Advertisement

ಹಿಂದೂ ಜ್ಯೂನಿಯರ್‌ ಕಾಲೇಜು ಶಿರ್ವ : ಮುಂಬಯಿ ಸ್ನೇಹ ಸಂಗಮ ಸಂಭ್ರಮ

04:59 PM Jul 18, 2018 | |

ಮುಂಬಯಿ: ಉಡುಪಿ ಜಿಲ್ಲೆಯ ಶಿರ್ವದ ಮಣ್ಣಿನಲ್ಲಿ ವಿದ್ಯಾಜ್ಯೋತಿಯಾಗಿ ಬೆಳಗುತ್ತಿರುವ ಹಿಂದೂ ಜ್ಯೂನಿಯರ್‌ ಕಾಲೇಜು ಶಿರ್ವ ಮತ್ತು ಮೂಲ್ಕಿ ಸುಂದರ್‌ರಾಮ್‌ ಶೆಟ್ಟಿ ಕಾಲೇಜು ಈ ಎರಡೂ ಕಾಲೇಜುಗಳು ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು, ಈ ವಿದ್ಯಾ ದೇಗುಲಗಳಲ್ಲಿ ಕಲಿತ ಅಸಂಖ್ಯಾತ ವಿದ್ಯಾರ್ಥಿಗಳಿಂದು ಬದುಕಿನಲ್ಲಿ ಯಶಸ್ವಿಯಾಗಿ  ಉನ್ನತ ಮಟ್ಟಕ್ಕೇರಿರುವುದು ಸಂತಸದಾಯಕ ವಿಚಾರವಾಗಿದೆ ಎಂದು ಹಿಂದೂ ಜ್ಯೂನಿಯರ್‌ ಕಾಲೇಜು ಶಿರ್ವ ಹಳೆವಿದ್ಯಾರ್ಥಿ ಸಂಘ ಮುಂಬಯಿಯ ಗೌರವಾಧ್ಯಕ್ಷ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ನುಡಿದರು.

Advertisement

ಜು. 14ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀ ಮುಕ್ತಾನಂದ ಸಭಾಗೃಹದಲ್ಲಿ ಜರಗಿದ ಹಿಂದೂ ಜ್ಯೂನಿಯರ್‌ ಕಾಲೇಜು ಶಿರ್ವ, ಹಳೆವಿದ್ಯಾರ್ಥಿ ಸಂಘ ಮುಂಬಯಿ ಇದರ ಸ್ನೇಹ ಸಂಗಮ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಶಿರ್ವದ ಎರಡೂ ಕಾಲೇಜುಗಳು ಜ್ಞಾನದ ಕಣ್ಣುಗಳಾಗಿದ್ದು, ಇವುಗಳ ಅಭಿವೃದ್ಧಿಗಾಗಿ ಎರಡೂ ಶಿಕ್ಷಣ ಸಂಸ್ಥೆಗಳ ಹಳೆವಿದ್ಯಾರ್ಥಿಗಳು ಜಾತಿ, ಮತ, ಭೇದವಿಲ್ಲದೆ ಒಂದಾಗಿ ಸಹಕರಿಸುತ್ತಿರುವುದು  ವಿದ್ಯಾಸಂಸ್ಥೆಯ ಬಗ್ಗೆ ಇರುವ ಪ್ರೀತಿ-ಅಭಿಮಾನವನ್ನು ಸೂಚಿಸುತ್ತದೆ. ಯಾವುದೇ ಹಳೆವಿದ್ಯಾರ್ಥಿ ಸಂಘಗಳು ನಿರ್ವಹಿ ಸದಂತಹ ಉತ್ತಮ ಮಾದರಿ ಕಾರ್ಯಗಳು ಇಲ್ಲಿ ನಡೆಯುತ್ತಿವೆ. ಹಿಂದೂ ಜ್ಯೂನಿಯರ್‌ ಕಾಲೇಜಿನ ಅಭಿವೃದ್ಧಿಯಲ್ಲಿ ಆರಂಭದ ಪ್ರೇರಣಾ ಶಕ್ತಿಯಾಗಿ ಮಾಜಿ ಪ್ರಾಂಶುಪಾಲ ರಾಜ್‌ಗೊàಪಾಲ್‌, ಕಿಶೋರ್‌ ಕುಮಾರ್‌ ಕುತ್ಯಾರ್‌, ಖಾಂದೇಶ್‌ ಭಾಸ್ಕರ್‌ ಶೆಟ್ಟಿ ಅವರು ದಾರಿತೋರಿದ್ದಾರೆ. ಮೂಲ್ಕಿ ಸುಂದರ್‌ರಾಮ್‌ ಶೆಟ್ಟಿ  ಕಾಲೇಜು ಇಂದು ಸುಂದರ್‌ರಾಮ್‌ ಶೆಟ್ಟಿ ಅವರ ಸಾರಥ್ಯದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದೆ. ಹಳೆವಿದ್ಯಾರ್ಥಿ ಸಂಘ ಆಯೋಜಿಸುತ್ತಿರುವ ಇಂತಹ ಕಾರ್ಯಕ್ರಮಗಳಿಂದ ಹಳೆ ವಿದ್ಯಾರ್ಥಿಗಳ ಸಂಬಂಧ ಹಾಗೂ ಸ್ನೇಹ ವರ್ಧನೆಗೆ ಸಹಕಾರಿಯಾಗುವುದರ ಜೊತೆಗೆ ವಿದ್ಯಾಸಂಸ್ಥೆ ಇನ್ನಷ್ಟು ಬೆಳೆಯಲು ಸಾಧ್ಯವಾಗುತ್ತದೆ ಎಂದು ನುಡಿದು, ಹಳೆವಿದ್ಯಾರ್ಥಿ ಸಾಧಕರ ಸಮ್ಮಾನ ಪ್ರತೀ ವರ್ಷ ನಡೆಯಲಿ. ಇತರರಿಗೂ ಅದು ಪ್ರೇರಣೆಯಾಗಲಿ ಎಂದು ನುಡಿದು ಸಮ್ಮಾನಿತರನ್ನು ಅಭಿನಂದಿಸಿದರು.

ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಹಳೆವಿದ್ಯಾರ್ಥಿ ಸಾಧಕರುಗಳಾದ ಕರ್ನಾಟಕ ರಾಜ್ಯ ಸರಕಾರದ ಎಂಎಲ್‌ಸಿ ಐವನ್‌ ಡಿಸೋಜಾ, ಬಂಟ್ಸ್‌ ನ್ಯಾಯಮಂಡಳಿಯ ಅಧ್ಯಕ್ಷ ರವೀಂದ್ರ ಎಂ. ಅರಸ, ಕನ್ಸಲ್ಟೆಂಟ್‌ ಪೆಥೋಲೊಜಿಸ್ಟ್‌ ಡಾ| ಶಂಕರ್‌ ಮಲ್ಯ ಎಂ. ಡಿ.,  ಕೈಗಾರಿಕೋದ್ಯಮಿ ಕರುಣಾಕರ ಶೆಟ್ಟಿ ಸೂಡ, ಉದ್ಯಮಿ ಶ್ರೀಧರ ಆಚಾರ್ಯ ದಂಪತಿಯನ್ನು  ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರವನ್ನಿತ್ತು ಗಣ್ಯರು ಸಮ್ಮಾನಿಸಿ ಗೌರವಿಸಿದರು.
ಹಳೆವಿದ್ಯಾರ್ಥಿ ಸಂಘದ ಸಲಹಾ ಸಮಿತಿಯ ಸದಸ್ಯೆಯರುಗಳಾದ ಶಬುನಾ ಎಸ್‌. ಶೆಟ್ಟಿ, ಹರಿಣಿ ಎಂ. ಶೆಟ್ಟಿ, ಅನಿತಾ ಶೆಟ್ಟಿ, ಉಪಾಧ್ಯಕ್ಷೆ ಶಶಿಪ್ರಭಾ ಶೆಟ್ಟಿ ಹಾಗೂ ಶೈಲಾ ಅಮರ್‌ನಾಥ್‌ ಶೆಟ್ಟಿ ಇವರು ಸಮ್ಮಾನ ಪತ್ರ ವಾಚಿಸಿದರು. ಇದೇ ವೇಳೆ ಸಾಧಕ ಖಾಂದೇಶ್‌ ಭಾಸ್ಕರ ಶೆಟ್ಟಿ ಅವರ ಮುಖಚಿತ್ರದೊಂದಿಗೆ ಪ್ರಕಟ ಗೊಂಡ ಯಶಸ್ವಿ ಪತ್ರಿಕೆಯನ್ನು ಮಾಜಿ ಪ್ರಾಂಶು ಪಾಲ ರಾಜ್‌ಗೊàಪಾಲ್‌ ಕೆ. ಅವರು ಬಿಡುಗಡೆ ಗೊಳಿಸಿ, ಪರಿಶ್ರಮದ ವ್ಯಕ್ತಿತ್ವದಿಂದ ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಮಾಡಿರುವ ಖಾಂದೇಶ್‌ ಭಾಸ್ಕರ್‌ ಶೆಟ್ಟಿ ಇವರನ್ನು ಅಭಿನಂದಿಸಿ ಶುಭಹಾರೈಸಿದರು.

ಆರಂಭದಲ್ಲಿ ಆಶಾಲತಾ ಎಸ್‌. ಶೆಟ್ಟಿ ಪ್ರಾರ್ಥನೆ ಗೈದರು. ಹಳೆವಿದ್ಯಾರ್ಥಿ ಸಂಘ ಮುಂಬಯಿ ಅಧ್ಯಕ್ಷ ಹೇಮನಾಥ್‌ ಶೆಟ್ಟಿ ಸೂಡ ಹಾಗೂ ಅತಿಥಿ-ಗಣ್ಯರು ಜ್ಯೋತಿ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಅಧ್ಯಕ್ಷ ಹೇಮನಾಥ್‌ ಶೆಟ್ಟಿ ಸೂಡಾ ಅತಿಥಿ-ಗಣ್ಯರುಗಳನ್ನು ಸ್ವಾಗತಿಸಿದರು. ಸಂಚಾಲಕ ಕಿಶೋರ್‌ ಕುಮಾರ್‌ ಕುತ್ಯಾರ್‌ ಸಂಸ್ಥೆಯ ಯೋಜನೆ-ಯೋಚನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಖಾಂದೇಶ್‌ ಭಾಸ್ಕರ್‌ ಶೆಟ್ಟಿ ಅವರು ಹಳೆ ವಿದ್ಯಾರ್ಥಿಗಳ ಸಂಘ ಸ್ಥಾಪನೆಗೊಂಡು ಬೆಳೆದ ವಿದ್ಯಮಾನಗಳ ಬಗ್ಗೆ ವಿವರಿಸಿ, 2021ನೇ ಸಾಲಿನಲ್ಲಿ 75 ವರ್ಷಗಳನ್ನು ಪೂರೈಸಲಿರುವ ವಿದ್ಯಾಸಂಸ್ಥೆಯ ಅಮೃತ ಮಹೋತ್ಸವಕ್ಕೆ ಎಲ್ಲರ ಸಹಕಾರ, ಪ್ರೋತ್ಸಾಹ ಅಗತ್ಯವಾಗಿದೆ ಎಂದರು.

ಅತಿಥಿ-ಗಣ್ಯರನ್ನು ಸತ್ಕರಿಸಲಾಯಿತು. ದೇಶ- ವಿದೇಶಗಳಿಂದ ಆಗಮಿಸಿದ ಹಳೆ ವಿದ್ಯಾರ್ಥಿಗಳನ್ನು  ಗೌರವಿಸಲಾಯಿತು. ಹಳೆ ವಿದ್ಯಾರ್ಥಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿ ಸಲಾಯಿತು. ರಂಗ  ಕಲಾವಿದ ಹಾಗೂ ಕಿರುತೆರೆ ಕಲಾವಿದ ಬಾಬಾ ಪ್ರಸಾದ್‌ ಅರಸ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸ್ವರ ಸಿಂಚನ ಹಾಗೂ ಮುಂಬಯಿಯ ಪ್ರಬುದ್ಧ ಕಲಾವಿದರುಗಳಿಂದ ಕೃಷ್ಣರಾಜ್‌ ಶೆಟ್ಟಿ ಮುಂಡ್ಕೂರು ಮರಾಠಿಯಿಂದ ಅನುವಾದಿಸಿ, ನಿರ್ದೇಶಿಸಿರುವ ಈ ರಾತ್ರೆಗ್‌ ಪಗೆಲ್‌Y ಯಾನ್‌ ತುಳುನಾಟಕ ಪ್ರದರ್ಶನಗೊಂಡಿತು. ಸಂತೋಷ್‌ ಕ್ಯಾಟರರ್ ವತಿಯಿಂದ ಭೋಜನದ ವ್ಯವಸ್ಥೆ ಆಯೋಜಿಸಲಾಗಿತ್ತು. 

Advertisement

ವಿದ್ಯಾರ್ಥಿಗಳ ಕೊರತೆಯಿಂದಾಗಿ ಎಲ್ಲೆಡೆ ಕನ್ನಡ ಶಾಲೆಗಳಿಗೆ ಬೀಗ ಜಡಿಯುವ ಪರಿಸ್ಥಿತಿ ಇರುವ ಇಂದಿನ ದಿನಗಳಲ್ಲಿ ಹಿಂದೂ ಜ್ಯೂನಿಯರ್‌ ಕಾಲೇಜು 3 ವಿಭಾಗಗಳನ್ನು ನಡೆಸುತ್ತಿರುವುದು ಈ ಕಾಲೇಜು ಸ್ಥಳದ ಮಣ್ಣಿನ ಅಂತರ್‌ಶಕ್ತಿ ಗುಣದ ಕಾರಣದಿಂದಾಗಿದೆ. ಮುಂಬಯಿಗರ ಹೂ ಮನಸ್ಸಿನಿಂದಾಗಿ ಊರು ಅಭಿವೃದ್ಧಿ ಹೊಂದುತ್ತಿದೆ. ದೈವಸ್ಥಾನ, ಶಿಕ್ಷಣ ಕೇಂದ್ರ, ಧಾರ್ಮಿಕ ಕೇಂದ್ರಗಳು ಅಭಿವೃದ್ಧಿಯಾಗಲು ಮುಂಬಯಿಗರು ಕಾರಣ 
– ಪ್ರಸಾದ್‌ ಶೆಟ್ಟಿ ಕುತ್ಯಾರ್‌ 
(ಅಧ್ಯಕ್ಷರು : ಹಿಂದೂ ಜ್ಯೂನಿಯರ್‌ ಕಾಲೇಜು ಹಳೆವಿದ್ಯಾರ್ಥಿ ಸಂಘ ಶಿರ್ವ).

ಕಲಿತ ಶಾಲೆ, ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು. ಹಿಂದೂ ಜ್ಯೂನಿಯರ್‌ ಕಾಲೇಜಿನ ಯಾವುದೇ ಯೋಜನೆಗೆ ತಾನು ಸಹಕಾರ ನೀಡಲು ಸಿದ್ಧನಿದ್ದೇನೆ. ಶೈಕ್ಷಣಿಕ ಸೇವೆ ಎಲ್ಲರೂ  ಬದ್ಧರಾಗಿರಬೇಕು 
– ಸಿಎ ಕರುಣಾಕರ ಶೆಟ್ಟಿ  (ಮಾಜಿ ಅಧ್ಯಕ್ಷರು : ಥಾಣೆ ಬಂಟ್ಸ್‌ ಅಸೋಸಿಯೇಶನ್‌).

ಹಳೆ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ಕರೆತರುವ ಪ್ರಯತ್ನದಲ್ಲಿ ಹಿಂದೂ ಜ್ಯೂನಿಯರ್‌ ಕಾಲೇಜು ಹಳೆವಿದ್ಯಾರ್ಥಿ ಸಂಘ ಮುಂಬಯಿ ಯಶಸ್ವಿಯಾಗಿರುವುದು ಅಭಿನಂದನೀಯ. ವಿವಿಧ ಸಾಧಕರಾಗಿ ಹೊರಹೊಮ್ಮಿರುವ ಹಳೆ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಜೊತೆಗೆ ಅವರಿಂದ ಜೀವನಾನುಭವವನ್ನು ಪಡೆಯುವುದು ಅಷ್ಟೇ ಅತ್ಯಾವಶ್ಯಕ. ಜ್ಞಾನ ನೀಡಿದ ಜ್ಞಾನ ಸಂಪನ್ನ ಗುರುಗಳ ಅನುಭವಗಳನ್ನು  ಹಂಚಿಕೊಳ್ಳಬೇಕು. ಕಲಿತ ಶಾಲೆಯನ್ನು ಮರೆಯಬಾರದು. ಕಲಿಯಲು ಆಸಕ್ತರಿರುವ ಮಕ್ಕಳ ಶಿಕ್ಷಣಕ್ಕೆ ಸಹಾಯ ನೀಡುವ ಸಹೃದಯತೆ ನಮ್ಮಲ್ಲಿರಲಿ. ದತ್ತು ಸ್ವೀಕಾರದಂತಹ ಕಾರ್ಯಯೋಜನೆಗಳು ಹೆಚ್ಚಬೇಕು  
-ಉದಯ ಸುಂದರ್‌ ಶೆಟ್ಟಿ (ಅಧ್ಯಕ್ಷರು : ಮುಲ್ಕಿ ಸುಂದರ್‌ರಾಮ್‌ ಶೆಟ್ಟಿ ಕಾಲೇಜು ಹಳೆವಿದ್ಯಾರ್ಥಿ ಸಂಘ ಮುಂಬಯಿ).

ಕಲಿತ ಶಾಲೆ, ಹುಟ್ಟಿದ ಊರನ್ನು ಖಂಡಿತ ಮರೆಯಬಾರದು. ಅದರಲ್ಲೂ ನಮ್ಮ ಬದುಕನ್ನು ಕಟ್ಟಿದ ಗುರುವರ್ಯರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಹಿಂದೂ ಜ್ಯೂನಿಯರ್‌ ಕಾಲೇಜಿನಲ್ಲಿ ಶಿಕ್ಷಣ ಪಡೆದ ಹಳೆ ವಿದ್ಯಾರ್ಥಿಗಳು ಇಂದು ದೇಶ-ವಿದೇಶಗಳಿಂದ ಬಂದು ಇಲ್ಲಿ ಸೇರಿರುವುದು ನಮ್ಮ ಹೆಗ್ಗಳಿಕೆಯಾಗಿದೆ 
– ಗುರ್ಮೆ ಸುರೇಶ್‌ ಶೆಟ್ಟಿ 
(ಕಾರ್ಯಾಧ್ಯಕ್ಷರು : ವಿದ್ಯಾವರ್ಧಕ 
ಸೆಂಟ್ರಲ್‌ ಸ್ಕೂಲ್‌ ಶಿರ್ವ).

ಚಿತ್ರ-ವರದಿ: ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next