Advertisement

ಸಂಶೋಧನಾ ಪರಂಪರೆಯೇ ಮರೆ

12:31 PM Jul 11, 2017 | Team Udayavani |

ದಾವಣಗೆರೆ: ಈಚೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಸಂಶೋಧನಾ ಪರಂಪರೆಯೇ ಕಳೆದುಹೋಗುತ್ತಿದೆ ಎಂದು ನವದೆಹಲಿಯ
ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ| ಪುರುಷೋತ್ತಮ ಬಿಳಿಮಲೆ
ಅಭಿಪ್ರಾಯಪಟ್ಟಿದ್ದಾರೆ.

Advertisement

ಸೋಮವಾರ ಸಂಜೆ ವಿದ್ಯಾನಗರದ ರೋಟರಿ ಟ್ರಸ್ಟ್‌ ಸಭಾಂಗಣದಲ್ಲಿ ಪ್ರೊ| ಬಸವರಾಜ್‌ ತೂಲಹಳ್ಳಿಯವರ ಪಿಂಗಳೇಶನ ಜಾತಕ ಮತ್ತು ಬಿಟೀನ್‌ ದಿ ಲ್ಯಾಂಡ್‌ ಆ್ಯಂಡ್‌ ದಿ ಕಿಲ್ಲರ್‌… ಕೃತಿಗಳ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈಚೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ವಿವಿಧ ವಿಚಾರಗಳ ಕುರಿತಂತೆ ಸಂಶೋಧನೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಧ್ಯಾನಸ್ಥ ಸ್ಥಿತಿಯಲ್ಲಿ ಅಧ್ಯಯನ, ಸಂಶೋಧನೆ ನಡೆಸಿ, ಹೊಸ ಆಯಾಮದ ವಿಚಾರ ತಿಳಿಸುವಂತಹ ಪರಂಪರೆ ಕಳೆದು ಹೋಗುತ್ತಿದೆ ಎಂದರು.

ಕನ್ನಡ ಸಾಹಿತ್ಯದಲ್ಲಿ ಸಂಶೋಧನಾ ಪರಂಪರೆಗೆ ತನ್ನದೇ ಆದ ವೈಭವ ಇತ್ತು. ಶಂಬಾ ಜೋಶಿಯವಂತಹವರು ಅತ್ಯಂತ ಸಮರ್ಥ, ಪರಿಣಾಮಕಾರಿ ರೀತಿಯಲ್ಲಿ ಸಂಶೋಧನೆ ನಡೆಸುತ್ತಿದ್ದರು. ಶಂಬಾ ಜೋಶಿಯವರ ನಂತರ ಅವರ ಉತ್ತರಾಧಿಕಾರಿಗಳು ಎನಿಸಿಕೊಂಡಂತವರೇ ಶಂಬಾ ಜೋಶಿಯವರಿಗೆ ಮಾಡಿದಷ್ಟು ಅಪಮಾನ ಇನ್ನಾರು ಮಾಡಲಿಲ್ಲ. ಅದರಲ್ಲೂ ಅವರ ಉತ್ತರಾಧಿಕಾರಿ ಎಂದೇ ಹೇಳಿಕೊಳ್ಳುವ ಪ್ರೊ| ಮಲ್ಲೇಪುರಂ  ವೆಂಕಟೇಶ್‌ರವರಿಂದಲೇ ಹೆಚ್ಚಿನ ಅಪಮಾನವಾಗಿದ್ದು ಎಂದು ಹೇಳಿದರು. 

ಈಚೆಗೆ ಅನೇಕರು ತಮ್ಮ ಕವನ, ಕಾವ್ಯ ಸಾಮಾಜಿಕ ಜಾಲತಾಣದಲ್ಲಿ ಹಾಗೆಯೇ ಯಾವುದಾದರೂ ಒಂದು ಪತ್ರಿಕೆಯಲ್ಲಿ ಪ್ರಕಟಗೊಂಡು ಪ್ರಶಸ್ತಿ ಬರಬೇಕು ಎನ್ನುವುದಕ್ಕೆ ಮಾತ್ರವೇ ಸೀಮಿತವಾಗುತ್ತಿದ್ದಾರೆ. ಸಂಶೋಧನೆಯತ್ತ ಗಮನ ನೀಡುತ್ತಿಲ್ಲ. ಅಂತಹ
ವಾತಾವರಣದ ಮಧ್ಯೆದಲ್ಲಿ ಪ್ರೊ| ಬಸವರಾಜ ತೂಲಹಳ್ಳಿಯವರು ಹೊರ ತಂದಿರುವ ಶೈವಶಾಕ್ತ… ಸಂಶೋಧನಾ ಕೃತಿ ನಿಗೂಢ ರಹಸ್ಯ ತಾಂತ್ರಿಕತೆ ಲೋಕದ ಅನೇಕ ವಿಚಾರಗಳ ಬಗ್ಗೆ ಪರಿಣಾಮಕಾರಿಯಾಗಿ ಬೆಳಕು ಚೆಲ್ಲಿದೆ. ಪ್ರೊ| ಬಸವರಾಜ 
ತೂಲಹಳ್ಳಿಯವರು ಏನಾದರೂ ರಾಜ್ಯ, ರಾಷ್ಟ್ರ ರಾಜಧಾನಿಯಲ್ಲಿದ್ದುಕೊಂಡು ಆ ಕೃತಿಯನ್ನು ಬರೆದಿದ್ದರೆ ರಾಷ್ಟ್ರ ಮಟ್ಟದ ಮನ್ನಣೆ ದೊರೆಯುತ್ತಿತ್ತು ಎಂದು ತಿಳಿಸಿದರು.

ಈಚೆಗೆ ಕವಿಗಳು ಮತ್ತು ಬುದ್ಧಿಜೀವಿಗಳು ಅಪಹಾಸ್ಯಕ್ಕೆ ಒಳಗಾಗುವಷ್ಟು ಯಾರೂ ಒಳಗಾಗುತ್ತಿಲ್ಲ. ಕವಿಗಳ ವೇಷಭೂಷಣ, ಸದಾ ಹೆಗಲಿಗೆ ಹಾಕಿಕೊಂಡಿರುತ್ತಿದ್ದ ಚೀಲದ ಕಾರಣಕ್ಕಾಗಿಯೇ ಹಿಂದಿನಿಂದಲೂ ಅಪಹಾಸ್ಯಕ್ಕೆ ಒಳಗಾಗುತ್ತಿದ್ದುದು ಕಂಡು ಬರುತ್ತಿತ್ತು. ಈಚೆಗೆ ಬುದ್ಧಿಜೀವಿಗಳೇ ಇತರೆ ಬುದ್ಧಿಜೀವಿಗಳ ಬಗ್ಗೆ ಅಪಹಾಸ್ಯ ಮಾಡುವ ವಾತಾವರಣ ಇದೆ ಎಂದು ತಿಳಿಸಿದರು. ಪ್ರೊ| ಬಸವರಾಜ ತೂಲಹಳ್ಳಿಯವರು ಸಂಶೋಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹೊಸದನ್ನ ನೀಡುವ ಪರಿ ಮೆಚ್ಚುವಂತದ್ದು. ಅವರು
ಸಂಶೋಧನೆ ಮತ್ತು ಸೃಜನಶೀಲತೆ ಎಂಬ ಎರಡು ವಿಭಾಗ ಮಾಡಿಕೊಂಡು ಕೃತಿ ರಚಿಸುತ್ತಿದ್ದಾರೆ. ಸಂಶೋಧನೆ ಮತ್ತು
ಸೃಜನಶೀಲತೆ ಎರಡನ್ನೂ ಸೇರಿಸಿಕೊಂಡು ಕೃತಿ ಹೊರ ತಂದಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಆಯಾಮ ತಂದುಕೊಡಬಹುದು.
ಅಂತಹ ಶಕ್ತಿ ಅವರಲ್ಲಿದೆ. ನಿಗೂಢ ರಹಸ್ಯ ತಾಂತ್ರಿಕತೆಯ ಬಗ್ಗೆ ಅವರಿಗೆ ಇರುವಂತಹ ಮಾಹಿತಿ ಯಾರಿಗೂ ಇಲ್ಲ. ತಮ್ಮ ಆಶಯದಂತೆ ಸಂಶೋಧನೆ ಮತ್ತು ಸೃಜನಶೀಲತೆ ಒಟ್ಟಾಗಿಸಿಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದರು.

Advertisement

ಕೃತಿಗಳ ಬಗ್ಗೆ ಮಾತನಾಡಿದ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಇಂಗ್ಲಿಷ್‌ ವಿಭಾಗದ ಸಹ ಪ್ರಾಧ್ಯಾಪಕ ಡಾ| ಸಿರಾಜ್‌ ಅಹಮದ್‌ ಮಾತನಾಡಿ, ಪ್ರೊ| ಬಸವರಾಜ್‌ ತೂಲಹಳ್ಳಿಯವರು ಬರೆದಿರುವ ಶೈವಶಾಕ್ತ… ಕೃತಿ ಓದಿದರೆ ಪ್ರೊ| ಬಸವರಾಜ್‌ ತೂಲಹಳ್ಳಿಯವರೇನಾ ಆ ಕೃತಿಯನ್ನು ಬರೆದಿರುವುದು ಎನ್ನುವ ಅನುಮಾನ ಬರುವಂತೆ ಸದಾ ಮೌನ, ಗಂಭೀರವಾಗಿ ಕಂಡು ಬರುವ ಅವರು ಈಚೆಗೆ ಬರೆದಿರುವ ಪಿಂಗಳೇಶನ ಜಾತಕ ಮತ್ತು ಬಿಟೀÌನ್‌ ದಿ ಲ್ಯಾಂಡ್‌ ಅಂಡ್‌ ದಿ ಕಿಲ್ಲರ್‌… ಕೃತಿಗಳಲ್ಲಿ ಮಧ್ಯ ಕರ್ನಾಟಕದ ದಾವಣಗೆರೆ ಸೀಮೆ ಭಾಷೆಯನ್ನು ಅತಿ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಗಟ್ಟಿಯಾದ ಗ್ರಾಮಭಾರತವನ್ನು ಕೃತಿಗಳ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯ ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ
ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ| ಕೆ. ನಾರಾಯಣಸ್ವಾಮಿ
ಪ್ರಾಸ್ತಾವಿಕ ಮಾತುಗಳಾಡಿ ದರು. ಕೃತಿಕಾರ ಪ್ರೊ| ಬಸವರಾಜ್‌ ತೂಲಹಳ್ಳಿ ಇದ್ದರು. ಮೋಹನ್‌, ಗೀತಾ ಪ್ರಾರ್ಥಿಸಿದರು.
ರೇವಣಸಿದ್ದಪ್ಪ ಸ್ವಾಗತಿಸಿದರು. ಡಾ| ಕೆ. ಮಂಜಣ್ಣ ನಿರೂಪಿಸಿದರು.

ಜಾತಕದ ಪ್ರಕಾರ ವಿದ್ಯೆ ಇಲ್ಲ..
ನವದೆಹಲಿಯ ಪ್ರತಿಷ್ಠಿತ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾಗಿರುವ ಡಾ| ಪುರುಷೋತ್ತಮ ಬಿಳಿಮಲೆಯವರ ಜಾತಕದ ಪ್ರಕಾರ ಅವರಿಗೆ ವಿದ್ಯೆಯೇ ಇಲ್ಲವಂತೆ… ಎನ್ನುವ ಸ್ವಾರಸ್ಯಕರ ವಿಚಾರವನ್ನ ಖುದ್ದು ಬಿಳಿಮಲೆಯವರೇ ಹೇಳಿದರು. ಸೋಮವಾರ ಸಂಜೆ ವಿದ್ಯಾನಗರದ ರೋಟರಿ ಟ್ರಸ್ಟ್‌ ಸಭಾಂಗಣದಲ್ಲಿ ಪ್ರೊ| ಬಸವರಾಜ್‌ ತೂಲಹಳ್ಳಿಯವರ ಕೃತಿ ಬಿಡುಗಡೆ ಸಮಾರಂಭದಲ್ಲಿ ಈ ವಿಷಯ ಪ್ರಸ್ತಾಪಿಸಿ ಅವರು, ನನ್ನ ಜಾತಕದ ಪ್ರಕಾರ ನನಗೆ ವಿದ್ಯೆಯೇ ಇಲ್ಲ ಎಂದಿತ್ತು. ಆ ಕಾರಣಕ್ಕಾಗಿ ನನ್ನ ತಂದೆ ನನಗೆ 6 ವರ್ಷವಾದರೂ ಶಾಲೆಗೆ ಕಳಿಸಿರಲಿಲ್ಲ. ನನ್ನ ತಾಯಿಯ ಹಠ, ನನ್ನ ಆಸೆಗೆ
ಕಟ್ಟುಬಿದ್ದಂತಹ ನನ್ನ ತಂದೆ ಪುನಾಃ ಬಾಲ್ಯದಲ್ಲಿ ಜಾತಕ ಬರೆದಿದ್ದ ಜ್ಯೋತಿಷಿ ಬಳಿ ಹೋಗಿ ಕೇಳಿಸಿದಾಗ ಆಗಸ್ಟ್‌ 8 ರಂದು ಶಾಲೆಗೆ ಸೇರಿಸುವಂತೆ ಹೇಳಿದ್ದರು. ಅದರಂತೆ ನನ್ನ ತಂದೆ ಶಾಲೆಗೆ ಸೇರಿಸಲು ಹೋದಾಗ ಅಂದು(ಆಗಸ್ಟ್‌ 8) ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶಾಲೆಗೆ ರಜೆ ಇತ್ತು. ತಂದೆಗೆ ಕೋಪ ಬಂದು, ಶಾಲೆಗೆ ಸೇರಿಸದೆ ಪೇಟೆಗೆ ಹೊರಟು ಹೋಗಿದ್ದರು. ಮುಂದೆ ಓದಿ ಇಂದು ನವದೆಹಲಿಯ ಪ್ರತಿಷ್ಠಿತ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥನಾಗಿದ್ದೇನೆ. ಇದೆಲ್ಲಾ ನಡೆದಿದ್ದು 1956ರಲ್ಲಿ ಎಂದು ನೆನಪಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next