ಮುಂಬೈ: 2017ರಲ್ಲಿ ತಾಯಿಯನ್ನು ಕೊಂದು ದೇಹದ ಕೆಲವು ಭಾಗಗಳನ್ನು ತಿಂದ ಪ್ರಕರಣದ ಕುರಿತು ಕೊಲ್ಹಾಪುರ ಕೋರ್ಟ್ ವ್ಯಕ್ತಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್(Bombay High court) ಮಂಗಳವಾರ (ಅ.01) ಎತ್ತಿಹಿಡಿಯುವ ಮೂಲಕ ದೃಢಪಡಿಸಿದ್ದು, ಇದೊಂದು ನರಭಕ್ಷಕತನ ಪ್ರಕರಣವಾಗಿದೆ.
ಬಾಂಬೆ ಹೈಕೋರ್ಟ್ ವಿಭಾಗೀಯ ಪೀಠದ ಜಸ್ಟೀಸ್ ರೇವತಿ ಮೋಹಿತೆ ದೇರೆ ಮತ್ತು ಜಸ್ಟೀಸ್ ಪ್ರಥ್ವಿರಾಜ್ ಚವಾಣ್, ಪ್ರಕರಣದಲ್ಲಿ ಆರೋಪಿ ಸುನೀಲ್ ಕುಚ್ಕೋರವಿಯ ಗಲ್ಲುಶಿಕ್ಷೆಯನ್ನು ಖಚಿತಪಡಿಸಿದ್ದು, ಶಿಕ್ಷೆಯಲ್ಲಿ ಯಾವುದೇ ಬದಲಾವಣೆಗೆ ಅವಕಾಶವೇ ಇಲ್ಲ ಎಂದು ಆದೇಶ ನೀಡಿದೆ.
ಇದೊಂದು ನರಭಕ್ಷಕತನದ ಪ್ರಕರಣವಾಗಿದ್ದು, ವಿರಳಾತೀ ವಿರಳ ವರ್ಗಕ್ಕೆ ಸೇರಿದ ಪ್ರಕರಣವಾಗಿದೆ ಎಂದು ಪೀಠ ತಿಳಿಸಿದೆ. ಆರೋಪಿ ಕೇವಲ ತಾಯಿಯನ್ನು ಕೊಲೆಗೈದಿದ್ದಲ್ಲ, ಮೆದುಳು, ಹೃದಯ, ಲಿವರ್, ಕಿಡ್ನಿಯನ್ನು ಹೊರತೆಗೆದು ಅಡುಗೆ ಮಾಡಿ ತಿಂದಿದ್ದ ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.
ಒಂದು ವೇಳೆ ನಾವು ಈ ಅಪರಾಧಿಗೆ ಜೀವವಾಧಿ ಶಿಕ್ಷೆ ವಿಧಿಸಿದರೆ, ಈತ ಜೈಲಿನಲ್ಲೂ ಇದೇ ಕೃತ್ಯ ಎಸಗಬಹುದು ಎಂದು ಪೀಠ ಅಭಿಪ್ರಾಯವ್ಯಕ್ತಪಡಿಸಿದೆ. ಬಾಂಬೆ ಹೈಕೋರ್ಟ್ ಮರಣದಂಡನೆ ಶಿಕ್ಷೆಯನ್ನು ಎತ್ತಿಹಿಡಿದಿರುವ ವಿಷಯವನ್ನು ಕುಚ್ಕೋರವಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ನೀಡಲಾಗಿದೆ ಎಂದು ವರದಿ ತಿಳಿಸಿದೆ.