ಕುಣಿಗಲ್ : ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು ಜಲಾಶಯದ ಒಳ ಹರಿವು 3200 ಕ್ಯೂಸೆಕ್ಸ್ ಇದ್ದು ಇಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಹಾಗಾಗಿ ಅಚ್ಚು ಕಟ್ಟು ಪ್ರದೇಶ, ಶಿಂಷಾ ನದಿ ಪಾತ್ರದ ರೈತರು ಎಚ್ಚರ ವಹಿಸುವಂತೆ ತಾಲೂಕು ಆಡಳಿತ ತಿಳಿಸಿದೆ,
ಕಳೆದ ಹಲವು ದಿನಗಳಿಂದ ಕುಣಿಗಲ್ ತಾಲೂಕು ಸೇರಿದಂತೆ ಇದರ ಅಕ್ಕಪಕ್ಕದ ತಾಲೂಕುಗಳಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಈ ನಿಟ್ಟಿನಲ್ಲಿ ಮಾರ್ಕೋನಹಳ್ಳಿ ಜಲಾಶಯಕ್ಕೆ 3200 ಕ್ಕೂ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ, ಜಲಾಶಯದ ಸುರಕ್ಷತೆಯ ದೃಷ್ಠಿಯಿಂದ್ದಾಗಿ ಇಷ್ಟೇ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ ಹೀಗಾಗಿ ಇದರ ಅಚ್ಚುಕಟ್ಟು ಪ್ರದೇಶವಾದ ಮಾರ್ಕೋನಹಳ್ಳಿ, ಹನುಮಾಪುರ, ಕೆ.ಟಿ.ಪಾಳ್ಯ, ಬೆಟ್ಟಹಳ್ಳಿ, ಪಡುವಗೆರೆ, ಕೊಡವತ್ತಿ, ಕೀಲಾರ, ಅಂಚೀಪುರ, ದೊಡ್ಡಕಲ್ಲಹಳ್ಳಿ, ಎಡವಾಣಿ, ಕಗ್ಗಲ್ಲೀಪುರ, ಶ್ಯಾನುಭೋಗನಹಳ್ಳಿ, ವಳಗೆರೆಪುರ ಹಾಗೂ ಕಾಡಶೆಟ್ಟಿಹಳ್ಳಿ ಗ್ರಾಮಸ್ಥರು ಜಲಾಶಯ ಬಳಿ ತೆರಳದಂತೆ ತಹಶೀಲ್ದಾರ್ ಮಹಬಲೇಶ್ವರ ಮನವಿ ಮಾಡಿದ್ದಾರೆ,
ಎಚ್ಚರಿಕೆ : ಕಳೆದ ವರ್ಷ ಮಾರ್ಕೋನಹಳ್ಳಿ ಜಲಾಶಯದ ಎಡ ಮತ್ತು ಬಲ ಕೋಡಿ ಹಳ್ಳದಲ್ಲಿ ಕೆಲ ವ್ಯಕ್ತಿಗಳು ಆಟವಾಡಲು ನೀರಿಗಿಳಿದ ಕಾರಣ ನಾಲ್ವರು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದರು, ಹಾಗಾಗಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಯಾವುದೇ ಕಾರಣಕ್ಕೂ ನೀರಿಗೆ ಇಳಿಯಬಾರದೆಂದು ತಹಶೀಲ್ದಾರ್ ಎಚ್ಚರಿಕೆ ನೀಡಿದ್ದಾರೆ,
10 ಮನೆಗೆ ಹಾನಿ : ಕಳೆದ ಎರಡು ದಿನಗಳಿಂದ ಎಡಬಿಡದೇ ಸುರಿದ ಮಳೆಗೆ ತಾಲೂಕಿನ ಅವರಗೆರೆ, ಕೊಡವತ್ತಿ, ಕೆಂಚನಹಳ್ಳಿ, ಚಿನ್ನಹಳ್ಳಿ, ಕೆಂಪನಹಳ್ಳಿ, ಅಣತಹಳ್ಳಿ, ಭಕ್ತರಹಳ್ಳಿ, ಹನುಮನಪಾಳ್ಯ ಸೇರಿದಂತೆ ಇತರೆ ಗ್ರಾಮಗಳಲ್ಲಿ 10 ಕ್ಕೂ ಅಧಿಕ ಮನೆಗಳು ಕುಸಿದು ಬಿದ್ದು ಹಾನಿಗೆ ಒಳಗಾಗಿವೆ ಎಂದು ಪ್ರಾಥಮಿಕ ವರದಿ ಲಭ್ಯವಾಗಿದ್ದು ಎಂದು ತಹಶೀಲ್ದಾರ್ ತಿಳಿಸಿದರು.
Related Articles
ಇದನ್ನೂ ಓದಿ : ಶಿವಮೊಗ್ಗ: ರಸ್ತೆ ಮೇಲೆ ನಿಂತಿದೆ ಮೂರಡಿ ನೀರು..; ಅಪಾಯಕ್ಕೆ ಅಹ್ವಾನ ನೀಡುತ್ತಿರುವ ಗುಂಡಿಗಳು
ಮಳೆ ವಿವರ : ತಾಲೂಕಿನಾಧ್ಯಂತ ವ್ಯಾಪಕವಾಗಿ ಮಳೆಯಾಗುತ್ತಿದ್ದು ಕಳೆದ 24 ಗಂಟೆಗಳಲ್ಲಿ ಕುಣಿಗಲ್ ಪಟ್ಟಣದಲ್ಲಿ 94.05 ಮೀ.ಮೀ, ಹುಲಿಯೂರುದುರ್ಗ 65 ಮೀ.ಮೀ, ಸಂತೇಪೇಟೆ 63.8 ಮೀ.ಮೀ, ಅಮೃತೂರು 79.4 ಮೀ.ಮೀ, ಕೆ.ಹೊನ್ನಮಾಚನಹಳ್ಳಿ 81.2 ಮೀ.ಮೀ, ನಿಡಸಾಲೆ 41.2 ರಷ್ಟು ಮಳೆಯಾಗಿದೆ.