Advertisement

ಹಿಜಾಬ್‌-ಕೇಸರಿ ಶಾಲು, ರಾಷ್ಟ್ರಧ್ವಜ ವಿಚಾರ ; ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ

12:38 AM Feb 21, 2022 | Team Udayavani |

ರಾಜ್ಯದಲ್ಲಿ ಕೆಲವೊಂದು ಅನಿರೀಕ್ಷಿತ ವಿದ್ಯಮಾನಗಳು ನಡೆಯುತ್ತಿದ್ದು, ಮೇಲ್ನೋಟಕ್ಕೆ ಇವು ದಿಢೀರ್‌ ಬೆಳವಣಿಗೆ ಎಂದು ಎನಿಸಿದರೂ ಸೂಕ್ಷ್ಮವಾಗಿ ಗಮನಿಸಿದರೆ ರಾಜಕೀಯದೊಂದಿಗೆ ಥಳಕು ಹಾಕಿಕೊಂಡಿರುವುದಂತೂ ಸ್ಪಷ್ಟ. ಇದರ ನಡುವೆಯೇ ರಾಜ್ಯ ವಿಧಾನಮಂಡಲದಲ್ಲಿ ನಡೆಯುತ್ತಿರುವ ಪ್ರಹಸನ ಇದರ ಮುಂದುವರಿದ ಭಾಗವೇನೋ ಎಂಬ ಭಾವನೆಯೂ ಮೂಡಿದೆ. ಈ ಹಂತದಲ್ಲಿ ಇಂಥದರ ಆಗತ್ಯ ಇರಲಿಲ್ಲ. ರಾಜ್ಯ ರಾಜಕಾರಣಕ್ಕೆ  ಇದೊಂದು ಕಪ್ಪು ಚುಕ್ಕೆಯೇ. ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಎದ್ದು ನಿಂತಿರುವ ವಿಚಾರಗಳಿಗೆ ಜಾತಿ-ಧರ್ಮದ ಸೋಂಕು ತಾಕಿರುವುದು ಒಂದೆಡೆಯಾದರೆ ಇದರಿಂದ ಆಗುವ ಲಾಭ-ನಷ್ಟವೇನು ಎಂಬ ಲೆಕ್ಕಾಚಾರದಲ್ಲಿ ಮೂರೂ ಪಕ್ಷಗಳು ಮುಳುಗಿರುವುದು ರಾಜಕೀಯ ದುರಂತವೇ.

Advertisement

ಮುಂದೆಂದೋ ಒಂದು ದಿನ ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸಲಾಗುವುದು ಎಂಬ ಸಚಿವ ಕೆ.ಎಸ್‌. ಈಶ್ವರಪ್ಪ ಅವರ ಹೇಳಿಕೆ ಮುಂದಿಟ್ಟುಕೊಂಡು ವಿಪಕ್ಷ ಕಾಂಗ್ರೆಸ್‌ ವಿಧಾನಮಂಡಲದ ಉಭಯ ಸದನಗಳಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಕೇವಲ ವಿಧಾನಸೌಧಕ್ಕೆ ಸೀಮಿತವಾಗಿಲ್ಲ, ರಾಜ್ಯವ್ಯಾಪಿ ವಿಸ್ತರಿಸಿದೆ. ಇದರ ಜತೆಯಲ್ಲೇ ರಾಜ್ಯವ್ಯಾಪಿ ನಡೆಯುತ್ತಿರುವ ಹಿಜಾಬ್‌-ಕೇಸರಿ ಶಾಲು ವಿಚಾರ ವಿಧಾನ ಮಂಡಲದವರೆಗೂ ಬಂದಿದೆ. ರಾಷ್ಟ್ರಧ್ವಜಕ್ಕೆ ಅಪಮಾನ ಆಗಿದೆ ಎಂಬುದು ನೆಪವಷ್ಟೇ. ಹೋರಾಟದ ಹಿಂದಿನ ಅಜೆಂಡಾ ಬೇರೆಯದೇ ಇರಬಹುದು. ರಾಜ್ಯದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಪರಿಹಾರ ಅಥವಾ ಆ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಸುವುದು ಯಾರಿಗೂ ಬೇಕಿಲ್ಲದಂತಾಗಿದೆ. ಇದರ ಬದಲು ಮತಬ್ಯಾಂಕ್‌ ಭದ್ರಪಡಿಸಿ ಕೊಳ್ಳುವಿಕೆ ಜತೆಗೆ ಈಗಲೇ ಮುಂದಿನ ಚುನಾವಣೆಗೆ ಅಡಿಪಾಯ ಹಾಕುವಲ್ಲಿ ರಾಜಕೀಯ ಪಕ್ಷಗಳು ತೊಡಗಿದಂತಿದೆ.

ಬಲ ತುಂಬುವ ಅಸ್ತ್ರ
ಹಿಜಾಬ್‌ ಕುರಿತಂತೆ ಎದ್ದಿರುವ ಪ್ರಸಕ್ತ ವಿದ್ಯಮಾನಗಳು ರಾಜಕೀಯವಾಗಿ ತಮಗೆ ಬಲ ತುಂಬಬಹುದು ಎಂಬ ಲೆಕ್ಕಾಚಾರ ಸಹಜವಾಗಿ ಬಿಜೆಪಿಯಲ್ಲಿದೆ. ಹಿಂದೂ-ಮುಸ್ಲಿಂ ಮತ ವಿಭಜನೆಯಿಂದ ತಮ್ಮ ಮತಬ್ಯಾಂಕ್‌ ಗಟ್ಟಿಯಾಗಬಹುದು. ವ್ಯಕ್ತಿ ಕೇಂದ್ರಿ ತಕ್ಕಿಂತ ಪಕ್ಷ ಅಥವಾ ವಿಚಾರ ಕೇಂದ್ರೀತ ಮಾರ್ಗದಲ್ಲಿ ಮತ ಗಟ್ಟಿ ಮಾಡಿಕೊಳ್ಳಬೇಕು ಎಂಬ ಚಿಂತನೆ ಬಿಜೆಪಿಯಲ್ಲಿ ಮೊದಲಿನಿಂದಲೂ ಇತ್ತು. ಇದೀಗ ಅದು ಸಾಕಾರವಾಗುವ ಹಂತಕ್ಕೆ ಬಂದು ತಲುಪಿದೆ ಎಂಬ ವ್ಯಾಖ್ಯಾನಗಳೂ ಇವೆ. ಪ್ರಸ್ತುತ ಸಂದರ್ಭದಲ್ಲಿ ಒಂದು ರಾಜಕೀಯ ಪಕ್ಷವಾಗಿ ಬಿಜೆಪಿ ಸಹ ರಾಜಕೀಯ ಲೆಕ್ಕಾಚಾರ ಹಾಕಿಕೊಂಡಿದೆ.

ಆದರೆ ಇದು ಎಷ್ಟರ ಮಟ್ಟಿಗೆ ಲಾಭ ತಂದುಕೊಡಲಿದೆ. ತಂದುಕೊಟ್ಟರೂ ಇಡೀ ರಾಜ್ಯವ್ಯಾಪಿ ಸಾಧ್ಯವಾ ಎಂಬ ಪ್ರಶ್ನೆಗಳೂ ಇವೆ. ಹಿಜಾಬ್‌-ಕೇಸರಿ ಶಾಲು ವಿಚಾರ ಇದೀಗ ಕರಾವಳಿ, ಮಲೆನಾಡು ಭಾಗಕ್ಕಷ್ಟೇ ಸೀಮಿತವಾಗಿಲ್ಲ. ಉತ್ತರಕರ್ನಾಟಕ ದಿಂದ ಹಳೇ ಮೈಸೂರು ವರೆಗೂ ಹಬ್ಬಿದೆ. ಹೀಗಾಗಿ ಇದು ಖಂಡಿತವಾಗಿಯೂ ಮುಂದಿನ ಚುನಾವಣೆಯಲ್ಲಿ ಪ್ರಚಾರದ ಪ್ರಮುಖ ಅಸ್ತ್ರವೂ ಆಗಬಹುದು.

ಹಿಜಾಬ್‌ ವಿಚಾರದಲ್ಲಿ ಬಿಜೆಪಿ ಒಂದು ಪಕ್ಷವಾಗಿ ತನ್ನ ನಿಲುವು ಹೊಂದಿದೆ. ಆದೇ ಪಕ್ಷದ ಸರಕಾರ ನ್ಯಾಯಾಲಯದ ಮಧ್ಯಾಂತರ ಆದೇಶ ಪಾಲನೆ ಹಾಗೂ ಅಂತಿಮ ತೀರ್ಪಿಗೆ ಬದ್ಧ ಎಂದು ಪ್ರತಿಪಾದಿಸಿದೆ. ಆದರೆ ನ್ಯಾಯಾಲಯದ ಮಧ್ಯಾಂತರ ತೀರ್ಪು ಹಾಗೂ ಸರಕಾರದ ಅದೇಶ ಮೀರಿಯೂ ಶಾಲಾ-ಕಾಲೇಜುಗಳಲ್ಲಿ ನಡೆಯುತ್ತಿರುವುದನ್ನು ಯಾರೂ ತಡೆಯಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದೂ ಸಹ ಆಂತಿಮವಾಗಿ ತಲುಪುವುದು ರಾಜಕೀಯ ಅಂಗಳಕ್ಕೆ. ಮೇಲ್ನೋಟಕ್ಕೆ ಬಿಜೆಪಿಗೆ ಇದರಿಂದ ಲಾಭವೂ ಆಗಬಹುದು. ಆದರೆ ಇದರಿಂದಾಗಿ ಒಂದು ನಿರ್ದಿಷ್ಟ ಮತಬ್ಯಾಂಕ್‌ ಕೈ ತಪ್ಪಬಹುದು.

Advertisement

ಮತಬ್ಯಾಂಕ್‌ ಚಿಂತೆ
ವಿಪಕ್ಷ ಕಾಂಗ್ರೆಸ್‌ಗೆ ಹಿಜಾಬ್‌-ಕೇಸರಿ ಶಾಲು ಸಂಘರ್ಷ ವಿಚಾರದಲ್ಲಿ ಸ್ಪಷ್ಟ ನಿಲುವು ಪ್ರಕಟ ಸಾಧ್ಯವಾಗುತ್ತಿಲ್ಲ. ಹಿಜಾಬ್‌ ಪರ ನಿಂತರೆ ಹಿಂದೂ ಮತಬ್ಯಾಂಕ್‌ ಕಳೆದುಕೊಳ್ಳಬಹುದೇನೋ ಕೇಸರಿ ಶಾಲು ವಿರೋಧಿಸದಿದ್ದರೆ ಅಲ್ಪಸಂಖ್ಯಾಕ ಆದರಲ್ಲೂ ಮುಸ್ಲಿಂ ಮತಕ್ಕೆ ಸಂಚಕಾರ ಬರಬಹುದೇನೋ ಎಂಬ ಅಳುಕು ಮತ್ತು ಆತಂಕ. ಹೀಗಾಗಿಯೇ ಹಿಜಾಬ್‌ ಪ್ರಸ್ತಾವ‌ ತಮಗೆ ಹಿನ್ನೆಡೆ ತರಬಹುದು ಎಂಬ ಕಾರಣಕ್ಕೆ  ಈಶ್ವರಪ್ಪನವರ ರಾಷ್ಟ್ರಧ್ವಜದ ಹೇಳಿಕೆ ವಿಚಾರ ಇಟ್ಟುಕೊಂಡು ಹೋರಾಟ ಮಾಡುತ್ತಿದೆ. ಈ ಹೋರಾಟ ಡಿ. ಕೆ. ಶಿವಕುಮಾರ್‌ ಕೇಂದ್ರೀತ ಎಂದು ಬಿಂಬಿತವಾಗಿದ್ದರೂ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೈಗೊಂಡ ತೀರ್ಮಾನವಾದ ಕಾರಣ ಸಿದ್ದರಾಮಯ್ಯ ಸಹಿತ ಎಲ್ಲರೂ ಜತೆಗೂಡಿದ್ದಾರೆ ಎಂಬ ವಿಶ್ಲೇಷಣೆಗಳೂ ಇವೆ.

ರಾಜಕೀಯವಾಗಿ ನೋಡುವುದಾದರೆ ಕಾಂಗ್ರೆಸ್‌ಗೆ ಹಿಜಾಬ್‌-ಕೇಸರಿ ಶಾಲು ಸಂಘರ್ಷದಿಂದ ಮುಸ್ಲಿಂಮತಗಳ ಒಗ್ಗೂಡುವಿಕೆ ಆಗಬಹುದು. ಆದರೆ ಸ್ಪಷ್ಟ ನಿಲುವು ಪ್ರದರ್ಶನವಾಗದಿರುವುದು ಹಾಗೂ ಇದೇ ವಿಚಾರದಲ್ಲಿ ಇತರ ಮುಸ್ಲಿಂ ರಾಜಕೀಯ ಸಂಘ ಟನೆಗಳ ರಂಗಪ್ರವೇಶ ನಷ್ಟವನ್ನೂ ತರಬಲ್ಲದು. ಕಾಂಗ್ರೆಸ್‌ ನಾಯಕರಿಗೂ ಆಂತರಿಕವಾಗಿ ಈ ಆತಂಕವೂ ಇದೆ. ಹೀಗಾಗಿ ಅತ್ತ ಹಿಜಾಬ್‌ ಸಮರ್ಥನೆ ಜತೆಗೆ ರಾಷ್ಟ್ರಧ್ವಜ ವಿಚಾರವನ್ನೂ ಎಳೆತಂದಿದೆ. ನಾವೂ ರಾಷ್ಟ್ರಪ್ರೇಮಿಗಳೇ ಎಂಬುದರ ತೋರ್ಪಡಿಸುವಿಕೆ ಎಂಬಂತೆ ಉಭಯ ಸದನಗಳಲ್ಲಿ ಭಾರತ್‌ ಮಾತಾಕೀ ಜೈ, ವಂದೇಮಾತರಂ ಘೋಷಣೆಯೂ ಹಾಕುತ್ತಿದೆ. ಇದರಿಂದಾ ಚೆಗೂ ತಮ್ಮದೇ ಆದ ಲೆಕ್ಕಾಚಾರದಲ್ಲೂ ಮುಳುಗಿದಂತಿದೆ.

ಲಾಭದ ಲೆಕ್ಕಾಚಾರ
ಆಡಳಿತಾರೂಢ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್‌ ನಡುವೆ, ಹಿಜಾಬ್‌-ಕೇಸರಿ ಶಾಲು, ರಾಷ್ಟ್ರಧ್ವಜ ವಿಚಾರದಲ್ಲಿ ನಡೆಯುತ್ತಿರುವ ಜಗಳದಲ್ಲಿ ಮತ್ತೂಂದು ವಿಪಕ್ಷ ಜೆಡಿಎಸ್‌ ಅಂತರ ಕಾಯ್ದುಕೊಂಡಿದೆ. ಈ ವಿಚಾರದಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಪೂರ್ಣ ಪ್ರಮಾಣದಲ್ಲಿ ಇಡುಗಂಟಾಗಿ ಮತ ಹಂಚಿಕೆ ಆಗದಿದ್ದರಷ್ಟೇ ಲಾಭ. ಜತೆಗೆ ತಮ್ಮ ಭದ್ರಕೋಟೆಗೆ ಲಗ್ಗೆ ಹಾಕಲು ಕಾಯುತ್ತಿರುವ ಕಾಂಗ್ರೆಸ್‌ ಮಟ್ಟ ಹಾಕುವುದು ಮೊದಲ ಗುರಿ. ಹೀಗಾಗಿಯೇ ಕಾಂಗ್ರೆಸ್‌ ವಿರುದ್ಧ ಅಘೋಷಿತ ಸಮರ ಸಾರಿದೆ.

ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುವ ಮುಂಚೆಯೇ ಸಿದ್ದರಾಮಯ್ಯ ಸರಕಾರದ ಭ್ರಷ್ಟಾಚಾರ  ಬಿಚ್ಚಿಡುವೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದರು. ಈಗ ಬಿಜೆಪಿ ಸರಕಾರ ಅಡಳಿತದಲ್ಲಿದ್ದರೂ ಹಿಂದಿನ ಕಾಂಗ್ರೆಸ್‌ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಪ್ರಸ್ತುತ ವಿಪಕ್ಷ ನಾಯಕರಾಗಿರುವವರ ಅವಧಿಯ ವಿಚಾರ ಮಾತನಾಡುತ್ತೇನೆ ಎಂಬ ಇವರ ಮಾತು ಅಚ್ಚರಿಗೆ ಕಾರಣವಾದರೂ ಬಿಜೆಪಿಗೆ ಹಿತವಾಗಿತ್ತು. ಆದರೆ ಸದನದಲ್ಲಿ ಆರಂಭ ವಾಗಿರುವ ಅಹೋರಾತ್ರಿ ಧರಣಿಯಿಂದಾಗಿ ಇದಕ್ಕೆ ಅವಕಾಶ ಸಿಗುತ್ತಾ ನೋಡಬೇಕಾಗಿದೆ.

ಜೆಡಿಎಸ್‌ಗೆ ಇದೀಗ ಮೊದಲ ಶತ್ರು ಕಾಂಗ್ರೆಸ್‌. ಜೆಡಿಎಸ್‌ ಮತಬ್ಯಾಂಕ್‌ ಕಾಂಗ್ರೆಸ್‌ ಕಸಿದುಕೊಳ್ಳುತ್ತಿದೆ. ಇದು ತಪ್ಪಬೇಕು. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಏನು ಮಾಡಬೇಕೋ ಅದನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಬಣ ರಾಜಕೀಯದ ಸಂಘರ್ಷ ಇಂದಲ್ಲ ನಾಳೆ ಸ್ಫೋಟವಾಗುತ್ತದೆ. ಆಂತರಿಕವಾಗಿ ಇರುವ ಭಿನ್ನಮತ ಬಹಿರಂಗವಾಗೇ ಆಗುತ್ತೆ. ಆಗ ತಮ್ಮ ರಾಜಕೀಯ ದಾಳ ಉರುಳಿಸ ಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಅವರ ಲೆಕ್ಕಾಚಾರ ಎರಡು ಬಾರಿ ಯಶಸ್ವಿಯೂ ಆಗಿದೆ. ಮೂರನೇ ಬಾರಿ ಏನಾಗುತ್ತದೆ ಎಂಬ ಕುತೂಹಲ ಇದೆ.

ಬದಲಾಗುತ್ತ ಸಮೀಕರಣ?
ರಾಜ್ಯ ಬಿಜೆಪಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇರುವುದರಲ್ಲಿ ಎಲ್ಲರನ್ನೂ ಸಂಭಾಳಿಸಿಕೊಂಡು ಮೂಲ-ವಲಸಿಗರ ಜತೆ ಸಮನ್ವಯತೆ ಸಾಧಿಸಿಕೊಂಡು ಹೋಗುತ್ತಿದ್ದಾರೆ. ಆದರೆ ಕೆಲವು ಹಿರಿ ಯರಿಗೆ ಅವರ ಬಗ್ಗೆ ಸಿಟ್ಟಿದ್ದು ಅಸಹಕಾರವೂ ಇದೆ. ಮತ್ತೂಂದೆಡೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಪುತ್ರ ವಿಜಯೇಂದ್ರ ಅವರನ್ನು ಮಂತ್ರಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಪವರ್‌ ಸೆಂಟರ್‌ ಆಗಬಹುದು ಎಂಬ ಆತಂಕದಿಂದ ಇದಕ್ಕೆ ಅಡ್ಡಿಯೂ ಇದೆ. ಯಡಿಯೂರಪ್ಪ ಅವರಿಗೆ ಬಿಜೆಪಿಯಲ್ಲಿ ಹಿನ್ನೆಡೆಯಾದರೆ ತಮಗೆ ರಾಜಕೀಯ ಲಾಭವಾಗಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್‌ದು. ಅದನ್ನು ತಪ್ಪಿಸಲು ಬಿಜೆಪಿ ಏನೋ ಬೇಕೋ ಅದನ್ನು ಮಾಡುತ್ತಿದೆ. ಎರಡೂ ಪಕ್ಷ ಗಳು ಮ್ಯಾಜಿಕ್‌ ನಂಬರ್‌ ತಲುಪುವುದು ಕಷ್ಟವಾಗಬ ಹುದು. ಆಗ, ತಮ್ಮ ಅನಿವಾರ್ಯತೆ ಬೀಳಬಹುದು ಎಂಬ ಲೆಕ್ಕಾ ಚಾರ ಜೆಡಿಎಸ್‌ನದು. ಇದರ ಜತೆ ಕಾಂಗ್ರೆಸ್‌ ಮಣಿಸಲು ಬಿಜೆಪಿಯತ್ತ ತುಸು ಪ್ರೀತಿಯೂ ಜಾಸ್ತಿಯಂತೆ ಕಾಣು ತ್ತಿದೆ. ಈಗ ಎದ್ದಿರುವ ಹಿಜಾಬ್‌-ಕೇಸರಿ ಶಾಲು, ರಾಷ್ಟ್ರಧ್ವಜ ಯಾರನ್ನು ಎಲ್ಲಿಗೆ ತಲುಪಿಸುತ್ತೋ ಕಾದುನೋಡಬೇಕಾಗಿದೆ.

-ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next