Advertisement

ಭಾರೀ ಮಳೆ: ವಿವಿಧೆಡೆ ಸಂಚಾರಕ್ಕೆ ಅಡಚಣೆ; ರೈತರಿಗೆ ಕೃಷಿ ನಾಶ ಭೀತಿ

09:34 PM Oct 13, 2020 | mahesh |

ಕುಂದಾಪುರ: ಬಂಗಾಲಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಎಲ್ಲೆಡೆ ಭಾರೀ ಮಳೆಯಾಗುತ್ತಿದ್ದು, ಕುಂದಾಪುರ, ಬೈಂದೂರು ಭಾಗದಲ್ಲಿಯೂ ಮಂಗಳವಾರ ದಿನವಿಡೀ ನಿರಂತರವಾಗಿ ಉತ್ತಮ ಮಳೆ ಸುರಿದಿದೆ. ನಗರ ಭಾಗದ ಅಲ್ಲಲ್ಲಿ ಹೆದ್ದಾರಿಯಲ್ಲೇ ಮಳೆ ನೀರು ನಿಂತಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು.

Advertisement

ಕುಂದಾಪುರ ಭಾಗದಲ್ಲಿ ಸೋಮವಾರ ರಾತ್ರಿಯಿಂದಲೇ ಗಾಳಿ ಸಹಿತ ಭಾರೀ ಮಳೆಯಾಗಿದೆ. ಮಂಗಳವಾರ ಬೆಳಗ್ಗಿನಿಂದ ಮತ್ತೆ ಆರಂಭಗೊಂಡ ಮಳೆ ಮಧ್ಯಾಹ್ನದವರೆಗೂ ಆ ಬಳಿಕವೂ ಭಾರೀ ಮಳೆಯಾಗಿದೆ. ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಕುಂದಾಪುರ, ಕೋಟೇಶ್ವರ, ತೆಕ್ಕಟ್ಟೆ, ಕುಂಭಾಶಿ, ಬಿದ್ಕಲ್‌ಕಟ್ಟೆ, ಹಾಲಾಡಿ, ಗೋಳಿಯಂಗಡಿ, ಬೆಳ್ವೆ, ಮಡಾಮಕ್ಕಿ, ಅಮಾಸೆಬೈಲು, ಶಂಕರನಾರಾಯಣ, ಸಿದ್ದಾಪುರ, ಹೊಸಂಗಡಿ, ಅಂಪಾರು, ಕಂಡೂರು, ನೇರಳಕಟ್ಟೆ, ಆಜ್ರಿ, ಕೊಲ್ಲೂರು, ವಂಡ್ಸೆ, ಹೆಮ್ಮಾಡಿ, ತಲ್ಲೂರು, ಗಂಗೊಳ್ಳಿ, ತ್ರಾಸಿ, ಮರವಂತೆ, ಹಕ್ಲಾಡಿ, ನಾವುಂದ, ಉಪ್ಪುಂದ, ಬೈಂದೂರು, ಶಿರೂರು ಸೇರಿದಂತೆ ಎಲ್ಲ ಕಡೆಗಳಲ್ಲಿ ನಿರಂತರ ಮಳೆಯಾಗಿದೆ.

ಹೆದ್ದಾರಿಯಲ್ಲೇ ನೀರು
ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರ ನಗರದ ಬಸ್ರೂರು ಮೂರುಕೈ ಬಳಿ, ಶೇರೋನ್‌ ಹೊಟೇಲಿನ ಎದುರಿನ ರಸ್ತೆ, ಕೆಎಸ್‌ಆರ್‌ಟಿಸಿ ಬಳಿಯ ಸರ್ವೀಸ್‌ ರಸ್ತೆಯಲ್ಲಿಯೇ ಮಳೆ ನೀರು ಹರಿಯುತ್ತಿದ್ದುದರಿಂದ ವಾಹನ ಸವಾರರು ಭಾರೀ ತೊಂದರೆ ಅನುಭವಿಸಿದರು. ಇದಲ್ಲದೆ ಗಂಗೊಳ್ಳಿ, ಆಜ್ರಿ, ಮತ್ತಿತರ ಕಡೆಗಳಲ್ಲಿನ ಮುಖ್ಯ ರಸ್ತೆಯಲ್ಲಿಯೂ ಮಳೆ ನೀರು ಹರಿಯುತ್ತಿದ್ದುದರಿಂದ ಅಡಚಣೆ ಉಂಟಾಯಿತು.

ಕಡಲಬ್ಬರ ಬಿರುಸು
ಕೋಡಿ, ಗಂಗೊಳ್ಳಿ, ತ್ರಾಸಿ, ಕಂಚುಗೋಡು, ಮರವಂತೆ, ಶಿರೂರು, ಮಡಿಕಲ್‌ ಸೇರಿದಂತೆ ಎಲ್ಲ ಕಡೆಗಳಲ್ಲಿ ಕಡಲಬ್ಬರವು ಎಂದಿಗಿಂತ ಹೆಚ್ಚು ಬಿರುಸಾಗಿತ್ತು. 3 ದಿನಗಳ ಕಾಲ ರೆಡ್‌ ಅಲರ್ಟ್‌ ಇರುವುದರಿಂದ ಮುನ್ನೆಚ್ಚರಿಕೆಯಾಗಿ ಮೀನುಗಾರರು ಕಡಲಿಗಿಳಿದಿರಲಿಲ್ಲ.

ಕೃಷಿ ನಾಶ ಭೀತಿ
ಈ ಬಾರಿ ಕೊರೊನಾ, ಲಾಕ್‌ಡೌನ್‌ ಮತ್ತಿತರ ಕಾರಣಗಳಿಂದಾಗಿ ಕುಂದಾಪುರ ಭಾಗದಲ್ಲಿ ಹಿಂದಿಗಿಂತ ಹೆಚ್ಚು ಪ್ರದೇಶಗಳಲ್ಲಿ ಭತ್ತದ ಕೃಷಿ ಮಾಡಲಾಗಿದ್ದು, ಆದರೆ ಈಗ ಭತ್ತದ ತೆನೆಗಳು ಫಸಲು ಬಿಟ್ಟು, ಬೆಳೆಯುವ ಸಮಯವಾಗಿದ್ದು, ಈ ಸಂದರ್ಭ ಮಳೆ ಬಂದರೆ ಸಂಪುರ್ಣ ಫಸಲೇ ನಾಶವಾಗುವ ಭೀತಿ ರೈತರದ್ದಾಗಿದೆ. ಈಗಾಗಲೇ ಜೂನ್‌, ಆಗಸ್ಟ್‌, ಸೆಪ್ಟಂಬರ್‌ನಲ್ಲಿ ಬಂದ ನೆರೆಗೆ ನಾವುಂದ ಗ್ರಾಮದ ಸಾಲುºಡಾ, ಕಂಡಿಕೇರಿ, ಸಸಿಹಿತ್ಲ ಭಾಗ, ಹಕ್ಲಾಡಿ, ತೋಪ್ಲು, ಕೋಡಿ ಮತ್ತಿತರ ಭಾಗಗಳಲ್ಲಿ ಭತ್ತದ ಪೈರು ಕೊಳೆತು ಹಾನಿಯಾಗಿತ್ತು. ಈಗ ಮತ್ತೆ ಫಸಲು ಬಿಡುವ ಸಮಯದಲ್ಲಿ ಹೀಗೆ ಮಳೆ ಬಂದರೆ ಮತ್ತಷ್ಟು ಭತ್ತದ ಕೃಷಿ ನಾಶವಾಗಲಿದೆ ಎನ್ನುವ ಆತಂಕ ರೈತರದ್ದಾಗಿದೆ.

Advertisement

ಕುಂದಾಪುರ: ಮಂಗಳವಾರದ ಮಳೆಗೆ ನಗರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕೆಸರಿನ ಹೊಂಡವಾಗಿ ಮಾರ್ಪಾಡಾಗಿದೆ. ಫ್ಲೈಓವರ್‌ ಕಾಮಗಾರಿ ಆರಂಭ ವಾಗಿಲ್ಲ. ಸರ್ವೀಸ್‌ ರಸ್ತೆಯೇ ಹೆದ್ದಾರಿ ಯಾಗಿ ಪ್ರತಿದಿನ ಸಾವಿರಾರು ವಾಹನಗಳು ಓಡಾಟಕ್ಕೆ ಇದನ್ನೇ ಅನಿವಾರ್ಯವಾಗಿ ಬಳಸುತ್ತಿವೆ. ನಿರ್ವಹಣೆ ಇಲ್ಲದ ಈ ಸರ್ವೀಸ್‌ ರಸ್ತೆಯಲ್ಲಿ ಘನವಾಹನಗಳು ಸೇರಿದಂತೆ ಭಾರೀ ವಾಹನಗಳು, ಲಘು ವಾಹನಗಳು ಓಡಾಡಬೇಕಾದ ಕಾರಣ ರಸ್ತೆಯುದ್ದಕ್ಕೂ ಹೊಂಡಗಳಾಗಿವೆ.

ವಿನಾಯಕ ಥಿಯೇಟರ್‌ನಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವರೆಗೆ ಹೊಂಡಬಿದ್ದ ರಸ್ತೆಯಲ್ಲೇ ಸಾಗುವುದು ಶಿಕ್ಷೆಯಾಗಿದೆ. ಈ ಹೊಂಡದಲ್ಲಿ ಮಳೆ ಬಂದಾಗ ನೀರು ತುಂಬಿ, ಹೊಂಡವೋ ರಸ್ತೆಯೋ ಎಂದು ತಿಳಿಯದೇ ಹೈರಾಣಾಗುತ್ತಿದ್ದ ದೃಶ್ಯ ದಿನವಿಡೀ ಕಂಡು ಬಂತು. ಸಣ್ಣ ಪುಟ್ಟ ಚಕ್ರದ ವಾಹನದವರು ಈ ಗುಂಡಿಗೆ ತಿಳಿಯದೇ ತಮ್ಮ ವಾಹನದ ಚಕ್ರವನ್ನು ಹಾಕಿ ಕೆಸರು ನೀರು ಹಾರಿಸಿ, ವಾಹನಕ್ಕೂ ಎಡವಟ್ಟು ಮಾಡಿಕೊಳ್ಳುತ್ತಿದ್ದರು. ಸರಿಯಾದ ಚರಂಡಿ ವ್ಯವಸ್ಥೆಯೂ ಇಲ್ಲದೆ ಪಾದಚಾರಿಗಳಿಗೆ ಹೋಗಲು ರಸ್ತೆಯೂ ಇಲ್ಲದೇ ಒಟ್ಟಿನಲ್ಲಿ ಅವ್ಯವಸ್ಥೆಯ ಹೆದ್ದಾರಿ ಪ್ರಯಾಣಿಕರಿಗೆ ಮಳೆಯೂ ತಕ್ಕ ಪಾಠ ಕಲಿಸುತ್ತಿದೆ.

ಬಸ್ರೂರು, ಮೂರುಕೈ ಬಳಿ ನೀರು ನಿಂತು ಹೆದ್ದಾರಿ ಸಂಚಾರ ಕಷ್ಟವಾಗುತ್ತಿತ್ತು. ಇದಕ್ಕಾಗಿ ಹೆದ್ದಾರಿ ಹೋರಾಟ ಸಮಿತಿಯವರು ಸಚಿವರನ್ನು ತಡೆದು ಪ್ರತಿಭಟನೆ ನಡೆಸಿದರು. ಡಿಸಿಯವರ ಬಳಿಯೂ ದೂರು ಹೋಗಿ ಖುದ್ದು ಅವರು ಪರಿಶೀಲಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೂ ಬಂದು ನೋಡಿ ಹೋದರು. ಶಾಸಕರು ಸರಿಸುಮಾರು 4 ತಾಸು ಹಾನಿಗೀಡಾದ ಸ್ಥಳದಲ್ಲಿ ನಿಂತು ಪುರಸಭೆಯವರ ಮೂಲಕ ಕಾಮಗಾರಿ ಮಾಡಿಸಿದರು. ಅದಾದ ಬಳಿಕ ಮಳೆ ಹೆಚ್ಚು ಬಾರದ ಕಾರಣ ಸಮಸ್ಯೆ ಅಷ್ಟಾಗಿ ಕಾಣಿಸಿರಲಿಲ್ಲ. ಆದರೆ ಅಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಈಗಲೂ ನೀರು ನಿಲ್ಲುವುದು ತಪ್ಪಿಲ್ಲ. ಮೊದಲಿನಷ್ಟು ಪ್ರಮಾಣದಲ್ಲಿ ತೊಂದರೆ ಆಗದೇ ಇದ್ದರೂ ಸಮಸ್ಯೆ ಪೂರ್ತಿ ಬಗೆಹರಿದಿಲ್ಲ. ಚರಂಡಿ ಸಮಸ್ಯೆ ಇತ್ಯರ್ಥ ಆಗದ ಹೊರತು ಅಲ್ಲಿ ನೀರು ನಿಲ್ಲುವುದು ಕೂಡಾ ಕಡಿಮೆಯಾಗದೋ ಏನೋ.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಬಳಿ ನೀರು ನಿಂತು ವಾಹನಗಳ ಚಾಲನೆಗೆ ಆತಂಕವುಂಟಾಗುತ್ತದೆ. ಫ್ಲೈಓವರ್‌ ಮುಗಿದ ಕೂಡಲೇ ಬಸ್‌ ನಿಲ್ದಾಣ ಬಳಿ ಸುಮಾರು 200 ಮೀ.ಗಳಷ್ಟು ದೂರ ಎರಡು ರಸ್ತೆಗಳ ಮಧ್ಯೆ ಮೊದಲಿದ್ದ ರಸ್ತೆಯಲ್ಲಿ ಹೊಂಡ ಮಾರ್ಪಾಡಾಗಿ ನೀರು ನಿಲ್ಲುತ್ತದೆ. ಇದರಿಂದಾಗಿ ದ್ವಿಚಕ್ರ ವಾಹನ, ತ್ರಿಚಕ್ರ ವಾಹನದವರಿಗೆ ಅನಗತ್ಯ ಭಯ ಉಂಟಾಗುವ ವಾತಾವರಣ ಇದೆ. ನೀರಿಗೆ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ಬೈಂದೂರು: ಎಡೆಬಿಡದೆ ಸುರಿದ ಮಳೆಗೆ ಕೃಷಿಕರು ಕಂಗಾಲು
ಬೈಂದೂರು: ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದಾಗಿ ಕಟಾವಿನ ನಿರೀಕ್ಷೆಯಲ್ಲಿದ್ದ ರೈತರು ಆತಂಕ ಪಡುವಂತಾಗಿದೆ. ಸಾಮಾನ್ಯವಾಗಿ ಅಕ್ಟೋಬರ್‌ ಅಂತ್ಯ ಅಥವಾ ನವೆಂಬರ್‌ ತಿಂಗಳಲ್ಲಿ ಬಹುತೇಕ ಕಟಾವು ಪ್ರಕ್ರಿಯೆ ನಡೆಯುತ್ತದೆ. ಕಳೆದ ವರ್ಷವೂ ಕೂಡ ಮಳೆಯಿಂದಾಗಿ ಕಟಾವಿಗೆ ಸಿದ್ದವಾದ ಭತ್ತದ ಬೆಳೆ ನಾಶವಾಗಿತ್ತು.

ಈ ವರ್ಷ ಕಳೆದ ವಾರದಿಂದ ಬಿಸಿಲು ಇದ್ದ ಕಾರಣ ರೈತರು ಕಟಾವಿನ ಸಿದ್ಧತೆಯಲ್ಲಿದ್ದರು. ಆದರೆ ಈಗ ಮಳೆ ಸುರಿದು ಬೆಳೆದು ನಿಂತ ಪೈರು ನೀರಿನಲ್ಲಿ ತೇಲುವಂತಾಗಿದೆ. ಬೈಂದೂರು ಭಾಗದಲ್ಲಿ 2 ದಿನಗಳಿಂದ ಮಳೆ ಆಗಾಗ ಸುರಿಯುತ್ತಿದ್ದು ಮುಂದುವರಿದರೆ ಭತ್ತ ಬೆಳೆಗಾರರಿಗೆ ನಷ್ಟ ಉಂಟುಮಾಡಲಿದೆ. ಮಳೆಯಿಂದಾಗಿ ಯಾವುದೇ ಹಾನಿ ಸಂಭವಿಸಿಲ್ಲ. ಆದರೆ ಮಳೆ ನಿಲ್ಲುವ ಲಕ್ಷಣ ಕಾಣದಿರುವುದು ರೈತರಲ್ಲಿ ಆತಂಕ ಉಂಟುಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next