Advertisement
ಮುಂಬಯಿ ಸಹಿತ ಕೊಂಕಣ ಮಹಾರಾಷ್ಟ್ರದಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮಂಗಳವಾರ ಸಂಜೆಯೇ ರೆಡ್ ಅಲರ್ಟ್ ಜಾರಿಗೊಳಿಸಿತ್ತು. ಧಾರಾಕಾರ ಮಳೆಯೊಂದಿಗೆ ರಸ್ತೆಗಳು ಮುಳುಗಡೆಯಾಗುವುದರೊಂದಿಗೆ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು. ಅಂಧೇರಿ ಸಬ್ವೆಯಲ್ಲಿ ಪ್ರವಾಹ ನೀರು ಹರಿದ ಪರಿಣಾಮ ಅಲ್ಲಿ ವಾಹನ ಸಂಚಾರ ಸಂಚಾರವನ್ನು ಸ್ಥಗಿತಗೊಳಿಸಲಾಯಿತು.ಖಾರ್ ಸಬ್ವೇಯಲ್ಲೂ ಉತ್ತರ ದಿಕ್ಕಿನ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಚಾಂದಿವಲಿ ಜಂಕ್ಷನ್ ಮತ್ತು ವಡಾಲಾ ಫ್ರೀವೇಯಲ್ಲೂ ಮಳೆಯಿಂದಾಗಿ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿರುವ ಬಗ್ಗೆ ವರದಿಯಾಗಿದೆ. ಹಿಂದ್ಮಾತಾದಲ್ಲಿನ ಸ್ಲಿಪ್ ರೋಡ್ ಮುಚ್ಚಲ್ಪಟ್ಟಿದೆ ಮತ್ತು ಜಲಾವೃತದಿಂದಾಗಿ ವಾಹನ ಸಂಚಾರವನ್ನು ಹಿಂದ್ಮಾತಾ ಸೇತುವೆಯ ಮೇಲೆ ತಿರುಗಿಸಲಾಗಿದೆ ಎಂದು ಮುಂಬಯಿ ಪೊಲೀಸ್ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಮಧುಕರ್ ಪಾಂಡೆ ಹೇಳಿದ್ದಾರೆ. ದಾದರ್ ಟ್ರಾಮ್ ಟರ್ಮಿನಸ್ (ಟಿಟಿ), ಎಸ್ವಿ ರೋಡ್ ಅಂಧೇರಿ, ಸಾಯಿ ನಾಥ್ ಸಬ್ವೆ, ಎಸ್ಸಿಎಲ್ಆರ್ ಸೇತುವೆ, ಬಾಂದ್ರಾ ಮತ್ತು ಎಲ್ಜೆ ರಸ್ತೆ ಲಿಂಕ್ ರೋಡ್, ಮಾಹೀಮ್ ಜಂಕ್ಷನ್, ಖೇತ್ವಾಡಿ, ಸಯಾನ್ ರಸ್ತೆ ಸಂಖ್ಯೆ 24 ಮತ್ತು ಗಾಂಧಿ ಮಾರ್ಕೆಟ್ ಜಲಾವೃತಗೊಂಡಿರುವ ಬಗ್ಗೆ ವರದಿಯಾಗಿದೆ. ಕರಾವಳಿ ಕೊಂಕಣ ಪ್ರದೇಶದಲ್ಲಿ ಮಂಗಳವಾರ ಸಂಜೆಯಿಂದ ಸಾದಾರಣ ಮಳೆಯಾಗಿದೆ.
ಮುಂಬಯಿಯಲ್ಲಿ ಬುಧವಾರ ಮುಂಜಾನೆ 5ರ ವರೆಗೆ ಕಳೆದ 24 ಗಂಟೆಗಳ ಅವಧಿಯಲ್ಲಿ ಸುಮಾರು 150 ಮಿಲಿಮೀಟರ್ (ಎಂಎಂ) ಮಳೆಯಾಗಿದೆ. ಬೆಳಗ್ಗೆ 8:30 ರಿಂದ ಮಧ್ಯಾಹ್ನ 12: 30 ರ ನಡುವೆ ಮುಂಬಯಿಯ ಬಾಂದ್ರಾದಲ್ಲಿ 95 ಮಿ.ಮೀ., ಸಾಂತಾಕ್ರೂಜಲ್ಲಿ 63 ಮಿ.ಮೀ., ರಾಮ್ ಮಂದಿರ ಪ್ರದೇಶದಲ್ಲಿ 63 ಮಿ.ಮೀ., ಮಹಾಲಕ್ಷ್ಮೀಯಲ್ಲಿ 53 ಮಿ.ಮೀ. ಮತ್ತು ಕೊಲಾಬಾದಲ್ಲಿ 16 ಮಿ.ಮೀ. ಮಳೆ ದಾಖಲಾಗಿದೆ. ಬುಧವಾರ ಬೆಳಗ್ಗೆ 8.30ರ ವರೆಗೆ ಕಳೆದ 24 ಗಂಟೆಗಳ ಅವಧಿಯಲ್ಲಿ ಡಹಾಣುಮತ್ತು ಅಲಿಬಾಗ್ (ರಾಯಗಢ) ವೀಕ್ಷಣಾಲಯಗಳಲ್ಲಿ ಕ್ರಮವಾಗಿ 128 ಮಿ.ಮೀ ಮತ್ತು 122.6 ಮಿ.ಮೀ. ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಅವಧಿಯಲ್ಲಿ ರತ್ನಗಿರಿ ವೀಕ್ಷಣಾಲಯದಲ್ಲಿ 101.3 ಮಿ.ಮೀ.ಮಳೆ ದಾಖಲಾದರೆ, ಜಿಲ್ಲೆಯ ಹರ್ಣಾಯಿ ಹವಾಮಾನ ಕೇಂದ್ರವು 89 ಮಿ.ಮೀ. ಮಳೆಯನ್ನು ದಾಖಲಿಸಿದೆ ಎಂದು ಐಎಂಡಿ ಹೇಳಿದೆ. ಥಾಣೆ-ಬೇಲಾಪುರ ಕೈಗಾರಿಕಾ ಸಂಘದ ವೀಕ್ಷಣಾಲಯದಲ್ಲಿ 35.2 ಮಿ.ಮೀ. ಮಳೆ ಮತ್ತು ಪಶ್ಚಿಮ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ 16.8 ಮಿ.ಮೀ. ಮಳೆಯಾಗಿದೆ ಎಂದು ಐಎಂಡಿ ತಿಳಿಸಿದೆ. ಮುಂದಿನ 18 ಗಂಟೆಗಳಲ್ಲಿ ಮುಂಬಯಿ, ಥಾಣೆ, ರಾಯಗಢ ಮತ್ತು ರತ್ನಗಿರಿ ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಅತಿ ಭಾರೀ ಮಳೆಯೊಂದಿಗೆ ಚದುರಿದ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.