ಹಾಸನ: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿಯವರು ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯಲು ಹೊರಟಿದ್ದಾರೆ. ಅಧಿಕಾರಿಗಳೂ ತರಾತುರಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಿಗದಿ ಮಾಡಿದ್ದಾರೆ. ಈ ಎಲ್ಲಾ ಪ್ರಕ್ರಿಯೆ ಗಳ ಬಗ್ಗೆ ತನಿಖೆ ನಡೆಯಬೇಕು ಎಂದು ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್. ಡಿ.ರೇವಣ್ಣ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.8ರಂದು ನಗರ ಸ್ಥಳೀಯ ಸಂಸ್ಥೆ ಗಳ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳ ಮೀಸಲಾತಿ ನಿಗದಿಯಾಗುತ್ತದೆ. ಆ ದಿನ ಸಂಜೆಯೇ ಗೆಜೆಟ್ ಅಧಿಸೂಚನೆಯೂ ಪ್ರಕಟವಾಗುತ್ತದೆ. ಚುನಾವಣಾಆಯೋಗದಅನುಮತಿಯನ್ನೂ ಅದೇ ದಿನ ಪಡೆದುಕೊಂಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಗಿನ ಜಾವದವರೆಗೂ ಅಧಿಕಾರಿಗಳು ಕಾರ್ಯನಿರತರಾಗಿ ಚುನಾವಣಾ ಅಧಿಕಾರಿಗಳ ನಿಯೋಜನೆ, ಅಧಿಸೂಚನೆ ಹೊರಡಿಸುತ್ತಾರೆ ಎಂದು ಹೇಳಿದರು.
ನೋಟಿಸ್ ತಲುಪಿಲ್ಲ: ಈ ತರಾತುರಿಯಲ್ಲಿ ನಗರಸಭೆಗಳ ಸದಸ್ಯರಿಗೆ ಚುನಾವಣಾ ನೋಟಿಸ್ ಅನ್ನು ಕಳುಹಿಸುವುದಿಲ್ಲ. ಹಿಂದಿನ ದಿನಾಂಕ ಹಾಕಿ ಸದಸ್ಯರಿಗೆ ಚುನಾವಣಾ ನೋಟಿಸ್ ಕಳುಹಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಇನ್ನೂ ಕೆಲವು ಸದಸ್ಯರಿಗೆ ನೋಟಿಸ್ ತಲುಪಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹುದ್ದೆ ಘನತೆ ಮರೆತ್ತಿದ್ದಾರೆ: ಚುನಾವಣಾ ದಿನಾಂಕದ 7 ದಿನ ಮೊದಲೇ ಸದಸ್ಯರಿಗೆ ನೋಟಿಸ್ ತಲುಪಬೇಕು ಎಂಬ ನಿಯಮವಿದೆ. ಆದರೆ, ಆ ನಿಯಮವನ್ನೂ ಪಾಲಿಸಿಲ್ಲ. ಅಧಿಕಾರಿಗಳೂ ಬಿಜೆಪಿ ಮುಖಂಡರ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಆಡಳಿತ ಪಕ್ಷದ ಅಡಿಯಾಳಾಗಿ ಕೆಲಸ ಮಾಡುವ ಅಧಿಕಾರಿಗಳು ತಮ್ಮ ಹುದ್ದೆಘನತೆ ಯನ್ನೂ ಮರೆತಿದ್ದಾರೆ ಎಂದು ರೇವಣ್ಣ ಆರೋಪಿಸಿದರು. ಈ ಎಲ್ಲ ಅಕ್ರಮಗಳ ಬಗ್ಗೆ ತನಿಖೆ ನಡೆಸ ಬೇಕು. ಮುಖ್ಯಮಂತ್ರಿ ಮತ್ತು ಕಾನೂನು ಮಂತ್ರಿಯವರು ಇಂತಹ ಅಕ್ರಮಗಳನ್ನು ಸಹಿಸಲೂ ಬಾರದು ಎಂದು ಹೇಳಿದರು.
ರಿಟ್ ಸಲ್ಲಿಸಿದ್ದೇವೆ: ಮೀಸಲಾತಿ ನಿಗದಿಯಲ್ಲಿ ಲೋಪ ಹಾಗೂ ಚುನಾವಣಾ ಪ್ರಕ್ರಿಯೆಯ ಅಕ್ರಮದ ಬಗ್ಗೆ ಕೋರ್ಟ್ನಲ್ಲೂ ಪ್ರಶ್ನೆ ಮಾಡುತ್ತೇವೆ. ಈಗಾಗಲೇ ರಿಟ್ ಸಲ್ಲಿಸಿದ್ದೇವೆ. ಕಾನೂನು ಸಚಿವರ ನೇತೃತ್ವದ ಸಚಿವ ಸಂಪುಟ ಉಪ ಸಮಿತಿ ರೂಪಿಸಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಮೀಸಲಾಗಿ ನಿಗದಿಯ ಮಾರ್ಗ ದರ್ಶಿ ಸೂತ್ರಗಳ ಪ್ರಕಾರ ಹಾಸನ ಮತ್ತು ಅರಸೀಕೆರೆ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ (ಎಸ್ಟಿ)ಕ್ಕೆ ಮೀಸಲಾಗುವಂತೆಯೇ ಇಲ್ಲ ಎಂದು ಹೇಳಿದರು.
ನಾಲ್ಕೈದು ಅವಧಿಯ ನಂತರ ಈ ಎರಡುನಗರಸಭೆಗಳಿಗೆ ಎಸ್ಟಿ ಮೀಸಲಾಗಬೇಕಾಗಿತ್ತು. ಈ ಎರಡೂ ನಗರಸಭೆಗಳಲ್ಲಿ ಜೆಡಿಎಸ್ಗೆ ಬಹುಮತವಿದ್ದರೂ ಎಸ್ಟಿ ಅಭ್ಯರ್ಥಿಗಳು ಗೆದ್ದಿಲ್ಲ ಎಂದು, ಬಿಜೆಪಿಯಲ್ಲಿ ಒಬ್ಬೊಬ್ಬ ಎಸ್ಟಿ ಅಭ್ಯರ್ಥಿ ಇರುವುದರಿಂದ ಹಾಸನ ಮತ್ತುಅರಸೀಕೆರೆ ನಗರಸಭೆ ಅಧ್ಯಕ್ಷ ಸ್ಥಾನವನ್ನುಎಸ್ಟಿಗೆ ಮೀಸಲಿರಿಸಿ, ಹಿಂಬಾಗಿಲ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಅಸ್ತಿತ್ವಉಳಿಸಿಕೊಳ್ಳಲು ಹೊರಟಿರುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದರು.