Advertisement

Haveri; ಸರ್ಕಾರಿ ಉದ್ಯೋಗ ತಂತಿ ಮೇಲಿನ ನಡಿಗೆ – ಎಂ.ಕೆ.ಮರಿಗೌಡರ

06:20 PM Oct 17, 2023 | Team Udayavani |

ಹಾನಗಲ್ಲ: ಸರಕಾರಿ ಉದ್ಯೋಗಗಳು ಹೆಚ್ಚು ಒತ್ತಡದ ಹಾಗೂ ಬಹಳಷ್ಟು ಜವಾಬ್ದಾರಿಯಲ್ಲಿ ಕಾರ್ಯ ನಿರ್ವಹಿಸುವ ಹಂತದಲ್ಲಿದ್ದು ತಂತಿಯ ಮೇಲಿನ ನಡಿಗೆಯಂತಾಗಿವೆ ಎಂದು ಕಲಘಟಗಿಯ ನಿವೃತ್ತ ಕ್ಷೇತ್ರ ಶಿಕ್ಷಣಾ ಧಿಕಾರಿ ಎಂ.ಕೆ.ಮರಿಗೌಡರ ಅಭಿಪ್ರಾಯಿಸಿದರು.

Advertisement

ಹಾನಗಲ್ಲಿನಲ್ಲಿ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ ಆಯೋಜಿಸಿದ ಗುರುವಂದನಾ
ಸಮಾರಂಭದಲ್ಲಿ ವಿದ್ಯಾರ್ಥಿಗಳಿಂದ ಗುರು ವಂದನೆ ಸ್ವೀಕರಿಸಿ ಮಾತನಾಡಿದ ಅವರು, ವೃತ್ತಿ ಪ್ರವೃತ್ತಿಗಳಲ್ಲಿ ಸಾಮರಸ್ಯ ಉಳಿಸಿಕೊಳ್ಳುವುದೇ ಕಷ್ಟದ ಕೆಲಸವಾಗಿದೆ.

ಅಧಿಕಾರಿಯಾಗಿ ಕೆಲಸ ಮಾಡುವವರಿಗೆ ಅದರ ಆಚೆ ನಿಂತು ನೋಡುವ ಸಮಯಾವಕಾಶವೇ ಇಲ್ಲ. ಇಂಥ ಸಂದಿಗ್ಧ ಸ್ಥಿತಿಯಲ್ಲಿಯೂ ಕೂಡ ವೃತ್ತಿಯನ್ನು ಪ್ರಾಮಾಣಿಕತೆಯಿಂದ ಪೂರ್ಣಗೊಳಿಸುವುದೇ ಹರ ಸಾಹಸದಂತಿದೆ. ಸರಕಾರಿ ಉದ್ಯೋಗಗಳು ಆರ್ಥಿಕ ಭದ್ರತೆ ಒದಗಿಸುತ್ತವೆ. ಅದರೊಂದಿಗೆ ಖಾಸಗಿಯಾಗಿ ಹತ್ತು ಹಲವು ಉದ್ಯಮಗಳಲ್ಲಿ ಸೇವೆ ಸಲ್ಲಿಸಿ ಯಶಸ್ವಿಯಾದ ಸಂದರ್ಭಗಳಿಗೇನೂ ಕಡಿಮೆ ಇಲ್ಲ. ಯಾವ ಉದ್ಯೋಗವೇ ಆಗಿರಲಿ ಅದು ನಿಷ್ಠೆಯಿಂದಿರಲಿ. ಪಾಲಿಗೆ ಬಂದದ್ದನ್ನು ಪ್ರಾಮಾಣಿಕವಾಗಿ ಸ್ವೀಕರಿಸುವ ಮನಸ್ಸು ಬೇಕು ಎಂದರು.

ಸೊರಬದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಂ. ಸತ್ಯನಾರಾಯಣ ಗುರುವಂದನೆ ಸ್ವೀಕರಿಸಿ ಮಾತನಾಡಿ, ಗುರುಗಳನ್ನು ಗೌರವಿಸುವ ಮನಸ್ಸಿನ ಹಿಂದೆ ಇರುವ ಶ್ರದ್ಧೆ, ಪ್ರೀತಿಗಳಿಗೆ ದೊಡ್ಡ ಶಕ್ತಿ ಇದೆ. ಭಾರತೀಯ ಸಂಸ್ಕೃತಿಯಲ್ಲಿ ಇದಕ್ಕೆ ದೊಡ್ಡ ಮೌಲ್ಯವಿದೆ. ಗುರು ಶಿಷ್ಯರ ಸಂಬಂಧಗಳೇ ಹಳಸುತ್ತಿರುವ ಕಾಲದಲ್ಲಿ ಗುರುವನ್ನು ಗೌರವಿಸುತ್ತಿರುವ ಈ ಕಾರ್ಯಕ್ರಮಕ್ಕೆ ಹೆಚ್ಚು ಮೌಲ್ಯ ಬಂದಿದೆ. ತಿಂಗಳಿಗೆ ಸಾವಿರದೊಳಗಿನ ಗೌರವ ಧನ ಪಡೆದು ಈ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದಾಗಲೂ ನಮಗೆ ಸಂತೃಪ್ತಿ ಇತ್ತು. ಅದಕ್ಕೆ ಕಾರಣ ಈ ಕ್ಷೇತ್ರದ ಮಹಿಮೆ. ನಮ್ಮೊಳಗೆ ಆಧ್ಯಾತ್ಮಿಕ ಶೈಕ್ಷಣಿಕ ಚಿಂತನೆಗೆ ಲಿಂ.ಹಾನಗಲ್ಲ ಕುಮಾರಶಿವಯೋಗಿಗಳವರ ಆದರ್ಶಗಳು ಪ್ರೇರಣೆಯಾಗಿದ್ದವು ಎಂದರು.

ಗದಗಿನ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ನಿರ್ದೇಶಕಿ ಮಂಗಳಾ ತಾಪಸ್ಕರ ಗೌರವ ಸಮ್ಮಾನ ಸ್ವೀಕರಿಸಿ ಮಾತನಾಡಿ, ಶಿಷ್ಯರು ನೀಡುವ ಗೌರವದ ಮುಂದೆ ಬೇರಾವ ಗೌರವವೂ ಸಾಟಿ ಅಲ್ಲ. ಪ್ರಶಸ್ತಿಗಳು ನಮ್ಮ ಕೆಲಸಕ್ಕೆ ಸಿಗುವ ಸಮ್ಮಾನಗಳು. ಆದರೆ ಶಿಷ್ಯರು ನೀಡುವ ಗೌರವ ವಿದ್ಯಾರ್ಥಿ ಶಿಷ್ಯರ ನಡುವಿನ ದೀರ್ಘ‌ ಸಂತೃಪ್ತಿಯ ಸಂದೇಶಗಳಾಗಿವೆ.

Advertisement

ವೃತ್ತಿಯಲ್ಲಿನ ಏರುಪೇರುಗಳು ಹಲವು ಬಾರಿ ಒತ್ತಡಕ್ಕೆ ಕಾರಣವಾಗುತ್ತವೆ. ಆದರೆ ಇಂಥ ಸೌಹಾರ್ದ ಪ್ರೀತಿಯ ಸಮಾರಂಭಗಳು ಎಲ್ಲ ಒತ್ತಡಗಳನ್ನು ಕಳೆದು ಹೊಸ ಚೈತನ್ಯ ನೀಡುತ್ತವೆ. ಅಲ್ಲದೇ ಧನ್ಯತಾ ಭಾವ ಜಾಗೃತಗೊಳಿಸುತ್ತವೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ವೈ. ಹೂಗಾರ, ಉಪನ್ಯಾಸಕಿ ತನುಜಾ ನಾಯಕ, ಎಸ್‌.ವೈ. ಬಗಲಿ, ಎಸ್‌.ಎಫ್‌. ಬಂಡಿ, ರವಿರಾಜ ಕೋಪರ್ಡೆ, ಸುರೇಶ ಅರಗಂಜಿ ಗೌರವ ಸ್ವೀಕರಿಸಿ ಮಾತನಾಡಿದರು.

ಸಂಘಟಕರಾದ ಸಿದ್ದಲಿಂಗೇಶ ಒಳಸಂಗದ ಡಾ| ಬಿ.ಎಸ್‌. ರುದ್ರೇಶ, ಆರ್‌.ಎನ್‌.ಪಾಟೀಲ, ಸುನಿತಾ ಉಪ್ಪಿನ ಇದ್ದರು. ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಶ್ರೀಗಳು, ಗಣ್ಯರಾದ ಗುರುಸಿದ್ದಪ್ಪ ಕೊಂಡೋಜಿ, ಸಾಹಿತಿ ಪ್ರೊ| ಮಾರುತಿ ಶಿಡ್ಲಾಪೂರ, ಎಸ್‌.ಸಿ.ವಿರಕ್ತಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next