ಪಡೆದಿದ್ದರು. 2017ರ ನವೆಂಬರ್‌ನಲ್ಲಿ ನಡೆದ ಐತಿಹಾಸಿಕ ಧರ್ಮಸಂಸದ್‌ ಉದ್ಘಾಟನ ಭಾಷಣದಲ್ಲಿ 2019ರೊಳಗೆ ಅಯೋಧ್ಯಾ ಪ್ರಕರಣ ಇತ್ಯರ್ಥವಾಗಲಿದೆ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next