Advertisement

Politics: ಹಾಸನ ಕ್ಷೇತ್ರದ ಸೀಟು ಹಂಚಿಕೆ ಇನ್ನೂ ಚರ್ಚೆ ಹಂತದಲ್ಲಿ: ಪ್ರೀತಂಗೌಡ

09:26 PM Jan 28, 2024 | Team Udayavani |

ಹಾಸನ: ಹಾಸನ ಲೋಕಸಭಾ ಕ್ಷೇತ್ರಕ್ಕೆ ಎನ್‌ಡಿಎ ಅಭ್ಯರ್ಥಿ ಯಾರೆಂಬುದು ಸೀಟು ಹಂಚಿಕೆ ವೇಳೆ ತೀರ್ಮಾನ ಆಗಲಿದೆ. ಹಾಸನ ಕ್ಷೇತ್ರ ಜೆಡಿಎಸ್‌ಗೆ ಸಿಗುವುದೇ ಇಲ್ಲ ಎಂದು ಹೇಳಲ್ಲ. ಆದರೆ, ಈಗಾಗಲೇ ಜೆಡಿಎಸ್‌ ಹಾಸನ ಕ್ಷೇತ್ರ ಸಿಕ್ಕಿದೆ ಎಂದು ಹೇಳುವುದೂ ಸತ್ಯವಲ್ಲ. ಸೀಟು ಹಂಚಿಕೆ ಇನ್ನೂ ಚರ್ಚೆಯ ಹಂತದಲ್ಲಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ.ಗೌಡ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಮುಂದಿನ ತಿಂಗಳು ಬಿಜೆಪಿಯ ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಲೋಕಸಭಾ ಚುನಾವಣೆಯ ಸಿದ್ಧತೆ ಹಾಗೂ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಫೆಬ್ರವರಿಯಲ್ಲಿ ಆಯಾಯ ಜಿಲ್ಲಾ ಕಾರ್ಯಕಾರಿಣಿ ಸಭೆಗಳು ನಡೆಯಲಿವೆ. ಜಿಲ್ಲಾ ಕಾರ್ಯಕಾರಿಣಿ ನಡೆಯುವ ಸಂದರ್ಭದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಬಗ್ಗೆಯೂ ಚರ್ಚೆ ನಡೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಜೆಡಿಎಸ್‌ ವಿಧಾನ ಪರಿಷತ್‌ ಸದಸ್ಯ ಡಾ.ಸೂರಜ್‌ ರೇವಣ್ಣ ಅವರು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾಗಿದ್ದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಪ್ರೀತಂಗೌಡ, ಡಾ.ಸೂರಜ್‌ ಅವರು ಬಹುಶಃ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ನೀರಾವರಿ ಯೋಜನೆಗಳ ವಿಚಾರವಾಗಿ ಭೇಟಿ ಮಾಡಿರಬಹುದು. ಅವರ ಭೇಟಿಯು ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಧಕ್ಕೆಯಾಗುವ ಸೂಚನೆ ಎಂದು ಹೇಳಲಾಗದು ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next