Advertisement

ಹೆಜ್ಜೆ ಕುಸಿಯುತ್ತಿರುವ ಕನಸೊಡೆದ ಪಯಣಿಗನಿಗೆ- ಅವನು ನಿರಂತರ ಜೊತೆಗಾರ

03:50 AM Apr 02, 2017 | Team Udayavani |

ಎಲ್ಲೋ ಒಂದೆಡೆ ಹೀಗೊಂದು ಸುಂದರ ಸಂದೇಶವನ್ನೋದಿದ್ದೆ. ತಾನು ಎಲ್ಲೆಡೆ ಜೊತೆಯಲ್ಲಿರಲಾಗದು ಎಂದೇ ಭಗವಂತ ತಾಯಿಯನ್ನು ನೀಡಿದ್ದಾನೆ ಎಂದು. ಹಾಗೆ ನೋಡಿದರೆ ಮಗುವಿನ ಲಾಲನೆ, ಪೋಷಣೆಯಲ್ಲಿ ತಾಯಿಯಷ್ಟೇ ಮಹತ್ವದ ಪಾತ್ರ ತಂದೆಯದೂ ಆಗಿರುತ್ತದೆ, ಆಗಿರಬೇಕು ಕೂಡ. ಆದರೆ, ನಮ್ಮ ಸಾಮಾಜಿಕ ವ್ಯವಸ್ಥೆಯಿಂದಲೋ, ಇಲ್ಲ ಅನಿವಾರ್ಯ ಪರಿಸ್ಥಿತಿಯಿಂದಲೋ ಮಗು ತನ್ನ ಬಹುತೇಕ ಸಮಯವನ್ನು ಕಳೆಯುವುದು ತಾಯಿಯ ಜೊತೆಯಲ್ಲೇ ಹೆಚ್ಚು. ತಾಯಿಯೇ ಅದರ ಮೊದಲ ಗುರುವಾಗಿರುತ್ತಾಳೆ. 

Advertisement

ಹೊಲದಲ್ಲಿ ಬಿತ್ತುವ ಬೀಜಗಳು ಚಿಗುರಿ ಸಸಿಯಾಗಿ ಮರವಾಗಲು ಸಕಾಲದಲ್ಲಿ ಗೊಬ್ಬರ, ನೀರು, ಬಿಸಿಲು, ರಕ್ಷಣೆ  ಇವೆಲ್ಲಾ ಆವಶ್ಯಕ. ಅದರಲ್ಲೂ ಕೆಲವೊಂದು ಸಸಿಗಳ ಆರೈಕೆಗೆ ವಿಶೇಷ ಜಾಗೃತಿ ಬೇಕಾಗುತ್ತದೆ. ಅವುಗಳು ಬಲು ಸೂಕ್ಷ್ಮವಾಗಿರುತ್ತವೆ. ಅಂತೆಯೇ ಚೆನ್ನಾಗಿ ಬೆಳೆಯುತ್ತಿದ್ದ ಗಿಡವೊಂದು ಹೇಗೋ ಘಾತಗೊಂಡು ತುಸು ಮುರಿದೂ ಬೀಳಬಹುದು. ಅಂಥ ಸಮಯದಲ್ಲಿ ಸೂಕ್ತ ರೀತಿಯಲ್ಲಿ ಅದನ್ನು ಕಾಳಜಿಯಿಂದ ನೋಡಿಕೊಂಡರೆ ಅದೂ ಮತ್ತೆ ಚಿಗುರಿಕೊಂಡು ಹೆಮ್ಮರವಾಗಿ ಬೆಳೆದು ಫ‌ಲಗಳಿಂದ ತುಂಬಿ ತುಳುಕಬಲ್ಲುದು. ಹೀಗೆಯೇ ಹುಟ್ಟುವಾಗಲೋ ಇಲ್ಲ, ನಡುವೆ ಎರಗುವ ಅಪಘಾತದಿಂದಲೋ ದೈಹಿಕ/ಮಾನಸಿಕ ನ್ಯೂನತೆಯಿಂದ ಬಳಲುವವರಿಗೆ ಬೆಂಬಲ, ಸಹಕಾರ ಎಳವೆಯಲ್ಲೇ ಸಿಗುತ್ತ ಹೋದರೆ ಬಹುಬೇಗ ಚೇತರಿಸಿಕೊಂಡು ಅವರು ಪುಟಿದೇಳಬಲ್ಲರು. ಪುಟ್ಟಮಕ್ಕಳಿಗೆ ಫ್ಯಾಕ್ಚರ್‌ ಆದರೆ ಅವರ ಎಲುಬು ಬಹುಬೇಗ ಕೂಡಿಕೊಳ್ಳುತ್ತದೆ ಎನ್ನುತ್ತಾರೆ ವೈದ್ಯರು. ಅದೇ ದೊಡ್ಡವರ/ವೃದ್ಧರ ಎಲುಬು ಕೂಡುವುದು ಬಹಳ ನಿಧಾನ. ಅಂತೆಯೇ ಎಳವೆಯಲ್ಲೇ ಮಕ್ಕಳಲ್ಲಿರುವ ನ್ಯೂನ ಕಂಡುಕೊಂಡು, ಅವರೊಂದಿಗೆ ಬೆರೆತು, ಅವರ ಸಮಸ್ಯೆಗಳನ್ನರಿತು, ಅವುಗಳ ಸಮೇತ ಮಗುವನ್ನು ಒಪ್ಪಿಕೊಂಡರೆ ಅರ್ಧ ಸಮಸ್ಯೆಗೆ ಪರಿಹಾರವನ್ನು ನಾವು ಕಂಡುಕೊಂಡಂತೆಯೇ. ಉಳಿದರ್ಧ ಪರಿಹಾರಕ್ಕೆ ನಮ್ಮ ಸಹನೆ, ಪರಿಶ್ರಮ, ಮನೋಬಲ ಅತ್ಯಗತ್ಯ. ಸಮಸ್ಯೆಗಳ ಗುರುತಿಸುವಿಕೆ, ಸೂಕ್ತ ರೀತಿಯ ಚಿಕಿತ್ಸೆ, ಬೆಂಬಲ ಎಷ್ಟು ಬೇಗ ಸಿಗುವುದೋ ಅಷ್ಟು ಬೇಗ ಚೇತರಿಕೆ ಸಾಧ್ಯ. ತಡವಾದಷ್ಟೂ ಸುಧಾರಣೆಯ ಸಾಧ್ಯತೆಯ ಪರ್ಸಂಟೇಜ್‌ ಕಡಿಮೆಯಾಗುತ್ತ ಹೋಗುತ್ತದೆ. ನ್ಯೂನ್ಯತೆಯುಳ್ಳ ಮಕ್ಕಳಿಗಿಂತ ಅವರ ಹೆತ್ತವರಿಗೆ ಅಪಾರ ತಾಳ್ಮೆ ಇರಬೇಕಾಗುತ್ತದೆ. ಭರವಸೆ, ಧನಾತ್ಮಕತೆ ಹೆತ್ತವರಲ್ಲಿದ್ದಷ್ಟೂ ಅದು ಅಂಥ ಮಕ್ಕಳೊಳಗೂ ನಿಧಾನದಲ್ಲಿ ಇಳಿಯ ತೊಡಗುತ್ತದೆ. ಬಹು ದೀರ್ಘಾವಧಿಯ ಹೋರಾಟವಿದು. ಸುಲಭವಲ್ಲ ನಿಜ… ಅಸಾಧ್ಯ ಖಂಡಿತವಲ್ಲ. 

ಈ ಅಂಕಣ ಬರೆಯಲು ಆರಂಭಿಸಿದಾಗಿನಿಂದ ನನ್ನಂಥ ಸಮಸ್ಯೆಗಳನ್ನು ಎದುರಿಸುತ್ತಿರುವ ಅನೇಕ ಸಹಪಯಣಿಗರು ನನಗೆ ಸಂದೇಶ ಕಳುಹಿಸುತ್ತಿದ್ದಾರೆ. ತಮ್ಮ ನೋವು-ನಲಿವನ್ನು, ಅನುಭವಗಳನ್ನು ಹಂಚಿಕೊಂಡು, ನನ್ನರಿವನ್ನೂ ಹೆಚ್ಚಿಸಿದ್ದಾರೆ. ಅಂಥವರಲ್ಲೋರ್ವರು ಶ್ರೀಮತಿ ಚಂದ್ರಪ್ರಭಾ. ಇವರ ಎರಡನೆಯ ಮಗನಿಗೆ ಹುಟ್ಟಿನಿಂದ ಸಣ್ಣ ಪ್ರಮಾಣದ ADHD (Attention Deficit Hyperactivity Disorder) ಮತ್ತು Dyspraxia ಇದೆಯಂತೆ. ಆರಂಭದಲ್ಲಿ ಚಂದ್ರಪ್ರಭಾ ತುಸು ಅಧೀರತೆ ಅನುಭವಿಸಿದರೂ, ಬಹು ಬೇಗ ಅದನ್ನು ಕೊಡವಿಕೊಂಡು, ದೃಢ ಸಂಕಲ್ಪದಿಂದ ತಮ್ಮ ಮಗನನ್ನು ತರಬೇತುಗೊಳಿಸಲೋಸುಗ ಸ್ವಯಂ ಕಲಿಕೆಗೆ ಮುಂದಾದರು. Management in Autism and Mental Retardation Course  ಅನ್ನು ಮಾಡಿಕೊಂಡು ಮಗನಿಗೆ ಕಲಿಸತೊಡಗಿದರು. ಜೊತೆಗೆ ಎರಡು ತಿಂಗಳ SLD(Specific learning disability) ಕೋರ್ಸ್‌, ನಾನಾ ತರದ ಪೇರೆಂಟಿಂಗ್‌ ಟ್ರೆçನಿಂಗ್‌ಗಳನ್ನು ತೆಗೆದುಕೊಂಡು, ಸ್ವತಃ ಶಾಲೆಯೊಂದರಲ್ಲಿ ಬಹು ನ್ಯೂನತೆಯುಳ್ಳ ಮಕ್ಕಳಿಗೂ ಕಲಿಸುತ್ತಿದ್ದಾರೆ. ಅವರ ಮಗನಿಗೀಗ ಹನ್ನೊಂದು ವರುಷ. ಈಗಾತ ಓದಬಲ್ಲ ಮತ್ತು ನಿಧಾನಗತಿಯಲ್ಲಿ ಬರೆಯಲೂ ಆರಂಭಿಸಿರುವನಂತೆ. ಇದನ್ನು ಹೇಳುವಾಗ ಅವರ ಧ್ವನಿಯೊಳಡಗಿದ್ದ ಆ ಖುಷಿ, ಸಾರ್ಥಕತೆ ನನ್ನನ್ನು ಸದಾ ಪ್ರೇರೇಪಿಸುತ್ತಿರುತ್ತದೆ. 

ಇತ್ತೀಚಿಗಷ್ಟೇ ನಾನು ನನ್ನ ಅಂಕಣದಲ್ಲಿ ಹುಟ್ಟು ಕುರುಡರಾಗಿಯೂ ಎಲ್ಲಾ ರೀತಿಯಲ್ಲೂ ಅದ್ಭುತ ಕ್ರಿಯಾಶೀಲರಾಗಿರುವ ಶ್ರೀಧರ್‌ ಟಿ.ಎಸ್‌. ಅವರ ಕುರಿತೂ ಬರೆದಿದ್ದೆ. ತನ್ನ ತಾಯಿ ಶ್ರೀಮತಿ ಜಯಂತಿ ಹಾಗೂ ತಂದೆ ಶ್ರೀನಾಥ್‌ ಅವರ ಅದ್ಭುತ ಸಹಕಾರ, ಪ್ರೋತ್ಸಾಹ, ಧನಾತ್ಮಕ ಮನೋಭಾವದಿಂದಾಗಿಯೇ ತಾನಿಂದು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎನ್ನುತ್ತಾರೆ ಶ್ರೀಧರ್‌. ಇನ್ನು ಈ ಅಂಕಣದ ಆರಂಭದಲ್ಲಿ ನಾನು ಪ್ರಸ್ತಾಪಿಸಿದ್ದ ಅದ್ಭುತ ಗಾಯಕಿ, ಹುಟ್ಟು ಅಂಧಳಾಗಿರುವ ಕಸ್ತೂರಿಯ ತಾಯಿಯೂ ತಮ್ಮ ಮಗಳಿಗೋಸ್ಕರ ಶ್ರಮಿಸುತ್ತಿದ್ದುದನ್ನೂ ಕಂಡಿದ್ದೇನೆ. ನನ್ನ ಬದುಕಿನ ರೂವಾರಿಗಳೂ ನನ್ನ ಹೆತ್ತವರೇ. ನನ್ನ ತಾಯ್ತಂದೆಯರ ಕುರಿತು ಸಾಕಷ್ಟು ಬರೆದಿರುವೆ. ನಾನಿಂದು ಇಷ್ಟು ಆತ್ಮವಿಶ್ವಾಸದಲ್ಲಿ, ಎಲ್ಲಾ ಎಡರು ತೊಡರುಗಳನ್ನೂ ಮೀರಿ ಸ್ವಸ್ಥ ಬಾಳು ಬದುಕಲು ಕಾರಣ ನನ್ನ ತಂದೆ ಗೋಪಾಲಕೃಷ್ಣ ಭಟ್‌, ತಾಯಿ ಜಯಲಕ್ಷ್ಮೀ ಭಟ್‌ ಮತ್ತು ಪತಿ ರಾಮಕೃಷ್ಣ ಹೆಗಡೆ. 

ಹೊರಗಣ್ಣಿಗೆ ಕಾಣಿಸಿದ ಭಗವಂತ ಹೆತ್ತವರ, ಸಂಗಾತಿಯ, ಸ್ನೇಹಿತರ, ಆಪೆಷ್ಟರ, ಆತ್ಮೀಯರ, ನೆರಳಂತೇ ಹಿಂಬಾಲಿಸಿ ನಮ್ಮ ರಕ್ಷಿಸುವ ಸಾಕು ಪ್ರಾಣಿಗಳ… ಹೀಗೆ ಹತ್ತು ಹಲವು ರೂಪದಲ್ಲಿ ನಮಗಾಸರೆ ನೀಡಿ, ಬದುಕಿನ ಪಾಠಗಳನ್ನು ಆಗಾಗ ಕಲಿಸುತ್ತಿರುತ್ತಾನೆ. ಅಂಥ ಶಕ್ತಿ ಸ್ವರೂಪಿಯಾದ ಚೈತ್ಯನದ ಇರುವಿಕೆಯನ್ನು ನಂಬಿ, ಅಪ್ಪಿಕೊಂಡು ಆಗಾಗ ಕುಸಿಯುವ ಮನೋಬಲವನ್ನು ಒಗ್ಗೂಡಿಸಿಕೊಂಡು ಒಂದು ಹೆಜ್ಜೆಯನ್ನಿಟ್ಟರೂ ಸಾಕು, ಸಾವಿರ ಹೆಜ್ಜೆಯ ರೂಪದಲ್ಲಿ ನಮ್ಮೊಳಗಿನ ಆತ್ಮವಿಶ್ವಾಸ ವೃದ್ಧಿಸುತ್ತ ಹೋಗುತ್ತದೆ. ಈ ಹೋರಾಟ ನಿರಂತರ ಪ್ರಕ್ರಿಯೆ. ಇದೇ ಬದುಕು. 

Advertisement

ಸೋತ, ದುಃಖೀತ, ಹೆಜ್ಜೆ ಕುಸಿಯುತ್ತಿರುವ
ಕನಸೊಡೆದ ಪಯಣಿಗನಿಗೆ-
ಅವನು ನಿರಂತರ ಜೊತೆಗಾರ
ಅದು ಅವನ ಭಾಗ್ಯ.  
(ಲಕ್ಷ್ಮೀಶ ತೋಳ್ಪಾಡಿಯವರ ಬೆಟ್ಟ ಮಹಮದನ ಬಳಿಗೆ ಬಾರದಿದ್ದರೆ ಪುಸ್ತಕದಿಂದ)
ಕೊನೆಯಿರದ ಕೊನೆಯಲ್ಲಿ…
ತನ್ನ ತಾನ ಎಂದರೆ ನನ್ನೊಳಗಿನ ಸಣ್ಣ ಗುನುಗು/ಹಾಡು. ನನ್ನ ದೈಹಿಕ ನ್ಯೂನತೆಗಳನ್ನು ಮೀರಿ ನಾನು ಬದುಕನ್ನು ಕಟ್ಟಿಕೊಳ್ಳುವಾಗ ಎದುರಿಸಿದ ಸಮಸ್ಯೆಗಳನ್ನು, ಸವಾಲುಗಳನ್ನು, ಕಂಡುಕೊಂಡು ಅಲ್ಪ-ಸ್ವಲ್ಪ ಪರಿಹಾರಗಳನ್ನು, ಸಮಾಜ/ನೆರೆ-ಕೆರೆ/ಮನೆಯವರು ಇವರೆಲ್ಲ ನ್ಯೂನತೆಯುಳ್ಳವರ ಜೊತೆ ಹೇಗೆ ಸಹಕರಿಸಿದರೆ ಚೆನ್ನ, ನಾವು ಹೇಗೆ ಅವರಿಗೆ ಬೆಂಬಲವಾಗಿ ನಿಂತು ಧೈರ್ಯ ತುಂಬಬಹುದು ಎಂಬುದನ್ನು ವಿವರಿಸಿದ್ದೇನೆ. ಅಲ್ಲದೆ, ಅಂಗವಿಕಲರು ಹೇಗೆಲ್ಲಾ ತಿರಸ್ಕಾರಕ್ಕೆ, ಅವಹೇಳನಕ್ಕೆ, ಅವಗಣನೆಗೆ, ಹಕ್ಕು ಚ್ಯುತಿಗೆ ಒಳಗಾಗುತ್ತಿದ್ದಾರೆ; ಯಾವ ರೀತಿಯಲ್ಲಿ, ಯಾವೆಲ್ಲ ಕ್ಷೇತ್ರಗಳಲ್ಲಿ ಸಮಗ್ರ ಬದಲಾವಣೆ/ಸುಧಾರಣೆ ಅತ್ಯಗತ್ಯ – ಎಂಬುದನ್ನು ಈ ಅಂಕಣದ ಮೂಲಕ ಆದಷ್ಟು ವಿವರಿಸಿದ್ದೇನೆ. ಬದಲಾವಣೆ ದಿಢೀರ್‌ ಅಸಾಧ್ಯ. ಆದರೆ, ಈ ಬರಹಗಳಿಂದ ಸಾವಿರದಲ್ಲಿ ಓರ್ವರಾದರೂ ತಮ್ಮ ದೃಷ್ಟಿಕೋನವನ್ನು ಬದಲಿಸಿಕೊಂಡು ಬದಲಾವಣೆಯತ್ತ ಒಂದು ಹೆಜ್ಜೆಯಿಟ್ಟರೆ ಎಷ್ಟೋ ನೊಂದ ಜೀವಿಗಳ ಬದುಕು ತುಸು ತಂಪು ಕಾಣಬಹುದೆಂಬ ಆಶಾವಾದ ನನ್ನದು. 

ತೇಜಸ್ವಿನಿ ಹೆಗಡೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next