Advertisement

ದ. ಕ. ಜಿಲ್ಲೆಯಲ್ಲಿ ಬಿರುಸಿನ ಮಳೆ 

11:30 PM Jul 07, 2022 | Team Udayavani |

ಮಂಗಳೂರು: ಎರಡು ದಿನ ಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆ ಗುರು ವಾರವೂ ಮುಂದುವರಿದಿದ್ದು, ಮತ್ತೆ 2 ದಿನಗಳ ಕಾಲ “ರೆಡ್‌ ಅಲರ್ಟ್‌’ ಘೋಷಿಸಲಾಗಿದೆ. ಜಿಲ್ಲೆಯ ಬಹುತೇಕ ಕಡೆ ಕೃತಕ ನೆರೆ, ಅಪಾರ ಹಾನಿ ಸಂಭವಿಸಿದೆ.

Advertisement

ದ.ಕ. ಜಿಲ್ಲೆಯಲ್ಲಿ ಮಳೆಗೆ 2 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, 11 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. ನಗರದಲ್ಲಿ ಬಿರುಸಿನ ಮಳೆಯಾಗಿದ್ದು, ಕೆಲವು ಕಡೆ ಹಾನಿ ಉಂಟಾಗಿದೆ. ಪಡೀಲ್‌ ಕಣ್ಣೂರು ಸಮೀಪದ ಬಳ್ಳೂರುಗುಡ್ಡೆ ಎಂಬಲ್ಲಿ ಮನೆಯೊಂದರ ಪಕ್ಕದ ಗುಡ್ಡ ಕುಸಿದು ಸುಮಾರು 7ಕ್ಕೂ ಅಧಿಕ ಮನೆಗಳು ಅಪಾಯದ ಅಂಚಿನಲ್ಲಿವೆ. ಮೂರು ಮನೆಗಳು ಯಾವುದೇ ಸಂದರ್ಭದಲ್ಲಿ ಬೀಳುವ ಅಪಾಯದಲ್ಲಿದ್ದು, ಸಮೀಪದ 4ಕ್ಕೂ ಅಧಿಕ ಮನೆಗಳು ಆತಂಕದಲ್ಲಿದೆ. ಈಗಾಗಲೇ ಐದು ಮನೆಯ ಜನರನ್ನು ಸ್ಥಳಾಂತರಿಸಲಾಗಿದೆ. ಅಗತ್ಯವಿರುವವರಿಗೆ ಸಮೀಪದ ಅಂಗನವಾಡಿಯಲ್ಲಿ ಆಶ್ರಯ, ಆಹಾರ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಥಳಕ್ಕೆ ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ಪ್ರೇಮಾನಂದ ಶೆಟ್ಟಿ ಮತ್ತು ಅಧಿಕಾರಿಗಳು ಪರಿಶೀಲಿಸಿದರು. ನಗರದ ಪಚ್ಚನಾಡಿಯ ಭಟ್ರಕೋಡಿ ಬಳಿ ತಡೆಗೋಡೆ ಕುಸಿದು ಕಾಂಕ್ರಿಟ್‌ ರಸ್ತೆಗೆ ಹಾನಿ ಉಂಟಾಗಿದೆ. ಕೆಲವು ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಆವರಿಸಿ, ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

ಸುಳ್ಯ ತಾಲೂಕಿನ ಹರಿಹರ ಗ್ರಾಮದ ಕೊಪ್ಪತ್ತಡ್ಕ ಸೇತುವೆಯ ಸಂಪರ್ಕ ರಸ್ತೆ ಕಡಿತಗೊಂಡಿದೆ. ಬಾಲುಗೋಡು ಬಳಿ ಮರದ ಪಾಳ ಕೊಚ್ಚಿಹೋಗಿ ಸಂಪರ್ಕ ಕಡಿತಗೊಂಡಿದೆ. ಉಪ್ಪಿನಂಗಡಿ-ಪುತ್ತೂರು ರಾಜ್ಯ ಹೆದ್ದಾರಿಯ ಆನೆಮಜಲಿನಲ್ಲಿ ರಸ್ತೆ ಕುಸಿದಿದೆ. ಸೋಮೇಶ್ವರದ ಉಚ್ಚಿಲ ಬಟ್ಟಪ್ಪಾಡಿ ಮತ್ತು ಉಳ್ಳಾಲದ ಸೀ ಗ್ರೌಂಡ್‌ನ‌ಲ್ಲಿ ಕಡಲ್ಕೊರೆತ ಮುಂದುವರಿದಿದೆ.

ಎರಡು ದಿನ “ರೆಡ್‌ ಅಲರ್ಟ್‌’ :

ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಜು. 8ರಂದು ಬೆಳಗ್ಗೆ 8.30ರಿಂದ ಜು.9ರ ಬೆಳಗ್ಗೆ 8.30ರವರೆಗೆ “ರೆಡ್‌ ಅಲರ್ಟ್‌’ ಘೋಷಿಸಲಾಗಿದೆ. ಈ ವೇಳೆ 204.5 ಮಿ.ಮೀ.ಗಿಂತಲೂ ಅಧಿಕ ಮಳೆಯಾಗುವ ನಿರೀಕ್ಷೆ ಇದೆ. ಗಾಳಿಯ ಜೊತೆ ಸಮುದ್ರದ ಅಬ್ಬರ ಕೂಡ ಹೆಚ್ಚಾಗುವ ನಿರೀಕ್ಷೆ ಇದೆ.

Advertisement

ಜಿಲ್ಲಾಡಳಿತದಿಂದ ಮುಂಜಾಗ್ರತೆ :

ಭಾರೀ ಮಳೆ ಸುರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಜಿಲ್ಲಾಡಳಿತ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ 88 ಕಡೆ ಕಾಳಜಿ ಕೇಂದ್ರ ತೆರೆಯಲಾಗಿದೆ. ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ತಂಡ ಸನ್ನದ್ಧವಾಗಿದೆ. ತಾಲೂಕು ಮಟ್ಟದಲ್ಲಿ ಕಂಟ್ರೋಲ್‌ ರೂಂ. ತೆರೆಯಲಾಗಿದೆ. ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರುವಂತೆ ಸೂಚಿಸಲಾಗಿದೆ. ವಿವಿಧ ಪ್ರದೇಶಗಳಿಗೆ ನೋಡೆಲ್‌ ಅಧಿಕಾರಿ ನೇಮಕ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next