Advertisement

700 ರೂ. ಗಡಿ ದಾಟಿದ ಹೆಮ್ಮಾಡಿ ಸೇವಂತಿಗೆ: ಭಕ್ತರಿಗೆ ಸೇವಂತಿಗೆ ತುಟ್ಟಿ

03:38 PM Jan 16, 2024 | Team Udayavani |

ಕುಂದಾಪುರ: ಮಾರಣಕಟ್ಟೆಯ ಶ್ರೀ ಬ್ರಹ್ಮಲಿಂಗೇಶ್ವರನ ಜಾತ್ರೆಗೆ ಈ ಬಾರಿ ಬೇಡಿಕೆಷ್ಟು ಹೆಮ್ಮಾಡಿ ಸೇವಂತಿಗೆ ಸಿಗದಿರುವ ಕಾರಣ ಭಕ್ತರಿಗೆ ದುಬಾರಿಯಾಗಿದ್ದು, 1 ಸಾವಿರ ಹೂವಿಗೆ 700 ರೂ. ಗಡಿ ಸಹ ದಾಟಿದೆ. ಕಡಿಮೆ ಹೂವಿನ ಕಾರಣ ಈ ಬಾರಿ ಹಿಂದಿನ ವರ್ಷಗಳಿಗಿಂತ ಹೆಚ್ಚಿನ ಬೆಲೆ ನಿಗದಿಯಾಗಿದ್ದು, ಭಕ್ತರಿಗೆ ಮಾತ್ರ ತುಟ್ಟಿಯಾಯಿತು.

Advertisement

ಚಳಿ ಕಡಿಮೆ, ಮೋಡ, ನುಸಿ, ರೋಗ ಬಾಧೆಯಿಂದಾಗಿ ಮಕರ ಸಂಕ್ರಮಣದಂದು ನಡೆಯುವ ಮಾರಣಕಟ್ಟೆ ಜಾತ್ರೆಗೆ ನಿರೀಕ್ಷೆಯಷ್ಟು ಹೂವು ಅರಳಿಲ್ಲ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಸೇವಂತಿಗೆ ಹೂವಿನ ಬೆಲೆಯೇರಿಕೆಯಾಗಿದೆ. ಮಾರಣಕಟ್ಟೆಯಲ್ಲಿ ವ್ಯಾಪಾರಿಗಳು 1 ಸಾವಿರ ಹೂವಿಗೆ 700 ರೂ. ಯಂತೆ ಮಾರಾಟ ಮಾಡುತ್ತಿದ್ದುದ್ದಲ್ಲದೆ, ಕೆಲವು ಕಡೆಗಳಲ್ಲಿ ಬೇರೆ ಬೇರೆ ರೀತಿಯ ದರವನ್ನು ನಿಗದಿಪಡಿಸಿ, ಮಾರುತ್ತಿರುವುದು ಕಂಡು ಬಂತು.

ಹೆಮ್ಮಾಡಿ ಸುತ್ತಮುತ್ತಲಿನ ಕಟ್ಟು, ಜಾಲಾಡಿ, ಹರೇಗೋಡು ಪ್ರದೇಶದಲ್ಲಿ ಮಾತ್ರ ಬೆಳೆಯುವ ಈ ಹೆಮ್ಮಾಡಿ ಸೇವಂತಿಗೆಯೆಂದರೆ ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರನಿಗೆ ಬಲು ಇಷ್ಟ. ಮೊದಲ ಬೆಳೆಯನ್ನು ಬೆಳೆಗಾರರು ಆತನಿಗೆ ಸಮರ್ಪಿಸುವುದು ವಾಡಿಕೆ. ಆ ಬಳಿಕ ಈ ಭಾಗದಲ್ಲಿ ನಡೆಯುವ ಎಲ್ಲ ಜಾತ್ರೆ, ಕೆಂಡೋತ್ಸವಗಳಿಗೆ ಬೇಡಿಕೆ ಇರುತ್ತದೆ.

ಬೆಳೆಗಾರರಿಗೂ ಬಂಪರ್‌
ಈ ಬಾರಿ ಸೇವಂತಿಗೆ ಹೂವು ಬೆಳೆದಿರುವುದೇ ಕಡಿಮೆ ಆಗಿದ್ದರಿಂದ ಬೆಳೆಗಾರರಿಗೂ ಬಂಪರ್‌ ಬೆಲೆ ಸಿಕ್ಕಿದೆ. 1 ಸಾವಿರ ಸೇವಂತಿಗೆ ಹೂವಿಗೆ ವ್ಯಾಪಾರಿಗಳು 400 ರಿಂದ ಒಳ್ಳೆಯ ಹೂವಿಗೆ 450 ರೂ. ವರೆಗೂ ಕೊಟ್ಟು ಖರೀದಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ
ಹೆಚ್ಚು ಹೂವು ಅರಳುವ ಸಾಧ್ಯತೆ ಇದ್ದುದರಿಂದ ಈ ಮಟ್ಟಿಗೆ ಬೆಲೆ ಇರುವುದು ಕಷ್ಟ. ಕಡಿಮೆಯಾಗುವ ಸಾಧ್ಯತೆಗಳು ಸಹ ಇದೆ. ಕಳೆದ ಬಾರಿ 300 ರಿಂದ 350 ರೂ. ವರೆಗೆ ಬೆಳೆಗಾರರಿಗೆ ಸಿಕ್ಕಿತ್ತು. ಆದರೆ ಹಿಂದಿನ ವರ್ಷಗಳಲ್ಲಿ 3 ರಿಂದ 4 ಲಕ್ಷದಷ್ಟು ಹೂವು
ಕೊಡುತ್ತಿದ್ದವರು ಈ ಬಾರಿ 50 ಸಾವಿರದಿಂದ 1 ಲಕ್ಷದವರೆಗೆ ಅಷ್ಟೇ ಹೂವು ಕೊಟ್ಟಿರುವುದಾಗಿ ಸೇವಂತಿಗೆ ಬೆಳೆಗಾರ ರಾಜೇಶ ದೇವಾಡಿಗ ಹೇಳಿಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next