ಮುಂಬೈ: ಸದ್ಯ ಎಲ್ಲೆಡೆ ಅಯೋಧ್ಯೆಯದ್ದೇ ಸುದ್ದಿ. ಕೆಲವೇ ದಿನಗಳಲ್ಲಿ ರಾಮ ಮಂದಿರದಲ್ಲಿ ಶ್ರೀರಾಮ ಮೂರ್ತಿಗೆ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಇದೇ ವೇಳೆ ಅಯೋಧ್ಯೆಯ ರಾಮಮಂದಿರಕ್ಕೆ ನಟ ಪ್ರಭಾಸ್ ಅವರು 50 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆಂಬ ವರದಿಗಳು ವೈರಲ್ ಆಗಿದೆ.
ಇದಲ್ಲದೆ, ಉದ್ಘಾಟನಾ ದಿನವಾದ ಜನವರಿ 22 ರಂದು ಆಹಾರದ ವೆಚ್ಚವನ್ನು ನೋಡಿಕೊಳ್ಳಲು ಸಲಾರ್ ನಟ ಪ್ರಭಾಸ್ ಮುಂದೆ ಬಂದಿದ್ದಾರೆ ಎಂದೂ ವರದಿಯಾಗುತ್ತಿದೆ. ಇದೀಗ ಇದರ ಸತ್ಯಾಸತ್ಯತೆ ಹೊರಬಿದ್ದಿದೆ.
ಕಳೆದ ಕೆಲವು ದಿನಗಳ ಹಿಂದೆ ಅಯೋಧ್ಯೆಯ ರಾಮಮಂದಿರಕ್ಕೆ ಪ್ರಭಾಸ್ 50 ಕೋಟಿ ದೇಣಿಗೆ ನೀಡಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅಲ್ಲದೆ, ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ಆಂಧ್ರ ಪ್ರದೇಶದ ಶಾಸಕ ಚಿರ್ಲಾ ಜಗ್ಗಿರೆಡ್ಡಿ ಅವರು ಉದ್ಘಾಟನೆಯ ದಿನದಂದು ಪ್ರಭಾಸ್ ಆಹಾರದ ವೆಚ್ಚವನ್ನು ನೋಡಿಕೊಳ್ಳುತ್ತಾರೆ ಎಂದು ಹೇಳಿಕೊಂಡಿದ್ದಾರೆ.
ಇಂಡಿಯಾ ಟುಡೇ ವೆಬ್ ಸೈಟ್ ಪ್ರಭಾಸ್ ತಂಡವನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಪಡೆದಿದ್ದು, ಅವರು ಈ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಈ ಎಲ್ಲಾ ಸುದ್ದಿಗಳು ಸುಳ್ಳಿ ಎಂದಿದ್ದಾರೆ.
ರಾಮಮಂದಿರ ಶಂಕುಸ್ಥಾಪನೆ ಸಮಾರಂಭಕ್ಕೆ ಪ್ರಭಾಸ್ ಗೆ ಆಹ್ವಾನ ನೀಡಿರುವ ಬಗ್ಗೆಯೂ ಖಚಿತ ಮಾಹಿತಿ ಸಿಕ್ಕಿಲ್ಲ. ಡಿಸೆಂಬರ್ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪಾಲ್ಗೊಳ್ಳಲು ರಜನಿಕಾಂತ್, ಚಿರಂಜೀವಿ, ರಾಮ್ ಚರಣ್, ಧನುಷ್ ಮತ್ತು ಹಲವಾರು ದಕ್ಷಿಣದ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆ.