Advertisement

ಮೀಸಲಾತಿ ಪ್ರಜಾಸತ್ತೆಯನ್ನು ನುಂಗೀತೇ?

02:02 AM Feb 19, 2021 | Team Udayavani |

ಮೀಸಲಾತಿಯ ಪ್ರಮಾಣವನ್ನು ಜನಸಂಖ್ಯೆಯ ಆಧಾರದಲ್ಲಿ ನಿಗದಿಗೊಳಿಸಲಾಗಿದೆ. ಈ ಬಗ್ಗೆ ಯಾವುದೇ ವೈಜ್ಞಾನಿಕ ಸೂತ್ರವನ್ನೂ ಅಳವಡಿಸಲಾಗಿಲ್ಲ. ಈಗಲೂ ಸರಕಾರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಆಸಕ್ತಿ ತೋರಿಸುತ್ತಿದೆಯಲ್ಲದೆ, ಪರಿಣಾಮವನ್ನು ಅಳೆಯುವ ಗೋಜಿಗೆ ಹೋಗುತ್ತಿಲ್ಲ.

Advertisement

ಭಾರತೀಯ ಸಂವಿಧಾನದಲ್ಲಿ ಸಮಾನತೆಯನ್ನು ಪ್ರತಿಪಾದಿಸಲಾಗಿದೆ. ಜಾತಿ, ಮತ, ಸಾಮಾಜಿಕ ಅಂತಸ್ತು ಹಾಗೂ ಆರ್ಥಿಕ ಸ್ಥಿತಿಗತಿಯಲ್ಲಿ ಯಾವ ಏರುಪೇರುಗಳಿರಲಿ, ಕಾನೂನಿನ ಮುಂದೆ ಎಲ್ಲ ಪೌರರು ಸಮಾನರು ಎಂದು ಆರ್ಟಿಕಲ್‌ (14)ರಲ್ಲಿ ಉಲ್ಲೇಖೀಸಲಾಗಿದೆ. ಈ ಸಮಾನತೆಯ ಆಧಾರದಲ್ಲಿ ಸಂವಿಧಾನ ಕೊಡಮಾಡುವ ಎಲ್ಲ ಅವಕಾಶಗಳು, ಸೇವಾ ಸೌಲಭ್ಯಗಳು ಉನ್ನತ ವರ್ಗದವರಿಂದ ಹಿಡಿದು ನಿಮ್ನ ವರ್ಗದವರಿಗೂ ಯಾವ ತಾರತಮ್ಯ ಇಲ್ಲದೆ ಸಿಗಬೇಕೆಂಬುದು ಸಂವಿಧಾನದ ಆಶಯ.

ಈ ಹಂಚಿಕೆಯಲ್ಲಿ ತಾರತಮ್ಯ ಇದೆಯಾದರೆ ಅದು ಆಡಳಿತದ ದೋಷವೇ ಹೊರತು ನಾವು ನಮ್ಮ ಆಡಳಿತಕ್ಕೆ ರೂಪಿಸಿದ ನೀತಿ ಸಂಹಿತೆಯ ದೋಷವಲ್ಲ. ಆದರೆ ಇದು ಇದಮಿತ್ತಂ ಎಂದು ಹೇಳಲಾಗದು. ಯಾಕೆಂದರೆ ವಾಸ್ತವದಲ್ಲಿ ಸಮಾನತೆಯ ಪ್ರಯೋಜನ ಪಡೆಯಲು ಬೇಕಾದ ಶಕ್ತಿ ಅಥವಾ ಅರ್ಹತೆ ಸಮಾನವಾಗಿರುವುದಿಲ್ಲ. ಅಲ್ಲಿ ಆತನ ಮೂಲಸ್ಥಿತಿ ಮುಖ್ಯ ಪಾತ್ರ ವಹಿಸುತ್ತದೆ. ಸಮಾಜದಲ್ಲಿ ಆತ ದುರ್ಬಲವಾಗಿರ ಬಹುದು. ಇನ್ನೊಬ್ಬ ಆಗಲೇ ಪ್ರಗತಿ ಹೊಂದಿರಬಹುದು. ಅಂಥವರೊಂದಿಗೆ ಮುಖ್ಯವಾಹಿನಿಯಲ್ಲಿ ಸೆಣಸುವುದು ಕಷ್ಟ. ಆಗ ದುರ್ಬಲನಿಗೆ ಒಂದು ಪ್ರಚೋದನೆ ಹಿಂದಿನಿಂದ ಬೇಕಾಗುತ್ತದೆ. ಅದರ ಬಲದಲ್ಲಿ ದುರ್ಬಲನನ್ನು ಮುಖ್ಯವಾಹಿನಿಯ ಇತರರೊಡನೆ ಸಮದಂಡಿಯಾಗಿ ಶ್ರಮಿಸಲು ಅನುಕೂಲ ಮಾಡಿಕೊಡಬೇಕಾಗುತ್ತದೆ. ಅದೇ ಮೀಸಲಾತಿ. ಸಾರ್ವಜನಿಕ ನೇಮಕಾತಿಗೆ ಆರ್ಟಿಕಲ್‌ 16(4) ರಲ್ಲಿ ಹಿಂದುಳಿದವರಿಗಾಗಿ ಈ ಅವಕಾಶ ಕಲ್ಪಿಸಲಾಗಿದೆ.

ಮೀಸಲಾತಿಯ ಬಗ್ಗೆ ಒಂದು ವಿಸ್ತೃತವಾದ ವ್ಯಾಖ್ಯಾನ ಪ್ರಪ್ರಥಮ ಬಾರಿಗೆ ಬಂದಿದ್ದರೆ ಅದು 1992ರಲ್ಲಿ ಇಂದಿರಾ ಸ್ವಹಾನಿ ಪ್ರಕರಣದಲ್ಲಿ. ಅಂದು ಸರ್ವೋಚ್ಚ ನ್ಯಾಯಾಲಯದ ನವ ಸದಸ್ಯ ಸಂವಿಧಾನ ಪೀಠ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದವರನ್ನು ದುರ್ಬಲ ವರ್ಗದವರೆಂದು ಗುರುತಿಸಿ ಅವರ ಶ್ರೇಯೋಭಿವೃದ್ಧಿಗೆ ಸದ್ಯದ ಪರಿಸ್ಥಿತಿಯಲ್ಲಿ ಮೀಸಲಾತಿಯ ಅಗತ್ಯವಿದೆ ಎಂದು ಹೇಳಿತ್ತು. ಆದರೆ ಈ ತೀರ್ಪು ಪ್ರಕಟವಾದ ವೇಳೆಗಾಗಲೇ ನಮಗೆ ಸ್ವಾತಂತ್ರ್ಯ ಲಭಿಸಿ ನಾಲ್ಕು ದಶಕಗಳು ಕಳೆದಿದ್ದವು. ಮೀಸಲಾತಿ ದೇಶದ ಸಂವಿಧಾನ ಜಾರಿಗೆ ಬಂದಾಗಿಂದಲೇ ಅನ್ವಯವಾಗಿದ್ದು ಮೀಸಲಾತಿಯ ಉದ್ದೇಶ ಹಾಗೂ ಗುರಿಯನ್ನು ತಲುಪಲು ಆಡಳಿತ ಎಡವಿದೆ ಮತ್ತು ಅದರ ದುರುಪಯೋಗದ ಸಾಧ್ಯತೆಯನ್ನು ನ್ಯಾಯಾಲಯ ಗಮನಿಸಿ ಆ ತೀರ್ಪಿನಲ್ಲಿ ಕೆಲವು ನಿರ್ದೇಶನಗಳನ್ನು ನೀಡಿ ಸರಕಾರಕ್ಕೆ ಕಿವಿಮಾತನ್ನು ಸಹ ಹೇಳಿತ್ತು. ಮೀಸಲಾತಿಯ ಫ‌ಲಾನುಭವಿಗಳು ಅದು ತಮ್ಮ ಹುಟ್ಟಿನ ಸಂಕೇತ ಎಂದು ತಿಳಿಯಬಾರದು. ಅದು ಒಂದು ಸಲಕ್ಕೆ ನೀಡುವ ಸೌಲಭ್ಯ. ಅದು ನೀಡುವ ಕಪ್ಪೆ ನೆಗೆತದ ಮೂಲಕ ಮುಖ್ಯವಾಹಿನಿಯ ಇತರರೊಡನೆ ನಿರಂತರ ಶ್ರಮಿಸುವ ಸಂಕಲ್ಪ ಮಾಡಬೇಕು ಎಂಬ ಹಿತವಚನವನ್ನೂ ಹೇಳಿತ್ತು. ಆದರೆ ಫ‌ಲಾನುಭವಿಗಳು ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇತ್ತ ಸರಕಾರವೂ ಕೂಡ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಬದಲು ರಾಜಕೀಯ ಪಕ್ಷದ ನೇತೃತ್ವದ ಸರಕಾರಗಳು ಮೀಸಲಾತಿಯನ್ನು ರಾಜಕೀಯ ಅಸ್ತ್ರವೆಂಬಂತೆ ಬಳಸಿ ಬೆಳೆಸಿಕೊಂಡು ಬಂದಿವೆ. ಸಮರ್ಥನೆಗಾಗಿ ಕೆಲವು ಉದಾಹರಣೆಗಳು ಅನಿವಾರ್ಯವಾದೀತು.

ಮೊದಲು ಜಾರಿಗೆ ಬಂದ ಮೀಸಲಾತಿ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳಿಗೆ ಮಾತ್ರ ಸೀಮಿತವಾಗಿತ್ತು. ಈಗ ಒಬಿಸಿ ಸೇರಿಕೊಂಡಿದೆ. ಈಗ ಮೀಸಲಾತಿ ಗಾತ್ರ ದೊಡ್ಡದಾಗಿದೆ. ಮೀಸಲಾತಿಯ ಪ್ರಮಾಣವನ್ನು ಜನಸಂಖ್ಯೆಯ ಆಧಾರದಲ್ಲಿ ನಿಗದಿಗೊಳಿಸಲಾಗಿದೆ. ಈ ಬಗ್ಗೆ ಯಾವುದೇ ವೈಜ್ಞಾನಿಕ ಸೂತ್ರವನ್ನೂ ಅಳವಡಿಸಲಾಗಿಲ್ಲ. ಈಗಲೂ ಸರಕಾರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಆಸಕ್ತಿ ತೋರಿಸುತ್ತಿದೆಯಲ್ಲದೆ, ಪರಿಣಾಮವನ್ನು ಅಳೆಯುವ ಗೋಜಿಗೆ ಹೋಗುತ್ತಿಲ್ಲ. ಮೀಸಲಾತಿ ನಿಷ್ಪಕ್ಷಪಾತವಾಗಿ ಹಾಗೂ ವ್ಯಾಪಕವಾಗಿ ಅನುಷ್ಠಾನವಾಗುತ್ತಿಲ್ಲ ಎಂಬುದನ್ನು ಗಮನಿಸಿದ ಸರ್ವೋಚ್ಚ ನ್ಯಾಯಾಲಯ, ಕೆನೆಪದರ ಯೋಜನೆಯನ್ನು ಅಳವಡಿಸಲು ಸೂಚಿಸಿತ್ತು. ಆ ಪ್ರಯುಕ್ತ ನ್ಯಾಯಮೂರ್ತಿ ರಾಮನಂದನ್‌ ಸಮಿತಿ ರಚಿಸಿ ಸಲಹೆ ಪಡೆದಿತ್ತು. ಆದರೆ ಯಾವ ರಾಜ್ಯವೂ ಸಮರ್ಪಕವಾಗಿ ಅನುಷ್ಠಾನ ಮಾಡಲೇ ಇಲ್ಲ. ಮುಂದುವರಿದು ಆರ್ಟಿಕಲ್‌ 335ರಲ್ಲಿ ಉಲ್ಲೇಖೀಸಲಾದ ಆಡಳಿತದಲ್ಲಿ ಸಂಗತವಾದ ದಕ್ಷತೆಗೆ ಧಕ್ಕೆಯಾಗಬಾರದಂತೆ ಮೀಸಲಾತಿ ನಿರ್ವಹಣೆಯಾಗತಕ್ಕದ್ದು. ಹಾಗಾಗಿ ಒಟ್ಟು ಮೀಸಲಾತಿ ಶೇ. 50ಕ್ಕಿಂತ ಅಧಿಕ ಪ್ರಮಾಣಕ್ಕೆ ಹೆಚ್ಚಿಸಬಾರದೆಂದು ಸೂಚಿಸಿತ್ತು. ಈ ಸೂಚನೆಗಳನ್ನು ಧಿಕ್ಕರಿಸಿದ ಕೆಲವು ರಾಜ್ಯಗಳು ಮೀಸಲಾತಿಯನ್ನು ಶೇ. 50ಕ್ಕಿಂತಲೂ ಅಧಿಕ ಪ್ರಮಾಣಕ್ಕೆ ಹೆಚ್ಚಿಸಿವೆ. “ಮೀಸಲಾತಿಯ ಉದ್ದೇಶವೇ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವುದು. ಇದು ಕಾಲಬಾಧಿತ ಯೋಜನೆಯಾಗಿದೆ. ನಿಗದಿತ ಅವಧಿಯೊಳಗೆ, ನಿರೀಕ್ಷಿತ ಗುರಿ ತಲುಪದೆ, ಮೀಸಲಾತಿಯನ್ನು ದೀರ್ಘ‌ಕಾಲ ಮುಂದುವರಿಸಿದರೆ ಸಮಾಜದಲ್ಲಿ ಎರಡು ವಾಹಿನಿಗಳು ನಿರಂತರವಾಗಿರುತ್ತದೆ. ಇದು ಪ್ರಜಾಸತ್ತೆಯ ತಣ್ತೀಕ್ಕೆ ವಿರೋಧವಾಗುತ್ತದೆ’ ಎಂಬ ಘನ ನ್ಯಾಯಾಲಯದ ಎಚ್ಚರಿಕೆಯನ್ನು ನಿರ್ಲಕ್ಷಿಸಲಾಗಿದೆ.

Advertisement

ನಮ್ಮ ದೇಶದ ರಾಜಕೀಯ ಪಕ್ಷಗಳ ಧುರೀಣರು ಅಭಿವೃದ್ಧಿ ಎಂದರೆ ಹೆಚ್ಚೆಚ್ಚು ಜಾತಿ, ಉಪಜಾತಿಯನ್ನು ಸೇರಿಸಿ ಮೀಸಲಾತಿ ಹಂಚುವುದೆಂದು ಭಾವಿಸಿದಂತಿದೆ. ಸಂವಿಧಾನದಲ್ಲಿಯೂ ಜಾತಿ ಆಧರಿತ ಮೀಸಲಾತಿಗೆ ಪ್ರೇರಣೆ ಇಲ್ಲ. ದುರ್ಬಲರನ್ನು ಗುರುತಿಸಲು ಜಾತಿ ಸಹಕಾರಿಯಾಗಿದೆಯಷ್ಟೇ! ಸಂವಿಧಾನ ರಚನಾ ಸಭೆಯಲ್ಲೂ ಮೀಸಲಾತಿ ಪರ ಹಾಗೂ ವಿರೋಧದ ವಿಸ್ತೃತ ಚರ್ಚೆ ನಡೆದಿತ್ತು. ಅಲ್ಲಿ ದುರ್ಬಲರ ಏಳಿಗೆಯ ದೃಷ್ಟಿಯಿಂದ ಒಮ್ಮತದ ನಿಲುವಿಗೆ ಬಂದು ಮೀಸಲಾತಿ ಅಳವಡಿಸ ಲಾಗಿತ್ತು. ಜಾತಿಯನ್ನು ಮುನ್ನೆಲೆಗೆ ತರಲಾಗಿರಲಿಲ್ಲ.

ಈ ಎಲ್ಲ ಅಂಶಗಳನ್ನು ಮರೆತು ಅಲ್ಲ, ನಿರ್ಲಕ್ಷಿಸಿ ನಮ್ಮ ರಾಜಕಾರಣಿಗಳು ಮೀಸಲಾತಿಯನ್ನು ವಿಸ್ತರಿಸುವ ಹಾಗೂ ಪ್ರಮಾಣವನ್ನು ಹೆಚ್ಚಿಸುವ ಕಾರ್ಯದಲ್ಲಿ ಉತ್ಸುಕರಾಗಿದ್ದಾರೆ. ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಘಟನಾವಳಿಗಳೇ ಇದಕ್ಕೆ ಸಾಕ್ಷಿ. ವಿವಿಧ ಸಮುದಾಯಗಳು ಮೀಸಲಾತಿಗಾಗಿ ನಡೆಸಿದ ಚಳವಳಿ, ಹೋರಾಟಗಳಲ್ಲಿ ಆಯಾಯ ಸಮುದಾಯಗಳಿಗೆ ಸೇರಿದ ಹಾಲಿ ಸಚಿವರು ಹಾಗೂ ಶಾಸಕರು ಪಾಲ್ಗೊಂಡಿದ್ದಾರೆ. ಖೇದದ ವಿಚಾರವೆಂದರೆ ಸಚಿವ, ಶಾಸಕರು ಜಾತಿ ಸಂಘಟನೆಗಳ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸಕೂಡದು. ಸಚಿವರು, ಶಾಸಕರು ಸರಕಾರದ ಅವಿಭಾಜ್ಯ ಅಂಗ. ನಮ್ಮ ಸಂವಿಧಾನರೀತ್ಯಾ ಸರಕಾರ ಧರ್ಮ ನಿರಪೇಕ್ಷ ಹಾಗೂ ಜಾತ್ಯತೀತ. ಸಚಿವರು, ಶಾಸಕರು ಒಂದು ಜಾತಿಗೆ ಸೇರಿದವರಾಗಿರಬಹುದು. ಆ ಜಾತಿಗೆ ಸೇರಿದ ಸಂಘಟನೆಯ ಸದಸ್ಯರೂ ಅಗಿರಬಹುದು. ಆದರೆ ಅವರು ಶಾಸಕ, ಸಚಿವರಾಗಿರುವಷ್ಟು ಕಾಲ ಅವರ ಜಾತಿಗೆ ಸೇರಿದ ಸಂಘಟನೆಯ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸುವುದು, ಅವರು ಸದನ ಪ್ರವೇಶಕ್ಕೆ ಮುನ್ನ ಸ್ವೀಕರಿಸಿದ ಪ್ರತಿಜ್ಞೆಗೆ ವಿರುದ್ಧವಾದುದಾಗಿದೆ. ಚಳವಳಿಯ ಉದ್ದೇಶದಲ್ಲಿ ಅಂಥ ಕಳಕಳಿ ಇರುವುದಾದರೆ ಅವರು ಹಾಲಿ ಸ್ಥಾನವನ್ನು ತೊರೆದು ಆ ಚಳವಳಿಯಲ್ಲಿ ಧುಮುಕಬೇಕು. ಅಲ್ಲವಾದರೆ ಅವರು ಸಂವಿಧಾನಕ್ಕೆ ಅಪಚಾರ ಮಾಡುತ್ತಾರೆ ಎಂದೇ ಅರ್ಥ. ಸಾರ್ವಜನಿಕರು ಇದನ್ನು ಈಗ ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ.

ಮೀಸಲಾತಿಯಂಥ ಸೌಲಭ್ಯಗಳು ಬೇರೆ ಬೇರೆ ಹೆಸರಿನಲ್ಲಿ ಎಲ್ಲ ಪ್ರಜಾಸತ್ತಾತ್ಮಕ ರಾಷ್ಟ್ರಗಳಲ್ಲಿಯೂ ಇದೆ. ಅಮೆರಿಕದಲ್ಲಿ ಈ ಸೌಲಭ್ಯಕ್ಕೆ Affirmation ಎಂದು ಕರೆಯುತ್ತಾರೆ. ಆದರೆ ಅಲ್ಲಿ ಈ ಸೌಲಭ್ಯ ಪಡೆಯಲು ಅರ್ಹತೆ ಇರುವವರು ತಮಗೆ ಆ ಕೃಪೆ ಬೇಡ, ನಾವು ಇತರರೊಂದಿಗೆ ಸ್ಪರ್ಧಿಸಿ ನಮ್ಮ ಅರ್ಹತೆಯಿಂದಲೇ ಅದನ್ನು ಗಿಟ್ಟಿಸಿ ಕೊಳ್ಳುತ್ತೇವೆ ಎಂದು ಪಣ ತೊಡುತ್ತಾರೆ. ದುರದೃಷ್ಟವೆಂದರೆ ಭಾರತದಲ್ಲಿ ಅನು ಸೂಚಿತ ಪಂಗಡಕ್ಕೆ ಸೇರಿದ ಪತ್ರಾಂಕಿತ ಹುದ್ದೆ ಹೊಂದಿದ ವ್ಯಕ್ತಿಯೂ ಈ ದೃಢತೆಯನ್ನು ತೋರಿಸುವುದಿಲ್ಲ. ಇತ್ತ ಈ ರಾಜಕಾರಣಿಗಳು ಮೀಸಲಾತಿ ಎಲ್ಲ ಜಾತಿಗೂ ವಿಸ್ತರಿಸುತ್ತಾ ಮತ್ತು ಪ್ರಮಾಣವನ್ನು ಹೆಚ್ಚಿಸುತ್ತಾ ಸಂವಿಧಾನದ ಮೂಲಾಶಯಕ್ಕೆ ಧಕ್ಕೆ ತರುತ್ತಿದ್ದಾರೆ. ಕಳೆದ ಏಳು ದಶಕಗಳಲ್ಲಿ ಮೀಸಲಾತಿಯ ಉದ್ದೇಶ ಈಡೇರಿಸಲು ಅಸಾಧ್ಯವಾದ ಬಗ್ಗೆ ಸಮರ್ಪಕವಾದ ಉತ್ತರವನ್ನು ರಾಜಕಾರಣಿಗಳು ನೀಡಬಲ್ಲರೇ! ಇನ್ನುಳಿದುದೊಂದೇ ಮಾರ್ಗ ಈ ಮೀಸಲಾತಿ ದೇಶದ ಪ್ರಜಾಸತ್ತೆಯನ್ನು ನುಂಗಿ ಹಾಕುವ ಮುನ್ನ ಸಾರ್ವಜನಿಕರು ಜಾಗೃತರಾಗಬೇಕಾಗಿದೆ.

– ಬೇಳೂರು ರಾಘವ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next