Advertisement

Hassan: ರೇವಣ್ಣ ಕುಟುಂಬದಿಂದ ಸ್ವರೂಪ್‌ಗೆ ಅಭಯ

11:28 PM Apr 19, 2023 | Team Udayavani |

ಹಾಸನ: ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಎಚ್‌.ಪಿ.ಸ್ವರೂಪ್‌ ಅವರಿಗೆ ಘೋಷಣೆಯಾದ ಬೆನ್ನಲ್ಲೇ ಬುಧವಾರ ಮಹತ್ತರ ಬೆಳವಣಿಗೆಯಾಗಿದೆ. ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಸಿದ್ದ ಎಚ್‌.ಡಿ.ರೇವಣ್ಣ ಕುಟುಂಬ ಮುನಿಸು ಮರೆತು ಸ್ವರೂಪ್‌ ಬೆಂಬಲಕ್ಕೆ ನಿಂತಿದ್ದು, ಅವರನ್ನು ಗೆಲ್ಲಿಸಿಕೊಂಡು ಬರುವೆವು ಎಂದು ಅಭಯ ನೀಡುವ ಮೂಲಕ ಗೊಂದಲಗಳಿಗೆ ತೆರೆ ಎಳೆದರು.

Advertisement

ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಹಾಸನ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದ ಎಚ್‌.ಡಿ.ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್‌ ರೇವಣ್ಣ ಅವರು ಹಾಸನದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವುದೇ ನಮ್ಮ ಗುರಿ. ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಅವರು ಮಾಡಿರುವ ಆವಹೇಳನದ ಮಾತುಗಳನ್ನು ನಾವು ಮರೆತಿಲ್ಲ. ಟಿಕೆಟ್‌ಗಾಗಿ ಇದುವರೆಗೆ ನಡೆದಿದ್ದ ಎಲ್ಲ ಬೆಳವಣಿಗೆಗಳು ಹಾಗೂ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಸ್ವರೂಪ್‌ ಅವರನ್ನು ಗೆಲ್ಲಿಸೋಣ ಎಂದು ಹೇಳಿದರು.

ದೇವೇಗೌಡರ ಆರೋಗ್ಯ ಮುಖ್ಯ:
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಹಾಸನ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಬಗ್ಗೆ ಕಳೆದೊಂದು ತಿಂಗಳಲ್ಲಿ ಮಾಧ್ಯಮಗಳ ವರದಿಯಿಂದ ಹಾಸನದಲ್ಲಿ ಏನೋ ಆಗುತ್ತಿದೆ ಎಂಬ ಭಾವನೆಯಿತ್ತು. ಆದರೆ, ನನ್ನ ಮಾವ ಎಚ್‌.ಡಿ.ದೇವೇಗೌಡರ ಆರೋಗ್ಯ ಮುಖ್ಯ. ಜೆಡಿಎಸ್‌ ಪಕ್ಷ ಮುಖ್ಯ. ನಾನು ಪಕ್ಷಕ್ಕಿಂತ ದೊಡ್ಡವಳಲ್ಲ ಎಂದು ನಿರ್ಧರಿಸಿ ನಾನೇ ಸ್ವತಃ ಎಚ್‌.ಡಿ.ಕುಮಾರಸ್ವಾಮಿಗೆ ಫೋನ್‌ ಮಾಡಿ ಸ್ವರೂಪ್‌ಗೆ ಶುಭದಿನವಾದ ಶುಕ್ರವಾರವೇ ಟಿಕೆಟ್‌ ಘೋಷಣೆ ಮಾಡಿ ಎಂದು ಹೇಳಿದ್ದೆ ಎಂದರು.

ದೇವೇಗೌಡರ ನಿರ್ದೇಶನದಂತೆ ನಡೆದಿದ್ದೇವೆ
ಎಚ್‌.ಡಿ.ರೇವಣ್ಣ ಮಾತನಾಡಿ, ಹಾಸನದ ಶಾಸಕ ನಮ್ಮ ಕುಟುಂಬಕ್ಕೆ ಪಂಥಾಹ್ವಾನ ನೀಡಿದ್ದರಿಂದ ಸವಾಲು ಸ್ವೀಕರಿಸಿದ್ದೆವು. ಹಾಗಾಗಿ ಭವಾನಿ ಹಾಸನದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಆದರೆ ಎಚ್‌.ಡಿ.ದೇವೇಗೌಡರು, ಎಚ್‌.ಡಿ.ಕುಮಾರಸ್ವಾಮಿ ಅವರ ನಿರ್ದೇಶನಕ್ಕೆ ಬದ್ಧರಾಗಿ ಭವಾನಿ ರೇವಣ್ಣ ಅವರು ತ್ಯಾಗ ಮಾಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next