Advertisement

ಬೈಕ್‌ ಸಂಚಾರದಲ್ಲೇ ಹೃದಯಾಘಾತ; ಮುಖ್ಯ ಶಿಕ್ಷಕ ಸಾವು

01:25 AM Mar 15, 2019 | |

ಶಿರ್ವ: ಬೈಕಿನಲ್ಲಿ ಉಡುಪಿಗೆ ತೆರಳುತ್ತಿದ್ದ ಮುಖ್ಯ ಶಿಕ್ಷಕ ದಾರಿ ಮಧ್ಯೆ ಹೃದಯಾಘಾತವಾಗಿ ಮೃತಪಟ್ಟ ದಾರುಣ ಘಟನೆ ಶಂಕರಪುರದ ಸಾಲ್ಮರ ಬಳಿ ಗುರುವಾರ ಮಧ್ಯಾಹ್ನ ಸಂಭವಿಸಿದೆ.

Advertisement

ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಚೋಮ ನಾಯ್ಕ (46) ಅವರು  ಮಧ್ಯಾಹ್ನ 1.30ರ ವೇಳೆಗೆ ಕರ್ತವ್ಯ ನಿಮಿತ್ತ  ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ  ತೆರಳುತ್ತಿದ್ದರು.  ಶಂಕರಪುರ ಸಾಲ್ಮರದ ಬರೋಡಾ ಬ್ಯಾಂಕ್‌ ಬಳಿ ತೀವ್ರ ಎದೆನೋವು ಕಾಣಿಸಿಕೊಂಡಿದ್ದು,ಕೂಡಲೇ ಬೈಕ್‌ ನಿಲ್ಲಿಸಿ  ಕೂಗಿ ಕೊಂಡರು. ಬಳಿ ಕ ವಾಂತಿ  ಮಾಡಿದ್ದ ಅವರನ್ನು   ಸ್ಥಳೀಯರು   ಉಪಚರಿಸಿ  ಆ್ಯಂಬುಲೆನ್ಸ್‌ನಲ್ಲಿ ಶಿರ್ವ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿದೆ.

ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಜಿ.ಪಂ.ಸದಸ್ಯ ವಿಲ್ಸನ್‌ ರೊಡ್ರಿಗಸ್‌, ತಾ.ಪಂ.ಸದಸ್ಯೆ ಗೀತಾ ವಾಗ್ಲೆ,  ಶಾಲಾಡಳಿತ ಮಂಡಳಿ ಅಧ್ಯಕ್ಷ ಮಂಜುನಾಥ್‌ ನಾಯಕ್‌, ಸಂಚಾಲಕ ಶಶಿಧರ ವಾಗ್ಲೆ, ಗ್ರಾ.ಪಂ.ಸದಸ್ಯ ಕೆ.ಆರ್‌.ಪಾಟ್ಕರ್‌, ನಿವೃತ್ತ ಮುಖ್ಯಶಿಕ್ಷಕ ಎನ್‌. ರಾಧಾಕೃಷ್ಣ ಪ್ರಭು, ಶಾಲಾ ಶಿಕ್ಷಕವೃಂದ ಶಿರ್ವ ಸಮುದಾಯ ಕೇಂದ್ರಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.  ಶಿರ್ವ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. 

ಕಾಸರಗೋಡಿನವರು 
ಮೂಲತಃ ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆ ಕುರಿಯತಡ್ಕ ನಿವಾಸಿಯಾಗಿದ್ದ ಅವರು ಬೆಳ್ಮಣ್‌ ಜಂತ್ರ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮೃತರು ಗೌರವ ಶಿಕ್ಷಕಿಯಾಗಿ ರುವ  ಪತ್ನಿ ಮತ್ತು ಎರಡನೇ ತರಗತಿ ಓದುತ್ತಿರುವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಬಂಟಕಲ್ಲು ಶಾಲೆಯಲ್ಲಿ  8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು,4 ವರ್ಷಗಳಿಂದ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ಪೆರ್ಣಂಕಿಲ ಸಮೀಪದ  ಪಟ್ಲ ಶಾಲೆಯಲ್ಲಿ ಶಿಕ್ಷಕರಾಗಿದ್ದು, ಹೆಚ್ಚುವರಿ ಶಿಕ್ಷಕರಾಗಿ ಬಂಟಕಲ್ಲು ಶಾಲೆಗೆ ವರ್ಗಾವಣೆಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next