Advertisement

ಹೇನ್‌ಬೇರು ಪ್ರಕರಣದ ಆರೋಪಿ ಜೈಲಿನಲ್ಲಿ ಆತ್ಮಹತ್ಯೆ: ನ್ಯಾಯಾಂಗ ತನಿಖೆ; ಎಸ್‌ಪಿ

01:25 AM Dec 13, 2022 | Team Udayavani |

ಕುಂದಾಪುರ : ಕರಾವಳಿ ಯನ್ನು ತಲ್ಲಣಗೊಳಿಸಿದ್ದ ಬೈಂದೂರಿನ ಹೇನ್‌ಬೇರಿನಲ್ಲಿ ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ಜೀವಂತ ಸುಟ್ಟು ಹಾಕಿದ ಪ್ರಕರಣದ ಪ್ರಮುಖ ಆರೋಪಿ ಸದಾನಂದ ಶೇರಿಗಾರ್‌ (52) ಹಿರಿಯಡ್ಕದ ಜಿಲ್ಲಾ ಕಾರಾಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಈಗಾಗಲೇ ನ್ಯಾಯಾಂಗ ತನಿಖೆ ಆರಂಭಗೊಂಡಿದ್ದು, ಬಳಿಕ ನಿಖರ ಮಾಹಿತಿ ತಿಳಿಯಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಕೆ ಅಕ್ಷಯ್‌ ಮಚ್ಚಿಂದ್ರ ಅವರು ಹೇಳಿದರು.

Advertisement

ಅವರು ಹೆಮ್ಮಾಡಿಯಲ್ಲಿ ಪತ್ರ ಕರ್ತರೊಂದಿಗೆ ಮಾತನಾಡಿ, ಪ್ರಕರಣದ ಕುರಿತಂತೆ ಈಗಾಗಲೇ ಹಿರಿಯಡಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೈಲು ಅಧೀನದಲ್ಲಿರುವಾಗ ಕೃತ್ಯ ನಡೆದರೆ, ನ್ಯಾಯಾಂಗ ತನಿಖೆ ಮಾಡಿಸ ಬೇಕಾಗುತ್ತದೆ. ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ತನಿಖೆ ಬಳಿಕ ಸ್ಪಷ್ಟವಾಗಲಿದೆ. ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿಲ್ಲ. ಆತ್ಮಹತ್ಯೆಗೆ ಸಂಬಂಧಿಸಿ ದಂತೆ ಏನಾದರೂ ಬರೆದಿದ್ದಾರೆಯೇ? ಅಥವಾ ಬೇರೇನಾದರೂ ಕುರುಹು ಬಿಟ್ಟಿದ್ದಾರೆಯೇ ಎನ್ನುವುದು ತನಿಖೆ ಯಲ್ಲಿ ತಿಳಿಯಲಿದೆ. ಜೈಲಿನಲ್ಲಿ ಅವರೊಂದಿಗಿದ್ದ ವಸ್ತುಗಳನ್ನು ತನಿಖೆ ವೇಳೆ ವಶಕ್ಕೆ ಪಡೆಯಲಾಗಿದೆ. ಈಗಲೇ ಯಾವುದನ್ನು ಹೇಳಲು ಸಾಧ್ಯವಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

ಏನಿದು ಪ್ರಕರಣ?
ಕಾರ್ಕಳದಲ್ಲಿ ನಡೆದ ಬೇರೆ ಪ್ರಕರಣವೊಂದರ ಶಿಕ್ಷೆಯ ಭೀತಿಯಿಂದ ಸದಾನಂದ ಶೇರಿಗಾರ್‌, “ಕುರುಪ್‌’ ಸಿನೆಮಾ ಮಾದರಿಯಲ್ಲಿ ತನ್ನದೇ ಕಾರಿನಲ್ಲಿ ಆತ್ಮಹತ್ಯೆಗೆ ಶರಣಾದಂತೆ ನಾಟಕದ ಸಂಚು ಮಾಡಿದ್ದ. ಅದಕ್ಕಾಗಿ ತನ್ನ ಪರಿಚಯದ ಶಿಲ್ಪಾ ಪೂಜಾರಿ (30), ನಿತಿನ್‌ ದೇವಾಡಿಗ (40) ಹಾಗೂ ಸತೀಶ್‌ ದೇವಾಡಿಗ (50) ಜತೆ ಸೇರಿ ಕಾರ್ಕಳ ಮೂಲದ ಆನಂದ ದೇವಾಡಿಗ (60) ಅವರಿಗೆ ನಿದ್ದೆ ಮಾತ್ರೆ ಬೆರೆಸಿದ ಮದ್ಯ ನೀಡಿ ಪ್ರಜ್ಞೆ ತಪ್ಪಿಸಿದ್ದ.

ಆ ಬಳಿಕ ಅವರನ್ನು ಕಾರಿನಲ್ಲಿ ಕಾರ್ಕಳದಿಂದ ಹೇನ್‌ಬೇರಿನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದ. ಅಲ್ಲಿ ಜು. 12ರ ನಸುಕಿನ ವೇಳೆ ಕಾರಿಗೆ ಪೆಟ್ರೋಲ್‌ ಸುರಿದು ಆನಂದ ದೇವಾಡಿಗ ಸಹಿತ ಕಾರನ್ನು ಸುಟ್ಟು ಹಾಕಿದ್ದ. ಈ ಘಟನೆಯಲ್ಲಿ ಆನಂದ ದೇವಾಡಿಗ ಅವರು ಕಾರಿನೊಳಗೆ ಸಜೀವ ದಹನವಾಗಿದ್ದರು. ಈ ಬಗ್ಗೆ ಕೊಲೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಹುಬೇಗನೆ ಪತ್ತೆ ಹಚ್ಚಿ ಬಂಧಿಸುವಲ್ಲಿ ಸಫ‌ಲರಾಗಿದ್ದರು.

ಮೂವರು ಆರೋಪಿಗಳು ವಿಚಾ ರಣಾಧೀನ ಕೈದಿಗಳಾಗಿ ಹಿರಿಯಡಕ ಜೈಲಿನಲ್ಲಿದ್ದರು. ಹಿರಿಯಡಕ ಸಬ್‌ಜೈಲಿನಲ್ಲಿ ಮಹಿಳಾ ಬ್ಯಾರಕ್‌ ಇಲ್ಲದ ಕಾರಣ ಶಿಲ್ಪಾಳನ್ನು ಮಾತ್ರ ಬೇರೆ ಜೈಲಿಗೆ ವರ್ಗಾಯಿಸಲಾಗಿತ್ತು. ವಿಚಾರಣಾಧೀನ ಕೈದಿ ಸದಾನಂದ ಅವರು ಡಿ. 11ರ ಬೆಳಗ್ಗೆ 5 ಗಂಟೆ ಸುಮಾರಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಪಶ್ಚಾತ್ತಾಪದಿಂದಲೇ ಆತ್ಮಹತ್ಯೆ?
ಆತ್ಮಹತ್ಯೆ ಮಾಡಿಕೊಂಡ ಸದಾನಂದ ಪ್ರತೀದಿನ ಜೈಲಿನಲ್ಲಿ ಡೈರಿ ಬರೆದಿಡುವ ಹವ್ಯಾಸ ಬೆಳೆಸಿಕೊಂಡಿದ್ದ. ಡೈರಿಯಲ್ಲಿ ಹೇನ್‌ಬೇರು ಪ್ರಕರಣದ ಕುರಿತಂತೆ ಪಶ್ಚಾತ್ತಾಪ ಪಟ್ಟಿರುವುದು, ತನ್ನ ತಪ್ಪಿನಿಂದ ಪತ್ನಿ, ಮಕ್ಕಳು ನಿತ್ಯ ಅನುಭವಿಸುತ್ತಿರುವ ನೋವಿನ ಬಗ್ಗೆ ನೊಂದಿದ್ದ. ಮಾತ್ರವಲ್ಲದೆ ತಾನಿನ್ನು ಜೈಲಿನಿಂದ ಹೊರಬರಲು ಸಾಧ್ಯವಿಲ್ಲ ಎನ್ನುವ ಹತಾಶೆಯ ವಿಚಾರವನ್ನು ಆತ ಬರೆದುಕೊಂಡಿರುವುದು ಜೈಲಿನಲ್ಲಿ ಸಿಕ್ಕ ಡೈರಿಯಿಂದ ಬೆಳಕಿಗೆ ಬಂದಿದೆ. ನ್ಯಾಯಾಂಗ ತನಿಖೆಯಿಂದ ಮತ್ತಷ್ಟು ಸಂಗತಿಗಳು ಹೊರಬೀಳುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next