Advertisement

ಜೀವ ಉಳಿಸಿಕೊಳ್ಳಲು ಹೋದಾತ ಜೀವನವನ್ನೇ ಕಳೆದುಕೊಂಡ

11:47 PM Mar 01, 2022 | Team Udayavani |

ದಾವಣಗೆರೆ: ಹೊರಗಡೆ ಜೀವ ಕಳೆದುಕೊಳ್ಳುವ ಭಯ. ಒಳಗಡೆ ಜೀವ ಉಳಿಸಿಕೊಳ್ಳುವ ಭಯ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಹಸಿವು ನೀಗಿಸಿಕೊಳ್ಳಲು ಹೊರಗೆ ಕಾಲಿಟ್ಟವನು ಕೊನೆಗೂ ಶೆಲ್‌ ದಾಳಿಗೆ ಗುರಿಯಾದ.

Advertisement

ಇದು ರಷ್ಯಾ-ಉಕ್ರೇನ್‌ ನಡುವಿನ ಕಾಳಗದಲ್ಲಿ ಸಿಲುಕಿ ಜೀವ ಕಳೆದುಕೊಂಡ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಚಳಗೇರಿಯ ಯುವಕ ನವೀನ್‌ ಗ್ಯಾನಗೌಡರ ಸಾವಿನ ಘಟನೆ.

ಬಂಕರ್‌ನಲ್ಲಿ ತಿನ್ನಲು ಏನೂ ಇಲ್ಲದ್ದರಿಂದ ಮಂಗಳವಾರ ಬೆಳಗ್ಗೆ ನವೀನ, ತನಗೆ ಹಾಗೂ ತನ್ನೊಟ್ಟಿಗೆ ಇರುವ ಇಬ್ಬರು ಸ್ನೇಹಿತರಿಗಾಗಿ ತಿಂಡಿ ತರಲು ಬಂಕರ್‌ನಿಂದ ಹೊರಗಡೆ ಬಂದ. ಅಣತಿ ದೂರ ಹೋಗುತ್ತಿದ್ದಂತೆ ಆ ವೇಳೆ ನಡೆಯುತ್ತಿದ್ದ ಶೆಲ್‌ ದಾಳಿಗೆ ಸಿಲುಕಿ ಪ್ರಾಣ ಕಳೆದುಕೊಂಡೇ ಬಿಟ್ಟ. ಹಸಿವಿನಿಂದ ಜೀವ ಉಳಿಸಿಕೊಳ್ಳಲು ಹೊರಟವನ ಪ್ರಾಣ, ಶೆಲ್‌ಗ‌ಳ ದಾಹಕ್ಕೆ ಆಹುತಿಯಾಯಿತು.

ರಷ್ಯಾ-ಉಕ್ರೇನ್‌ ಯುದ್ಧ ಆರಂಭ
ವಾಗುತ್ತಿದ್ದಂತೆ ಖಾರ್ಕಿವ್‌ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದ ನೂರಾರು ವಿದ್ಯಾರ್ಥಿಗಳನ್ನು ಬಂಕರ್‌ಗಳಲ್ಲಿ ರಕ್ಷಣೆ ಮಾಡಲಾಗಿತ್ತು. ಅದೇ ರೀತಿ ರಾಣಿಬೆನ್ನೂರು ತಾಲೂಕಿನ ಚಳಗೇರಿಯ ಮೂವರು (ಅಮಿತ್‌, ನವೀನ್‌, ಸುಮನ್‌) ವಿದ್ಯಾರ್ಥಿಗಳು ಒಂದೇ ಬಂಕರ್‌ನಲ್ಲಿದ್ದರು. ಕಳೆದ ಮೂರ್‍ನಾಲ್ಕು ದಿನಗಳಿಂದ ಆಹಾರ ಸಿಗದೆ ಪರಿತಪಿಸುತ್ತಿದ್ದು ಒಣಹಣ್ಣು, ಬಿಸ್ಕೆಟ್‌ನಂಥ ತಿಂಡಿ ತಿಂದು ದಿನ ಕಳೆಯುತ್ತಿದ್ದರು. ಇದ್ದಷ್ಟು ತಿಂಡಿ ಖಾಲಿಯಾಗಿದ್ದರಿಂದ ಅಮಿತ್‌, ತಿಂಡಿ ತರಲು ಹೊರಗಡೆ ಹೋಗಲು ಸಿದ್ಧನಾದ. ಆಗ ನವೀನ್‌, ನೀನು ಬೇಡ. ಹೊರಗೆ ಎಚ್ಚರಿಕೆಯಿಂದ ಹೋಗಬೇಕು. ನಾನೇ ಹೋಗುತ್ತೇನೆ’ ಎಂದು ಆತನನ್ನು ತಡೆದು ತಾನೇ ಬಂಕರ್‌ ಹೊರಗೆ ಕಾಲಿಟ್ಟ.

ಕರೆ ಸ್ವೀಕರಿಸಲಿಲ್ಲ
ಒಂದು ಗಂಟೆಯಾದರೂ ಮರಳಿ ಬಾರದೇ ಇರುವುದರಿಂದ ಸ್ನೇಹಿತರು ನವೀನ್‌ ಮೊಬೈಲ್‌ಗೆ ಕರೆ ಮಾಡಿದ್ದಾರೆ. ಮೊಬೈಲ್‌ ರಿಂಗಣಿಸಿತ್ತಾದರೂ ಕರೆ ಸ್ವೀಕರಿಸಲಿಲ್ಲ. ಇದರಿಂದ ಭಯಗೊಂಡ ಸ್ನೇಹಿತರು ಚಳಗೇರಿಗೆ ಕರೆ ಮಾಡಿ ಪಾಲಕರಿಗೆ ವಿಷಯ ಮುಟ್ಟಿಸಿದರು. ಪಾಲಕರು ವಿಚಾರ ಮಾಡುವಷ್ಟರಲ್ಲಿ ವಿದೇಶಾಂಗ ಸಚಿವಾಲಯದಿಂದ ನವೀನ್‌ ಮೃತಪಟ್ಟ ಅಧಿಕೃತ ಮಾಹಿತಿ ಬಂದಿತ್ತು. ವಿಷಯ ತಿಳಿದ ತಂದೆ-ತಾಯಿ ಇದ್ದಲ್ಲೇ ಕುಸಿದು ಬಿದ್ದರು. ಇತ್ತ ಬಂಕರ್‌ನಲ್ಲಿರುವ ಸ್ನೇಹಿತರಿಗೆ ನವೀನ್‌ ಶೆಲ್‌ ದಾಳಿಗೆ ತುತ್ತಾಗಿರುವ ಸುದ್ದಿ ತಿಳಿದು ಜೀವ ಭಯದಲ್ಲೇ ಮುದುಡಿಕೊಂಡಿದ್ದಾರೆ.

Advertisement

ಯುದ್ಧ ಸಂದರ್ಭ ಶೆಲ್‌ ದಾಳಿಗೆ ತುತ್ತಾದ ಸಹೋದರನ ಮಗ ನವೀನನ ಸಾವಿನ ಘಟನೆಯನ್ನು ಮಾಧ್ಯಮದವರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟ ಉಜ್ಜನಗೌಡ ಗ್ಯಾನಗೌಡರ ಕಣ್ಣುಗಳಲ್ಲಿ ನೀರಿನ ಹರಿವು ನಿಲ್ಲಲೇ ಇಲ್ಲ.

ಸ್ನೇಹಿತ ನವೀನ್‌ ಸಾವಿನ ಸುದ್ದಿ ಕೇಳಿ ನಮ್ಮ ಮಕ್ಕಳು ಬಹಳ ಆತಂಕಗೊಂಡಿದ್ದಾರೆ. ಬಹಳ ಸಂಕಷ್ಟದಲ್ಲಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರಲು ಸರಕಾರ ಕೂಡಲೇ ಕ್ರಮ ವಹಿಸಬೇಕು.
– ಶ್ರೀಧರ ವೈಶ್ಯರ, ವೆಂಕಟೇಶ ವೈಶ್ಯರ (ಅಮಿತ್‌, ಸುಮನ್‌ ಅವರ ಪಾಲಕರು)

Advertisement

Udayavani is now on Telegram. Click here to join our channel and stay updated with the latest news.

Next