Advertisement

ಕನ್ನಡದ ಮೊದಲ ಪತ್ರಿಕೆ ಆರಂಭಕರ್ತೃ ರೆ|ಹರ್ಮನ್‌ ಫ್ರೆಡ್ರಿಕ್‌ ಮೊಗ್ಲಿಂಗ್‌

09:30 PM Nov 05, 2020 | mahesh |

1843ರಷ್ಟು ಹಿಂದೆ ಮೊದಲ ಕನ್ನಡ ಪತ್ರಿಕೆ “ಮಂಗಳೂರ ಸಮಾಚಾರ’ವನ್ನು ಆರಂಭಿಸಿದವರು ಹರ್ಮನ್‌ ಮೊಗ್ಲಿಂಗ್‌. ವಿದೇಶೀಯರಾದ ಅವರು ಕನ್ನಡ ಕಲಿತು ಈ ಪತ್ರಿಕೆ ಸ್ಥಾಪಿಸಿದ್ದರು.

Advertisement

ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಕ್ರೈಸ್ತ ಮಿಶನರಿಗಳ ಕೊಡುಗೆ ಅಪಾರ. ಅದರಲ್ಲೂ ಮುಖ್ಯವಾಗಿ ಜರ್ಮನಿಯ ಬಾಸೆಲ್‌ ಮಿಶನ್‌ನ ಕಾಣಿಕೆ ಅನನ್ಯ.  ರೆ| ಹರ್ಮನ್‌ ಫ್ರೆಡ್ರಿಕ್‌ ಮೊಗ್ಲಿಂಗ್‌ 1836ರಲ್ಲಿ ಮಂಗಳೂರಿಗೆ ಬಂದಿದ್ದರು. ಅವರು ಕನ್ನಡ ಪತ್ರಿಕಾ ರಂಗದ ಆರಂಭ ಕತೃì, ಪಿತಾಮಹ. ಕೇವಲ 7 ವರ್ಷಗಳಲ್ಲಿ ಕನ್ನಡದಲ್ಲಿ ಪಾಂಡಿತ್ಯವನ್ನು ಪಡೆದು 1843ರ ಜುಲೈ 1ರಂದು ಕರ್ನಾಟಕದ ಮೊದಲ ಕನ್ನಡ ಪತ್ರಿಕೆ “ಮಂಗಳೂರ ಸಮಾಚಾರ’ವನ್ನು ಆರಂಭಿಸಿದ್ದರು. ಈ ಐತಿಹಾಸಿಕ ದಿನದ ಸ್ಮರಣಾರ್ಥ ಜು. 1ರಂದು ರಾಜ್ಯದಲ್ಲಿ ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಪ್ರಾರಂಭದಲ್ಲಿ ಸಾಪ್ತಾಹಿಕ ಹಾಗೂ ಬಳಿಕ ಪಾಕ್ಷಿಕವಾಗಿ ಮುದ್ರಣವಾಗುತ್ತಿದ್ದ 4 ಪುಟಗಳ ಈ ಪತ್ರಿಕೆಯಲ್ಲಿ ವಿದೇಶಿ ಸುದ್ದಿಯ ಜತೆಗೆ “ಊರ ವರ್ತಮಾನ’ (ಪ್ರಾದೇಶಿಕ ವಾರ್ತೆ), ಸರಕಾರದ ನಿರೂಪಗಳು (ಈಸ್ಟ್‌ ಇಂಡಿಯಾ ಕಂಪೆನಿಯ ಕಾನೂನುಗಳು), ಸರ್ವ ರಾಜ್ಯ ವರ್ತಮಾನಗಳು (ರಾಜ್ಯ ಸುದ್ದಿ), ನೂತನವಾದ ಆಶ್ಚರ್ಯಕರ ಸುದ್ದಿಗಳು (ಅಸಾಮಾನ್ಯ ಸುದ್ದಿ), ಅನ್ಯರ ನಡತೆಗಳು (ಆಚಾರ ವಿಚಾರ), ಸುಬುದ್ಧಿಗಳು (ಉತ್ತಮ ನಡತೆ), ನೀತಿ ಕಥೆಗಳು, ಪುರಂದರ ದಾಸರ ಕೀರ್ತನೆಗಳು ಪ್ರಕಟವಾಗುತ್ತಿದ್ದವು. ಪತ್ರಿಕೆ ಜನಪ್ರಿಯತೆ ಗಳಿಸಿದಾಗ ಅದರ ಮುದ್ರಣವನ್ನು 1844 ರಲ್ಲಿ ಬಳ್ಳಾರಿಗೆ ಸ್ಥಳಾಂತರಿಸಲಾಯಿತು. ಬಳಿಕ ಅದು “ಕರ್ನಾಟಕ ಸಮಾಚಾರ’ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿತ್ತು.

ಮಂಗಳೂರಿನ ಬಲ್ಮಠದಲ್ಲಿ ಸ್ಥಾಪಿಸಿದ ಧಾರ್ಮಿಕ ಶಿಕ್ಷಣ ಬೋಧಕರ ತರಬೇತಿ ಕೇಂದ್ರ “ಬಿಇಎಂ ಥಿಯೊಲಾಜಿಕಲ್‌ ಸೆಮಿನರಿ’ಯ ಪ್ರಥಮ ಪ್ರಾಂಶುಪಾಲರಾಗಿದ್ದರು ಮೊಗ್ಲಿಂಗ್‌. ಈಗ ಅದರ ಹೆಸರು “ಕರ್ನಾಟಕ ಥಿಯೊಲಾಜಿಕಲ್‌ ಕಾಲೇಜು’ ಎಂದಾಗಿದೆ.

ಕೃತಿ, ಸ್ಮಾರಕ
ಈ ಕಾಲೇಜಿನಲ್ಲಿರುವ ಗ್ರಂಥಾಲಯದಲ್ಲಿ ಮೊಗ್ಲಿಂಗ್‌ ಅವರು ಬರೆದ ಹಾಗೂ ಅವರನ್ನು ಕುರಿತಾದ ಪುಸ್ತಕಗಳು, “ಮಂಗಳೂರ ಸಮಾಚಾರ’ ಪತ್ರಿಕೆಯ ಪ್ರತಿ ಇದೆ. ಕಾಲೇಜಿನ ಎದುರು ಮೊಗ್ಲಿಂಗ್‌ ಪ್ರತಿಮೆ ಇದೆ. ಅಲ್ಲದೆ ಮೊಗ್ಲಿಂಗ್‌ ಹೆಸರಿನಲ್ಲಿ ಜರ್ಮನ್‌ ಭಾಷಾ ಅಧ್ಯಯನ ಕೇಂದ್ರವೂ ಇದೆ.

Advertisement

1811ರಲ್ಲಿ ಜರ್ಮನಿಯ ಬ್ರೆಕನಿಮ್‌ನಲ್ಲಿ ಜನಿಸಿದ್ದ ಮೊಗ್ಲಿಂಗ್‌ 1881ರಲ್ಲಿ ಜರ್ಮನಿಯ ಎಸ್ಲಿಂಗನ್‌ನಲ್ಲಿ ನಿಧನ ಹೊಂದಿದ್ದರು. ತಮ್ಮ ಜೀವನದ ಬಹುಭಾಗವನ್ನು ಕರ್ನಾಟಕದಲ್ಲಿ ಕಳೆದಿದ್ದರು. ಅವರು ಜನರೊಂದಿಗೆ ಬೆರೆತು ಕನ್ನಡ ಕಲಿತಿದ್ದರು. ಕನ್ನಡ ಕಲಿಯುವ ಮೊದಲು ಸಂಸ್ಕೃತವನ್ನೂ ಕಲಿತಿದ್ದರು.

ಸಾಹಿತ್ಯ ಕೃಷಿ
ಮೊಗ್ಲಿಂಗ್‌ ಅವರು ಪತ್ರಿಕಾ ವೃತ್ತಿಯ ಜತೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲೂ ಅಪಾರ ಕೃಷಿ ಮಾಡಿದ್ದು, 20 ವರ್ಷಗಳಲ್ಲಿ 36 ಕನ್ನಡ ಕೃತಿಗಳನ್ನು ರಚಿಸಿದ್ದರು. 1848ರಲ್ಲಿ 3,000 ಕನ್ನಡ ಗಾದೆಗಳ ಸಂಗ್ರಹವನ್ನು ಹೊರ ತಂದಿದ್ದರು. ತನ್ನ ಸಂಬಂಧಿ ಹಾಗೂ ಮಿಶನರಿ ವೇಗಲ್‌ ಜತೆಗೂಡಿ 20 ಆಧುನಿಕ ಕನ್ನಡ ಗೀತೆಗಳನ್ನು ಸಂಯೋಜಿಸಿದ್ದರು. ಬಸವಣ್ಣನ ವಚನಗಳು ಸೇರಿದಂತೆ ಸಾಂಪ್ರದಾಯಿಕ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ “ಬಿಬ್ಲಿಯೋಥಿಕಾ ಕರ್ನಾಟಕ’ ಎಂಬ ಕೃತಿಯನ್ನು 6 ಸಂಪುಟಗಳಲ್ಲಿ ಪ್ರಕಟಿಸಿದ್ದು, ಇದು ಕನ್ನಡ ಸಾಹಿತ್ಯಕ್ಕೆ ಮೊಗ್ಲಿಂಗ್‌ ಅವರ ಅತ್ಯಮೂಲ್ಯ ಕಾಣಿಕೆ. ಕೊಡಗಿನಲ್ಲಿ ನೆಲೆಸಿದ್ದ ಸಂದರ್ಭದಲ್ಲಿ ಮೊಗ್ಲಿಂಗ್‌ ಅವರು ಚೆನ್ನೈಯ ನಿವೃತ್ತ ನ್ಯಾಯಮೂರ್ತಿ ಕಾಸಾಮೇಜರ್‌ ಅವರ ಸಹಕಾರದಿಂದ “ರಾವಣ ದಿಗ್ವಿಜಯ’ ಯಕ್ಷಗಾನ ಪ್ರಸಂಗ, “ಬಸವ ಪುರಾಣ’, ಕನಕದಾಸರ “ಹರಿಭಕ್ತಿ ಸಾರ’ , ದಾಸರ ಪದಗಳು, ಲಕ್ಷ್ಮೀಶ ಕವಿಯ “ಜೈಮಿನಿ ಭಾರತ’ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದರು. ಕನಕದಾಸ ಮತ್ತು ಪುರಂದರ ದಾಸರ 24 ಕೀರ್ತನೆಗಳನ್ನು ಜರ್ಮನ್‌ ಭಾಷೆಗೆ ಅನುವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next