Advertisement

ಭಾರಿ ಮಳೆ: ಮನೆಗಳಿಗೆ ನುಗ್ಗಿದ ನೀರು

09:44 AM Jun 11, 2018 | Team Udayavani |

ಚಿಂಚೋಳಿ: ತಾಲೂಕಿನ ರಟಕಲ್‌ ಗ್ರಾಮದ ಸುತ್ತಲೂ ರವಿವಾರ ಮಧ್ಯಾಹ್ನ ಭಾರಿ ಬಿರುಗಾಳಿ ಮತ್ತು ರಭಸದಿಂದ ಕೂಡಿದ ಮಳೆ ಆದ ಪರಿಣಾಮ ಗ್ರಾಮದ ಹರಿಜನವಾಡದ ಅನೇಕ ಮನೆಗಳಿಗೆ ಮಳೆ ನೀರು ನುಗ್ಗಿತ್ತು.

Advertisement

ಹುಲಸಗೂಡ ಗ್ರಾಮದಲ್ಲಿ ಗುಡ್ಡದ ಮೇಲಿಂದ ಹರಿದು ಬರುವ ಮಳೆ ನೀರು ಮನೆಯ ಹಿಂಬದಿ ಗೋಡೆಯಿಂದ ಮನೆಯೊಳಗೆ ಹೊಕ್ಕು ಬಾಗಿಲು ಮೂಲಕ ಹೊರ ಹರಿದು ಅಪಾರ ನಷ್ಟವಾಗಿದೆ ಎಂದು ರಟಕಲ್‌ ಗ್ರಾಪಂ ಉಪಾಧ್ಯಕ್ಷ ಗೌರಿಶಂಕರ ಕಿಣ್ಣಿ ತಿಳಿಸಿದ್ದಾರೆ.

ರಟಕಲ್‌ ಗ್ರಾಮದಲ್ಲಿ ಮಧ್ಯಾಹ್ನ ಸಿಡಿಲು ಮಿಂಚಿನಿಂದ ಕೂಡಿದ ಆರ್ಭಟದ ಮಳೆ ಆಗಿರುವುದರಿಂದ ಮುಕರಂಬ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ಹರಿಯುವ ನಾಲೆಯ ಮಳೆ ನೀರು ಹರಿಜನವಾಡದ ಓಣಿಯ 20 ಮನೆಗಳಿಗೆ ನೀರು ನುಗ್ಗಿ ಸಂಗ್ರಹಿಸಿಟ್ಟಿದ್ದ ದವಸ ಧಾನ್ಯ, ಬಟ್ಟೆ, ಅಡುಗೆ ಸಾಮಗ್ರಿಗಳು, ದಿನಬಳಕೆ ಆಹಾರ ವಸ್ತುಗಳು,ಬಿತ್ತನೆ ಬೀಜ ಮತ್ತು ರಸಗೊಬ್ಬರ, ಕೃಷಿ ಉಪಕರಣಗಳು ಹಾನಿಗೊಳಗಾಗಿವೆ.

ರಟಕಲ್‌ ಸುತ್ತಲೂ ಭಾರಿ ಮಳೆ ಸುರಿದ್ದರಿಂದ ಹುಲಸಗೂಡ ಗ್ರಾಮದಲ್ಲಿ ಗುಡ್ಡದ ಮೇಲಿಂದ ಹರಿದು ಬರುವ ಮಳೆ ನೀರು ಮನೆಯ ಹಿಂಬದಿ ಗೋಡೆ ಒಡೆದುಕೊಂಡು ಬಂದು ಬಾಗಿಲು ಮೂಲಕ ಹೊರ ಬಂದಿದೆ. ಹೀಗಾಗಿ ಮನೆಯಲ್ಲಿದ್ದ ದವಸ ಧಾನ್ಯ, ಬಿತ್ತನೆ ಬೀಜಗಳು ಹಾನಿಗೊಳಗಾಗಿವೆ.
 
ರಟಕಲ್‌ ಗ್ರಾಮದಲ್ಲಿ 2016ರಲ್ಲಿ ಬಿದ್ದ ಭಾರಿ ಮಳೆ ಹರಿಜನವಾಡ ಮತ್ತು ಮಾದಿಗರ ಓಣಿಯಲ್ಲಿ ಇರುವ 40 ಮನೆಗಳಿಗೆ ಮಳೆ ನೀರು ಹೊಕ್ಕು ಅಪಾರ ಹಾನಿಗೊಳಿಸಿತ್ತು. ಕಲಬುರಗಿ-ಚಿಂಚೋಳಿ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ನಿರ್ಮಿಸಿದ ಅತಿ ಕಿರಿದಾದ ಸೇತುವೆಯಿಂದಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗದೇ ಬಡವರ ಮನೆ ಸೇರುತ್ತಿದೆ.

ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಶಾಸಕ ಡಾ| ಉಮೇಶ ಜಾಧವ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಸಣ್ಣ ಸೇತುವೆಯನ್ನು ದೊಡ್ಡದಾಗಿ ನಿರ್ಮಿಸಬೇಕು. ಮಳೆಯಿಂದ ಹಾನಿಗೊಳಗಾದವರಿಗೆ ಸರಕಾರ ಪರಿಹಾರ ನೀಡಬೇಕೆಂದು ಜಿಲ್ಲಾ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಜಿಲ್ಲಾ ಕಾಧಿರಿಗಳಿಗೆ ಮನವಿ ಮಾಡಿದ್ದಾರೆ.

Advertisement

ಮಳೆಯಿಂದಾಗಿ ರಟಕಲ್‌, ಮುಕರಂಬಾ, ಹುಲಸಗೂಡ ಗ್ರಾಮದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. 

ಮಳೆ ನೀರಿಗೆ ಕೊಚ್ಚಿಹೋದ ಕಾಯಿಪಲ್ಲೆ
ಶಹಾಬಾದ: ನಗರದಲ್ಲಿ ರವಿವಾರ ಸುರಿದ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಮಳೆಯಿಂದಾಗಿ ರಸ್ತೆಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು. ರವಿವಾರ ಮಧ್ಯಾಹ್ನ 2 ಗಂಟೆಯಿಂದ ಎಡೆಬಿಡದೆ ಸುರಿದ ಭಾರಿ ಮಳೆಯಿಂದಾಗಿ ಜನರು ಮನೆಯಿಂದ ಹೊರಬರದೆ ಮನೆಯಲ್ಲಿಯೇ ಕಾಲ ಕಳೆಯುವಂತಾಯಿತು. ರವಿವಾರ ನಗರದಲ್ಲಿ ಸಂತೆ ಇರುವ ಕಾರಣ ವಿವಿಧ ಊರುಗಳಿಂದ ಕಾಯಿಪಲ್ಯೆ ಮಾರಾಟ ಮಾಡಲು ಬಂದ ರೈತರಿಗೆ ತೀವ್ರ ತೊಂದರೆಯಾಯಿತು. ಸುರಿದ ಮಳೆ ನೀರಿನಲ್ಲಿ ಕಾಯಿಪಲ್ಲೆಗಳು ಕೊಚ್ಚಿ ಹೋದವು. ಇದರಿಂದ ರೈತರು ನಷ್ಟ ಅನುಭವಿಸಬೇಕಾಯಿತು. ಸುಮಾರು 3ಗಂಟೆ ಸುರಿದ ಮಳೆಯಿಂದಾಗಿ ವಾಹನ ಸಂಚಾರ ವಿರಳವಾಗಿತ್ತು.

ನಗರದ ಖಾಲಿ ನಿವೇಶನಗಳಲ್ಲಿ ಹಾಗೂ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. ಮಳೆ ನೀರು ರಸ್ತೆ ಮೇಲೆ ಹರಿದಾಡಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಶರಣ ನಗರ, ರಾಮಾ ಮೊಹಲ್ಲಾ, ಲಕ್ಷ್ಮೀಗಂಜ್‌, ಇಂಜಿನಫೈಲ್‌ ಹೀಗೆ ಬಹುತೇಕ ಬಡಾವಣೆಗಳಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿದಾಡಿತು. ರಸ್ತೆಯಲ್ಲಿ ಚರಂಡಿ
ನೀರು ಸುಗಮವಾಗಿ ಹರಿಯದೇ ರಸ್ತೆ ಮೇಲೆ ನಿಂತಿತ್ತು. ಇದರಿಂದ ಬೇಸತ್ತ ಜನತೆ ನಗರಸಭೆ ಅಧಿಕಾರಿಗಳಿಗೆ
ಹಿಡಿಶಾಪ ಹಾಕಿದರು. ಸಂತೆಗೆ ಬಂದ ಜನರು ಮಳೆಯಿಂದ ರಕ್ಷಣೆ ಪಡೆಯಲು ವ್ಯಾಪಾರ ಮಳಿಗೆಗಳಿಗೆ ಮಗಿಬಿದಿದ್ದರು. ಅಲ್ಲದೇ ನಗರದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next