Advertisement

ಸರ್ಕಾರ ರಚನೆಗೂ ಮೊದಲೇ ಸ್ಥಾನಮಾನ ನಿರೀಕ್ಷೆ

12:57 PM Jul 25, 2019 | Naveen |

ಹಾವೇರಿ: ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ವಿಶ್ವಾಸ ಮತ ಗೆದ್ದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಬಹುದು? ಎಷ್ಟು ಸಚಿವ ಸ್ಥಾನ ಲಭಿಸಬಹುದು ಎಂಬ ಬಗ್ಗೆ ವ್ಯಾಪಕ ಚರ್ಚೆ ಶುರುವಾಗಿದೆ. ಇದರ ಜತೆಗೆ ಸರ್ಕಾರ ರಚನೆಗೂ ಮೊದಲೇ ಜಿಲ್ಲೆಯ ಬಿಜೆಪಿ ಶಾಸಕರಲ್ಲಿ ಸಚಿವ ಸ್ಥಾನದ ಆಸೆ ಚಿಗುರೊಡೆದಿದ್ದು ಮುಖಂಡರ ಗಮನಸೆಳೆಯುವ ಪ್ರಯತ್ನ ನಡೆದಿದೆ.

Advertisement

ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದಾಗ ಜಿಲ್ಲೆಗೆ ಎರಡು ಸಚಿವ ಸ್ಥಾನ, ವಿಧಾನ ಪರಿಷತ್‌ ಸದಸ್ಯ ಸ್ಥಾನ, ಮೂರು ನಿಗಮ-ಮಂಡಳಿ ಸೇರಿ ಜಿಲ್ಲೆಗೆ ಭರಪೂರ ಸ್ಥಾನಮಾನ ಸಿಕ್ಕಿತ್ತು. ಆ ಕಾಲ ಈಗ ಮರುಕಳಿಸಬಹುದು ಎಂಬ ಲೆಕ್ಕಾಚಾರ ಬಿಜೆಪಿ ವಲಯದಲ್ಲಿ ನಡೆಯುತ್ತಿದೆ. ಪಕ್ಷದ ಹಿರಿಯ ಮುಖಂಡ ಸಿ.ಎಂ. ಉದಾಸಿ ಹಾಗೂ ಪ್ರಭಾವಿ ನಾಯಕ ಬಸವರಾಜ ಬೊಮ್ಮಾಯಿ ಅವರಿಗೆ ಸಚಿವ ಸ್ಥಾನ ಸಿಕ್ಕಿಯೇ ಸಿಗುತ್ತದೆ ಎಂಬ ಲೆಕ್ಕಾಚಾರ ಸಹಜವಾಗಿದೆ. ಆದರೆ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯ ಸ್ಥಿತ್ಯಂತರದ ಸುಳಿಯಲ್ಲಿರುವ ಬಿ.ಸಿ. ಪಾಟೀಲ ಮತ್ತು ವಿಶ್ವಾಸಮತದ ಸಭೆಗೆ ಗೈರಾಗಿ ಮೈತ್ರಿ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್‌ ಪಡೆದ ಆರ್‌. ಶಂಕರ್‌ ಇಬ್ಬರೂ ಬಿಜೆಪಿಗೆ ಬಂದರೆ ಅವರಿಗೆ ಪಕ್ಷ ಯಾವ ಸ್ಥಾನ ನೀಡುತ್ತದೆ ಎಂಬುದು ಹೆಚ್ಚು ಕುತೂಹಲ ಕೆರಳಿಸಿದೆ.

ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಿ.ಎಂ. ಉದಾಸಿಯವರಿಗೆ ಲೋಕೋಪಯೋಗಿ ಸಚಿವರನ್ನಾಗಿ, ಬಸವರಾಜ ಬೊಮ್ಮಾಯಿ ಅವರನ್ನು ಜಲಸಂಪನ್ಮೂಲ ಸಚಿವರನ್ನಾಗಿ ಮಾಡುವ ಮೂಲಕ ಜಿಲ್ಲೆಗೆ ಎರಡು ಸಚಿವ ಸ್ಥಾನ ನೀಡಲಾಗಿತ್ತು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು ಆಯೋಗದ ಅಧ್ಯಕ್ಷ ಸ್ಥಾನವನ್ನು ಹಾವೇರಿ ಶಾಸಕ ನೆಹರು ಓಲೇಕಾರ ಅವರಿಗೆ, ಮಲಪ್ರಭ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಸೋಮಣ್ಣ ಬೇವಿನಮರದ ಅವರಿಗೆ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ಭೋಜರಾಜ ಕರೂದಿ ಅವರಿಗೆ ನೀಡಲಾಗಿತ್ತು. ಇದರ ಜತೆಗೆ ಸೋಮಣ್ಣ ಬೇವಿನಮರದ ಅವರಿಗೆ ವಿಧಾನ ಪರಿಷತ್‌ ಸದಸ್ಯ ಸ್ಥಾನವನ್ನೂ ನೀಡಲಾಗಿತ್ತು. ಹೀಗೆ ಜಿಲ್ಲೆಗೆ ರಾಜಕೀಯ ಸ್ಥಾನಮಾನ ದೊಡ್ಡ ಪ್ರಮಾಣದಲ್ಲಿ ಸಿಕ್ಕಿತ್ತು. ಆಗ ಜಿಲ್ಲೆಯಲ್ಲಿ ಹಿರೇಕೆರೂರು ಹೊರತುಪಡಿಸಿ ಜಿಲ್ಲೆಯ ಉಳಿದ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರು.

ಅಂದಿನ ಸ್ಥಿತಿ ಇಂದಿಲ್ಲ: ಈ ಬಾರಿ ಅಂದಿನ ಸ್ಥಿತಿ ಇಲ್ಲ. ಜಿಲ್ಲೆಯಲ್ಲಿ ಹಿರೆಕರೂರು ಹಾಗೂ ರಾಣಿಬೆನ್ನೂರು ಹೊರತುಪಡಿಸಿ ಜಿಲ್ಲೆಯ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು ಸ್ಥಾನಮಾನದ ಆಸೆ ಗರಿಗೆದರಿದೆ. ಮೂರು ಬಾರಿ ಶಾಸಕರಾಗಿ (ಒಮ್ಮೆ ಬ್ಯಾಡಗಿ, ಎರಡು ಬಾರಿ ಹಾವೇರಿ ಕ್ಷೇತ್ರದಿಂದ ಆಯ್ಕೆ) ಆಯ್ಕೆಯಾಗಿರುವ ಹಾವೇರಿ ಶಾಸಕ ನೆಹರು ಓಲೇಕಾರ ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಮೊದಲ ಬಾರಿಗೆ ಆಯ್ಕೆಯಾದ ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರೂ ರಾಜ್ಯ ಮಟ್ಟದ ಸ್ಥಾನಮಾನದ ನಿರೀಕ್ಷೆಯಲ್ಲಿದ್ದಾರೆ.

ಇನ್ನು ಈ ಬಾರಿ ಹೆಚ್ಚು ಕುತೂಹಲ ಕೆರಳಿಸಿರುವುದು ಹಿರೇಕೆರೂರು ಹಾಗೂ ರಾಣಿಬೆನ್ನೂರು ಕ್ಷೇತ್ರದ ಶಾಸಕರ ಸ್ಥಾನಮಾನ. ಈ ಎರಡೂ ಕ್ಷೇತ್ರದ ಶಾಸಕರು ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆದು ಬಿಜೆಪಿ ಸರ್ಕಾರ ರಚನೆಯಲ್ಲಿ ಸಹಕರಿಸಿದ್ದಾರೆ. ಇವರಿಬ್ಬರೂ ಬಿಜೆಪಿಗೆ ಸೇರ್ಪಡೆಯಾದರೆ ಅವರಿಗೆ ಯಾವ ಸ್ಥಾನಮಾನ ಸಿಗಬಹುದು? ಅವರಿಬ್ಬರಿಗೂ ಸಚಿವ ಸ್ಥಾನ ನೀಡಿದರೆ, ಜಿಲ್ಲೆಯ ಹಿರಿಯ ಶಾಸಕರಿಗೆ ಸಚಿವ ಸ್ಥಾನ ತಪ್ಪಲಿದೆಯೇ ಅಥವಾ ಜಿಲ್ಲೆಗೆ ನಾಲ್ಕು ಸಚಿವ ಸ್ಥಾನಗಳ ಬಂಪರ್‌ ಕೊಡುಗೆ ಸಿಗಬಹುದೇ? ರಾಣಿಬೆನ್ನೂರು ಹಾಗೂ ಹಿರೇಕೆರೂರು ಎರಡೂ ಕ್ಷೇತ್ರದ ಬಿಜೆಪಿ ಮುಖಂಡರಿಗೆ ಯಾವ ಸ್ಥಾನಮಾನ ಸಿಗಬಹುದು ಎಂಬುದು ಕುತೂಹಲ ಕೆರಳಿಸಿದೆ.

Advertisement

‘ಕೈ’ ಅವಧಿಯಲ್ಲಿ ಸ್ಥಾನಮಾನ ಕಡಿಮೆ: ಈ ಹಿಂದಿನ ಅವಧಿಯಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್‌ ಸರ್ಕಾರದಲ್ಲಿ ಜಿಲ್ಲೆಗೆ ಒಂದು ಸಚಿವ ಸ್ಥಾನ ಕೊಡಲು ಸಹ ಭಾರಿ ಮೀನಾಮೇಷ ಎಣಿಸಿ ಕೊನೆಗೆ ಒಂದೂವರೆ ವರ್ಷದ ಬಳಿಕ ಹಾನಗಲ್ಲ ಶಾಸಕ ಮನೋಹರ ತಹಸೀಲ್ದಾರ್‌ ಅವರಿಗೆ ಸಚಿವ (ಅಬಕಾರಿ)ಸ್ಥಾನ ಕೊಟ್ಟು ವರ್ಷದೊಳಗೇ ಅವರಿಂದ ಸಚಿವ ಸ್ಥಾನ ವಾಪಸ್‌ ಪಡೆಯಲಾಗಿತ್ತು. ಬಳಿಕ ನಡೆದ ರಾಜಕೀಯ ತಲ್ಲಣಗಳ ನಡುವೆ (ಸಚಿವ ಪರಮೇಶ ನಾಯ್ಕ ರಾಜೀನಾಮೆ)ಲಂಬಾಣಿ ಸಮುದಾಯದವರಿಗೆ ಸಚಿವ ಸ್ಥಾನ ನೀಡುವ ಸಂದರ್ಭ ನಿರ್ಮಾಣವಾಗಿ ನಿರಾಯಾಸವಾಗಿ ಹಾವೇರಿ ಕ್ಷೇತ್ರದ ಶಾಸಕ ರುದ್ರಪ್ಪ ಲಮಾಣಿಯವರಿಗೆ ಸಚಿವ ಸ್ಥಾನ ಒಲಿದಿತ್ತು.

ಒಟ್ಟಾರೆ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಒಂದು ಸಚಿವ ಸ್ಥಾನ ಸಿಗುವುದೇ ಕಷ್ಟ ಎನ್ನುವ ಪರಿಸ್ಥಿತಿ ಇತ್ತು ಎಂಬುದು ಇಲ್ಲಿ ಸ್ಮರಣೀಯ. ಈ ಅವಧಿಯಲ್ಲಿಯೇ ಬಹಳ ವಿಳಂಬವಾಗಿ ಬ್ಯಾಡಗಿಯ ಎಸ್‌.ಆರ್‌ ಪಾಟೀಲರಿಗೆ ಜೈವಿಕ ಇಂಧನ ಅಭಿವೃದ್ಧಿ ನಿಗಮ ಹಾಗೂ ಎ.ಎಂ. ಪಠಾಣ ಅವರಿಗೆ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಸ್ಥಾನ ಜಿಲ್ಲೆಯವರಿಗೆ ನೀಡಲಾಗಿತ್ತು.

2018ರಲ್ಲಿ ಬಂದ ಕಾಂಗ್ರೆಸ್‌-ಜೆಡಿಎಸ್‌ ಮೃತ್ರಿ ಸರ್ಕಾರದ ಅವಧಿಯಲ್ಲಂತೂ ಜಿಲ್ಲೆಗೆ ಹೆಚ್ಚಿನ ಸ್ಥಾನಮಾನ ಮರೀಚಿಕೆಯಾಗಿತ್ತು. ಆರ್‌. ಶಂಕರ್‌ಗೆ ಬಿಟ್ಟರೆ ಬೇರೆ ಯಾರಿಗೂ ಸಚಿವ ಸ್ಥಾನ ಸಿಗಲಿಲ್ಲ. ಆರಂಭದಿಂದಲೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಬಿ.ಸಿ. ಪಾಟೀಲ ಇದೇ ಕಾರಣಕ್ಕಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದು ಈಗ ಇತಿಹಾಸ.

ಒಟ್ಟಾರೆ ಈ ಬಾರಿ ಬಿಜೆಪಿ ಸರ್ಕಾರ ರಚನೆಗೂ ಮೊದಲೇ ಜಿಲ್ಲೆಗೆ ಹೆಚ್ಚು ಸಚಿವ ಸ್ಥಾನ ಹಾಗೂ ಇತರೆ ಸ್ಥಾನಮಾನ ಲಭಿಸುವ ನಿರೀಕ್ಷೆ ಹೆಚ್ಚಾಗಿದ್ದು, ಇದಕ್ಕಾಗಿ ಎಲ್ಲ ಹಂತದ ಮುಖಂಡರು ಪ್ರಮುಖರ ಗಮನಸೆಳೆಯಲು ಮುಂದಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next