ತನ್ನ ಬಗ್ಗೆ ಆಲೋಚನೆ ಮಾಡದೇ ಇಡೀ ಬದುಕನ್ನು ಸಮಾಜಮುಖೀಯಾಗಿ ಮಾಡುವವನೇ ಸಂತ. ಅಂತಹ ಸಂತರನ್ನು ಭಾರತದಲ್ಲಿ ನೋಡಬಹುದೆಂದರೆ ಅದನ್ನು ಸಂತರ ತ್ಯಾಗದ ಮೂಲಕ ನೋಡಬಹುದು. ತ್ಯಾಗದೊಳಗೆ ಅಮೃತ ಕುಡಿದಷ್ಟು ಸಂತೋಷವಿದೆ. ಸದ್ಯದ ಪರಿಸ್ಥಿಯಲ್ಲಿ ನಾವೆಲ್ಲರೂ ಭಾರತಕ್ಕೆ ಹಿಂದೂಸ್ತಾನ ಎಂದು ಕರೆಯುತ್ತೇವೆ.
ಇಲ್ಲಿ ಇರುವವರು ಎಲ್ಲರೂ ಭಾರತವನ್ನು ಪ್ರೀತಿಸಬೇಕು. ಗೌರವಿಸಬೇಕು. ಎಲ್ಲರೂ ಒಂದಾಗಿ ನಡೆಯಬೇಕು. ಧರ್ಮ ಸಂಸದ್ ನಲ್ಲಿ ನಾವೆಲ್ಲರೂ ಯೋಚನೆ ಮಾಡಬೇಕಾಗಿರುವುದು ಇಷ್ಟೇ. ಬಿದ್ದವರನ್ನು ಮೇಲೆತ್ತುವುದು ನಿಜವಾದ ಧರ್ಮ. ನಮ್ಮಲ್ಲಿ ಸಂತರ ತ್ಯಾಗ ಬಹಳ ದೊಡ್ಡದಿದೆ. ಇದಕ್ಕೆ ಭವ್ಯ ಪರಂಪರೆ ಇದೆ.
ಅನೇಕ ಸಂತರು ತಮ್ಮ ತ್ಯಾಗದಿಂದಲೇ ಮಹಾತ್ಮರಾಗಿದ್ದಾರೆ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದ್ದಾರೆ. ಇಂದಿನ ಸ್ಥಿತಿಯಲ್ಲಿ ಇದನ್ನು ತಿಳಿದುಕೊಳ್ಳ ಬೇಕಾದ ಅಗತ್ಯ ಬಹಳಷ್ಟಿದೆ. ಧರ್ಮ ಸಂಸದ್ ಮೂಲಕ ಜನರಿಗೆ ಈ ಸಂದೇಶ ತಿಳಿಸುವ ಕೆಲಸ ಆಗಬೇಕಾಗಿದೆ. ಭಾರತದಲ್ಲಿ ಇದ್ದು ಭಾರತವನ್ನು ಪ್ರೀತಿಸುವವರು ಎಲ್ಲರೂ ನಮ್ಮವರೇ.
ಭಾರತದಲ್ಲಿದ್ದು ಭಾರತವನ್ನು ದ್ವೇಷಿಸಿದರೆ ಅವರು ನಮ್ಮವರು ಎನ್ನುವುದು ಯಾವ ನ್ಯಾಯ ? ಅದಕ್ಕಾಗಿ ನಾವು ಇಂದು ಚಿಂತೆಯನ್ನು ಹೊರಹಾಕಿ ಚಿಂತಿಸಬೇಕಾದ ಆವಶ್ಯಕತೆ ತುಂಬಾ ಇದೆ. ಎಲ್ಲೋ ಯಾವುದಕ್ಕೋ ಮಾರುಹೋಗಿ ನಮ್ಮದನ್ನು, ನಮ್ಮತನವನ್ನು ಕಳೆದುಕೊಳ್ಳುವುದು ನ್ಯಾಯವಲ್ಲ.
ನಾವೆ ಲ್ಲರೂ ಒಗ್ಗಟ್ಟಾಗಬೇಕಾಗಿದೆ. ಭಾರತಕ್ಕೆ ನಾವೆಲ್ಲ ಒಂದು ಎನ್ನುವ ಬಂಧುತ್ವದ ಮುನ್ನುಡಿ ಬರೆಯಬೇಕಷ್ಟೆ. ನಿಷ್ಠೆಗಾಗಿ ಧರ್ಮ ಮತ್ತು ಸಮಾಜವನ್ನು ಕಟ್ಟಿದರು ಅಂದು. ಪ್ರತಿಷ್ಠೆಗಾಗಿ ಸಮಾಜ ಒಡೆಯುವವರು ಇಂದು. ಎತ್ತರದಲ್ಲಿದ್ದ ನಾವೆಲ್ಲರೂ ಜನರ ಹತ್ತಿರಕ್ಕೆ ಹೋಗುವ ಆವಶ್ಯಕತೆ ಇದೆ. ಧರ್ಮ ಸಂಸತ್ನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಈ ಕೆಲಸ ಮಾಡೋಣ.
ನಾನಂತೂ ಭಾರತಕ್ಕಾಗಿ ಪ್ರಾಣ ಕೊಡಲು ಸಿದ್ಧ. ಸಂತರೆಲ್ಲರೂ ಭಾರತವನ್ನು ಉಳಿಸಿ ಬೆಳೆಸಬೇಕಾಗಿದೆ. ಚಿಂತೆಯನ್ನು ಹೊರಹಾಕಿ ಎಲ್ಲರೂ ಒಮ್ಮತದಿಂದ ಬದುಕಬೇಕಾಗಿದೆ. ನಮ್ಮನ್ನು ನಂಬಿರುವ ಭಾರತದ ಪ್ರಜೆಗಳನ್ನು ಬದುಕಿಸಬೇಕಿದೆ. ಈ ಎಲ್ಲ ಕಾರ್ಯ ಮಾಡಿ ಎಲ್ಲರೂ ನಿಶ್ಚಿಂತರಾಗಿರೋಣ.
* ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಶ್ರೀ ಹುಕ್ಕೇರಿ ಮಠ, ಹುಕ್ಕೇರಿ, ಬೆಳಗಾವಿ ಜಿಲ್ಲೆ