ದಾವಣಗೆರೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಗೌರವ ಖಜಾಂಚಿ, ಅಖೀಲ ಭಾರತ ವೀರಶೈವ ಮಹಾಸಭಾದ ತಾಲೂಕು ಪ್ರಧಾನ ಕಾರ್ಯದರ್ಶಿ ಪಿ. ನಾಗಭೂಷಣ್ ತೌಡೂರು (55) ತೀವ್ರ ಹೃದಯಾಘಾತದಿಂದ ಗುರುವಾರ ನಿಧನರಾದರು.
ಕನ್ನಡ ಸಾಹಿತ್ಯ ಪರಿಷತ್, ವೀರಶೈವ ಮಹಾಸಭಾ, ರಂಗ ಕ್ಷಿತಿಜ ಸಾಂಸ್ಕೃತಿಕ ಸಂಘ ಒಳಗೊಂಡಂತೆ ಹಲವಾರು ಸಂಘಗಳ ಮೂಲಕ ಸಾಮಾಜಿಕ ಸೇವಾ ಕಾರ್ಯದಲ್ಲಿ ಸದಾ ಸಕ್ರಿಯರಾಗಿ ಅವರು ಭಾಗವಹಿಸುತ್ತಿದ್ದರು. ಬೆಳಗ್ಗೆ ತಮ್ಮ ಅಂಗಡಿಯಲ್ಲಿದ್ದಾಗ ಏಕಾಏಕಿ ಕುಸಿದು ಬಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದ ಸ್ವಲ್ಪ ಹೊತ್ತಿನಲ್ಲೇ ಸಾವನ್ನಪ್ಪಿದ್ದಾರೆ.
ಪತ್ನಿ ಹೇಮಾವತಿ, ಮಕ್ಕಳಾದ ಶೀತಲ್, ಸಿಂಧು, ಸಾಗರ್ ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ. ಶುಕ್ರವಾರ ಬೆಳಗ್ಗೆ 10ಕ್ಕೆ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸಂತಾಪ: ಪಿ. ನಾಗಭೂಷಣ್ ತೌಡೂರು ಅಕಾಲಿಕ ನಿಧನಕ್ಕೆ ಅಖೀಲ ಭಾರತ ವೀರಶೈವ ಮಹಾಸಭಾ, ಭಾರತ ಕಮ್ಯೂನಿಸ್ಟ್ ಪಕ್ಷ, ಕರ್ನಾಟಕ ಜನಮನ ವೇದಿಕೆ, ಅಖೀಲ ಕರ್ನಾಟಕ ವೀರಶೈವ ವೇದಿಕೆ ಜಿಲ್ಲಾ ಘಟಕ ಒಳಗೊಂಡಂತೆ ಅನೇಕ ಸಂಘ-ಸಂಸ್ಥೆ ಪದಾಧಿಕಾರಿಗಳು, ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಂತಾಪ ಸಭೆಯಲ್ಲಿ ಪಾಲ್ಗೊಂಡಿದ್ದ ಹಲವಾರು ಮುಖಂಡರು, ನಾಗಭೂಷಣ್ ತೌಡೂರು ಹಲವಾರು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ರಾಜಕೀಯ, ಧಾರ್ಮಿಕ, ಸಾಹಿತ್ಯದ ಸಭೆ, ಸಮಾರಂಭ, ಕನ್ನಡ ಪರ ಹೋರಾಟದಲ್ಲಿ ಭಾಗವಹಿಸುತ್ತಿದ್ದ ಅವರು ಎಲ್ಲರೊಂದಿಗೆ ಸಹೋದರ ಬಾಂಧವ್ಯ ಹೊಂದಿದ್ದರು ಎಂದು ಸ್ಮರಿಸಲಾಯಿತು.
ಹಿರಿಯ ಕಾರ್ಮಿಕ ಮುಖಂಡ ಎಚ್. ಕೆ. ರಾಮಚಂದ್ರಪ್ಪ, ಜಿ. ಶಿವಯೋಗಪ್ಪ, ನಾಗೇಂದ್ರ ಬಂಡೀಕರ್, ಎಂ. ಶಿವಕುಮಾರ್, ದೇವರಮನೆ ಶಿವಕುಮಾರ್ ಒಳಗೊಂಡಂತೆ ಅನೇಕರು ತೀವ್ರ ಕಂಬನಿ ಮಿಡಿದಿದ್ದಾರೆ.