Advertisement

Mangaluru ಶಬರಿಮಲೆಯಲ್ಲಿ ವ್ರತಧಾರಿಗಳ ಭಾರೀ ದಟ್ಟಣೆ

12:48 AM Dec 14, 2023 | Team Udayavani |

ಮಂಗಳೂರು: ಈ ಬಾರಿಯ ಶಬರಿಮಲೆ ಮಂಡಲ ಋತುವಿನಲ್ಲಿ ನಿರೀಕ್ಷೆಗೂ ಮೀರಿ ಎಲ್ಲೆಡೆಯಿಂದ ಭಕ್ತಜನ ಸಾಗರ ಹರಿದುಬರುತ್ತಿದೆ. ಇದರಿಂದ ಅಲ್ಲಿನ ಆಡಳಿತವೂ ಅಕ್ಷರಶಃ ಜನದಟ್ಟಣೆ ನಿಯಂತ್ರಿಸಲಾಗದೆ ಕೈ ಚೆಲ್ಲಿದೆ.

Advertisement

ಈ ಬಾರಿ ಮುಖ್ಯವಾಗಿ ಆಂಧ್ರಪ್ರದೇಶ ಹಾಗೂ ತಮಿಳು ನಾಡಿನಿಂದ ಭಾರಿಸಂಖ್ಯೆಯಲ್ಲಿ ಭಕ್ತರು ಬಂದಿದ್ದಾರೆ. ಡಿಸೆಂಬರ್‌ 28ರ ವರೆಗೆ ಮಂಡಲದ ಭಾಗವಾಗಿ ಅಯ್ಯಪ್ಪ ವ್ರತಧಾರಿಗಳು ಶಬರಿಮಲೆಗೆ ಬರಲಿದ್ದಾರೆ. ಮತ್ತೆ ಜನವರಿಯಿಂದ ಮಕರವಿಳಕ್ಕ್ ಋತು ಆರಂಭವಾಗಲಿದೆ.

ಒಂದು ದಿನಕ್ಕೆ 1 ಲಕ್ಷ ಮಂದಿಯನ್ನು ನಿರೀಕ್ಷಿಸಲಾಗಿದ್ದರೆ, ಸರಿಸುಮಾರು 5 ಲಕ್ಷ ಮಂದಿ ಬಂದಿಯಷ್ಟು ಬರುತ್ತಿದ್ದಾರೆ. ಇದರಿಂದಾಗಿ ಎಲ್ಲೆಡೆ ಟ್ರಾಫಿಕ್‌ ಜಾಂ, ಸುದೀರ್ಘ‌ ಸರದಿ ಸಾಲು, ಪಂಪಾತಟದಲ್ಲಿ ಕಿಕ್ಕಿರಿದ ಜನಸಂದಣಿ ಕಂಡುಬರುತ್ತಿದೆ. ದರ್ಶನಕ್ಕೆ ಕನಿಷ್ಠ 10-12 ಗಂಟೆ ಬೇಕಾಗುತ್ತಿದೆ ಎಂದು ಶಬರಿಮಲೆಗೆ ಭೇಟಿ ನೀಡಿ ಹಿಂದಿರುಗಿದ ಭಕ್ತರು ತಿಳಿಸುತ್ತಾರೆ.

ನಾವು ಹೋಗುವಾಗಲೇ ಆನ್‌ಲೈನ್‌ನಲ್ಲಿ ಟೋಕನ್‌ ಕ್ಯುಆರ್‌ಕೋಡ್‌ ಮೂಲಕ ಪಡೆದಿದ್ದೆವು. ಶಬರಿಮಲೆಯ ಗಣೇಶಬೆಟ್ಟದಲ್ಲೂ ಕ್ಯುಆರ್‌ಕೋಡ್‌ ಮೂಲಕ ಟೋಕನ್‌ ನೀಡಲಾಗುತ್ತಿತ್ತು. ಬಂದವರಿಗೆಲ್ಲರಿಗೂ ದರ್ಶನಕ್ಕೆ ಅನುವು ಮಾಡಿಕೊಟ್ಟರು. ಹಾಗಾಗಿ ಭಾರೀ ಸಂಖ್ಯೆಯಲ್ಲಿ ಜನ ಬಂದಿದ್ದಾರೆ. ಕಳೆದ ನಾಲ್ಕಾರು ವರ್ಷಗಳಲ್ಲಿ ಇಲ್ಲದಷ್ಟು ಪ್ರಮಾಣದಲ್ಲಿ ಅಯ್ಯಪ್ಪ ವ್ರತಧಾರಿಗಳು ಆಗಮಿಸಿರುವುದು ಎಲ್ಲ ಕಡೆ ಅನಾನುಕೂಲಕ್ಕೆ ಕಾರಣವಾಯಿತು ಎಂದು ಅಯ್ಯಪ್ಪ ಭಕ್ತರಾಗಿರುವ ಸಂತೋಷ್‌ ಕುಮಾರ್‌ ಬಂಗೇರ ಉದಯವಾಣಿಗೆ ವಿವರಿಸಿದರು.

ಪಂಪಾದಲ್ಲಿ ಜನಜಂಗುಳಿ
ಹಲವು ವರ್ಷಗಳಿಂದ ಶಬರಿಮಲೆಗೆ ಹೋಗುತ್ತಿದ್ದೇವೆ, ಚೆಂಗನ್ನೂರಿನಿಂದ ಪಂಪೆಯತ್ತ ಹೋಗುವಾಗ ಸುಮಾರು 30 ಕಿ.ಮೀ. ಹೋದ ಅನಂತರವೇ ಸಂಚಾರ ಪೂರ್ಣ ಬ್ಲಾಕ್‌ ಆಗಿತ್ತು. ಮುಂಜಾನೆ 4ಕ್ಕೆ ತಲುಪಬೇಕಾದ ನಾವು ಅಲ್ಲಿಗೆ ಮುಟ್ಟಿದಾಗ ಬೆಳಗ್ಗೆ 6.45 ಆಗಿತ್ತು. ಪಂಪೆಯಲ್ಲಿ ಸ್ನಾನ ಹೇಗೋ ಆಯ್ತು, ಆದರೆ ಶೌಚಾಲಯಕ್ಕೆ ಹೋದರೆ ದೊಡ್ಡ ಸಾಲು ಇತ್ತು, 100 ಶೌಚಾಲಯಗಳಿಗೆ ಸಹಸ್ರಾರು ಮಂದಿ ಕಾಯುವ ಪರಿಸ್ಥಿತಿ ಇತ್ತು. ಬೆಳಗ್ಗೆ ದರ್ಶನಕ್ಕೆ ಹೊರಟರೆ ತಲುಪುವಾಗ ಮಧ್ಯಾಹ್ನ ಆಗಿತ್ತು, ಮಧ್ಯಾಹ್ನದ ಅನಂತರ 3 ಗಂಟೆಗೇ (ನಿಗದಿತ ತೆರೆಯುವ ಸಮಯ 4 ಗಂಟೆಗಿಂತ ಒಂದು ಗಂಟೆ ಮೊದಲು) ದರ್ಶನಕ್ಕೆ ಅವಕಾಶ ಸಿಕ್ಕಿತು. ಆದರೆ ತುಪ್ಪಾಭಿಷೇಕಕ್ಕೆ ಮರುದಿನ ಬೆಳಗ್ಗಿನ ವರೆಗೂ ಕಾಯಬೇಕಾಯಿತು ಎಂದು ಭಕ್ತರೊಬ್ಬರು ತಿಳಿಸಿದರು.

Advertisement

ಬಹಳ ಹಿರಿಯರು, ಮಕ್ಕಳು ಕುಸಿಯುವುದು, ತಲೆ ಸುತ್ತಿ ಬೀಳುವುದು ಇಲ್ಲಿ ಸಾಮಾನ್ಯ ದೃಶ್ಯವಾಗಿತ್ತು ಎಂದು ತಿಳಿಸಿದರು.

ಮೀಟಿಂಗ್‌ ಮಾಡಿಲ್ಲ,
ಜವಾಬ್ದಾರಿಯೂ ಇಲ್ಲ
ಶಬರಿಮಲೆಯಲ್ಲಿ ಸಾಮಾನ್ಯವಾಗಿ ಮಂಡಲ ಋತುವಿಗೆ ಕೆಲವು ದಿನಗಳ ಮೊದಲು ದೇವಸ್ವಂ ಬೋರ್ಡ್‌, ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ ಮತ್ತಿತರ ಸರಕಾರಿ ಇಲಾಖೆಗಳ ಪ್ರಮುಖರು ಮೀಟಿಂಗ್‌ ನಡೆಸಿ ಭಕ್ತರ ದಟ್ಟನೆ ನಿರ್ವಹಣೆ ಮಾಡುವ ಬಗ್ಗೆ ಸೂಕ್ತ ಕ್ರಮ ಯೋಜನೆ ಹಾಕಿಕೊಳ್ಳಬೇಕು, ಆದರೆ ಈ ಬಾರಿ ಸಭೆಯನ್ನೇ ನಡೆಸಲಿಲ್ಲ, ಅಲ್ಲಿನ ಮುಜರಾಯಿ ಸಚಿವರೇ ಕಷ್ಟವಾದರೆ ಶಬರಿಮಲೆಗೆ ಬರಬೇಡಿ ಎಂಬ ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಾರೆ ಎಂದು ಶಬರಿಮಲೆ ಯಾತ್ರಿಗಳ ಸೇವಾ ಸಂಘದ ದ.ಕ. ಜಿಲ್ಲಾಧ್ಯಕ್ಷ ಗಣೇಶ್‌ ಪೊದುವಾಳ್‌ ತಿಳಿಸಿದರು.

ನಾನು ಅಲ್ಲಿ ದರ್ಶನಕ್ಕೆ ಬಂದಿದ್ದೇನೆ, ಒಟ್ಟಾರೆ ನಿರ್ವಹಣೆ ಸರಿಯಾಗಿಲ್ಲ, ಸೂಕ್ತ ವ್ಯವಸ್ಥೆಗಳನ್ನೂ ಮಾಡಿಲ್ಲ, ಜನರು ಈ ಸೀಸನ್‌ನಲ್ಲಿ ಜಾಸ್ತಿ ಬರುವುದು ಸಹಜ, ಆದಕ್ಕೆ ಬೇಕಾದ ಮೂಲಸೌಕರ್ಯ ಕಲ್ಪಿಸುವುದು ಸರಕಾರದ ಜವಾಬ್ದಾರಿ ಎನ್ನುತ್ತಾರೆ ಅವರು.

ಮಕ್ಕಳು, ಹಿರಿಯರು ಬರುವುದು ಬೇಡ
ಶಬರಿಮಲೆಗೆ ಸಾಮಾನ್ಯವಾಗಿ ಮಂಡಲ ಸೀಸನ್‌ನಲ್ಲಿ 5 ಕೋಟಿ ಭಕ್ತರು ಆಗಮಿಸುತ್ತಾರೆ. ಈ ಬಾರಿ ಈಗಾಗಲೇ 3 ಕೋಟಿಗೂ ಹೆಚ್ಚು ಮಂದಿ ಬಂದಿದ್ದಾರೆ. ಜನಸಂದಣಿ ಹೆಚ್ಚಿರುವಾಗ ಮಕ್ಕಳನ್ನು, ಹಿರಿಯ ನಾಗರಿಕರನ್ನು ಕರೆದುಕೊಂಡು ಬರಬೇಡಿ. ಬಹಳ ಕಷ್ಟವಾಗುತ್ತದೆ. ಗಂಟೆಗಟ್ಟಲೆ ಸಾಲು ನಿಲ್ಲುವುದು, ಆಹಾರ ಸಮಸ್ಯೆ, ಇತ್ಯಾದಿ ಕಾಣಿಸಿಕೊಂಡು ಆರೋಗ್ಯಕ್ಕೂ ಸಮಸ್ಯೆಯಾಗಬಹುದು. ಮಕ್ಕಳು ನಾಪತ್ತೆಯಾಗುವ ಪ್ರಕರಣಗಳೂ ನಡೆಯುತ್ತಿವೆ. ಹಾಗಾಗಿ ಈಗಿನ ಸೀಸನ್‌ಗೆ ದಯವಿಟ್ಟು ಮಕ್ಕಳು ಬರುವುದು ಬೇಡ ಎಂದು ಗಣೇಶ್‌ ಪೊದುವಾಳ್‌ ಅವರು ವಿನಂತಿಸುತ್ತಾರೆ.

 

Advertisement

Udayavani is now on Telegram. Click here to join our channel and stay updated with the latest news.

Next