ಜೈಪುರ್: ಇತ್ತೀಚೆಗೆ ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲನ್ನನುಭವಿಸಿರುವ ವಿಚಾರದಲ್ಲಿ ಗಾಂಧಿ (ಸೋನಿಯಾ, ರಾಹುಲ್) ಕುಟುಂಬವನ್ನು ಟೀಕಿಸಿರುವ ಪಕ್ಷದ ಮುಖಂಡ, ಹಿರಿಯ ವಕೀಲ ಕಪಿಲ್ ಸಿಬಲ್ ವಿರುದ್ಧ ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಕಾಪು : ಕೋರ್ಟ್ ಆದೇಶದ ಬಳಿಕವೂ ಹಿಜಾಬ್ ಧರಿಸಿ ಕಾಲೇಜಿಗೆ ಬಂದು ವಾಪಸ್ಸಾದ ವಿದ್ಯಾರ್ಥಿನಿಯರು
ಸಿಬಲ್ ಗೆ ಕಾಂಗ್ರೆಸ್ ಸಂಸ್ಕೃತಿ ತಿಳಿದಿಲ್ಲ, ಅಷ್ಟೇ ಅಲ್ಲ ಕಾಂಗ್ರೆಸ್ ಬಗ್ಗೆ ಏನೂ ತಿಳಿದಿಲ್ಲ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ. ಗಾಂಧಿ ಕುಟುಂಬ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಮೂಲಕ ಬೇರೆ ನಾಯಕರಿಗೆ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಲು ಅವಕಾಶ ನೀಡಿ ಕೊಡಬೇಕೆಂದು ಕಪಿಲ್ ಸಿಬಲ್ ಹೇಳಿಕೆ ನೀಡಿದ ನಂತರ ಗೆಹ್ಲೋಟ್ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ಕಪಿಲ್ ಸಿಬಲ್ ಅವರು ದೊಡ್ಡ ವಕೀಲರಾಗಿ ಪ್ರಸಿದ್ಧರಾಗಿದ್ದಾರೆ, ಆದರೆ ಕಾಂಗ್ರೆಸ್ ಸಂಸ್ಕೃತಿಯಲ್ಲಿ ಸಾಮಾನ್ಯ ಕಾರ್ಯಕರ್ತ ಕಠಿಣವಾಗಿ ಕಾರ್ಯನಿರ್ವಹಿಸಿದಷ್ಟು ಸಿಬಲ್ ಕೆಲಸ ಮಾಡಿಲ್ಲ. ಅವರಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಕೃಪೆಯಿಂದ ಅವಕಾಶ ಸಿಕ್ಕಿದೆ. ಹೀಗಾಗಿ ನೇರವಾಗಿ ಕೇಂದ್ರ ಸಚಿವ ಸಂಪುಟದಲ್ಲಿ ಅವಕಾಶ ಪಡೆಯುವಂತಾಗಿತ್ತು ಎಂದು ಗೆಹ್ಲೋಟ್ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಹುದ್ದೆ ಪಡೆದ ವ್ಯಕ್ತಿಯಿಂದ ಇಂತಹ ಮಾತುಗಳು ಬರುತ್ತಿರುವುದು ದುರದೃಷ್ಟಕರ. ಕಪಿಲ್ ಸಿಬಲ್ ಗೆ ಕಾಂಗ್ರೆಸ್ ನ ಎಬಿಸಿಡಿಯೂ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಕೆಚ್ಚಿನ ಬಗ್ಗೆಯೂ ತಿಳಿದಿಲ್ಲ. ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಸ್ವಾತಂತ್ರ್ಯಕ್ಕಿಂತ ಮೊದಲು ಮತ್ತು ನಂತರದ ತ್ಯಾಗವನ್ನು ಕಪಿಲ್ ಸಿಬಲ್ ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.