Advertisement

ಹಿತಮಿತವಾಗಿ ಬಳಸಿ: ಆರೋಗ್ಯಕ್ಕೆ ಅಮೃತ ಈ ಅಮೃತಬಳ್ಳಿ

05:46 PM Feb 28, 2023 | ಕಾವ್ಯಶ್ರೀ |

ಅಮೃತಬಳ್ಳಿ ಒಂದು ಔಷಧೀಯ ಸಸ್ಯ. ಇದು ನಮ್ಮ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಔಷಧೀಯ ಬಳ್ಳಿ. ಈ ಸಸ್ಯದ ಎಲೆಗಳು ಹೃದಯಾಕಾರವನ್ನು ಹೊಂದಿರುತ್ತವೆ. ಇದರ ಕಾಂಡ, ಎಲೆ, ಬೇರು ಎಲ್ಲವೂ ಔಷಧೀಯ ಗುಣ ಹೊಂದಿವೆ.
ಇದನ್ನು ಭಾರತೀಯ ವೈದ್ಯಕೀಯ ಲೋಕದಲ್ಲಿ ಹಲವು ವರ್ಷಗಳಿಂದ ಬಳಸಲಾಗುತ್ತಿದೆ.

Advertisement

ಅಮೃತಬಳ್ಳಿ ಹೇರಳವಾದ ಔಷಧಿಯ ಗುಣಗಳನ್ನು ಹೊಂದಿದೆ. ಸಾಂಕ್ರಾಮಿಕ ಸೋಂಕು, ಮಧುಮೇಹ, ಹೀಗೆ ಅನೇಕ ರೋಗ ಲಕ್ಷಣಗಳನ್ನು ಮೊಳಕೆಯಲ್ಲಿಯೇ ಶಮನ ಮಾಡುವ ಶಕ್ತಿ ಅಮೃತಬಳ್ಳಿ ಹೊಂದಿದೆ. ಇದು ತ್ರಿದೋಷಗಳಿಂದ (ಅಂದರೆ ವಾತ, ಪಿತ್ತ, ಕಫ) ಉಂಟಾದ ತೊಂದರೆಗಳನ್ನು ನಿವಾರಿಸುತ್ತದೆ. ಎಲ್ಲ ಬಗೆಯ ಜ್ವರಗಳಿಗೂ ಅಮೃತ ಬಳ್ಳಿ ಪರಿಣಾಮಕಾರಿ ಔಷಧಿಯಾಗಿದೆ.
ಅಮೃತ ಬಳ್ಳಿಯ ಎಲೆಗಳು ನಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪ್ರಯೋಜನ ನೀಡುತ್ತದೆ ಎಂಬದರ ಬಗ್ಗೆ ಮಾಹಿತಿ ಇಲ್ಲಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಳ:
ಅಮೃತ ಬಳ್ಳಿ ಹಲವಾರು ರೋಗಗಳು ಬಾರದಂತೆ ನಿಯಂತ್ರಿಸುತ್ತದೆ. ಇದು ರೋಗ ನಿರೋಧಕ ಶಕ್ತಿ ಹೊಂದಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಶಕ್ತಿಯ ಕೇಂದ್ರವಾಗಿದ್ದು, ನಮ್ಮ ಕೋಶಗಳನ್ನು ಆರೋಗ್ಯಕರವಾಗಿರಿಸಿ ರೋಗಗಳನ್ನು ದೂರ ಮಾಡುತ್ತದೆ. ಇದು ರಕ್ತವನ್ನು ಶುದ್ಧೀಕರಿಸಿ, ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ.

ಜೀರ್ಣಕ್ರಿಯೆ ಸುಧಾರಣೆ:
ಅಮೃತಬಳ್ಳಿಯನ್ನು ಆಗಾಗ ಸೇವನೆ ಮಾಡುವುದು ಜೀರ್ಣಕ್ರಿಯೆ ಸುಧಾರಿಸಲು ಮತ್ತು ಕರುಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಉತ್ತಮ ಔಷದಿ. ಅಮೃತ ಬಳ್ಳಿಯ ಎಲೆಗಳನ್ನು ಬೆಲ್ಲದ ಜೊತೆ ಸೇರಿಸಿ ಸೇವನೆ ಮಾಡಿ. ಹೀಗೆ ಮಾಡುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ದೂರವಾಗುತ್ತದೆ. ಹೊಟ್ಟೆ ಉಬ್ಬರ, ಹೊಟ್ಟೆ ಕಿವುಚಿದಂತಾಗುವುದು, ಹೊಟ್ಟೆ ಉರಿಯಂತಹ ಸಮಸ್ಯೆಗಳನ್ನು ನಿವಾರಿಸಲು ಕೂಡ ಸಹಕಾರಿಯಾಗಿದೆ.

ಹೃದಯದ ಆರೋಗ್ಯ ಸುಧಾರಣೆ:
ಹೃದಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಅಮೃತ ಬಳ್ಳಿ ನಿವಾರಿಸುತ್ತದೆ. ಅನಿರೀಕ್ಷಿತವಾಗಿ ಹೆಚ್ಚುವ ಹೃದಯ ಬಡಿತ ಹಾಗೂ ಅನಿರೀಕ್ಷಿತವಾಗಿ ಕಡಿಮೆಯಾಗುವ ಹೃದಯ ಬಡಿತದ ಸಮಸ್ಯೆಗಳಿಗೆ ಸೂಕ್ತ ಆರೈಕೆ ಮಾಡುತ್ತದೆ.

Advertisement

ವಿವಿಧ ರೀತಿಯ ಜ್ವರಗಳ ನಿವಾರಣೆ:
ಹೆಚ್ಚಾಗಿ ಕಾಡುವ ಡೆಂಗ್ಯೂ, ಹಂದಿ ಜ್ವರ, ಮಲೇರಿ, ಚಿಕನ್ ಗುನ್ಯಾ ದಂತಹ ಎಲ್ಲಾ ಬಗೆಯ ವೈರಲ್ ಫೀವರ್ ನಿವಾರಣೆಗೆ ಅಮೃತಬಳ್ಳಿ ರಾಮಬಾಣ. ಅಮೃತ ಬಳ್ಳಿ ತಾಮ್ರ, ಕಬ್ಬಿಣ, ರಂಜಕ, ಸತು, ಕ್ಯಾಲ್ಸಿಯಂ, ಮೆಗ್ನೀಷಿಯಮ್ ಮತ್ತು ಅನೇಕ ರೋಗ ನಿರೋಧಕ ಅಂಶ, ಉರಿಯೂತ, ಕ್ಯಾನ್ಸರ್ ವಿರೋಧಿ ಗುಣಗಳಿಂದ ಕೂಡಿದೆ. ಈ ಎಲ್ಲಾ ಅಂಶಗಳು ಒಟ್ಟಾಗಿ ಎಲ್ಲಾ ರೀತಿಯ ಜ್ವರದಿಂದ ದೂರವಿರಿಸುತ್ತದೆ.

ಮಧುಮೇಹ ನಿಯಂತ್ರಣ:
ಮಧುಮೇಹಕ್ಕೆ ಅಮೃತ ಬಳ್ಳಿ ಅತ್ಯುತ್ತಮ ಔಷಧಿ ಎನ್ನಬಹುದು. ಇದರಲ್ಲಿರುವ ಗುಣಗಳು ಹೆಚ್ಚಿನ ಮಟ್ಟದ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಮೃತ ಬಳ್ಳಿ ಸೇವನೆ ಅಥವಾ ಅದನ್ನು ಜ್ಯೂಸ್‌ ಆಗಿ ಸೇವಿಸುವುದು ಮಧುಮೇಹ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ದೃಷ್ಟಿ ದೋಷ ನಿವಾರಣೆ:
ದೃಷ್ಟಿ ದೋಷ, ದೃಷ್ಟಿ ಮಾಂದ್ಯ ಸಮಸ್ಯೆಗಳಿಗೆ ಅಮೃತ ಬಳ್ಳಿ ಉತ್ತಮ ಚಿಕಿತ್ಸೆ. ಮುಖ್ಯವಾಗಿ ಚಿಕ್ಕ ಮಕ್ಕಳಲ್ಲಿ ದೃಷ್ಟಿ ದೋಷ ಕಾಣಿಸಿಕೊಂಡರೆ ಅಥವಾ ಅಂತಹ ಲಕ್ಷಣ ಕಂಡುಬಂದರೆ ಈ ಔಷಧವನ್ನು ಸೇವಿಸುವುದಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ.

ಅಮೃತ ಬಳ್ಳಿಯ ಕಾಂಡವನ್ನು ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿಯಂತೆ (ಆಹಾರ ಸೇವಿಸುವ ಮುಂಚೆ) ಸೇವಿಸಬೇಕು. ಅಮೃತ ಬಳ್ಳಿಯ ಕಾಂಡವನ್ನು ಇತರ ಔಷಧೀಯ ಸಸ್ಯಗಳೊಂದಿಗೆ ಬೆರೆಸಿ ಕಷಾಯ ಮಾಡಿ ಕುಡಿಯಬಹುದು. (ಸಂಬಾರ ಬಳ್ಳಿ, ಅಮೃತ ಬಳ್ಳಿ ಎಲೆ, ಮಜ್ಜಿಗೆ ಸೊಪ್ಪು, ತುಳಸಿ,ಲವಂಗ ತುಳಸಿ, ಅರಸಿನ ಪುಡಿ ,ಕಾಳುಮೆಣಸು, ಜೀರಿಗೆ, ಶುಂಠಿ).

ಇದರ ಐದಾರು ಎಲೆಗಳನ್ನು ಪ್ರತಿನಿತ್ಯ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಇದರ ಎಲೆಯನ್ನು ನೀರಿನಲ್ಲಿ ಬೇಯಿಸಿ ಕುಡಿದರೆ ದೇಹಾರೋಗ್ಯಕ್ಕೆ ಬಹಳ ಉತ್ತಮ. ನೀರಿನಲ್ಲಿ ಬೇಯಿಸಿ ಜ್ಯೂಸ್ ರೀತಿ ಮಾಡಿ ಕುಡಿಯಬಹುದು. ಇದು ಇಮ್ಯೂನಿಟಿ ಬೂಸ್ಟರ್ ಕೂಡಾ ಹೌದು. ನಮ್ಮ ದೇಹದಲ್ಲಿನ ಸರ್ವ ರೋಗಕ್ಕೂ ರಾಮಬಾಣ ಅಮೃತ ಬಳ್ಳಿ ಎನ್ನಬಹುದು.

ಒಂದು ವೇಳೆ ಅತಿಯಾಗಿ ಅಮೃತಬಳ್ಳಿ ರಸ ಸೇವಿಸಿದರೆ ಅದರಿಂದ ಹೆಚ್ಚು ಸಮಸ್ಯೆ ಉಂಟಾಗುತ್ತದೆ ಎಂಬುದನ್ನು ವೈದ್ಯರೇ ಖಚಿತ ಪಡಿಸಿದ್ದಾರೆ. ಅಮೃತಬಳ್ಳಿ ರಸದ ಕಷಾಯವನ್ನು ದಿನದಲ್ಲಿ ಒಂದೊಂದು ಲೋಟದಂತೆ ಮೂರು ಬಾರಿ ಸೇವಿಸಿದರೆ ಯಕೃತ್ತಿನ ಸಮಸ್ಯೆ ಕಾಣಿಸಿಳ್ಳಬಹುದು. ಆದ್ದರಿಂದ ಅಮೃತ ಬಳ್ಳಿಯನ್ನು ಅತಿಯಾಗಿ ಬಳಸದೆ ಹಿತ ಮಿತ ವಾಗಿ ಬಳಸಿ ಆರೋಗ್ಯ ಕಾಪಾಡಿಕೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next