Advertisement

ಮಳೆಯ ಆರ್ಭಟ: 24 ಗಂಟೆಯಲ್ಲಿ ಮಳೆಗೆ 10 ಬಲಿ: ಗುಜರಾತ್‌ನಲ್ಲಿ 7, ಮಹಾರಾಷ್ಟ್ರದಲ್ಲಿ 3 ಬಲಿ

09:34 PM Jul 12, 2022 | Team Udayavani |

ನವದೆಹಲಿ: ದೇಶದ ಹಲವಾರು ರಾಜ್ಯಗಳಲ್ಲಿ ಮಂಗಳವಾರವೂ ಮಳೆಯ ಆರ್ಭಟ ಜೋರಾಗಿತ್ತು. ಪ್ರವಾಹ ಪರಿಸ್ಥಿತಿಯಲ್ಲಿರುವ ಗುಜರಾತ್‌ನಲ್ಲಿ ಮಂಗಳವಾರ ಏಳು ಮಂದಿ ಮಳೆ ಸಂಬಂಧಿಸಿದ ಅನಾಹುತಗಳಿಂದಾಗಿ ಸಾವನ್ನಪ್ಪಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಈ ವರ್ಷ ಮಳೆಗೆ ಬಲಿಯಾದವರ ಸಂಖ್ಯೆ 63ಕ್ಕೆ ಏರಿದೆ.

Advertisement

ರಾಜ್ಯದ ಹಲವು ಜಿಲ್ಲೆಗಳ ತಗ್ಗು ಪ್ರದೇಶಗಳು ಇನ್ನೂ ಜಲಾವೃತವಾಗಿಯೇ ಇವೆ. ರಾಜ್ಯಾದ್ಯಂತ ಒಟ್ಟು 9,000ಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಜಲಾವೃತ ಪ್ರದೇಶಗಳಲ್ಲಿ ಸಿಲುಕಿದ್ದ 468 ಮಂದಿಯನ್ನು ರಕ್ಷಿಸಲಾಗಿದೆ. ದಂಗ್‌,ವಲ್ಸದ್‌, ತಪಿ ಮತ್ತು ಸೂರತ್‌ ನಗರಗಳಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಈ ಮಧ್ಯೆ ದಭೋಯ್‌ ಮತ್ತು ಏಕ್ತಾ ನಗರ ರೈಲ್ವೆ ನಿಲ್ದಾಣಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, 10 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಮಹಾ ಮಳೆಗೆ ಜನಜೀವನ ತತ್ತರ:
ಮಹಾರಾಷ್ಟ್ರದಲ್ಲಿಯೂ ಮಳೆಯ ಅಬ್ಬರ ಜೋರಾಗಿದೆ. ಮಂಗಳವಾರ ಮೂವರು ಮಳೆಯಿಂದಾಗಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿರುವ 7 ಕೆರೆಗಳ ನೀರಿನ ಪ್ರಮಾಣ ಕೇವಲ 10 ದಿನಗಳಲ್ಲಿ ಶೇ. 11ರಿಂದ ಶೇ. 40ಕ್ಕೆ ಏರಿಕೆಯಾಗಿದೆ. ಪ್ರವಾಹ ಪರಿಸ್ಥಿತಿ ಇರುವ ಪ್ರದೇಶದಲ್ಲಿದ್ದ 95 ಮಂದಿಯನ್ನು ರಕ್ಷಿಸಲಾಗಿದೆ. 13 ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು ರಾಜ್ಯದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಕೊಲ್ಹಾಪುರ, ನಾಸಿಕ್‌, ಪುಣೆ ಮತ್ತು ರತ್ನಗಿರಿ ಜಿಲ್ಲೆಗಳಿಗೆ ಜು.14ರವರೆಗೆ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ನಾಸಿಕ್‌ನ ಸಪ್ತಶೃಂಗಿ ದೇಗುಲದ ಬಳಿ ಉಂಟಾದ ಪ್ರವಾಹದಿಂದಾಗಿ ಆರು ಭಕ್ತರು ಗಾಯಾಳುಗಳಾಗಿದ್ದಾರೆ.

Advertisement

ಹೈದರಾಬಾದ್‌, ದೆಹಲಿಯಲ್ಲೂ ಮಳೆ ಜೋರು:
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಂಗಳವಾರ ಬೆಳಗ್ಗೆಯೇ ಮಳೆಯ ಕಾಟ ಆರಂಭವಾಗಿತ್ತು. ಹಲವು ಪ್ರದೇಶಗಳು ಜಲಾವೃತವಾಗಿದ್ದರಿಂದ ಜನ ಸಂಚಾರಕ್ಕೆ ಸಮಸ್ಯೆಯುಂಟಾಗಿದೆ. ಅದೇ ರೀತಿ ತೆಲಂಗಾಣದ ರಾಜಧಾನಿ ಹೈದರಾಬಾದ್‌ ಹಾಗೂ ಇನ್ನಿತರ ನಗರಗಳಲ್ಲೂ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next