Advertisement

ಸಂಬಂಧ ಬಲವರ್ಧನೆಗೆ ಸಹಕಾರಿ: ಹಸೀನಾ ಗೆಲುವು

12:30 AM Jan 03, 2019 | Team Udayavani |

ಅವಾಮಿ ಲೀಗ್‌ ಜಾತ್ಯಾತೀತವಾದದ ದೃಷ್ಟಿಕೋನವನ್ನು ಹೊಂದಿರುವುದು ನೆರೆ ರಾಷ್ಟ್ರಗಳಿಗೆ ಮುಖ್ಯವಾಗಿ ಭಾರತಕ್ಕೆ ಅನುಕೂಲಕರವಾಗಿದೆ.

Advertisement

ಬಾಂಗ್ಲಾದೇಶದಲ್ಲಿ ರವಿವಾರ ನಡೆದ ಚುನಾವಣೆಯಲ್ಲಿ ಶೇಖ್‌ ಹಸೀನಾ ನೇತೃತ್ವದ ಅವಾಮಿ ಲೀಗ್‌ ಅಭೂತಪೂರ್ವ ಬಹುಮತ ಗಳಿಸಿ ಸತತ ಮೂರನೇ ಬಾರಿ ಅಧಿಕಾರಕ್ಕೇರಿದೆ. 300 ಸ್ಥಾನಗಳ ಪೈಕಿ 288 ಸ್ಥಾನಗಳನ್ನು ಅವಾಮಿ ಲೀಗ್‌ ಬಾಚಿಕೊಂಡಿರುವುದು ಭಾರೀ ದೊಡ್ಡ ಗೆಲುವೇ ಆಗಿದ್ದರೂ ಈ ಗೆಲುವು ಹಲವು ಅನುಮಾನಗಳಿಗೂ ಆಂತಕಕ್ಕೂ ಕಾರಣವಾಗಿರುವುದು ನಿಜ. ಜತಿಯಾ ಓಕಿಯಾ ಫ್ರಂಟ್‌ನಡಿಯಲ್ಲಿ ಒಗ್ಗೂಡಿದ ವಿಪಕ್ಷಗಳಿಗೆ ದಕ್ಕಿದ್ದು ಬರೀ 7 ಸ್ಥಾನಗಳು ಮಾತ್ರ. ಅರ್ಥಾತ್‌ ಈಗ ಬಾಂಗ್ಲಾದೇಶದಲ್ಲಿ ವಿಪಕ್ಷವೇ ಇಲ್ಲದಂತಾಗಿದೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇಷ್ಟೊಂದು ಭಾರೀ ಬಹುಮತವೂ ಅಪಾಯಕಾರಿ ಎನ್ನುವ ಕಾರಣಕ್ಕೆ ಅವಾಮಿ ಲೀಗ್‌ನ ಭರ್ಜರಿ ವಿಜಯ ಆತಂಕ ಹುಟ್ಟಿಸಿರುವುದು. ಚುನಾವಣೆಯಲ್ಲಿ ವ್ಯಾಪಕವಾಗಿ ಅಕ್ರಮ ಮತ್ತು ಮತಗಟ್ಟೆ ವಶೀಕರಣ ನಡೆದಿದೆ ಎನ್ನುವುದು ವಿಪಕ್ಷಗಳ ಆರೋಪವಾಗಿದೆ ಯಾದರೂ ಅಲ್ಲಿ ಶೇಖ್‌ ಹಸೀನಾ ಪ್ರಭಾವಲಯವನ್ನು ಸರಿಗಟ್ಟುವ ಸಮರ್ಥ ನಾಯಕರೇ ಇರಲಿಲ್ಲ ಎನ್ನುವುದು ಕೂಡಾ ನಿಜ. 

ಮುಖ್ಯ ವಿಪಕ್ಷವಾಗಿದ್ದ ಬಾಂಗ್ಲಾ ದೇಶ್‌ ನ್ಯಾಶನಲಿಸ್ಟ್‌ ಪಾರ್ಟಿ ಅಕ್ಷರಶಃ ನೆಲಕಚ್ಚಿದೆ. ಅದರ ನಾಯಕಿ ಖಲೀದಾ ಜಿಯಾ ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವುದಲ್ಲದೆ ಅವರ ಆರೋಗ್ಯವೂ ಹದಗೆಟ್ಟಿದೆ. ಅವರ ಮಗ ತಾರಿಖ್‌ ದೇಶಭ್ರಷ್ಟರಾಗಿ ಲಂಡನ್‌ನಲ್ಲಿ ಆಶ್ರಯಪಡೆದಿದ್ದಾರೆ. ಹೀಗಾಗಿ ಅವರ ಪಕ್ಷ ಬಾಂಗ್ಲಾದೇಶದ ಸಂವಿಧಾನ ರಚಿಸಿದ ಕಮಲ್‌ ಹೊಸೈನ್‌ ನೇತೃತ್ವದಲ್ಲಿ ರಚನೆಯಾದ ಜತಿಯಾ ಓಕಿಯಾ ಫ್ರಂಟ್‌ ಜತೆ ಸೇರಿಕೊಳ್ಳಬೇಕಾಯಿತು. 2014ರಲ್ಲಿ ಖಲೀದಾ ಜಿಯಾ ಪಕ್ಷ ಚುನಾವಣೆಯನ್ನೇ ಬಹಿಷ್ಕರಿಸಿತ್ತು. 

ಶೇಖ್‌ ಹಸೀನಾ ಅವರ ಎರಡು ಅವಧಿಯ ಆಳ್ವಿಕೆಯಲ್ಲಿ ಬಾಂಗ್ಲಾದೇಶ ಅಭಿವೃದ್ಧಿಯ ಶಕೆಗೆ ಮುಖಮಾಡಿದೆ ಎನ್ನುವುದರಲ್ಲಿ ಸಂಶಯವಿಲ್ಲ. ದೇಶದ ಆರ್ಥಿಕತೆ ಸರಾಸರಿ ಶೇ. 6ರ ದರದಲ್ಲಿ ಅಭಿವೃದ್ಧಿ ಕಂಡಿದೆ. ದೇಶಾದ್ಯಂತ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ಅದು ಅಲ್ಲಿನ ಜನಜೀವನದಲ್ಲಿ ಪ್ರತಿಬಿಂಬಿಸುತ್ತಿದೆ. 2017ರಲ್ಲಿ ಬಾಂಗ್ಲಾದೇಶದ ತಲಾ ಆದಾಯ ಪಾಕಿಸ್ತಾನದ ತಲಾ ಆದಾಯವನ್ನು ಹಿಂದಿಕ್ಕಿದೆ. 2024ಕ್ಕಾಗುವಾಗ ಬಾಂಗ್ಲಾದೇಶ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿಗೆ ಸೇರಲಿದೆ ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದು, ಇದು ಸಾಧ್ಯವಾದರೆ ಅದರ ಕೀರ್ತಿ ಶೇಖ್‌ ಹಸೀನಾಗೆ ಸಲ್ಲಬೇಕು. 

ಇಷ್ಟು ಮಾತ್ರವಲ್ಲದೆ ಅವಾಮಿ ಲೀಗ್‌ ಜಾತ್ಯಾತೀತವಾದದ ದೃಷ್ಟಿಕೋನವನ್ನು ಹೊಂದಿರುವುದು ನೆರೆ ರಾಷ್ಟ್ರಗಳಿಗೆ ಮುಖ್ಯವಾಗಿ ಭಾರತಕ್ಕೆ ಅನುಕೂಲಕರವಾಗಿದೆ. ಪ್ರಜಾತಂತ್ರದ ಮೂಲಭೂತ ಆಶಯಗಳನ್ನು ಎತ್ತಿಹಿಡಿಯುವಂಥ ಸಂವಿಧಾನ ತಿದ್ದುಪಡಿಯಾದದ್ದು ಅವಾಮಿ ಲೀಗ್‌ ಆಡಳಿತ ಕಾಲದಲ್ಲಿ ಎನ್ನುವುದು ಉಲ್ಲೇಖನೀಯ ಅಂಶ. 1971ರ ಯುದ್ಧ ಕೈದಿಗಳ ವಿಚಾರಣೆ ನಡೆದಿದ್ದು ಕೂಡಾ ಅವಾಮಿ ಲೀಗ್‌ ಆಡಳಿತ ಕಾಲದಲ್ಲಿ. ಅಲ್ಲದೆ ಹಸೀನಾ ಸರಕಾರ ಮೂಲಭೂತವಾದಿಗಳು ಮತ್ತು ಸ್ಥಳೀಯ ಭಯೋತ್ಪಾದಕರ ವಿರುದ್ಧ ಕಠಿಣ ನಿಲುವು ಹೊಂದಿದೆ. ಹೀಗಾಗಿಯೇ ಬಾಂಗ್ಲಾ ಕಡೆಯಿಂದ ಭಾರತಕ್ಕೆ ಈಗ ಉಗ್ರರ ಉಪಟಳ ಹೆಚ್ಚು ಇಲ್ಲ. 

Advertisement

ಹಸೀನಾ ಆಳ್ವಿಕೆ ಕಾಲದಲ್ಲಿ ಭಾರತ ಮತ್ತು ಬಾಂಗ್ಲಾ ನಡುವಿನ ಸಂಬಂಧ ಹೊಸ ಆಯಾಮ ಪಡೆದುಕೊಂಡಿದೆ. ವಿದ್ಯುತ್‌, ಶಿಕ್ಷಣ, ಮೂಲಸೌಲಭ್ಯ, ರೈಲ್ವೆ, ಜಲಮಾರ್ಗ ಮತ್ತಿತರ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಸಿದೆ. ಭಾರತದ “ನೆರೆಹೊರೆಯವರಿಗೆ ಆದ್ಯತೆ’ ನೀತಿಗೆ ಪೂರಕವಾಗಿ ಸ್ಪಂದಿಸಿದ ದೇಶಗಳಲ್ಲಿ ಬಾಂಗ್ಲಾವೂ ಒಂದು. ಈ ದೃಷ್ಟಿಯಿಂದ ಹೇಳುವುದಾದರೆ ಅವಾಮಿ ಲೀಗ್‌ ಗೆಲುವಿನಿಂದ ಭಾರತಕ್ಕೆ ಒಳಿತೇ ಆಗಿದೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಸುಧಾರಿಸಲು ಇನ್ನಷ್ಟು ಅವಕಾಶಗಳು ದೊರೆತಂತಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next