Advertisement

ದೈಹಿಕ, ಮಾನಸಿಕ ಮತ್ತು ಆಹಾರ ಪದ್ಧತಿ ಮೂಲಕ ಹೈ ಬಿ.ಪಿ ನಿಯಂತ್ರಿಸಬಹುದು: ಡಾ.ಕೆ.ಸುಧಾಕರ್‌

04:54 PM Oct 22, 2022 | Team Udayavani |

ಬೆಂಗಳೂರು: ಅಭಿವೃದ್ಧಿ ಹೊಂದುತ್ತಿರುವ ದೇಶ, ಬಡವರು ಹಾಗೂ ಮಧ್ಯಮ ವರ್ಗದ ಜನರಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆಗಳ ಪ್ರಮಾಣ ಹೆಚ್ಚಾಗಿ ಕಂಡು ಬರುತ್ತಿದೆ. ಸಾಂಕ್ರಾಮಿಕ ರೋಗಗಳಿಂದ ಉಂಟಾಗುವ ಸಾವಿನ ಪ್ರಮಾಣಕ್ಕಿಂತ, ಅಸಾಂಕ್ರಾಮಿಕ ರೋಗದಿಂದ ಎದುರಾಗುತ್ತಿರುವ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್‌ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ವರ್ಲ್ಡ್‌ ಸ್ಟ್ರೋಕ್ ಡೇ ಅಂಗವಾಗಿ ಬೆಂಗಳೂರು ಮೆಡಿಕಲ್ ಕಾಲೇಜ್ ಸಭಾಂಗಣದಲ್ಲಿ ನಡೆದ ” ಬೆಂಗಳೂರು ಸ್ಟ್ರೋಕ್ ನರ್ಸಿಂಗ್ ಕಾನ್ ಕ್ಲೈವ್ 2022″ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಕಾರಣಗಳಿಂದಾಗಿ ಶೇ. 70ರಷ್ಟು ಪ್ರಕರಣಗಳು ಬಡತನ ರೇಖೆಗಿಂತ ಕೆಳಗಡೆ, ಮಧ್ಯಮ ವರ್ಗದವರಲ್ಲಿ ಅಧಿಕ ರಕ್ತದೊತ್ತಡ ಕಾಣಿಸಿಕೊಳ್ಳುತ್ತಿದೆ. ಬಡ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಇದು ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ ಎಂದು ಹೇಳಿದರು.

ಅ. 29 ರಂದು ವಿಶ್ವ ಸ್ಟ್ರೋಕ್‌ ದಿನವನ್ನಾಚರಿಸಲಾಗುತ್ತಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಈ ಸಮಸ್ಯೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ಸತತವಾಗಿ ನಡೆಯುತ್ತಿವೆ. ಅಚ್ಚರಿ ಅಂದರೆ ಸಾಂಕ್ರಾಮಿಕ ರೋಗಗಳಿಂದ ಉಂಟಾಗುವ ಸಾವಿಗಿಗಿಂತ ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ ಸೇರಿದಂತೆ ಇತರೆ ಅಸಾಂಕ್ರಮಿಕ ರೋಗಗಳಿಂದ ಉಂಟಾಗುತ್ತಿರುವ ಸಾವು ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಕ್ರಮಗಳನ್ನು ಕೈಗೊಂಡಿವೆ.  ರೋಗ ಬಂದ ಮೇಲೆ ಚಿಕಿತ್ಸೆ ನೀಡುವುದಕ್ಕಿಂತ ರೋಗ ಬಾರದೆ ಇರುವ ಹಾಗೇ ನೋಡಿಕೊಳ್ಳುವುದೇ ಉತ್ತಮ.  ಹೀಗಾಗಿ ಆರೋಗ್ಯದ ಬಗ್ಗೆ ತಿಳುವಳಿಕೆ ನೀಡುವ ಕಾರ್ಯಗಳು ಸರ್ಕಾರದಿಂದಲೇ ನಡೆಯುತ್ತಿದೆ ಎಂದರು.

ಬಡತನ ರೇಖೆಗಿಂತ ಕೆಳಗಿರುವ, ಕಡಿಮೆ ಶಿಕ್ಷಣ ಹೊಂದಿರುವ, ಆರೋಗ್ಯ ಕ್ಷೇತ್ರದ ಬಗ್ಗೆ ಹೆಚ್ಚು ತಿಳುವಳಿಕೆ ಹೊಂದಿರದ ಗ್ರಾಮೀಣ ಜನರಿಗೆ ಆರೋಗ್ಯದ ಮಹತ್ವವನ್ನು ತಿಳಿ ಹೇಳುವುದು ದಾದಿಯರ ಪಾಲಿನ ಅತಿದೊಡ್ಡ ಕೆಲಸವಾಗಿದೆ. ಸ್ಟ್ರೋಕ್‌ ರೋಗಿಗೆ ವೈದ್ಯರು ಚಿಕಿತ್ಸೆ ಮಾತ್ರ ನೀಡುತ್ತಾರೆ. ಆದರೆ ಉಳಿದ ಕೆಲಸಗಳನ್ನು ಆರೈಕೆ ಮೂಲಕವೇ ದಾದರಿ ಮಾಡುತ್ತಾರೆ. ಸರಿಯಾದ ಆರೈಕೆ, ಕಾಯಿಲೆ ಬಗ್ಗೆ ತಿಳಿ ಹೇಳುವುದು ಮತ್ತು ರೋಗಿಗೆ ಆತ್ಮವಿಶ್ವಾಸ ತುಂಬುವುದು ದಾದಿಯರ ಮೊದಲ ಕೆಲಸವಾಗಿದೆ. ಇದರಿಂದಲೇ ಚಿಕಿತ್ಸೆ ಪಡೆಯುತ್ತಿರುವವರಿ ಗುಣಮುಖರಾಗಲು ಸಾಧ್ಯ ಎಂದು ಹೇಳಿದರು.

ದೇಶದಲ್ಲಿ ಖಿನ್ನತೆ, ಹೈಪರ್ ಟೆನ್ಷನ್‌ಗೆ ಒಳಗಾಗುತ್ತಿರುವವರ  ಸಂಖ್ಯೆ ಹೆಚ್ಚಾಗುತ್ತಿದೆ. ಭಾರತ ಸಕ್ಕರೆ ಕಾಯಿಲೆಯಲ್ಲಿ ವಿಶ್ವಕ್ಕೆ ರಾಜಧಾನಿಯಾಗುತ್ತಿದೆ. ಎಷ್ಟು ರಕ್ತದೊತ್ತಡ ಕಡಿಮೆ ಮಾಡುತ್ತೇವೆಯೋ ಅಷ್ಟು ಸ್ಟ್ರೋಕ್‌ಗೆ ಒಳಗಾಗುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಸ್ಸ್ಟ್ರೋಕ್‌ಗೆ ಮೊದಲ ಕಾರಣವೇ ಹೈಪರ್‌ ಟೆನ್ಷನ್‌ ಆಗಿದೆ. ಜೀವನ ಶೈಲಿ, ಆಹಾರ ಪದ್ಧತಿ, ದೈಹಿಕ, ಮಾನಸಿಕ ಹಾಗೂ ಸಾಮಾಜಿಕವಾಗಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಮೂಲಕ ಸ್ಟ್ರೋಕ್‌ಗೆ ಒಳಗಾಗುವುದನ್ನು ತಪ್ಪಿಸಬಹುದು ಎಂದು ತಿಳಿಸಿದರು.

Advertisement

ಇದನ್ನೂ ಓದಿ:ರಾಜಕೀಯ ಲಾಭಕ್ಕಾಗಿ ದಲಿತರ ಮನೆಗೆ ಊಟಕ್ಕೆ ಬರಬೇಡಿ: ಎಚ್. ವಿಶ್ವನಾಥ್

ಸರ್ಕಾರ ಈಗಾಗಲೇ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ.  ಎನ್‌ಸಿಡಿ ಕ್ಲಿನಿಕ್‌ಗಳ 9000 ಸಬ್‌ ಸೆಂಟರ್‌ಗಳು ರಾಜ್ಯದಲ್ಲಿ ಸ್ಥಾಪಿಸಲಾಗಿದೆ. ಇದಕ್ಕಾಗಿ 6000 ಸಿಎಚ್‌ಒಗಳನ್ನು ನೇಮಕ ಮಾಡಲಾಗಿದೆ. ನಮ್ಮ ಕ್ಲಿನಿಕ್‌ಗಳ ಸ್ಥಾಪನೆಯ ಮೂಲ ಉದ್ದೇಶವೂ ಇದಾಗಿದೆ. ಈ ಮೂಲಕ ಸಕ್ಕರೆ ಕಾಯಿಲೆ ಹೈಪರ್‌ ಟೆನ್ಷನ್‌ ಸೇರಿದಂತೆ ಎಲ್ಲಾ ಅಸಾಂಕ್ರಾಮಿಕ ರೋಗಿಗಳ ಚಿಕಿತ್ಸೆಗೆ ನೆರವು ನೀಡಲಾಗುತ್ತಿದೆ. ಅವರ ಡೇಟಾಗಳನ್ನು ಸಂಗ್ರಹಿಸಿ, ರೋಗಿಗಳ ಡಯಟ್‌, ಪೋಷಕಾಂಶಯುಕ್ತ ಆಹಾರ ಸೇವನೆ ಬಗ್ಗೆ ಪರಿಣಾಮಕಾರಿಯಾಗಿ ತಿಳಿಸುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದರು.

ಸ್ಟೋಕ್‌ ಆದಾಗ ಸಮಯ ಪ್ರಜ್ಞೆ ತುಂಬಾ ಪ್ರಮುಖ. ಡಾಕ್ಟರ್‌ ಹತ್ತಿರ ಹೇಗೆ ಮತ್ತು ಎಷ್ಟು ಬೇಗ ಹೋಗುತ್ತಿರಾ ಅನ್ನುವುದು ತುಂಬಾ ಮುಖ್ಯವಾಗುತ್ತದೆ. ಚಿಕಿತ್ಸೆ ಎಷ್ಟು ಬೇಗನೆ ಸಿಗುತ್ತದೆ ಅನ್ನುವುದೇ ನಿರ್ಣಾಯಕ. ವೈದ್ಯರು ಹಾಗೂ ಸಿಬ್ಬಂದಿಗಳು ರೋಗಿಯನ್ನು ಹಾಗೂ ಅವರ ಸಂಬಂಧಿಕರನ್ನು ನಿಭಾಯಿಸುವುದು ಕೂಡ ಪ್ರಮುಖವಾಗುತ್ತದೆ. ಆರೈಕೆ ಹಾಗೂ ಚಿಕಿತ್ಸೆ ಎರಡೂ ಕೂಡ ಸರಿಯಾದ ಕ್ರಮದಲ್ಲಿ ಹಾಗೂ ಸರಿಯಾದ ಸಮಯಕ್ಕೆ ಸಿಕ್ಕರೆ ಬೇಗನೆ ಗುಣಮುಖವಾಗಲು ಸಾಧ್ಯವಾಗುತ್ತದರೆ. ತಂತ್ರಜ್ಞಾನದ ಬಳಕೆ ಮೂಲಕ ಆರೋಗ್ಯ ಕರ್ನಾಟಕವನ್ನು ಕಟ್ಟಬೇಕಿದೆ ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next