Advertisement

ಯುವ ಜನರಲ್ಲಿ ಹೃದಯಾಘಾತ ಸುಳ್ಳೇ –ನಿಜವೇ?

08:38 PM Sep 25, 2021 | Team Udayavani |

ಜಾಗತಿಕವಾಗಿ ಮರಣಕ್ಕೆ ಪ್ರಮುಖ ಕಾರಣಗಳಲ್ಲಿ ಹೃದ್ರೋಗವೂ ಒಂದು. ಅವುಗಳಲ್ಲಿ ಹೃದಯ ರಕ್ತನಾಳಗಳ ಕಾಯಿಲೆ ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ ಪ್ರತೀ ದಿನವೂ 80 ಮಂದಿ ಹೃದಯಾಘಾತಕ್ಕೆ ಈಡಾಗಿ ಸಾವನ್ನಪ್ಪುತ್ತಾರೆ; ಇವರಲ್ಲಿ ಅರ್ಧಾಂಶದಷ್ಟು ಮಂದಿ 45 ವರ್ಷಕ್ಕಿಂತ ಕಿರಿಯರಾಗಿರುತ್ತಾರೆ. ಮಧುಮೇಹ, ಅಧಿಕ ರಕ್ತದೊತ್ತಡದಂತಹ ಅಪಾಯಾಂಶಗಳು ಇರುವ ಹಿರಿಯರಲ್ಲಿಯೇ ಹೃದಯಾಘಾತ ಸಂಭವಿಸುತ್ತದೆ ಎಂಬ ತಪ್ಪುಕಲ್ಪನೆಯೊಂದು ಸಾರ್ವಜನಿಕರಲ್ಲಿದೆ. ಆದರೆ ನಿಜಾಂಶ ಎಂದರೆ, ಯುವಜನತೆಗೂ ಈ ಅಪಾಯ ಅಷ್ಟೇ ಪ್ರಮಾಣದಲ್ಲಿದೆ. ಇದು ಯುವಜನರಿಗೆ ಎಚ್ಚರಿಕೆಯ ಘಂಟೆಯಾಗಿದ್ದು, ಇದಕ್ಕೆ ಕಾರಣಗಳ ಕುರಿತು ಯೋಚಿಸುವಂತೆ ಮಾಡುತ್ತದೆ. ಕಳೆದ ಕೆಲವು ವರ್ಷಗಳಿಂದೀಚೆಗೆ ಯುವಜನರು ಹೃದಯಾಘಾತಕ್ಕೆ ತುತ್ತಾಗುವ ಅಪಾಯ ಹೆಚ್ಚುತ್ತಿದ್ದು, 20 ವರ್ಷಗಳಷ್ಟು ಕಿರಿಯ ವಯಸ್ಸಿನವರೂ ಇದಕ್ಕೆ ಬಲಿಯಾಗುತ್ತಿದ್ದಾರೆ.
ಇದಕ್ಕೆ ಅತ್ಯಂತ ಪ್ರಧಾನವಾದ ಕಾರಣ ಎಂದರೆ, ಯುವಜನರಲ್ಲಿ ಧೂಮಪಾನ ಹೆಚ್ಚುತ್ತಿರುವುದು. ಯುವ ಜನರು ಅಗಾಧವಾದ ಒತ್ತಡಮಯ ಸನ್ನಿವೇಶದಲ್ಲಿ ಇರುವುದು ಇನ್ನೊಂದು ಕಾರಣ. ಮೂರನೆಯ ಕಾರಣವೆಂದರೆ, ದೈಹಿಕ ಚಟುವಟಿಕೆಗಳ ಕೊರತೆ ಮತ್ತು ಬೇಕಾಬಿಟ್ಟಿ, ಆಲಸ್ಯದ ಜೀವನಶೈಲಿ. ಭಾರತೀಯರಲ್ಲಿ ಬಹಳ ದೊಡ್ಡ ಜನಸಂಖ್ಯೆ ಬಹಳ ಸಣ್ಣವಯಸ್ಸಿನಲ್ಲಿಯೇ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟರಾಲ್‌ ಹೊಂದಿರುವುದು ಪತ್ತೆಯಾಗುತ್ತಿದೆ ಹಾಗೂ ಇದು ಹೃದಯ ರಕ್ತನಾಳಗಳ ಕಾಯಿಲೆ ಬೆಳವಣಿಗೆಯಾಗಲು ಪ್ರಧಾನ ಪಾತ್ರ ವಹಿಸುತ್ತದೆ.

Advertisement

ಭಾರತೀಯರಲ್ಲಿ ದೊಡ್ಡ ಜನಸಂಖ್ಯೆ ಆನುವಂಶಿಕವಾಗಿ ಹೃದ್ರೋಗಗಳಿಗೆ ತುತ್ತಾಗುವ ಅಪಾಯ ಹೊಂದಿರುತ್ತಾರೆ. ಆನುವಂಶಿಕ ಈ ಅಪಾಯವು ತಂದೆಯ ಕಡೆಯಿಂದ ಮಕ್ಕಳಿಗೆ ಬರುವ ಸಾಧ್ಯತೆಯು ತಾಯಿಯ ಕಡೆಯಿಂದ ಬರುವುದಕ್ಕಿಂತ ಹೆಚ್ಚು ಪ್ರಮಾಣದಲ್ಲಿದ್ದು, ತಮ್ಮ ಹಿಂದಿನ ತಲೆಮಾರಿಗಿಂತ 5-10 ವರ್ಷ ಮುಂಚಿತವಾಗಿಯೇ ಹೃದ್ರೋಗಗಳಿಗೆ ತುತ್ತಾಗುವ ಅಪಾಯವನ್ನು ಉಂಟು ಮಾಡುತ್ತದೆ. ಒತ್ತಡ, ಆತಂಕ ಮಯ ಬದುಕು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟರಾಲ್‌ ಉಂಟಾಗುವ ಅಪಾಯವನ್ನು ಇನ್ನೂ ಹೆಚ್ಚಿಸುತ್ತದೆ. ಇದರಿಂದಾಗಿ ಹೃದ್ರೋಗಗಳು ತಲೆದೋರುವ ಅಪಾಯ ವೃದ್ಧಿಸುತ್ತದೆ.

ಇದನ್ನೂ ಓದಿ:ಸಂಕೇಶ್ವರ: ನೂತನ ಬಸ್ ನಿಲ್ದಾಣ ಉದ್ಘಾಟಿಸಿದ ಮುಖ್ಯಮಂತ್ರಿ ಬೊಮ್ಮಾಯಿ

“ಕಾಯಿಲೆ ಬಾರದಂತೆ ತಡೆಯುವುದು ಬಂದ ಮೇಲೆ ಚಿಕಿತ್ಸೆ ನೀಡುವುದಕ್ಕಿಂತ ಉತ್ತಮ’ ಎಂಬ ಮಾತೊಂದಿದೆ. ಹೃದ್ರೋಗಗಳು ಉಂಟಾಗದಂತೆ ತಡೆಯುವ ಮಾರ್ಗೋಪಾಯ ಎಂದರೆ, ಅಪಾಯಾಂಶಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು. ನೀವು ಮಧುಮೇಹಿಯಾಗಿದ್ದರೆ ರಕ್ತದಲ್ಲಿ ಸಕ್ಕರೆಯ ಪ್ರಮಾಣದ ಬಗ್ಗೆ ಅತ್ಯಂತ ಎಚ್ಚರಿಕೆಯನ್ನು ವಹಿಸಿ ಮತ್ತು ಖಾಲಿ ಹೊಟ್ಟೆಯಲ್ಲಿ ಅದು ಯಾವುದೇ ಸಂದರ್ಭದಲ್ಲಿಯೂ 130ಕ್ಕಿಂತ, ಎಚ್‌ಬಿಎ 1ಸಿಯು 7.0ಕ್ಕಿಂತ ಹೆಚ್ಚದಂತೆ ನೋಡಿಕೊಳ್ಳಿ. ಅಧಿಕ ರಕ್ತದೊತ್ತಡ ಹೊಂದಿರುವ ಯುವಜನರು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಿ ಮತ್ತು ಬಹುತೇಕ ಸಂದರ್ಭಗಳಲ್ಲಿ ಅದು 130/90ರ ಒಳಗೆಯೇ ಇರುವಂತೆ ನಿಗಾ ಇರಿಸಿಕೊಳ್ಳಿ. ಅಧಿಕ ಕೊಲೆಸ್ಟರಾಲ್‌ ಅಂಶವೂ ಕಳವಳಕಾರಿಯಾಗಿದ್ದು, ನಿಮ್ಮ ಕುಟುಂಬದಲ್ಲಿ ಈ ಸಮಸ್ಯೆ ಇದ್ದರೆ ಇನ್ನಷ್ಟು ಎಚ್ಚರಿಕೆ ವಹಿಸಬೇಕು. ಇಂತಹ ಪ್ರಕರಣಗಳಲ್ಲಿ ವರ್ಷಕ್ಕೊಂದು ಬಾರಿ ಲಿಪಿಡ್‌ ಪ್ರೊಫೈಲ್‌ ಚೆಕಪ್‌ ಮಾಡಿಸಿಕೊಳ್ಳಬೇಕು ಮತ್ತು ಸಮರ್ಪಕವಾಗಿ ವೈದ್ಯರ ಸಲಹೆ ಪಡೆಯಬೇಕು.

ನೀವು ಆರೋಗ್ಯವಂತರಾಗಿದ್ದು, ಮೇಲೆ ಹೇಳಲಾದ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದರೆ ನೀವು ಪ್ರತೀದಿನ 30ರಿಂದ 45 ನಿಮಿಷಗಳಂತೆ ವಾರಕ್ಕೆ ಕನಿಷ್ಠ ಐದು ದಿನಗಳ ಕಾಲ ವ್ಯಾಯಾಮ – ದೈಹಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಸದೃಢತೆಯನ್ನು ಕಾಪಾಡಿಕೊಳ್ಳಬೇಕು. ಸೈಕಲ್‌ ಸವಾರಿ, ಓಡುವುದು, ಈಜು ಇತ್ಯಾದಿ ದೈಹಿಕ ಚಟುವಟಿಕೆಗಳು ಹೃದಯದ ಆರೋಗ್ಯಕ್ಕೆ ಉತ್ತಮ.

Advertisement

ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ದಿನಕ್ಕೆ ಒಂದು ಸಿಗರೇಟು ಸೇದುವ ಅಭ್ಯಾಸ ಇರಿಸಿಕೊಂಡರೂ ಹೃದಯಾಘಾತಕ್ಕೆ ತುತ್ತಾಗುವ ಅಪಾಯವಿರುತ್ತದೆ. ಮಾನಸಿಕ ಆರೋಗ್ಯದ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಿ ಮತ್ತು ಒತ್ತಡ ಉಂಟಾಗದಂತೆ ನೋಡಿಕೊಳ್ಳಿ. ದೈನಿಕ ಆಹಾರದಲ್ಲಿ ತಾಜಾ ತರಕಾರಿಗಳು ಮತ್ತು ಹಣ್ಣುಹಂಪಲುಗಳು ಹಾಗೂ ಅನ್‌ಸ್ಯಾಚುರೇಟೆಡ್‌ ಫ್ಯಾಟಿ ಆ್ಯಸಿಡ್‌ಗಳು ಮತ್ತು ಎಣ್ಣೆಗಳ ಬಳಕೆ ಉತ್ತಮ. ಇದೇವೇಳೆ ಗೋಮಾಂಸ ಮತ್ತು ಅದರ ಉತ್ಪನ್ನಗಳನ್ನು ವರ್ಜಿಸುವುದು, ಉಪ್ಪು ಸೇವನೆಯನ್ನು ಕಡಿಮೆ ಮಾಡುವುದು ಹಾಗೂ ಸಾಫ್ಟ್ ಡ್ರಿಂಕ್‌ಗಳಂತಹ ಸಕ್ಕರೆ ಬೆರೆತ ಪಾನೀಯಗಳನ್ನು ದೂರ ಮಾಡುವುದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವ ಉತ್ತಮ ಹವ್ಯಾಸಗಳು.

-ಡಾ| ಎಂ. ಸುಧಾಕರ ರಾವ್‌
ಅಸೋಸಿಯೇಟ್‌ ಪ್ರೊಫೆಸರ್‌, ಕಾರ್ಡಿಯಾಲಜಿ ವಿಭಾಗ,
ಕೆಎಂಸಿ, ಮಣಿಪಾಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next