Advertisement

Black Pepper; ಮನೆಮದ್ದು … ಹಲವು ಆರೋಗ್ಯ ಸಮಸ್ಯೆಗಳಿಗೆ ಕಾಳುಮೆಣಸು ರಾಮಬಾಣ

04:27 PM Sep 25, 2023 | Team Udayavani |

ನಾವು ಆರೋಗ್ಯವಾಗಿರಬೇಕೆಂದರೆ ನಾವು ಸೇವಿಸುವ ಆಹಾರಗಳು ಆರೋಗ್ಯಯುತವಾಗಿರಬೇಕು. ಅಂಥ ಆಹಾರಗಳಲ್ಲಿ ಕಾಳು ಮೆಣಸು ಅಥವಾ ಕರಿಮೆಣಸು ಕೂಡ ಒಂದು. ‘ಕಾಳುಮೆಣಸಿನ ಆಕಾರ, ಗಾತ್ರ ಚಿಕ್ಕದಾದರೂ, ಆಹಾರ, ಆರೋಗ್ಯದಲ್ಲಿ ಇದರ ಪಾತ್ರ ದೊಡ್ಡದು’.

Advertisement

ಮಸಾಲೆ ಪದಾರ್ಥಗಳಲ್ಲಿ ಒಂದಾದ ಕಾಳುಮೆಣಸು ಆಹಾರದ ರುಚಿ ಹೆಚ್ಚಿಸುವುದರೊಂದಿಗೆ ಆರೋಗ್ಯಕ್ಕೂ ಉಪಯುಕ್ತವಾಗಿದೆ. ಆಯುರ್ವೇದದಲ್ಲೂ ಇದನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ಅಡುಗೆಯಲ್ಲಿ ಖಾರಕ್ಕಾಗಿ ಬಳಸುವ ಪದಾರ್ಥಗಳಲ್ಲಿ ಕಾಳುಮೆಣಸು ಕೂಡ ಒಂದು. ಮೆಣಸಿನ ಪುಡಿ ಬದಲು ಕಾಳುಮೆಣಸು ಅಥವಾ ಕರಿಮೆಣಸು ಬಳಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ.

ಕರಿಮೆಣಸು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕಾಳುಮೆಣಸು ಕ್ಯಾಲ್ಶಿಯಂ, ಸೋಡಿಯಂ, ಪೊಟ್ಯಾಶಿಯಂ, ವಿಟಾಮಿನ್ ಎ, ವಿಟಮಿನ್ ಕೆ, ಇನ್ನಿತರ ಖನಿಜ ಲವಣಗಳು ಒಳಗೊಂಡಿದೆ. ಕಾಳುಮೆಣಸು ಆಹಾರದ ರುಚಿಗೆ ಮಾತ್ರವಲ್ಲದೆ ಇನ್ನೂ ಸಾಕಷ್ಟು ಉಪಯೋಗಗಳು ಇದರಲ್ಲಿವೆ. ಅವುಗಳ ಬಗ್ಗೆ ಹೆಚ್ಫ್ಚಿನ ಮಾಹಿತಿ ತಿಳಿದುಕೊಳ್ಳಲು ಮುಂದೆ ಓದಿ.

ಅಧಿಕ ರಕ್ತದೊತ್ತಡ :

ಕಾಳುಮೆಣಸು ದೇಹದಲ್ಲಿರುವ ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ರಕ್ತ ಪರಿಚಲನೆಯನ್ನು ನಿಯಂತ್ರಿಸುವಲ್ಲಿ ಸಹಾಯಕಾರಿಯಾಗಿದೆ.

Advertisement

ಕ್ಯಾನ್ಸರ್ ತಡೆಯಲು:

ಕಾಳುಮೆಣಸಿನಲ್ಲಿರುವ ‘ಪೈಪರ್ ಲೈನ್’ ಎಂಬ ಅಂಶ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಾಳುಮೆಣಸಿನೊಂದಿಗೆ ಅರಿಶಿಣ ಸೇರಿಸಿ ಬಳಸಿದರೆ ಅದರಲ್ಲಿ ಆಂಟಿಕ್ಯಾನ್ಸರ್ ಗುಣ ಹೆಚ್ಚಿರುತ್ತದೆ . ಕಾಳುಮೆಣಸಿನಲ್ಲಿರುವ ‘ಪೈಪರ್ ಲೈನ್’ ಅಂಶದೊಂದಿಗೆ ವಿಟಮಿನ್ ಸಿ, ವಿಟಮಿನ್ ಎ,ಕ್ಯಾರೋಟಿನ್ಸ್, ಫ್ಲವೋನೈಡ್ ಮುಂತಾದವುಗಳು ಕ್ಯಾನ್ಸರ್ ಮತ್ತು ಇನ್ನಿತರ ಕಾಯಿಲೆಗಳು ಬರದಂತೆ ತಡೆಯಲು ಸಹಕರಿಸುತ್ತದೆ. ಅಧ್ಯಯನಗಳ ಪ್ರಕಾರ ಕಾಳುಮೆಣಸಿನಲ್ಲಿ ಸಣ್ಣ ಕರುಳು, ದೊಡ್ಡ ಕರುಳಿನ ಕ್ಯಾನ್ಸರ್, ಚರ್ಮದ ಕ್ಯಾನ್ಸರ್ ಮುಂತಾದವುಗಳನ್ನು ತಡೆಗಟ್ಟುವ ಗುಣಗಳಿವೆ.

ತೂಕ ಕಳೆದುಕೊಳ್ಳಲು:

ಆಹಾರಕ್ಕೆ ಸರಿಯಾದ ಪೋಷಕಾಂಶಗಳನ್ನು ಹೊರತೆಗೆಯಲು ಕಾಳುಮೆಣಸು ಸಹಕರಿಸುತ್ತದೆ.ಇದರಲ್ಲಿರುವ ಫೈಟೋನ್ಯೂಟ್ರಿಯೆಂಟ್ಸ್ ಎಂಬ ಅಂಶ ದೇಹದಲ್ಲಿರುವ ಹೆಚ್ಚಿನ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಅದರ ಜೊತೆಗೆ ದೇಹದ ಕಲ್ಮಶವನ್ನು, ಹೆಚ್ಚುವರಿ ನೀರನ್ನು ಹೊರಹಾಕಲು ಮೂತ್ರ ವಿಸರ್ಜನೆ ಹಾಗು ಬೆವರು ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಇದರಿಂದ ದೇಹದ ತೂಕ ಕಡಿಮೆ ಆಗಲು ಸಹಾಯಕವಾಗಿದೆ. ಆಹಾರ ಪದಾರ್ಥಗಳ ಮೇಲೆ ಕಾಳುಮೆಣಸಿನ ಪುಡಿ ಬಳಸುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಅತೀ ಆದರೆ ಅಮೃತವೂ ವಿಷ ಎಂಬಂತೆ ಹೆಚ್ಚು ಖಾರ ತಿನ್ನಬೇಡಿ. ಇದರಿಂದ ಇತರ ತೊಂದರೆಗಳು ಕಾಣಿಸಿಕೊಳ್ಳಬಹುದು.

ಜೀರ್ಣಕ್ರಿಯೆಗೆ:

ಜೀರ್ಣಶಕ್ತಿ ಹಾಗೂ ಹಸಿವು ಹೆಚ್ಚಿಸಲು ಇದರ ಚೂರ್ಣವನ್ನು ಮಜ್ಜಿಗೆಯೊಂದಿಗೆ ಸೇವಿಸಬೇಕು. ಕರಿಮೆಣಸಿನಲ್ಲಿ ಜೀರ್ಣಕಾರಿ ಅಂಶವಿದ್ದು ಇದು ದೇಹದಲ್ಲಿನ ಜೀರ್ಣ ವ್ಯವಸ್ಥೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಕಾಳುಮೆಣಸಿನಲ್ಲಿರುವ ‘ಪೈಪರ್ ಲೈನ್’ ಎಂಬ ಅಂಶ ಜೀರ್ಣಕ್ರಿಯೆ ಹೆಚ್ಚಿಸಲು ಸಹಕಾರಿಯಾಗಿದೆ. ನಿತ್ಯವೂ ಕಾಳುಮೆಣಸು ತಿಂದರೆ ಜೀರ್ಣ ಕ್ರಿಯೆ ಸರಾಗವಾಗಿ ಆಗುತ್ತದೆ. ಅಜೀರ್ಣತೆಯಿಂದ ಹೊಟ್ಟೆ ನೋವು ಬರುತ್ತಿದ್ದರೆ ಮಜ್ಜಿಗೆಯಲ್ಲಿ ಕರಿಮೆಣಸು ಹಾಕಿ ಕುಡಿದರೆ ಅಜೀರ್ಣತೆ ನಿವಾರಣೆ ಆಗುತ್ತದೆ.

ಗ್ಯಾಸ್ಟ್ರಿಕ್ ಸಮಸ್ಯೆ:

ಕಾಳುಮೆಣಸಿನಲ್ಲಿರುವ ಒಂದು ಅಂಶ ಹೊಟ್ಟೆಯಲ್ಲಿ ಗ್ಯಾಸ್ ಗೆ ಸಂಬಂಧಿಸಿದ ನೋವುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಅಡುಗೆ ಪದಾರ್ಥಗಳಲ್ಲಿ ಮೆಣಸಿನ ಪುಡಿ ಬದಲು ಕಾಳುಮೆಣಸನ್ನು ಬಳಸುವುದರಿಂದ ಹೊಟ್ಟೆ ಉಬ್ಬರ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ತಡೆಯಬಹುದು. ಖಾರ ಮತ್ತು ಕಹಿ ಗುಣವನ್ನು ಹೊಂದಿರುವ ಇದು ಕಫ, ವಾತ ದೋಷಗಳನ್ನು ಕಡಿಮೆ ಮಾಡುತ್ತದೆ ಎನ್ನಲಾಗುತ್ತದೆ.

ಶೀತ, ಕಫ, ಕೆಮ್ಮು, ಜ್ವರ :

ಬ್ಯಾಕ್ಟೀರಿಯ ವಿರುದ್ಧ ಹೋರಾಡುವ ಗುಣ ಇದರಲ್ಲಿರುವುದರಿಂದ ಕೆಮ್ಮು ಮತ್ತು ಶೀತಕ್ಕೆ ಕಾಳುಮೆಣಸು ಪರಿಹಾರ ನೀಡುತ್ತದೆ. ಕಾಳುಮೆಣಸಿನಲ್ಲಿರುವ ಖಾರದ ಅಂಶ ಕಟ್ಟಿದ ಮೂಗನ್ನು ಸರಿಯಾಗಿಸುತ್ತದೆ. ಕೆಮ್ಮು ಮತ್ತು ಕಫ ನಿವಾರಣೆಗೆ ಜೇನಿನೊಂದಿಗೆ ಕರಿಮೆಣಸು ಸೇವಿಸುವುದು ಸೂಕ್ತ ಪರಿಹಾರ. ಕರಿಮೆಣಸುಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಅಂಶಗಳಿದ್ದು, ಸಾಂಕ್ರಾಮಿಕ ಸೋಂಕು ಮತ್ತು ಅದರ ಹರಡುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.

ತುಳಸಿಯೊಂದಿಗೆ ಕಾಳುಮೆಣಸಿನ ಪುಡಿ ಸೇರಿಸಿ ಕಷಾಯ ಮಾಡಿ ಕುಡಿಯುವುದರಿಂದ ನೆಗಡಿ, ಜ್ವರ ಕಡಿಮೆಯಾಗುತ್ತದೆ. ಜೀರಿಗೆ, ಶುಂಠಿಯೊಂದಿಗೆ ಕಾಳುಮೆಣಸನ್ನು ಸಮಪ್ರಮಾಣದಲ್ಲಿ ಸೇರಿಸಿ ಕಷಾಯ ಮಾಡಿ ಸೇವಿಸಿದರೆ, ಗಂಟಲು ಕೆರೆತ, ಗಂಟಲು ನೋವು, ಕೆಮ್ಮು ನಿವಾರಣೆಯಾಗುತ್ತದೆ.

ಹಲ್ಲು ನೋವು:

ಹಲ್ಲುನೋವಿದ್ದರೆ ಕಾಳುಮೆಣಸಿನ ಪುಡಿಯೊಂದಿಗೆ, ಸ್ವಲ್ಪ ಉಪ್ಪನ್ನು ಸೇರಿಸಿ ನೋವಿನ ಜಾಗದಲ್ಲಿಟ್ಟರೆ ಕಡಿಮೆಯಾಗುತ್ತದೆ.

ಹಾರ್ಮೋನ್ ಅಸಮತೋಲನ:

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಮೆಣಸನ್ನು ಜಗಿಯುವ ಅಥವಾ ಅದರ ಟೀ ಮಾಡಿ ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ. ಹೀಗೆ ಮಾಡುವುದರಿಂದ ಹಾರ್ಮೋನುಗಳು ಸಮತೋಲನದಲ್ಲಿರಲಿವೆ. ಹೆಣ್ಣುಮಕ್ಕಳಿಗೆ ಪಿರಿಯಡ್ಸ್‌ ಆಗಲು ಇದು ಸಹಕಾರಿಯಾಗಲಿದೆ.

ಸಂಧಿವಾತ ನಿವಾರಣೆ:

ಒಂದು ಚಿಟಿಕೆ ಒಣ ಶುಂಠಿ, ಕರಿಮೆಣಸನ್ನು ಹಾಲಿನೊಂದಿಗೆ ಬೆರೆಸಿ ಮಲಗುವ ಸಮಯದಲ್ಲಿ ತೆಗೆದುಕೊಳ್ಳುವುದರಿಂದ ಸಂಧಿವಾತ ನಿವಾರಣೆ ಸಹಕಾರಿಯಾಗಲಿದೆ.

ಮಧುಮೇಹ ನಿಯಂತ್ರಣ:

ಪ್ರತಿನಿತ್ಯ ನಿಯಮಿತವಾಗಿ ಕಾಳುಮೆಣಸು ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರಲಿದೆ.

*ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next