Advertisement

Health: ತಿಂಗಳೊಳಗೆ ಹೊಸ ಡಯಾಲಿಸಿಸ್‌ ಯಂತ್ರ, ತಂತ್ರಜ್ಞರ ನೇಮಕ

11:23 PM Dec 07, 2023 | Team Udayavani |

ಬೆಳಗಾವಿ: ಒಂದು ತಿಂಗಳಲ್ಲಿ ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಹೊಸ ಡಯಾಲಿಸಿಸ್‌ ಯಂತ್ರಗಳು ಬರುವುದರ ಜತೆಗೆ ತಂತ್ರಜ್ಞರನ್ನೂ ನಿಯೋಜಿಸಲಾಗುವುದು. ಜತೆಗೆ ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಡಯಾಲಿಸಿಸ್‌ ಸೇವೆಯನ್ನೂ ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ (ಎಬಿಆರ್‌ಕೆ) ಯೋಜನೆಗೆ ಒಳಪಡಿಸುವ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

Advertisement

ವಿಧಾನಸಭೆಯಲ್ಲಿ ಗುರುವಾರ ಪ್ರಶ್ನೋತ್ತರ ಕಲಾಪದಲ್ಲಿ ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಸೇವೆ ಪಡೆಯುವವರ ಸಂಖ್ಯೆ ಹೆಚ್ಚಿದ್ದು, ರೋಗಿಗಳ ಅನುಕೂಲಕ್ಕಾಗಿ ಖಾಸಗಿ ಆಸ್ಪತ್ರೆಗಳಲ್ಲಿ ನೀಡಲಾಗುವ ಡಯಾಲಿಸಿಸ್‌ ಸೇವೆಯನ್ನು ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಯೋಜನೆ ಅಡಿ ತರಲು ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಲಾಗುವುದು ಎಂದರು.

ಈ ಮಧ್ಯೆ ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಈ ಹಿಂದೆ ಡಯಾಲಿಸಿಸ್‌ ಘಟಕಗಳನ್ನು ನಿರ್ವಹಿಸುತ್ತಿದ್ದ ಏಜೆನ್ಸಿಯನ್ನು ಅಸಮರ್ಪಕ ನಿರ್ವಹಣೆ ಹಿನ್ನೆಲೆಯಲ್ಲಿ ದಂಡ ವಿಧಿಸುವುದರೊಂದಿಗೆ ಕಪ್ಪುಪಟ್ಟಿಗೆ ಸೇರಿಸಲಾಗಿದ್ದು, ಹೊಸದಾಗಿ ನಿರ್ವಹಿಸುವ ಸಂಬಂಧ ಬೆಂಗಳೂರು, ಮೈಸೂರು ಮತ್ತು ಬೆಳಗಾವಿಯಲ್ಲಿ ಕರೆಯಲಾಗಿದ್ದ ಟೆಂಡರ್‌ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದೆ ಎಂದು ತಿಳಿಸಿದರು.

ಹೊಸ ಸಂಸ್ಥೆ ನಿರ್ವಹಣೆಯ ಜವಾಬ್ದಾರಿ ಪಡೆಯುವವರೆಗೆ ಜಿಲ್ಲಾ ಆರೋಗ್ಯ ಕುಟುಂಬ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಡಯಾಲಿಸಿಸ್‌ ಘಟಕಗಳು ಕಾರ್ಯನಿರ್ವಹಿಸಲಿವೆ. ಹೊಸ ಟೆಂಡರ್‌ನಲ್ಲಿ ಏಕ ಬಳಕೆಯ ಡಯಾಲಿಸಿಸ್‌ ಯಂತ್ರಗಳನ್ನು ಅಳವಡಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಸ್ವತ್ಛತೆ ಹಾಗೂ ನಿರ್ವಹಣೆ ಕಾರ್ಯಭಾರ ತಪ್ಪಲಿದೆ ಎಂದು ಸ್ಪಷ್ಟಪಡಿಸಿದರು. ರಾಜ್ಯಾದ್ಯಂತ ಇದ್ದ 168 ಡಯಾಲಿಸಿಸ್‌ ಘಟಕಗಳನ್ನು 219ಕ್ಕೆ ಏರಿಸಲಾಗಿದೆ. 649 ಇದ್ದ ಯಂತ್ರಗಳು 800ಕ್ಕೆ ಏರಿಕೆ ಆಗಿವೆ. 59 ತಾಲೂಕುಗಳ ಪೈಕಿ 48 ತಾಲೂಕುಗಳಲ್ಲಿ ತಾಲೂಕು ಆರೋಗ್ಯ ಕೇಂದ್ರಗಳು ಇಲ್ಲ. ಹಾಗಾಗಿ 48 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯೇ ಡಯಾಲಿಸಿಸ್‌ ಘಟಕಗಳನ್ನು ತರೆಯಲಾಗಿದೆ ಎಂದರು.

ಉಡುಪಿಯಲ್ಲಿ 10 ಯಂತ್ರ ದುರಸ್ತಿಯಲ್ಲಿ: ಯಶ್‌ಪಾಲ್‌
ಇದಕ್ಕೂ ಮುನ್ನ ಮಾತನಾಡಿದ ಯಶ್‌ಪಾಲ್‌ ಸುವರ್ಣ, ಉಡುಪಿ ಜಿಲ್ಲಾಸ್ಪತ್ರೆಯ 11 ಡಯಾಲಿಸಿಸ್‌ ಯಂತ್ರಗಳಲ್ಲಿ ಹತ್ತು ದುರಸ್ತಿಯಲ್ಲಿದ್ದು, ಗುತ್ತಿಗೆ ವಹಿಸಿಕೊಂಡ ಏಜೆನ್ಸಿ ಸಿಬಂದಿ ಕೂಡ ಸ್ಪಂದಿಸದಿರುವುದರಿಂದ ರೋಗಿಗಳು ಪರದಾಡುವಂತಾಗಿದೆ ಎಂದರು. ದನಿಗೂಡಿಸಿದ ವಿಪಕ್ಷ ನಾಯಕ ಆರ್‌.ಅಶೋಕ್‌, ಡಯಾಲಿಸಿಸ್‌ ಘಟಕಗಳ ತಂತ್ರಜ್ಞರ ಧರಣಿಯಿಂದಾಗಿ ಚಿಕಿತ್ಸೆ ದೊರಕದೆ ರೋಗಿಯೊಬ್ಬ ಮರಣ ಹೊಂದಿದ್ದಾರೆ. ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

Advertisement

ಗುತ್ತಿಗೆ ಆಧಾರದಲ್ಲಿ ವೈದ್ಯರ ಭರ್ತಿ
ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆ ನೀಗಿಸಲು ಗ್ರಾಮೀಣ ಕಡ್ಡಾಯ ಸೇವೆ ಅಡಿ ತಿಂಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿರುವ ಎಲ್ಲ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲಾಗುವುದು ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು. ಕಾಂಗ್ರೆಸ್‌ ಶಾಸಕ  ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 461 ಜಿಡಿಎಂಒ (ಜನರಲ್‌ ಡ್ನೂಟಿ ಮೆಡಿಕಲ್‌ ಆಫೀಸರ್‌)ಗಳನ್ನು ಮುಂದಿನ ಒಂದು ವರ್ಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು. ಇದಕ್ಕೂ ಮುನ್ನ ತಾತ್ಕಾಲಿಕ ಪರಿಹಾರವಾಗಿ ಗ್ರಾಮೀಣ ಕಡ್ಡಾಯ ಸೇವೆ ಅಡಿ ವೈದ್ಯರ ನಿಯೋಜನೆ ಮಾಡಲಾಗುವುದು ಎಂದರು.

160 ಕಡೆ ಸಮುದಾಯ ಆರೋಗ್ಯ ಕೇಂದ್ರ
ರಾಜ್ಯದಲ್ಲಿ ಇನ್ನೂ 160 ಕಡೆಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳನ್ನು ತೆರೆಯುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಸರಕಾರ ಒತ್ತುನೀಡುತ್ತಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು. ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿ ಸಚಿವರು ಈ ಮಾಹಿತಿ ನೀಡಿದರು.

ಸ್ಥಳೀಯ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಅಡಿ ಕೆಲವು ಸಂಸ್ಥೆಗಳು, ದಾನಿಗಳಿಂದ ಡಯಾಯಲಿಸಿಸ್‌ ಯಂತ್ರಗಳನ್ನು ತರಿಸಲಾಗುವುದು. ಸರಕಾರ ಇವುಗಳ ನಿರ್ವಹಣೆಗೆ ತಂತ್ರಜ್ಞರನ್ನು ನೇಮಿಸಬೇಕು. ರಾಷ್ಟ್ರೀಯ ಬ್ಯಾಂಕುಗಳು ಕೂಡ ಪ್ರತಿ ಜಿಲ್ಲೆಗೂ ಐದು ಡಯಾಲಿಸಿಸ್‌ ಯಂತ್ರಗಳನ್ನು ನೀಡುವಂತೆ ಸರಕಾರ ಮನವಿ ಮಾಡಬೇಕು.
-ಸುನೀಲ್‌ ಕುಮಾರ್‌, ಶಾಸಕ

ಸರಕಾರಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಸೇವೆ ಪಡೆಯುವ ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಡಯಾಲಿಸಿಸ್‌ ಮುಗಿಸಿಕೊಂಡು ಹೋಗುವಾಗ ಮಧ್ಯರಾತ್ರಿ ಆಗುತ್ತಿದೆ. ಆದ್ದರಿಂದ ಖಾಸಗಿಯಲ್ಲೂ ಈ ಸೇವೆ ಪಡೆಯಲು ಆರೋಗ್ಯ ಕರ್ನಾಟಕದಡಿ ಅವಕಾಶ ಕಲ್ಪಿಸಬೇಕು.      -ವೇದವ್ಯಾಸ ಕಾಮತ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next