Advertisement

ಹರಿಯಾಣ ಸರಕಾರ-ಕ್ರೀಡಾಪಟುಗಳ ಜಗಳಕ್ಕೆ ಸಮ್ಮಾನ ಬಲಿ

06:00 AM Apr 26, 2018 | Team Udayavani |

ಚಂಡೀಗಢ: ಹರಿಯಾಣ ಸರಕಾರ ಮತ್ತು ಅಲ್ಲಿನ ಕ್ರೀಡಾಪಟುಗಳ ನಡುವಿನ ಬಿಕ್ಕಟ್ಟಿನಿಂದ ಗುರುವಾರ ಪಂಚಕುಲದಲ್ಲಿ ನಡೆಯಬೇಕಿದ್ದ ಸಮ್ಮಾನ ಕಾರ್ಯಕ್ರಮವೇ ರದ್ದಾಗಿದೆ. ಈ ಬಾರಿಯ ಕಾಮನ್‌ವೆಲ್ತ್‌ನಲ್ಲಿ ಪದಕ ಗೆದ್ದ ರಾಜ್ಯದ 22 ಕ್ರೀಡಾಪಟುಗಳನ್ನು ಸಮ್ಮಾನಿಸಲು ಹರಿಯಾಣ ಮುಂದಾಗಿತ್ತು. ಆದರೆ ರೈಲ್ವೆ, ಸೇನೆಯಂತಹ ಸಂಸ್ಥೆಗಳನ್ನು ಪ್ರತಿನಿಧಿಸುವ ರಾಜ್ಯ ಕ್ರೀಡಾಪಟುಗಳ ಪ್ರಶಸ್ತಿ ಮೊತ್ತದಲ್ಲಿ ಕತ್ತರಿ ಹಾಕುವುದಾಗಿ ಸರಕಾರ ಘೋಷಿಸಿದೆ. ಇದನ್ನು ಕೆಲ ಹಿರಿಯ ಕ್ರೀಡಾಪಟುಗಳು ವಿರೋಧಿಸಿ ಕಾರ್ಯಕ್ರಮವನ್ನು ಬಹಿಷ್ಕರಿಸಿದ ಪರಿಣಾಮ ಮೇಲಿನ ಬೆಳವಣಿಗೆ ನಡೆದಿದೆ.

Advertisement

ಹರಿಯಾಣ ಸರಕಾರ ದೇಶದಲ್ಲಿ ಗರಿಷ್ಠ ಪ್ರಶಸ್ತಿ ಮೊತ್ತವನ್ನು ಆಟಗಾರರಿಗೆ ನೀಡುತ್ತಿದೆ. ಕಾಮನ್‌ವೆಲ್ತ್‌ ಚಿನ್ನ ಗೆದ್ದವರಿಗೆ 1.5 ಕೋಟಿ ರೂ., ಬೆಳ್ಳಿಗೆ 75 ಲಕ್ಷ ರೂ., ಕಂಚಿಗೆ 50 ಲಕ್ಷ ರೂ.ಗಳನ್ನು ಘೋಷಿಸಿದೆ. ಆದರೆ ಸೇನೆ, ರೈಲ್ವೆಯಲ್ಲಿರುವ ರಾಜ್ಯದ ಕ್ರೀಡಾಪಟುಗಳಿಗೆ ಒಂದು ವೇಳೆ ಆ ಸಂಸ್ಥೆಗಳು ನಗದು ನೀಡಿದ್ದರೆ, ಅದನ್ನು ಕಡಿತ ಮಾಡಿಕೊಂಡು ಉಳಿದ ಮೊತ್ತ ಮಾತ್ರ ನೀಡಲಾಗುವುದು ಎಂದು ಹರಿಯಾಣ ಕ್ರೀಡಾಸಚಿವಾಲಯ ಘೋಷಿಸಿದೆ. ಅಂದರೆ ರೈಲ್ವೆ ಉದ್ಯೋಗಿಯಾಗಿರುವ ವಿನೇಶ್‌ ಫೊಗಾಟ್‌ಗೆ (ಕುಸ್ತಿ ಚಿನ್ನ) ರೈಲ್ವೆ 50 ಲಕ್ಷ ರೂ. ನೀಡಿದ್ದರೆ, ಹರಿಯಾಣ ಸರಕಾರ ಬಾಕಿ 1 ಕೋಟಿ ರೂ. ಮಾತ್ರ ನೀಡಲಿದೆ. ಇದನ್ನು ಜಾವೆಲಿನ್‌ ಸ್ಪರ್ಧಿ ನೀರಜ್‌ ಚೋಪ್ರಾ, ವಿನೇಶ್‌ ಫೊಗಾಟ್‌, ಬಾಕ್ಸರ್‌ ಮನೋಜ್‌ ಕುಮಾರ್‌ ವಿರೋಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next