Advertisement

Heavy Rain ಕರಾವಳಿಯಲ್ಲಿ ಮುಂದುವರಿದ ಮಳೆ ಬಿರುಸು, ಅಪಾರ ಹಾನಿ

01:36 AM Aug 02, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ಮಳೆ ಮುಂದುವರಿದಿದೆ. ಕೆಲವು ಕಡೆ ಕೃತಕ ನೆರೆ ಸೃಷ್ಟಿಯಾಗಿ ಆಸ್ತಿಪಾಸ್ತಿಗೆ ಹಾನಿ ಯಾಗಿದೆ. ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

ಬೆಳ್ತಂಗಡಿ ತಾಲೂಕಿನ ಕುದ್ರೆಂಜದಲ್ಲಿ ಹಳ್ಳಕ್ಕೆ ಅಳವಡಿಸಿದ್ದ ಸ್ಲಾಬ್‌ ಕುಸಿದಿದ್ದು, ಸಂಪರ್ಕ ಕಡಿತಗೊಂಡಿದೆ. ಕೊಕ್ರಾಡಿ- ಅತ್ರಿಜಾಲು-ಕುತ್ಲೂರು ರಸ್ತೆಯಲ್ಲೂ ಕುಸಿತ ಉಂಟಾಗಿ ವಾಹನ ಸಂಚಾರ ಸಂಪರ್ಕ ಕಡಿದಿದೆ. ಮರೋಡಿ ಗ್ರಾಮದ ದೇರಾಜೆಬೆಟ್ಟ ಎಂಬಲ್ಲಿಗೆ ಹೋಗುವ ರಸ್ತೆ ಕುಸಿದು ಬಿದ್ದಿದೆ. ಮಚ್ಚಿನ ಗ್ರಾಮದ ಕುಕ್ಕಿಲದಲ್ಲಿ ಎರಡು ಮನೆಗಳಿಗೆ ಮಣ್ಣು ಕುಸಿದು ಬಿದ್ದಿದೆ. ರೆಖ್ಯ ಗ್ರಾಮದ ಕೋಲಾರು ಶ್ರೀ ದುರ್ಗಾಪರಮೇಶ್ವರಿ ದೇವ ಸ್ಥಾನಕ್ಕೆ ಗುಡ್ಡ ಕುಸಿದು ಸುತ್ತುಪೌಳಿ, ಗರ್ಭ ಗುಡಿಗೆ ಮಣ್ಣು ಬಿದ್ದಿದೆ. ಪ್ರದೇಶಗಳಲ್ಲೂ ಹಾನಿಯಾಗಿದೆ. ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ 220 ಮಿ.ಮೀ. ಮಳೆ ಯಾಗಿದೆ. ರಾ.ಹೆ. 75ರ ಪೆರ್ನೆಯಲ್ಲಿ ಗುಡ್ಡ ಕುಸಿದು ಸಂಚಾರಕ್ಕೆ ಅಡಚಣೆಯಾಗಿದೆ.

ಉಳ್ಳಾಲದಲ್ಲಿ ಕಡಲ್ಕೊರೆತ ಮುಂದುವರಿದಿದೆ. ಸುಬ್ರಹ್ಮಣ್ಯದಲ್ಲಿ ಕುಮರಧಾರಾ ಸ್ನಾನಘಟ್ಟ ಮುಳುಗಡೆ ಯಾಗಿದೆ. ಫಲ್ಗುಣಿ ನದಿ ತುಂಬಿ ಹರಿಯುತ್ತಿರುವುದರಿಂದ ನಗರದ ಸುಲ್ತಾನ್‌ ಬತ್ತೇರಿ ಭಾಗದಲ್ಲೂ ನೀರು ಮೇಲಕ್ಕೆ ಬಂದಿದೆ.

ತಣ್ಣೀರು ಬಾವಿ ಪ್ರದೇಶಕ್ಕೆ ಬೋಟ್‌ ಸಂಪರ್ಕ ಕಲ್ಪಿಸುವ ಜೆಟ್ಟಿಯ ಬಳಿ ನೀರು ಭಾರೀ ಪ್ರಮಾಣ ಹರಿದು ಹೋಗುತ್ತಿದೆ. ಫೈಝಲ್‌ ನಗರದಲ್ಲಿ ವೃದ್ಧೆ ಯಮುನಾ ಅವರ ಮನೆಯ ಹಂಚಿನ ಛಾವಣಿ ಕುಸಿದು ಬಿದ್ದಿದೆ. ಕುಲಶೇಖರ ಕೋಟಿ ಮುರ ಸಿಲ್ವರ್‌ ಗೇಟ್‌ನ ಗ್ರಂಥಾಲಯದ ಬಳಿ ಇರುವ ನಾಗೇಶ್‌ ಅವರ ಮನೆ ಕುಸಿದು ಬಿದ್ದಿದೆ.

ಬೈಕಂಪಾಡಿ ಕೈಗಾರಿಕ ಪ್ರದೇಶ ಸತತ ಮೂರು ದಿನಗಳಿಂದ ಮುಳುಗಡೆಯಾಗಿದೆ. ಯಂತ್ರಗಳು ನೀರಿನಲ್ಲಿ ಮುಳುಗಿದೆ. ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿದೆ. ಮರಕಡ ಬಟ್ಟಗುಡ್ಡ ಕುದ್ರು ಜಲಾವೃತಗೊಂಡಿದೆ. ಗುರುಪುರ ವಜ್ರದೇಹಿ ಮಠಕ್ಕೆ ನೀರು ನುಗ್ಗಿದೆ.

Advertisement

ಉಕ್ಕಿ ಹರಿದ ಫಲ್ಗುಣಿ, ನೇತ್ರಾವತಿ
ಬಂಟ್ವಾಳ ತಾಲೂಕಿನಲ್ಲಿಯೂ ಉತ್ತಮ ಮಳೆಯಾಗಿದ್ದು, ನೇತ್ರಾವತಿಯಲ್ಲಿ ನೀರಿನ ಮಟ್ಟ ಮತ್ತೆ ಏರಿಕೆ ಕಂಡಿದೆ. ಫಲ್ಗುಣಿ ನದಿ ಉಕ್ಕಿ ಹರಿದು ಅಮ್ಮುಂಜೆ, ಪೊಳಲಿ, ಮೂಲರಪಟ್ಣ ಸುತ್ತಮುತ್ತಲ ಪ್ರದೇಶ ದಲ್ಲಿ ಪ್ರವಾಹದ ಭೀತಿ ಆವರಿಸಿದೆ. ಕುದ್ರು ಪ್ರದೇಶದ ಮಂದಿಯನ್ನು ಕಾಳಜಿ ಕೇಂದ್ರಕ್ಕೆ ಸೇರಿಸಲಾಗಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಗುರುವಾರ ಬೆಳಗ್ಗೆ 8.30ರ ವರೆಗೆ 24 ಗಂಟೆಗಳಲ್ಲಿ ಶಿರ್ತಾಡಿಯಲ್ಲಿ 269 ಮಿ.ಮೀ., ಮರೋಡಿಯಲ್ಲಿ 264, ಬಳಂಜ 250, ಮೇಲಂತಬೆಟ್ಟು 205, ಬೆಳುವಾಯಿ 202, ಲಾೖಲ 195.5, ಹೊಸಂಗಡಿ 171.5, ಕಲ್ಮಂಜ 168, ಚೆನ್ನೆ çತೋಡಿ 160, ಉಜಿರೆಯಲ್ಲಿ 158.5 ಮಿ.ಮೀ. ಮಳೆಯಾಗಿದೆ.

ಅಗತ್ಯ ಕ್ರಮ: ಡಿಸಿ
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ವೇಣೂರಿನಲ್ಲಿ 458 ಮಿ.ಮೀ. ಮಳೆಯಾಗಿದೆ. ಕೆಲವು ಕಡೆ ಸಣ್ಣ ಸೇತುವೆಗಳು ಮುರಿದು ಬಿದ್ದಿದ್ದು, ಮಣ್ಣು ಕುಸಿತ ಉಂಟಾಗಿದೆ.

ಬೆಳ್ತಂಗಡಿ, ವೇಣೂರು ಸುತ್ತ ಮುತ್ತಲಿನ ಪ್ರದೇಶಕ್ಕೆ ಭೇಟಿ ನೀಡಿದ್ದು, ಅಗತ್ಯ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿ ಸಿದ್ದೇನೆ. ಮೂಡುಬಿದಿರೆ, ಅದ್ಯ ಪಾಡಿ, ಉಳಾಯಿಬೆಟ್ಟು, ಕೂಳೂರು ಸುತ್ತಮುತ್ತಲಿನ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಕೂಳೂರಿನ 30 ಹಾಗೂ ಸುಬ್ರಹ್ಮಣ್ಯದ 36 ಮಂದಿ ಯನ್ನು ಸ್ಥಳಾಂತರಿಸಿದ್ದೇವೆ ಎಂದು ಹೇಳಿದರು.

ಉಡುಪಿ: ಜಿಲ್ಲಾದ್ಯಂತ ಬುಧವಾರ ತಡರಾತ್ರಿಯಿಂದ ಗುರುವಾರ ಇಡೀ ದಿನ ವ್ಯಾಪಕ ಮಳೆಯಾಗಿದ್ದು, ಗ್ರಾಮಾಂತರ ಭಾಗದಲ್ಲಿ ನದಿಗಳು ಉಕ್ಕಿ ಹರಿದು ಹಲವೆಡೆ ಮನೆಗಳು ಜಲಾವೃತಗೊಂಡಿವೆ.

ಕಾಪು, ಕುಂದಾಪುರ, ಬೈಂದೂರು, ಕಾರ್ಕಳ ಭಾಗದಲ್ಲಿ ಮಳೆಯಿಂದಾಗಿ ಸಂಪರ್ಕ ರಸ್ತೆ, ಸೇತುವೆ ಮುಳುಗಡೆಯಾಗಿ ಜನ ಸಂಚಾರ ತತ್ತರಿಸಿದೆ. ಕಾಪು, ಶಿರ್ವ ಭಾಗದಲ್ಲಿ ಕೃತಕ ನೆರೆ ಮತ್ತು ಪಾಪನಾಶಿನಿ ಉಕ್ಕಿ ಹರಿದ ಪರಿಣಾಮ ಹಲವು ಮನೆಗಳು ಜಲಾವೃತಗೊಂಡಿದ್ದು. ತಹಶೀಲ್ದಾರ್‌ ಸ್ಥಳಕ್ಕೆ ಭೇಟಿ ಹಲವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಸೂಚನೆ ನೀಡಿದರು. ಕಾರ್ಕಳ ತಾಲೂಕಿನ ಬೆಳ್ಮಣ್‌ ಭಾಗದಲ್ಲಿ ಶಾಂಭವಿ ನದಿ ಮತ್ತು ಹಿರಿಯಡಕ ಬಜೆ ಡ್ಯಾಂ ಪರಿಸರದಲ್ಲಿ ಸ್ವರ್ಣಾ ನದಿ ನೀರು ಉಕ್ಕಿ ಹರಿದ ಪರಿಣಾಮ ನದಿ ಪಾತ್ರಗಳಲ್ಲಿ ನೆರೆ ಸೃಷ್ಟಿಯಾಗಿದೆ.

ಕುಂದಾಪುರ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವ ಪರಿಣಾಮ ಮೂರನೆ ಬಾರಿಗೆ ನೆರೆ ಸೃಷ್ಟಿಯಾಗಿ ಜನತೆ ಆತಂಕಕ್ಕೆ ಸಿಲುಕಿದ್ದಾರೆ.

ನಾವುಂದ, ಬಡಕೆರೆ, ಮರವಂತೆ, ಚಿಕ್ಕಳ್ಳಿ, ಹಡವು, ಪಡುಕೋಣೆ.. ಮೊಳಹಳ್ಳಿ ಭಾಗ ಜಲಾವೃತಗೊಂಡಿದೆ. ಉಡುಪಿ ಕಕ್ಕುಂಜೆ ಪೆರಂಪಳ್ಳಿ ಭಾಗದಲ್ಲಿ ಹಲವು ಕಡೆಗಳಲ್ಲಿ ಮನೆ, ಕೃಷಿ ಭೂಮಿ ಜಲಾವೃತಗೊಂಡು ಜನರು ಓಡಾಡಲು ಕಷ್ಟ ಅನುಭವಿಸಿದ್ದಾರೆ. ಕಾರ್ಕಳ ತಾಲೂಕಿನಲ್ಲಿ ಮಿಯಾರು, ಮುಡಾರು, ಕಲ್ಯ, ಪಳ್ಳಿ, ಕುಂದಾಪುರ ತಾಲೂಕಿನ ಹಾಲಾಡಿ, ವಂಡ್ಸೆ, ಮೊಳಹಳ್ಳಿ, ಉಡುಪಿ ತಾಲೂಕಿನ ಪುತ್ತೂರು, ಕೊಡವೂರು ಭಾಗದಲ್ಲಿ ಮನೆಗಳಿಗೆ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳ ಕಾಲ 154.9 ಮಿ. ಮೀ. ಸರಾಸರಿ ಮಳೆಯಾಗಿದೆ.

50ಕ್ಕೂ ಅಧಿಕ ಹಸುಗಳ ರಕ್ಷಣೆ
ಕುಂದಾಪುರ ತಾಲೂಕಿನ ಹೊಸ್ಮಾರು ಗ್ರಾಮದಲ್ಲಿ ಜಲಾವೃತಗೊಂಡು ಸಂಕಷ್ಟಕ್ಕೆ ಸಿಲುಕಿದ್ದ ಜಾನುವಾರುಗಳನ್ನು ಅಗ್ನಿ ಶಾಮಕದಳ ಸಿಬಂದಿ ರಕ್ಷಿಸಿದ್ದಾರೆ. 50ಕ್ಕೂ ಅಧಿಕ ಹಸುಗಳನ್ನು ಮತ್ತು ಐವರು ನಾಗರಿಕರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು. ಗುರುವಾರ ಕಾರ್ಕಳದಲ್ಲಿ 7 ಮಂದಿಯನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಿಕೊಡಲಾಯಿತು ಎಂದು ಜಿಲ್ಲಾ ಅಗ್ನಿ ಶಾಮಕ ದಳ ಅಧಿಕಾರಿ ವಿನಾಯಕ್‌ ಕಲ್ಗುಟ್ಕರ್‌ ತಿಳಿಸಿದ್ದಾರೆ.

ಎರಡನೇ ಬಾರಿಗೆ
ಕುಬ್ಜೆ ಗಂಗಾಭಿಷೇಕ
ಸಿದ್ದಾಪುರ: ನಿರಂತರ ಮಳೆಯಿಂದಾಗಿ ಕುಬ್ಜಾ ನದಿಯು ಉಕ್ಕಿ ಹರಿದು, ಈ ವರ್ಷ ಎರಡನೇ ಬಾರಿಗೆ ಶ್ರೀ ಕ್ಷೇತ್ರ ಕಮಲಶಿಲೆ ದೇವಸ್ಥಾನ ಜಲಾವೃತಗೊಂಡಿದೆ. ಕುಬ್ಜಾ ನದಿ ಮತ್ತು ನಾಗತೀರ್ಥ ಸಮಾಗಮಗೊಂಡು ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ಉದ್ಭವಲಿಂಗಕ್ಕೆ ಪ್ರಾಕೃತಿಕ ಗಂಗಾಭಿಷೇಕವಾಗಿದೆ.

ಚಿತ್ರ : ಕಿಶೋರ್‌ ಬಂಗೇರ

Advertisement

Udayavani is now on Telegram. Click here to join our channel and stay updated with the latest news.

Next