Advertisement

ಸ್ವಾತಂತ್ರ್ಯ ಹೋರಾಟಗಾರರ ಮೇಲೆ ಗೌರವವಿರಲಿ

10:34 PM Aug 14, 2019 | Lakshmi GovindaRaj |

ದೇವನಹಳ್ಳಿ: ಮತ್ತೆ ಸ್ವಾತಂತ್ರ್ಯ ದಿನಾಚರಣೆ ಬಂದಿದೆ. ಎಷ್ಟೋ ಸ್ವಾತಂತ್ರ್ಯ ಹೋರಾಟಗಾರರು ತ್ಯಾಗ ಬಲಿದಾನಗಳಿಂದ ಗಳಿಸಿ, ಸ್ವಾತಂತ್ರ್ಯವನ್ನು ಕೊಡುಗೆಯಾಗಿ ನೀಡಿದ್ದಾರೆ. ತಾಲೂಕಿನಲ್ಲಿ ಸಾಕಷ್ಟು ಹೋರಾಟಗಾರರಿದ್ದಾರೆ. ಸೂಲಿಬೆಲೆ ಸೂ.ರಂ.ರಾಮಯ್ಯ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರೆ. ಅವರಿಗೀಗ 101 ವರ್ಷ.

Advertisement

ದೇವನಹಳ್ಳಿ ಮತ್ತು ಹೊಸಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಶಾಸಕರಾಗಿದ್ದರು. ಅನೇಕ ಬಾರಿ ಜೈಲಿಗೂ ಹೋಗಿದ್ದಾರೆ. ಡಿ.ಕೆ. ಚನ್ನಪ್ಪ (ಶಾಮಣ್ಣ), 1938ರಲ್ಲಿ ಶಿವಪುರ ಕಾಂಗ್ರೆಸ್‌ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು. ನಂದಿಬೆಟ್ಟಕ್ಕೆ ಗಾಂಧಿಜೀ ಭೇಟಿ ನೀಡಿದ್ದಾಗ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು. ಅಂಥವರ ಪರಿಚಯ ಹಾಗೂ ಹೋರಾಟದ ಹಾದಿಯ ಮಾಹಿತಿ ಇಲ್ಲಿದೆ.

ಡಿ.ಕೆ ಚನ್ನಪ್ಪ (ಶಾಮಣ್ಣ): ಸ್ವಾತಂತ್ರ್ಯ ಹೋರಾಟಗಾರರಲ್ಲಿ ಡಿ.ಕೆ ಚನ್ನಪ್ಪ (ಶಾಮಣ್ಣ), ತಾಲೂಕಿನಲ್ಲಿ ನಡೆಯುವ ಎಲ್ಲಾ ಸ್ವಾತಂತ್ರ್ಯ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿ ಆಗುತ್ತಿದ್ದರು. 2 ಬಾರಿ ಪುರಸಭಾ ಸದಸ್ಯರಾಗಿ ವರ್ತಕ ಹಾಗೂ ವ್ಯವಸಾಯ ವೃತ್ತಿಯಲ್ಲಿದ್ದು ಮೊದಲ ಬಾರಿಗೆ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಡಿ.ಕೆ ಚನ್ನಪ್ಪ (ಶಾಮಣ್ಣ) 1917 ರಲ್ಲಿ ಜನಿಸಿದ್ದು ಎಸ್ಸೆಸ್ಸೆಲ್ಸಿ ವರೆಗೆ ವಿಧ್ಯಾಭ್ಯಾಸ ಮಾಡಿದ್ದರು. 1938 ರಲ್ಲಿ ಶಿವ ಪುರದಲ್ಲಿ ನಡೆದ ಕಾಂಗ್ರೆಸ್‌ ಸ್ವಾತಂತ್ರ್ಯ ಹೋರಾಟ ಚಳುವಳಿಯಲ್ಲಿ ದೇವನಹಳ್ಳಿ ಯಿಂದ ಭಾಗವಹಿಸಿದ್ದರು. ನಂದಿ ಬೆಟ್ಟಕ್ಕೆ ಗಾಂಧಿಜೀ ಅವರನ್ನು ಭೇಟಿ ಆಗಿದ್ದರು. ಸ್ವಾತಂತ್ರ್ಯ ಹೋರಾಟ ಗಾರರಿಗೆ ಬರುವ ಪಿಂಚಣಿ ಸೌಲಭ್ಯವನ್ನು ನಿರಾಕರಿಸಿದ್ದರು. ಯಾವುದೇ ಸೌಲಭ್ಯಗಳನ್ನು ಪಡೆದಿರುವುದಿಲ್ಲ. ತಾಲೂಕಿನಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿದ್ದರು. 1995ರಲ್ಲಿ ನಿಧನರಾಗಿದ್ದರು.

ಶತಾಯುಷಿ ಸೂ.ರಂ.ರಾಮಯ್ಯ: ಜಿಲ್ಲೆಯ ಹೊಸಕೋಟೆ ತಾಲೂಕು ಸೂಲಿಬೆಲೆಯ ರಂಗಯ್ಯನ ಮಕ್ಕಳಲ್ಲಿ 4ನೇಯವರೇ ರಾಮಯ್ಯ. ಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿ, ಹೈಸ್ಕೂಲು ವ್ಯಾಸಂಗಕ್ಕೆ ಬೆಂಗಳೂರಿಗೆ ಬಂದಿದ್ದರು. ಬ್ರಿಟಿಷರ ಆಳ್ವಿಕೆ ವಿರುದ್ಧ ಎಲ್ಲೆಡೆ ಸ್ವಾತಂತ್ರ್ಯಕ್ಕಾಗಿ ಚಳವಳಿ ನಡೆದಯುತ್ತಿದ್ದ ದಿನಗಳು.ಬೆಂಗಳೂರಿನ ಆರ್ಟ್ಸ್ ಕಾಲೇಜಿನಲ್ಲಿ ಇಂಟರ್‌ಮಿಡಿಯಾಟ್‌ ವ್ಯಾಸಂಗ ಆರಂಭಿಸಿ, ಹಾಸ್ಟೆಲ್‌ನಲ್ಲಿ ಉಳಿದರು. ಬಳಿಕ ಅಲ್ಲಿಂದಲೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ನಂತರ 1942ರಲ್ಲಿ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡು, ಜೈಲು ಸೇರಿದರು. ಮನೆಯವರಿಂದ ವಿರೋಧ ಕಟ್ಟಿಕೊಂಡು ಚಳವಳಿಯಲ್ಲಿ ಪಾಲ್ಗೊಂಡಿದ್ದರು.

ಬಂಧನವಾಗಿದ್ದವರೆಲ್ಲರೂ ವಿದ್ಯಾರ್ಥಿಗಳು: ಹೋರಾಟದಲ್ಲಿ ಪಾಲ್ಗೊಂಡು ಜೈಲು ಸೇರಿದವರಲ್ಲಿ ಎಲ್ಲರೂ ವಿದ್ಯಾರ್ಥಿಗಳಾಗಿದ್ದರು. ಈ ವೇಳೆ 900 ಜನ ಬಂಧಿಯಾಗಿದ್ದರು. ಅಲ್ಲಿದ್ದ ಎಲ್ಲರನ್ನು ಮೈಸೂರಿಗೆ ಸ್ಥಳಾಂತರ ಮಾಡಿದರು. ಜೈಲಿನಲ್ಲಿ ನೀಡುತ್ತಿದ್ದ ಊಟದಲ್ಲಿ ಕಲ್ಲು ಮಣ್ಣು ಇದ್ದರೂ ಮಾತನಾಡುವಂತಿರಲಿಲ್ಲ. ಮೈಸೂರಿಗೆ ಸ್ಥಳಾಂತರಿಸಿದ ಬಳಿಕವೂ ಕಳಪೆ ಊಟ ನೀಡಿದ್ದರಿಂದ, ರೊಚ್ಚಿಗೆದ್ದ ಬಂಧಿಗಳು ಉಪವಾಸ ಸತ್ಯಾಗ್ರಹ ನಡೆಸಿದರು. ಪೊಲೀಸರಿಂದ ಲಾಠಿ ಚಾರ್ಜೂ ಆಯಿತು. ಈ ವೇಳೆ ಬಂಧಿಯಾಗಿದ್ದ ಶಂಕರಪ್ಪ ಎಂಬುವವರು ಮೃತಪಟ್ಟರು. ಇದರಿಂದಾಗಿ ಮೈಸೂರಿನ ಹೋರಾಟಗಾರರೆಲ್ಲರೂ ಜೈಲಿನ ಬಳಿ ಜಮಾಯಿಸಿದ್ದರಿಂದ ಬಿಡುಗಡೆಗೊಳಿಸಲಾಯಿತು.

Advertisement

ಹೋರಾಟದಲ್ಲಿ ಪಾಲ್ಗೊಂಡಿದ್ದ ಸೂ.ರಂ.ರಾಮಯ್ಯ,ಸ್ವಾತಂತ್ರ್ಯದ ಹೊಸಕೋಟೆ ತಾಲೂಕು ಬೋರ್ಡ್‌ ಅಧ್ಯಕ್ಷ ಸ್ಥಾನ ನೀಡಿ ಗೌರವಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರ, ತಾಲೂಕು ಬೋರ್ಡ್‌ ಸದಸ್ಯ, ಶಾಸಕ, ಜಿಪಂ ಸದಸ್ಯ, ಗ್ರಾಪಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಸಮಾಜ ಸೇವಕರಾಗಿ ಸ್ವಾರ್ಥ ಬಿಟ್ಟು ಸಮಾಜಕ್ಕಾಗಿ ತಮ್ಮ ಜೀವನದ ಸಮಯ ಕಳೆದು ಸಮಾಜಕ್ಕೇನಾದರೂ ಮಾಡಬೇಕು ಎಂಬ ತುಡಿತ ಹೊಂದಿದ್ದಾರೆ. ಹೊಸಕೋಟೆ-ದೇವನಹಳ್ಳಿ ಎರಡು ಕ್ಷೇತ್ರಗಳು ಒಂದೇ ಆಗಿದ್ದ ಕಾಲದಲ್ಲಿ ಈ ಎರಡು ಕ್ಷೇತ್ರಗಳಿಗೆ ಇವರನ್ನು ಶಾಸಕ ಸ್ಥಾನದ ಸ್ಪರ್ಧಿಯಾಗಿ ನೇಮಿಸಲಾಯಿತು. ಸ್ವಾತಂತ್ರ್ಯ ಪಡೆದ ಸಂಭ್ರಮದಲ್ಲಿದ್ದ ರಾಜ್ಯದ ಜನ ಕಾಂಗ್ರೆಸ್‌ ಪಕ್ಷದ ಬಗ್ಗೆ ಇದ್ದ ಒಲವು ಸೂ.ರಂ.ರಾಮಯ್ಯನವರನ್ನು ಗೆಲ್ಲಿಸುವಲ್ಲಿ ಸಫ‌ಲವಾಯಿತು.

* ಎಸ್‌ ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next