Advertisement

ಎಸಿಬಿ ಎಡಿಜಿಪಿ ಬಗ್ಗೆ ದ್ವೇಷವಿಲ್ಲ; ಅನುಮಾನಕ್ಕೆ ಕಾರಣಗಳಿವೆ

01:19 AM Jul 08, 2022 | Team Udayavani |

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) 2016ರಿಂದ ಈ ವರೆಗೆ ವಿಚಾರಣ ನ್ಯಾಯಾಲಯಕ್ಕೆ ಸಲ್ಲಿಸಿರುವ ಎಲ್ಲ ಬಿ ರಿಪೋರ್ಟ್‌ಗಳ ವರ್ಷವಾರು ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಿಜಿಸ್ಟ್ರಾರ್‌ (ನ್ಯಾಯಾಂಗ) ಅವರಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಆರೋಪಿಯಾಗಿರುವ ಉಪ ತಹಶೀಲ್ದಾರ್‌ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಎಚ್‌.ಪಿ. ಸಂದೇಶ್‌ ಅವರಿದ್ದ ಏಕಸದಸ್ಯ ನ್ಯಾಯ ಪೀಠ ಗುರುವಾರ ಈ ನಿರ್ದೇಶನ ನೀಡಿತು.

ಅರ್ಜಿ ವಿಚಾರಣೆಗೆ ಬಂದಾಗ ಎಸಿಬಿ ಪರ ವಕೀಲರು, ಬಿ ರಿಪೋರ್ಟ್‌ಗಳ ಬಗ್ಗೆ ಮಾಹಿತಿ ಸಲ್ಲಿಸಿ ದರು. 2016ರಿಂದ 2022ರ ಜೂ.29ರ ವರೆಗೆ ಒಟ್ಟು 105 ಬಿ ರಿಪೋರ್ಟ್‌ ಸಲ್ಲಿಸಲಾಗಿದೆ. 891 ಸರ್ಚ್‌ ವಾರಂಟ್‌ಗಳನ್ನು ಪಡೆಯಲಾಗಿತ್ತು. ಅದರಲ್ಲಿ 28 ಸರ್ಚ್‌ ವಾರಂಟ್‌ಗಳನ್ನು ಕಾರ್ಯಗತ ಗೊಳಿಸಲಾಗಿಲ್ಲ ಎಂದರು.

ವರದಿಯನ್ನು ಪರಿಶೀಲಿಸಿದ ನ್ಯಾಯ ಪೀಠ, ಬಿ ರಿಪೋರ್ಟ್‌ ಹಾಗೂ ಸರ್ಚ್‌ ವಾರಂಟ್‌ಗಳ ಬಗ್ಗೆ ಎಸಿಬಿ ನೀಡಿರುವ ವರದಿ ಸಮರ್ಪಕವಾಗಿಲ್ಲ. 2020ರಲ್ಲಿ ಸಲ್ಲಿಸಲಾದ  ಬಿ ರಿಪೋರ್ಟ್‌ ಬಗ್ಗೆ ಮಾಹಿತಿ ನೀಡಿಲ್ಲ.  2016 ರಿಂದ ಇದುವರೆಗೆ ವಿಚಾರಣ ನ್ಯಾಯಾ ಲಯಕ್ಕೆ ಸಲ್ಲಿಸಿರುವ ಬಿ ರಿಪೋರ್ಟ್‌ ಬಗ್ಗೆ ಮಾಹಿತಿ ಪಡೆದು ನ್ಯಾಯಾ ಲಯಕ್ಕೆ ಸಲ್ಲಿಸುವಂತೆ  ಕೋರ್ಟಿನ ರಿಜಿಸ್ಟ್ರಾರ್‌ (ನ್ಯಾಯಾಂಗ) ಅವರಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಜು.11ಕ್ಕೆ ಮುಂದೂಡಿತು.

ಎಡಿಜಿಪಿಗೆ ಆಸಕ್ತಿ ಇಲ್ಲ :

Advertisement

ವಿಚಾರಣೆ ವೇಳೆ ಎಸಿಬಿ ಎಡಿಜಿಪಿ ನಡೆಯನ್ನು ಮತ್ತೆ ತರಾಟೆಗೆ ತೆಗೆದು ಕೊಂಡ ನ್ಯಾಯಪೀಠ, ಎಡಿಜಿಪಿ ಬಗ್ಗೆ ವೈಯುಕ್ತಿಕ ದ್ವೇಷವಿಲ್ಲ. ಆದರೆ, ಅವರ ಬಗ್ಗೆ ಅನುಮಾನ ಬರಲು ಕಾರಣಗಳಿವೆ. ಎಡಿಜಿಪಿ ಕರ್ತವ್ಯ ನಿರ್ವಹಣೆಯಲ್ಲಿ ವಿಫ‌ಲರಾಗಿದ್ದಾರೆ. ಎಸಿಬಿ ಸಂಸ್ಥೆ ಹಿತ ಮತ್ತು ಘನತೆ ಕಾಪಾಡುವ ಆಸಕ್ತಿ ಅವರಿಗಿಲ್ಲ. ಎಡಿಜಿಪಿಗೆ ಆತ್ಮಸಾಕ್ಷಿ ಯನ್ನು ಕೇಳಿಕೊಳ್ಳಲು ಹೇಳಿ ಎಂದು ಎಸಿಬಿ ಪರ ವಕೀಲರಿಗೆ ಚಾಟಿ ಬೀಸಿದ ನ್ಯಾಯಪೀಠ, ಸ್ವತಃ ನ್ಯಾಯಾಲಯವೇ ಇಷ್ಟೊಂದು ನಿದರ್ಶನ  ಕೊಟ್ಟ ಮೇಲೂ ಎಸಿಬಿ ಪರ ವಕೀಲರು  ಎಡಿಜಿಪಿ ಯನ್ನು ಸಮರ್ಥಿಸಿಕೊಳ್ಳುತ್ತಿರುವುದು ದುರದೃಷ್ಟಕರ ಎಂದು ಹೇಳಿತು.

ಜಡ್ಜ್ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಎಡಿಜಿಪಿ :

ಬೆಂಗಳೂರು: ಎಸಿಬಿ ಎಡಿಜಿಪಿ ಸೀಮಂತ್‌ ಕುಮಾರ್‌ ಸಿಂಗ್‌ ಅವರು ನ್ಯಾ| ಎಚ್‌.ಪಿ ಸಂದೇಶ್‌ ಅವರ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಲಂಚದ ಬೇಡಿಕೆ ಪ್ರಕರಣದ ಅಸಮರ್ಪಕ ತನಿಖೆಯ ಕಾರಣ ನೀಡಿ, ತಮ್ಮ ಸೇವಾ ದಾಖಲೆ ಸಲ್ಲಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಿರುವುದನ್ನು ರದ್ದುಪಡಿಸಬೇಕು ಮತ್ತು ಪ್ರಕರಣದ ವಿಚಾರಣೆ ವೇಳೆ ತಮ್ಮ ವಿರುದ್ಧ ಮೌಖಿಕವಾಗಿ ಮಾಡಿರುವ ಟೀಕೆಗಳನ್ನು ಕೈಬಿಡಲು ನ್ಯಾಯಮೂರ್ತಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸೀಮಂತ್‌ ಕುಮಾರ್‌ ಸಿಂಗ್‌ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣದ ಮುಂದಿನ ವಿಚಾರಣೆ ವೇಳೆ ತಮ್ಮ ಸೇವಾ ದಾಖಲೆ ಪರಿಗಣಿಸದಂತೆ ಮತ್ತು ತಮ್ಮ ವಿರುದ್ಧ ಯಾವುದೇ ಟೀಕೆ ಮಾಡದಂತೆ ನ್ಯಾಯಮೂರ್ತಿಗಳಿಗೆ ನಿರ್ಬಂಧ ಹೇರಬೇಕು ಎಂದು  ಸಿಂಗ್‌  ಮನವಿ ಮಾಡಿದ್ದಾರೆ. ಈ ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಅಕ್ರಮ ಗಣಿ ಪ್ರಕರಣದ ವರದಿ  ಕೇಳಿದ ಹೈಕೋರ್ಟ್‌ :

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 2013ರ ಎ.5ರಂದು ಆಗ ಬಳ್ಳಾರಿ  ಎಸ್ಪಿ ಆಗಿದ್ದ ಈಗಿನ ಎಸಿಬಿ ಎಡಿಜಿಪಿ ಸೀಮಂತ್‌ ಕುಮಾರ್‌ ಸಿಂಗ್‌ ಮನೆ ಮೇಲೆ ಸಿಬಿಐ ದಾಳಿ ನಡೆಸಿತ್ತು. ಎಸ್ಪಿ ತಮ್ಮ ಅಧೀನ ಅಧಿಕಾರಿಗಳಿಂದ ಗಣಿ ಕಂಪೆನಿ ಮಾಲಕರಿಂದ ಮಾಮೂಲು ವಸೂಲಿ ಮಾಡಿಸುತ್ತಿದ್ದರು. ಸ್ವಸ್ತಿಕ್‌ ನಾಗರಾಜ್‌ ಅವರಿಂದ 3 ಲಕ್ಷ ರೂ.  ಪಡೆದಿದ್ದರು ಎಂಬ ಆರೋಪವಿದೆ. ಈ ಪ್ರಕರಣ ಇನ್ನೂ  ವಿಚಾರಣ ಹಂತದಲ್ಲಿದೆ. ಸೀಮಂತ್‌ ಕುಮಾರ್‌ ಸಿಂಗ್‌ ವಿರುದ್ಧ ಸಿಬಿಐ ಯಾವುದೇ ಕ್ರಮವನ್ನೂ ಸೂಚಿಸಿಲ್ಲ ಎಂದು ಹೇಳಿದ ನ್ಯಾಯಪೀಠ, ತನಿಖಾ ವರದಿ ಸಲ್ಲಿಸುವಂತೆ ಸಿಬಿಐಗೆ ಇದೇ ವೇಳೆ ನಿರ್ದೇಶನ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next