Advertisement

ಹಾವೇರಿ ಸಂಪೂರ್ಣ ಲಾಕ್‌ಡೌನ್‌

03:40 PM May 25, 2020 | Suhan S |

ಹಾವೇರಿ: ಲಾಕ್‌ಡೌನ್‌ ನಿಯಮಗಳ ಸಡಿಲಿಕೆಯಿಂದಾಗಿ ಕಳೆದ 15ದಿನಗಳಿಂದ ಸಹಜ ಸ್ಥಿತಿಯಲ್ಲಿದ್ದ ಜಿಲ್ಲೆ ರವಿವಾರ ಮತ್ತೆ ಸ್ತಬ್ಧವಾಯಿತು. ಅಗತ್ಯ ಸೇವೆ ಹೊರತುಪಡಿಸಿ ಎಲ್ಲ ವ್ಯವಹಾರಗಳು ಬಂದ್‌ ಆಗುವ ಮೂಲಕ ಕರ್ಫ್ಯೂಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.

Advertisement

ಕೋವಿಡ್ ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ರವಿವಾರವನ್ನು ಕರ್ಫ್ಯೂ ದಿನವನ್ನಾಗಿ ರಾಜ್ಯ ಸರ್ಕಾರ ಘೋಷಿಸಿದ್ದರಿಂದ ಶನಿವಾರ ಸಂಜೆಯಿಂದಲೇ ಬಸ್‌, ಆಟೋ, ಟ್ಯಾಕ್ಸಿ ಸಂಚಾರ ಬಂದ್‌ ಮಾಡಲಾಗಿತ್ತು. ವಿವಿಧಅಂಗಡಿ ಮುಂಗಟ್ಟುಗಳಿಗೆ ಶನಿವಾರ ಸಂಜೆ ಏಳು ಗಂಟೆ ಹೊತ್ತಿಗೆಯೇ ಪೊಲೀಸರು ಬಾಗಿಲು ಹಾಕಿಸಿದ್ದರು. ಹಾಲು, ಮೀನು, ಮಾಂಸದ ವ್ಯಾಪಾರ ಮಧ್ಯಾಹ್ನ 12ಗಂಟೆವರೆಗೆ ನಡೆಯಿತು. ಉಳಿದಂತೆ ಎಲ್ಲ ವ್ಯಾಪಾರ-ವ್ಯವಹಾರ, ಅಂಗಡಿ ಮುಂಗಟ್ಟುಗಳು ಬಾಗಿಲು ಹಾಕಿದ್ದವು. ಕರ್ಫ್ಯೂ ಕಾರಣದಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಜನ ಸಂಚಾರ, ವಾಹನ ಸಂಚಾರ ಸಂಪೂರ್ಣ ಬಂದ್‌ ಆಗಿತ್ತು. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್‌ ಸಂಚಾರ ಸಂಪೂರ್ಣ ಬಂದ್‌ ಮಾಡಿತ್ತು. ಮದ್ಯದಂಗಡಿಗಳು, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳು ಸಹ ಸಂಪೂರ್ಣ ಬಂದ್‌ ಆಗಿದ್ದವು. ಜನರು ಇಡೀ ದಿನ ಮನೆಯಲ್ಲಿಯೇ ಇದ್ದು ಕರ್ಫ್ಯೂಗೆ ಬೆಂಬಲ ನೀಡಿದರು. ತುರ್ತು ಅಗತ್ಯ ಸೇವೆಗಳಾದ ಆಸ್ಪತ್ರೆ, ಔಷಧ  ಅಂಗಡಿ, ಹಾಲಿನ ಡೈರಿ ಹಾಗೂ ಪೆಟ್ರೊಲ್‌ ಬಂಕ್‌ಗಳು ಮಾತ್ರ ತೆರೆದಿದ್ದವು.

ತರಕಾರಿಗೆ ಪರದಾಟ: ಲಾಕ್‌ಡೌನ್‌ ಘೋಷಣೆಯಾದಾಗಿನಿಂದ ತರಕಾರಿಯನ್ನು ಒಂದೆಡೆ ಇಟ್ಟು ಮಾರಲು ಅಧಿಕಾರಿಗಳು ಅವಕಾಶ ನೀಡಿಲ್ಲ. ವ್ಯಾಪಾರಸ್ಥರು ವಾಹನ, ತಳ್ಳುವ ಗಾಡಿಗಳಲ್ಲಿ ಮನೆ ಮನೆಗೆ ಹೋಗಿ ತರಕಾರಿ ಮಾರಾಟ ಮಾಡುತ್ತಿದ್ದರು. ಆದರೆ, ರವಿವಾರ ತರಕಾರಿ ಗಾಡಿಗಳ ಸಂಚಾರಕ್ಕೆ ಪೊಲೀಸರು ಅವಕಾಶ ಕೊಡಲಿಲ್ಲ. ಮಾರುಕಟ್ಟೆಯಲ್ಲಿಯೂ ತರಕಾರಿ ಅಂಗಡಿ ತೆರೆಯಲು ಅವಕಾಶ ನೀಡಲಿಲ್ಲ. ಇದರಿಂದಾಗಿ ಜನರು ತರಕಾರಿಗಾಗಿ ಪರದಾಡುವಂತಾಯಿತು.

ಕರ್ಫ್ಯೂ ಹಿನ್ನೆಲೆಯಲ್ಲಿ ಬಹುತೇಕ ಜನರು ಶನಿವಾರವೇ ಅವಶ್ಯಕ ವಸ್ತುಗಳನ್ನು ಹೆಚ್ಚಾಗಿ ಖರೀದಿಸಿ, ರವಿವಾರ ಮನೆಯಿಂದ ಹೊರಬರುವ ಪ್ರಯತ್ನ ಮಾಡಲಿಲ್ಲ. ಜನರು ಎಲ್ಲಿಯೂ ಹೋಗದೆ ಮನೆಯಲ್ಲಿಯೇ ಸ್ವಯಂ ಬಂಧಿಯಾದರು. ಸಾಮಾನ್ಯವಾಗಿ ಜಿಲ್ಲೆಯಲ್ಲಿ ರವಿವಾರ ಶೇ. 60 ರಿಂದ 70ರಷ್ಟು ವ್ಯಾಪಾರಸ್ಥರು ವಾರದ ರಜಾ ದಿನ ಆಚರಿಸುತ್ತಾರೆ. ರವಿವಾರವೇ ಕರ್ಫ್ಯೂ ಇರುವುದರಿಂದ ಉಳಿದ ವ್ಯಾಪಾರಸ್ಥರು, ಸೇವಾದಾರರು ಸಹ ಸ್ವಯಂ ಪ್ರೇರಣೆಯಿಂದ ತಮ್ಮ ವ್ಯಾಪಾರ-ವ್ಯವಹಾರ, ಸೇವೆ ಬಂದ್‌ ಮಾಡಿ ಕರ್ಫ್ಯೂಗೆ ಬೆಂಬಲ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next