Advertisement

ಏಲಕ್ಕಿ ನಾಡಿಗೆ ಭರಪೂರ ಯೋಜನೆ ನಿರೀಕ್ಷೆ

07:27 PM Jul 29, 2021 | Team Udayavani |

ವೀರೇಶ ಮಡ್ಲೂರ

Advertisement

ಹಾವೇರಿ: ಸಂಘಟನಾ ಚತುರ, ಪಕ್ಷ ನಿಷ್ಠ ನಾಯಕ, ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ನಾಡಿನ ನೂತನ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಸಿಎಂ ತವರು ಕ್ಷೇತ್ರದ ಜನರಲ್ಲಿ ಹರ್ಷ ಮೂಡಿಸಿದೆ. ಇದರ ಜತೆ ತಮ್ಮ ಅಧಿಕಾರವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯಾವ ಹೊಸ ಯೋಜನೆಗಳನ್ನು ಕೊಡುಗೆಯಾಗಿ ನೀಡಲಿದ್ದಾರೆಂಬ ನೀರಿಕ್ಷೆಯನ್ನು ಹುಟ್ಟು ಹಾಕಿದೆ.

ಈಗಾಗಲೇ ಎರಡು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿ, ಮೂರು ಬಾರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದಿಂದ ಗೆಲುವು ಸಾ ಧಿಸಿ ಬಿಜೆಪಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿ, ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ಸದ್ಯ ಬೊಮ್ಮಾಯಿ ಅವರು ರಾಜ್ಯದ ನೂತನ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವುದು ಭವಿಷ್ಯದ ದಿನಗಳಲ್ಲಿ ಜಿಲ್ಲೆಯ ಪಾಲಿಗೆ ಅಭಿವೃದ್ಧಿಯ ಪರ್ವ ಕಾಲವಾಗಿಸುವ ನಿರೀಕ್ಷೆ ಮೂಡಿಸಿದೆ.

ಪ್ರತ್ಯೇಕ ಸಹಕಾರಿ ಬ್ಯಾಂಕ್‌: ಕಳೆದ ಒಂದು ದಶಕದಿಂದ ಜಿಲ್ಲೆಗೆ ಪ್ರತ್ಯೇಕ ಸಹಕಾರಿ ಬ್ಯಾಂಕ್‌ ಆಗಬೇಕೆಂಬ ಬೇಡಿಕೆ ಮುಂಚೂಣಿಯಲ್ಲಿದೆ. 2016ರ ಬಜೆಟ್‌ ನಲ್ಲಿ ಘೋಷಣೆಯಾದ ಪ್ರತ್ಯೇಕ ಜಿಲ್ಲಾ ಸಹಕಾರಿ ಬ್ಯಾಂಕ್‌ ಈವರೆಗೂ ಅನುಷ್ಠಾನವಾಗಿಲ್ಲ. ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿಯೇ ಡಿಸಿಸಿ ಬ್ಯಾಂಕ್‌ಗೆ ಒತ್ತಾಯಿಸಿ ಹೋರಾಟ ನಡೆಸಲಾಗಿತ್ತು. ಸದ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಅಧಿ  ಕಾರದಲ್ಲಿದ್ದು, ಸ್ವತಃ ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಗಳಾಗಿರುವುದರಿಂದ ಜಿಲ್ಲೆಯ ಜನರ ದಶಕಗಳ ಬೇಡಿಕೆ ಈಡೇರುವ ನೀರಿಕ್ಷೆ ಹುಟ್ಟು ಹಾಕಿದೆ.

ಕೈಗಾರಿಕಾ ಹಬ್‌ ಸ್ಥಾಪನೆ: ಜಿಲ್ಲೆ ಕೃಷಿ ಪ್ರಧಾನವಾಗಿದ್ದು, ಈವರೆಗೂ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಕೈಗಾರಿಕೆಗಳೇ ಇಲ್ಲದಂತಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಜಿಲ್ಲೆಯ ವಿದ್ಯಾವಂತ ಯುವಕರು ಉದ್ಯೋಗ ಅರಸಿ ಒಲಸೆ ಹೋಗುವಂತಾಗಿದೆ. ಈ ಹಿಂದೆ ಜಿಲ್ಲೆಗೆ ಟಾಟಾ ಮೆಟಾಲಿಕ್‌ ಉಕ್ಕು ಕಾರ್ಖಾನೆ ಬಂದಿತ್ತು. ರೈತರ ವಿರೋಧ ಹಾಗೂ ಅದಿರಿನ ಅಲಭ್ಯತೆ ಕಾರಣದಿಂದ ಜಿಲ್ಲೆಯಿಂದ ಪಲಾಯನವಾಯಿತು. ಕೃಷಿ ಪೂರಕವಾದ ಕೈಗಾರಿಕೆಗಳು ಹೆಚ್ಚು ಪ್ರಮಾಣದಲ್ಲಿ ಜಿಲ್ಲೆಗೆ ಬರಬೇಕಿದ್ದು, ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಿ ಕೈಗಾರಿಕಾ ಹಬ್‌ ಸ್ಥಾಪಿಸುವ ನೀರಿಕ್ಷೆ ಮೂಡಿಸಿದೆ.

Advertisement

ಹೊಸ ತಾಲೂಕು ರಚನೆ: ಜಿಲ್ಲೆಯಲ್ಲಿ ಈಗಾಗಲೇ ರಟ್ಟಿಹಳ್ಳಿ ಹೊಸ ತಾಲೂಕಾಗಿದೆ. ಆದರೆ ಅದು ಇನ್ನೂ ಪೂರ್ಣ ಪ್ರಮಾಣದಲ್ಲಿ ತಾಲೂಕಾಗಿ ಕಾರ್ಯ ನಿರ್ವಹಿಸುವಷ್ಟು ಸಮರ್ಥವಾಗಿಲ್ಲ. ರಟ್ಟಿಹಳ್ಳಿಯಲ್ಲಿ ತಾಲೂಕು ಆಡಳಿತ ಭವನ ನಿರ್ಮಾಣ ಹಾಗೂ ವಿವಿಧ ಕಚೇರಿ ಕಟ್ಟಡಗಳಿಗೆ ವಿಶೇಷ ಅನುದಾನ ನೀಡಬಹುದು. ಇದರ ಜತೆಗೆ ಅಕ್ಕಿಆಲೂರು, ಗುತ್ತಲ, ಬಂಕಾಪುರಗಳನ್ನು ತಾಲೂಕಾಗಿ ಘೋಷಿಸಬಹುದು ಎಂಬ ನಿರೀಕ್ಷೆ ಹೆಚ್ಚಿದೆ.

ವೈದ್ಯಕೀಯ ಕಾಲೇಜು-ಮೆಗಾ ಡೇರಿ ಘಟಕ: ಜಿಲ್ಲೆಯ ಬಹುದಿನಗಳ ಬೇಡಿಕೆಯಾಗಿದ್ದ ವೈದ್ಯಕೀಯ ಕಾಲೇಜು ಮಂಜೂರಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಡಿ 478.75 ಕೋಟಿ ರೂ. ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸಲಾಗುತ್ತಿದೆ. ಆದರೆ ಕಟ್ಟಡದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ನಿರೀಕ್ಷಿಸಿದಂತೆ ನಿರ್ಮಾಣ ಕಾರ್ಯ ನಡೆಯುತ್ತಿಲ್ಲ. ಸದ್ಯ ಬೊಮ್ಮಾಯಿ ಅವರೇ ಮುಖ್ಯಮಂತ್ರಿಗಳಾಗಿದ್ದು, ವೈದ್ಯಕೀಯ ಕಾಲೇಜು ನಿರ್ಮಾಣ ಕಾಮಗಾರಿ ವೇಗ ಪಡೆಯುವ ನಿರೀಕ್ಷೆ ಹುಟ್ಟಿಸಿದೆ. ಅದೇ ರೀತಿ ಜಿಲ್ಲೆಗೆ ಮಂಜೂರಾಗಿರುವ 90 ಕೋಟಿ ವೆಚ್ಚದ ಹಾಲು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಇತ್ತೀಚೆಗೆ ಸಚಿವ ಸಂಪುಟದಲ್ಲಿ ಅನುಮತಿ ದೊರಕಿದ್ದು, ಈ ಯೋಜನೆಗೆ ಸರ್ಕಾರದ ವತಿಯಿಂದ 15 ಕೋಟಿ ರೂ.ಅನುದಾನ ನೀಡಲಾಗಿದೆ. ಮುಂಬರುವ ದಿನಗಳಲ್ಲಿ ಮೆಗಾ ಡೇರಿ ಘಟಕದ ನಿರ್ಮಾಣ ವೇಗ ಪಡೆಯುವ ನೀರಿಕ್ಷೆ ಮೂಡಿಸಿದೆ.

ಇತರೆ ನಿರೀಕ್ಷೆಗಳು: ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ಶಿಗ್ಗಾವಿ, ಸವಣೂರು ಏತ ನೀರಾವರಿ ಯೋಜನೆಗಳಿಗೆ ಅನುದಾನ ನೀಡಿ ಪೂರ್ಣಗೊಳಿಸುವುದು, ಹಾನಗಲ್ಲ ಭಾಗದಲ್ಲಿ ಮಾವು ಸಂಸ್ಕರಣಾ ಘಟಕ, ಉದ್ಯೋಗ ಸೃಜನೆಗಾಗಿ ಮಂಜೂರಾಗಿರುವ ಜಿಟಿಡಿಸಿ ತರಬೇತಿ ಕಟ್ಟಡಕ್ಕೆ ಅನುದಾನ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳ ನಿರೀಕ್ಷೆ ಹುಟ್ಟು ಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next