Advertisement

ಅಯಳ್‌ಕ್‌ ನಾಟಕ ಪಿರ್ಸ ಅಣಕ್ಕ್ ಕೃಷಿ!

09:46 AM Feb 01, 2020 | mahesh |

ಮಕ್ಕಳ ರಂಗಭೂಮಿ ಕ್ಷೇತ್ರದಲ್ಲಿ ಐ.ಕೆ. ಬೊಳುವಾರು ಅವರ ಹೆಸರು ಪರಿಚಿತ. ಹೊಸ ನಮೂನೆಯ ನಾಟಕಗಳ ನಿರ್ದೇಶನ ಮಾತ್ರವಲ್ಲ, ಹೊಸತಲೆಮಾರಿನವರೊಡನೆ ಒಡನಾಟದಿಂದಾಗಿ “ಇಬ್ರಾಹಿಂ ಕುಂಞಿ ಬೊಳುವಾರು’ ಎಂದರೆ ಯುವಜನತೆಗೂ ಇಷ್ಟ. ಅವರು ಈ ರಂಗಭೂಮಿಯ ಗೀಳು ಅಂಟಿಸಿಕೊಂಡು ಫ‌‌ಕೀರನಂತೆ ಓಡಾಡಿಕೊಂಡಿದ್ದಾಗ, ಮನೆಯ ಜವಾಬ್ದಾರಿಯ ಸೂತ್ರ ಹಿಡಿದು ನಡೆಸಿದವರು ಅವರ ಪತ್ನಿ ಅಪ್ಸಾ ಬೊಳುವಾರು. ಕೃಷಿಪ್ರಿಯೆಯಾದ ಆಕೆ ವೈಚಾರಿಕ ಸಾಹಿತ್ಯವೇನೂ ಓದಿದವರಲ್ಲ. ಆದರೆ, ಅಂತಹ ಪದಗಳ ಹಂಗಿಲ್ಲದೇ ವೈಚಾರಿಕ ಸೂಕ್ಷ್ಮತೆಯೊಂದಿಗೆ ಬದುಕು ನಡೆಸುತ್ತಿರುವವರು. ಅಪ್ಸಾ ಜೊತೆ ಮಾತನಾಡೋಣ ಎಂದು ಪುತ್ತೂರಿನ ಬೊಳುವಾರು ಎಂಬಲ್ಲಿ ಮುಖ್ಯ ರಸ್ತೆಯಿಂದ ಕೊಂಚ ದೂರ ನಡೆಯುವಾಗ, ಗಿಡಗಳಿಗೆ ನೀರುಣಿಸುತ್ತ ಅವರೇ ಸ್ವಾಗತಿಸಿದರು. “ಗಿಡಗಳೆಂದರೆ ನನಗೆ ಬಹಳ ಪ್ರೀತಿ’ ಎನ್ನುವಾಗ ಅವರ ಕಣ್ಣಲ್ಲಿ ಅಕ್ಕರೆಯ ಮಿಂಚು. ಹಾಗೆ ಮಾತು ಶುರುಮಾಡಿದ ಅವರ ನುಡಿಗಳು ಬಹಳ ನೇರ.

Advertisement

ನಾನು ಮದುವೆಯಾಗಿ ಒಂದೂರಿನಿಂದ ಬಹಳ ದೂರದ ಮತ್ತೂಂದು ಊರಿಗೆ ಹೋಗುವ ಸಂದರ್ಭ ಬರಲಿಲ್ಲ. ಬೊಳುವಾರು ಬೈಲು ಎಂಬ ಪಕ್ಕದ ಊರಿನಲ್ಲೇ ನನ್ನ ತವರು. ಈಗಂತೂ ತವರುಮನೆ ಪಕ್ಕವೇ ನಾವು ಮನೆ ಕಟ್ಟಿಕೊಂಡಿರುವುದರಿಂದ ತವರಿನ ಸಂಬಂಧಿಕರೂ, ಗಂಡನ ಕಡೆಯ ಸಂಬಂಧಿಕರೂ ಇಲ್ಲೇ ಆಸುಪಾಸಿನಲ್ಲೇ ನೆಮ್ಮದಿಯಿಂದ ಇದ್ದೇವೆ. ಇವರು ಬಿಎಸ್‌ಎನ್‌ಎಲ್‌ನಲ್ಲಿ ಅಂದರೆ ಆಗಿನ ಟೆಲಿಫೋನ್‌ ವಿಭಾಗದಲ್ಲಿ ಕೆಲಸದಲ್ಲಿ ಇದ್ದುದರಿಂದ ವರ್ಗಾವಣೆ ಸಹಜವಾಗಿತ್ತು. ಹಾಗಾಗಿ, ಮೂಡುಬಿದಿರೆ, ವಿಟ್ಲ, ಬಪ್ಪಳಿಗೆ ಅಂತೆಲ್ಲ ಏಳು ಮನೆಗಳನ್ನು ಬದಲಾಯಿಸಬೇಕಾಯಿತು. ಬಾಡಿಗೆಮನೆಯ ಕಷ್ಟಸುಖವನ್ನು ಯಥೇತ್ಛವಾಗಿ ಅನುಭವಿಸಿದ್ದೇನೆ. ಯಾಕೆಂದರೆ, ಇವರೋ ವೃತ್ತಿಯ ಹೊರತಾಗಿ ಸಮಯವನ್ನೆಲ್ಲ ರಂಗಭೂಮಿ ಕ್ಷೇತ್ರಕ್ಕೇ ಮೀಸಲಿಟ್ಟವರು. ಮನೆ ಕಟ್ಟಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯೇನೂ ಇದ್ದವರಲ್ಲ. “ಫ‌ಕೀರರಂತೆ ಸುತ್ತುತ್ತಾ ಇರೋಣ’ ಎಂಬ ಮನೋಭಾವನೆಯಲ್ಲಿಯೇ ಇದ್ದರು. ನನಗೂ ಮೊದ ಮೊದಲು ಮನೆಕಟ್ಟಿಕೊಳ್ಳುವ ಬಗ್ಗೆ ಯೋಚನೆಯೇನೂ ತಲೆಗೆ ಹೋಗಲಿಲ್ಲ. ಆದರೆ, ಮಗ ಕಬೀರ ಮಾನವ ಮತ್ತು ಮಗಳು ಸಹಮತ ದೊಡ್ಡವರಾಗುತ್ತಲೇ ಹೀಗೆ ತಿರುಗಾಡುತ್ತ ಜೀವನ ಮಾಡುವುದು ಸರಿಯಲ್ಲ ಎಂದೆನಿಸಿತು. ಹಾಗಾಗಿ, ನಾನು ಮನೆ ಕಟ್ಟಬೇಕು ಎಂದು ದುಂಬಾಲು ಬಿದ್ದೆ. ತವರುಮನೆ ಕಡೆಯಿಂದ ಬಂದ ನಿವೇಶನದಲ್ಲಿ ಮನೆಕಟ್ಟಲು ಶುರು ಮಾಡಿದೆವು.

ನಾನಾಗಲಿ ಅವರಾಗಲಿ, ಬದುಕಿನಲ್ಲಿ ಕಷ್ಟಗಳು ಬಂದಾಗ, ಆಕಾಶವೇ ತಲೆಮೇಲೆ ಬಿತ್ತು ಎಂಬಂತೆ ಕಂಗಾಲಾಗುವ ಸ್ವಭಾವದವರಲ್ಲ. ಹೇಗೋ ಕಷ್ಟಗಳು ಸರಿದು ಹೋಗುತ್ತವೆ ಎಂದುಕೊಂಡಿದ್ದೇವೆ. ಈ ಮನೆಕಟ್ಟುವುದು ಸುಲಭವೇನೂ ಆಗಿರಲಿಲ್ಲ. ಹಾಗೆ ಕಷ್ಟಪಟ್ಟು ಮನೆ ಕಟ್ಟಿದ್ದರಿಂದ ಇವತ್ತು ಆರಾಮವಾಗಿ ನಮ್ಮ ಗೂಡಿನಲ್ಲಿ ಇರುವುದು ಸಾಧ್ಯವಾಗಿದೆ. ನನಗೆ ಸ್ವಲ್ಪ ವಿಶಾಲವಾದ ಜಾಗ ಇದ್ದರೆ ಒಳ್ಳೆಯದಿತ್ತು ಎಂದು ಆಗಾಗ ಅನಿಸುವುದುಂಟು. ಯಾಕೆಂದರೆ, ನನ್ನ ಅಪ್ಪ ಶಾಬಾನ್‌ ಮತ್ತು ಅಮ್ಮ ಬೀಪಾತುಮ್ಮ ಕೃಷಿಕರಾಗಿದ್ದರು. ಭತ್ತದ ಕೃಷಿ ಮತ್ತು ಧಾನ್ಯದ ಕೃಷಿಯನ್ನು ಮಾಡಿಕೊಂಡೇ ಜೀವನ ನಿರ್ವಹಣೆ ಮಾಡಿದವರು. ನನಗೆ ಕೃಷಿಯೆಂದರೆ ಪಂಚಪ್ರಾಣ. ಬಾಲ್ಯವನ್ನೆಲ್ಲ ಭತ್ತದ ಕೃಷಿಯ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಿದ್ದೆ. ಅಪ್ಪನೊಡನೆ ಓಡಾಡುತ್ತ ನೇಜಿ ನೆಡುವುದು, ಭತ್ತವನ್ನು ಹಸನು ಮಾಡುವುದು, ಅವುಗಳ ಕಳೆ ಕೀಳುವುದು ಎಲ್ಲ ಖುಷಿಯ ಕೆಲಸವಾಗಿತ್ತು. ಈಗಲೂ ಮನೆಯ ಮುಂದಿರುವ ತುಸು ಜಾಗದಲ್ಲಿ ನಾನು ಹೂವಿನ ಗಿಡಗಳನ್ನು ನೆಟ್ಟಿದ್ದೇನೆ. ನನ್ನ ಮಗಳಿಗೆ ಉಡುಪಿ ಮಲ್ಲಿಗೆ ಎಂದರೆ ತುಂಬ ಇಷ್ಟ. ನಾನು ಆ ಬಳ್ಳಿಗಳನ್ನು ನೆಟ್ಟಿದ್ದು, ಅವು ಸೊಗಸಾಗಿ ಬೆಳೆದಿವೆ. ಎಂಥಾ ಬೇಸಿಗೆಯ ಬಿರುಬಿಸಿಲೇ ಬರಲಿ, ಈ ಹೂವಿನ ಗಿಡಗಳು ಬಾಡಬಾರದು ಎಂದು ಜೋಪಾನ ಮಾಡುತ್ತೇನೆ. ಟೆರೇಸ್‌ ಮೇಲೆ ಅಮೃತ ಬಳ್ಳಿಯನ್ನು ನೆಟ್ಟಿದ್ದೇನೆ. ಅದು ವಿಶಾಲವಾಗಿ ಸರಳೊಂದಕ್ಕೆ ಹರಡಿಕೊಂಡಿದೆ. ಹೀಗೆ ಇನ್ನೂ ಹೆಚ್ಚು ಗಿಡಗಳನ್ನು ಹಾಕುವುದಕ್ಕೆ ವಿಶಾಲ ಜಾಗವಿದ್ದರೆ ಚೆನ್ನಾಗಿತ್ತು ಎಂದು ಆಗಾಗ ಅನಿಸುತ್ತದೆ. ಆದರೇನೂ ಬೇಸರವಿಲ್ಲ. ಇದ್ದುದರಲ್ಲಿ ಗಿಡಗಳು ಹಸಿರಾಗಿ ಬೆಳೆದಿವೆ.

ಆ ಕಾಲದಲ್ಲಿ ಹೆಣ್ಮಕ್ಕಳು ಶಾಲೆಗೆ ಹೋಗುವುದೇ ಭಾರೀ ವಿಚಿತ್ರದ ವಿಷಯವಾಗಿತ್ತು. ಆದರೂ ಅಪ್ಪ ನನ್ನನ್ನು ನಾಲ್ಕನೇ ಕ್ಲಾಸಿನವರೆಗೆ ಶಾಲೆಗೆ ಕಳುಹಿಸಿದ್ದಾರೆ. ನಾನು ಶಾಲೆಗೆ ಹೋಗುವುದನ್ನು ನಿಲ್ಲಿಸಿದ ಕೆಲಸಮಯದಲ್ಲೇ ಅಪ್ಪ ಹೋಗಿಬಿಟ್ಟರು. ಅಮ್ಮನೂ ಬೇಗನೇ ತೀರಿಕೊಂಡರು. ಅಪ್ಪನಂತೆಯೇ ನಮ್ಮನ್ನೆಲ್ಲ ಅಕ್ಕರೆಯಿಂದ ಸಾಕಿಸಲಹಿದವನು ಅಣ್ಣ ಅಬ್ದುಲ್‌ ಹಮೀದ್‌. ಇವರೊಡನೆ ನನ್ನ ಮದುವೆ ಗೊತ್ತಾದಾಗ, ಅಕ್ಕಪಕ್ಕದ ಊರಾದರೂ ನಾವಿಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡಿರಲಿಲ್ಲ. ಇವರಣ್ಣ ಮದುವೆ ಮಾತುಕತೆ ನಿಶ್ಚಯ ಮಾಡಿದ ಬಳಿಕ, ಇವರ ಬಳಿ, “ಹುಡುಗಿಯನ್ನು ನೋಡಬೇಕೇ?’ ಎಂದು ಕೇಳಿದ್ದರಂತೆ. ಇವರು, “ನೋಡಿದ ಮೇಲೆ ನಾನು ಬೇಡ ಎಂದರೆ ಈ ಮದುವೆ ನಿಲ್ಲುತ್ತದೆಯೇ. ಇಲ್ಲವಲ್ಲ, ಹಾಗಾಗಿ ನನಗೆ ಈ ಮದುವೆ ಒಪ್ಪಿಗೆಯೇ’ ಎಂದರಂತೆ. ಆಗಿನ ಕಾಲದಲ್ಲೆಲ್ಲ, ಹಿರಿಯರು ಒಪ್ಪಿದರೆ ಮದುವೆ ನಿಶ್ಚಿತ ಅಲ್ಲವೇ.

ಒಟ್ಟಿನಲ್ಲಿ ಮದುವೆಯಾದಾಗ ಇವರಿಗೆ ಮೂಡುಬಿದರೆಯಲ್ಲಿ ಕೆಲಸವಿತ್ತು. ನಮ್ಮದೇ ಮನೆ ಮಾಡಿಕೊಳ್ಳುವವರೆಗೆ ನಾನು ಉಡುಪಿಯಲ್ಲಿ ಅವರಣ್ಣ ಬೊಳುವಾರು ಮಹಮ್ಮದ್‌ ಕುಂಞಿ ಅವರ ಮನೆಯಲ್ಲಿ ಅತ್ತಿಗೆ ಜೊತೆಗಿದ್ದೆ. ನಾವಿಬ್ಬರೂ ಬದುಕು ಕಟ್ಟಿಕೊಳ್ಳುವ ಪಯಣ ಅಲ್ಲಿಂದಲೇ ಶುರುವಾಗಿದ್ದು.

Advertisement

ನಾನು ಆ ಕಾಲದಲ್ಲಿ ಶಾಲೆಗೆ ಹೋಗಿದ್ದರಿಂದ ಇಂದು ಪುಸ್ತಕಗಳನ್ನು ಓದುವುದು, ಪತ್ರಿಕೆಗಳನ್ನು ಓದುವುದು ಸಾಧ್ಯವಾಗಿದೆ. ಅಡುಗೆ ಮತ್ತು ಈ ಗಿಡಗಳ ಪ್ರೀತಿಯ ಹೊರತಾಗಿ ತೀವ್ರವಾದ ಗುಂಗುಹಿಡಿಸುವ ಬೇರೆ ಹವ್ಯಾಸವೇನೂ ನನಗಿಲ್ಲ. ಆದರೆ, ಅಡುಗೆ ಕೆಲಸವನ್ನು ಇಷ್ಟಪಟ್ಟು ಮಾಡುತ್ತೇನೆ. ನಾನು ಮಾಡುವ ಚಹಾ ಇವರಿಗೆ ತುಂಬ ಇಷ್ಟ ಅಂತ ಆಗಾಗ ಹೇಳುತ್ತಾರೆ. ಆದರೆ ಜಪ್ಪಯ್ಯ ಅಂದರೂ ಇವರು ಅಡುಗೆ ಕೆಲಸ ಕಲಿಯುವುದೇ ಇಲ್ಲ. ಈ ಬಗ್ಗೆ ನಾನೂ ಮಗಳೂ ಸೇರಿ ಇವರೊಡನೆ ಭಾರೀ ವಾಗ್ವಾದ ಮಾಡಿದ್ದುಂಟು. ನಮ್ಮಿಬ್ಬರ ಹೋರಾಟದಿಂದಾಗಿ, ಈಗ ನಿವೃತ್ತಿಯ ಬಳಿಕ ಇವರು ಚಹಾ ಮಾಡುವುದನ್ನು ಕಲಿತುಕೊಂಡಿದ್ದಾರೆ. ಬಹುಶಃ ನಾನು ಮಾಡುವ ಎಲ್ಲ ಅಡುಗೆ ಅವರಿಗೆ ಇಷ್ಟ ಎಂದುಕೊಂಡಿದ್ದೇನೆ. ಯಾಕೆಂದರೆ, ಅವರು ಅಡುಗೆಗೆ ಯಾವುದೇ ಕಮೆಂಟ್‌ ಹೇಳುವುದಿಲ್ಲ. ಬಿರಿಯಾನಿ, ಕೋಳಿಸಾರು, ಮೀನಿನ ಖಾದ್ಯ ಏನೇ ಮಾಡಿದರೂ ನಾನು ಮಾತ್ರ ಕುಚ್ಚಲಕ್ಕಿ ಪ್ರಿಯೆ. ಒಂದಿಷ್ಟು ಕುಚ್ಚಲಕ್ಕಿ ಮತ್ತು ತುಸು ಪದಾರ್ಥವಿದ್ದರೆ, ನನಗೆ ಮೃಷ್ಟಾನ್ನ ಭೋಜನವಿದ್ದಂತೆ. ಈ ಬಗ್ಗೆ ಮಕ್ಕಳೂ, ಅವರೂ ನನಗೆ ದಬಾಯಿಸುತ್ತಾರೆ. “ಅಪರೂಪಕ್ಕಾದರೂ ಭರ್ಜರಿಯಾಗಿ ಬಿರಿಯಾನಿಯನ್ನು ತಿನ್ನು ಮಾರಾಯ್ತಿ’ ಎಂದು ಹೇಳುತ್ತಾರೆ. ಆದರೆ, ಕುಚ್ಚಲಕ್ಕಿ ಕೊಡುವ ರುಚಿ, ಮತಾöವ ಬಿರಿಯಾನಿಯಲ್ಲಿದ್ದೀತು ಹೇಳಿ.

ಇವರ ನಾಟಕದ ಗೀಳಿನ ಪ್ರಭಾವದಿಂದ ನಾನೂ ಕೆಲವು ನಾಟಕ ನೋಡುವಂತಾಗಿದೆ. ಕೆಲವು ನಾಟಕಗಳಂತೂ ಬಹಳ ಇಷ್ಟವಾಗಿವೆ. ಅದರಲ್ಲಿಯೂ ಇವರು ನಿರ್ದೇಶಿಸಿದ ತಮಿಳು ಮೂಲದ ನಾಟಕ ಮಾಯಾ ಕುದುರೆ ನನಗೆ ತುಂಬ ಇಷ್ಟವಾಗಿತ್ತು. ಅದೊಂದು ಫ್ಯಾಂಟಸಿ ಕತೆ. ಸ್ವಲ್ಪ ತಮಾಷೆಯಾಗಿಯೇ ಸಾಗಿತು. ಅದರಲ್ಲಿ ನನ್ನ ಮಗಳು ಸಹಮತ ಕೂಡ ನಟಿಸಿದ್ದಳು. ಇವರು ನಿರ್ದೇಶಿಸಿದ ನೆರಳಿನ ಕೋಟೆ, ಮಳೆ ಹಕ್ಕಿ ನಾಟಕಗಳನ್ನು ತುಂಬ ಇಷ್ಟಪಟ್ಟಿದ್ದೇನೆ. ಮಕ್ಕಳಿಬ್ಬರಿಗೂ ಕಲಾಕ್ಷೇತ್ರದಲ್ಲಿಯೇ ಆಸಕ್ತಿ ಇದೆ. ಕಬೀರ್‌ ಈಗ ಬೆಂಗಳೂರಿನಲ್ಲಿ ಸಿನಿಮಾ ಕ್ಷೇತ್ರಕ್ಕೆ ಕೆಲಸ ಮಾಡುತ್ತಾನೆ. ಸೊಸೆ ಶಬಾನಾ, ಮೊಮ್ಮಗ ಇಲಾನ್‌ ಬಂದಾಗಲೇ ನಮ್ಮ ಮನೆಯಲ್ಲಿ ಹಬ್ಬ.

ಉಳಿದಂತೆ ನಮ್ಮ ಹಬ್ಬಗಳನ್ನು ನೆಂಟರಿಷ್ಟರ ಜೊತೆ ಆಚರಿಸುವುದು ಯಾವಾಗಲೂ ಖುಷಿಯೇ. ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವ ದಿನವನ್ನೂ ನಾನು ಸಂಭ್ರಮಿಸಿ ಆಚರಿಸುತ್ತೇನೆ.

ಒತ್ತಡ, ಹೇರಿಕೆ ಇಲ್ಲವೇ ಇಲ್ಲ
ನಮ್ಮ ಆಚಾರ-ವಿಚಾರಗಳನ್ನು ಕಲಿಸಿದ ಅಪ್ಪ, ಹೀಗೆಯೇ ಮಾಡು ಎಂಬುದಾಗಿ ಯಾವತ್ತೂ ಕಟ್ಟಾಜ್ಞೆ ಮಾಡಿದವರಲ್ಲ. ಅದೃಷ್ಟವಶಾತ್‌, ಮದುವೆಯಾದ ಮೇಲೆಯೂ ಇವರು ನನಗೆ, ಹೀಗೆಯೇ ಇರತಕ್ಕದ್ದು ಎಂದು ಕಟ್ಟುಪಾಡುಗಳನ್ನು ವಿಧಿಸಿದವರಲ್ಲ. ನಮ್ಮ ಹೃದಯಕ್ಕೆ ಸರಿ ತೋಚಿದಂತೆ, ಇತರರಿಗೆ ತೊಂದರೆಯಾಗದಂತೆ ಜೀವನ ಮಾಡುವುದು ಅವರಿಗೂ ಇಷ್ಟ , ನನಗೂ ಇಷ್ಟ. ಮಕ್ಕಳನ್ನೂ ಅದೇ ಮಾದರಿಯಲ್ಲಿ ಬೆಳೆಸಿದ್ದರಿಂದ ಅವರೂ ತಮ್ಮದೇ ಕ್ಷೇತ್ರಗಳಲ್ಲಿ ಓದು ಅಧ್ಯಯನ ಎಂದು ಸಾಗಿದ್ದಾರೆ.
– ಅಪ್ಸಾ ಬೊಳುವಾರು

(ನಿರೂಪಣೆ : ಟೀಮ್‌ ಮಹಿಳಾಸಂಪದ)

Advertisement

Udayavani is now on Telegram. Click here to join our channel and stay updated with the latest news.

Next