Advertisement

Bantwal City: ಸಂಚಾರದಲ್ಲಿ ಸಣ್ಣ ವ್ಯತ್ಯಾಸವಾದರೂ ಎಡೆಬಿಡದೆ ಕರ್ಕಶ ಹಾರ್ನ್

03:14 PM May 19, 2023 | Team Udayavani |

ಬಂಟ್ವಾಳ: ಬಂಟ್ವಾಳ ನಗರ ವ್ಯಾಪ್ತಿಯ ಬಿ.ಸಿ.ರೋಡ್‌, ಬಂಟ್ವಾಳ ಪೇಟೆ, ಪಾಣೆಮಂಗಳೂರು ಭಾಗದಲ್ಲಿ ದಿನ ಕಳೆದಂತೆ ವಾಹನ ಸಂಚಾರ ಹೆಚ್ಚುತ್ತಿದ್ದು, ಇದರಿಂದ ಟ್ರಾಫಿಕ್‌ ಜಾಮ್‌ ಉಂಟಾಗುವ ಘಟನೆಗಳು ನಡೆಯುತ್ತಿದೆ. ವಾಹನಗಳ ಸಂಚಾರ ಕೊಂಚ ವ್ಯಾತ್ಯಾಸವಾದರೂ, ಚಾಲಕರು/ಸವಾರರು ಎಡಬಿಡದೆ ಕರ್ಕಶ ಹಾರ್ನ್ ಒತ್ತುವುದರಿಂದ ನಗರದೆಲ್ಲಡೆ ಶಬ್ದ ಮಾಲಿನ್ಯ ಉಂಟಾಗುತ್ತಿದೆ.

Advertisement

ಬಿ.ಸಿ.ರೋಡ್‌ನ‌ಲ್ಲಿ ಸಂಜೆಯಾಗುತ್ತಲೇ ವಾಹನಗಳ ಓಡಾಟ ಹೆಚ್ಚಳಗೊಂಡು ಅನಿವಾರ್ಯವಾಗಿ ವಾಹನಗಳು ನಿಧಾನಗತಿಯಲ್ಲಿ ಸಾಗಬೇಕಾಗುತ್ತದೆ. ಈ ವೇಳೆ ಮುಂದೆ ಸಾಗುವ ಧಾವಂತದಲ್ಲಿ ಚಾಲಕರು ಪದೇ ಪದೇ ಹಾರ್ನ್ ಹಾಕಿ ನಗರದ ಶಬ್ದಮಾಲಿನ್ಯಕ್ಕೆ ಕಾರಣರಾಗುತ್ತಿದ್ದಾರೆ. ಅದರಲ್ಲೂ ಬಸ್‌ಗಳ ಹಾರ್ನ್ ಕೊಂಚ ಭಿನ್ನವೇ ಆಗಿದ್ದು, ಸಮಯಕ್ಕೆ ಸರಿಯಾಗಿ ತಲುಪಬೇಕು ಎಂಬ ಒತ್ತಡದಿಂದ ಹಾರ್ನ್ನಿಂದ ಕೈತೆಗೆಯುವುದನ್ನೇ ಮರೆತು ಬಿಡುವಂತೆ ಹಾರ್ನ್ ಒತ್ತುತ್ತಿರುತ್ತಾರೆ.

ಬಿ.ಸಿ.ರೋಡ್‌ ನಗರದ ಮೂಲಕವೇ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವುದರಿಂದ ಟ್ಯಾಂಕರ್‌, ಘನ ಗಾತ್ರದ ಲಾರಿಗಳ ಸಂಚಾರ ಹೆಚ್ಚಿರುತ್ತದೆ. ಜತೆಗೆ ಬಸ್‌ ನಿಲ್ದಾಣದಿಂದ ಹೆದ್ದಾರಿಗೆ ಆಗಮಿಸುವ ವಾಹನಗಳು, ಕೈಕುಂಜೆ ರಸ್ತೆಯಲ್ಲಿ ಆಗಮಿಸಿದ ವಾಹನಗಳು ಹೆದ್ದಾರಿಗೆ ಸೇರುವ ಸ್ಥಳದಲ್ಲಿ ಸಹಜವಾಗಿಯೇ ವಾಹನಗಳ ವೇಗಕ್ಕೆ ನಿಯಂತ್ರಣ ಬೀಳುತ್ತದೆ. ಹೀಗೆ ವಾಹನಗಳು ಕೊಂಚ ನಿಧಾನವಾದರೂ ಅನಗತ್ಯ ಕಾರಣಕ್ಕೂ ಹಾರ್ನ್ ಹಾಕುವವರ ಸಂಖ್ಯೆ ಹೆಚ್ಚಿದೆ.

ಹೀಗಾಗಿ ಸ್ಥಳೀಯ ಅಂಗಡಿ ಮುಂಗಟ್ಟುಗಳ ಮಂದಿ, ಸಾರ್ವಜನಿಕರು ಹಾರ್ನ್ ಕರ್ಕಶದಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಸಂಜೆಯಾಗುತ್ತಲೇ ವಾಹನಗಳ ಸಂಖ್ಯೆ ಏಕಾಏಕಿ ಹೆಚ್ಚಳಗೊಂಡರೆ ಇಡೀ ನಗರವೇ ಹಾರ್ನ್ ಶಬ್ದಗಳಿಂದ ತುಂಬಿ ಹೋಗುತ್ತದೆ. ಹೀಗಾಗಿ ಪೊಲೀಸ್‌ ಇಲಾಖೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಇಂತಹ ಹಾರ್ನ್ಗಳ ವಿರುದ್ಧ ಒಂದು ಅಭಿಯಾನಕ್ಕೆ ಕೈಗೊಂಡರೆ ಶಬ್ದಮಾಲಿನ್ಯಕ್ಕೆ ಕೊಂಚ ಮಟ್ಟಿನ ಬ್ರೇಕ್‌ ಬೀಳುವ ಸಾಧ್ಯತೆ ಇದೆ.

Advertisement

ಬಸ್‌ಗಳ ಸ್ಪರ್ಧೆಗೂ
ಹಾರ್ನ್ ಬಳಕೆ
ಮಂಗಳೂರು ಭಾಗದಿಂದ ಆಗಮಿಸುವ ಬಸ್‌ಗಳು, ಮಂಗಳೂರು ಭಾಗಕ್ಕೆ ತೆರಳುವ ಖಾಸಗಿ ಬಸ್ಸುಗಳು ಯಾವತ್ತೂ ಸ್ಪರ್ಧೆಯಿಂದಲೇ ಸಾಗುತ್ತಿರುತ್ತವೆ. ತಾವು ಆಗಮಿಸುತ್ತಿದ್ದೇವೆ ಎಂದು ಮುಂದಿನ ಬಸ್ಸಿಗೆ ತಿಳಿಸುವ ದೃಷ್ಟಿಯಿಂದ ದೂರದಿಂದಲೇ ಕರ್ಕಶ ಹಾರ್ನ್ ಹಾಕಿಕೊಂಡು ಆಗಮಿಸುತ್ತಾರೆ. ಇದರಿಂದ ಇತರರಿಗೆ ತೊಂದರೆಯಾಗುತ್ತದೆ ಎಂಬ ಕನಿಷ್ಠ ತಿಳುವಳಿಕೆಯೂ ಅವರಲ್ಲಿ ಇಲ್ಲದೇ ಇರುವುದು ವಿಪರ್ಯಾಸವೇ ಸರಿ.

ಬಂಟ್ವಾಳ ಪೇಟೆಯಲ್ಲೂ ಸಮಸ್ಯೆ
ಬಿ.ಸಿ.ರೋಡ್‌ನ‌ ಜತೆಗೆ ಬಂಟ್ವಾಳ ಪೇಟೆ, ಪಾಣೆಮಂಗಳೂರು ಭಾಗದಲ್ಲೂ ಕೆಲವೊಂದು ಸಂದರ್ಭದಲ್ಲಿ ಹಾರ್ನ್ ಸಮಸ್ಯೆಯನ್ನು ಎದುರಿಸಲಾಗುತ್ತದೆ. ಅಂದರೆ ಪೇಟೆಯಲ್ಲಿ ಕಿರಿದಾದ ರಸ್ತೆಗಳಿದ್ದು, ಸಾಕಷ್ಟು ಮಂದಿ ರಸ್ತೆಯ ಅಂಚಿನಲ್ಲೇ ವಾಹನ ಇಟ್ಟು ತೆರಳುವ ಪ್ರಸಂಗಗಳು ನಡೆಯುತ್ತಿರುತ್ತದೆ. ಹೀಗಾಗಿ ಇತರ ವಾಹನಗಳು ಸರಾಗವಾಗಿ ಸಾಗುವ ಸಾಧ್ಯವಾಗದೇ ಹಾರ್ನ್ ಹಾಕುವ ಘಟನೆಗಳು ಕೂಡ ನಡೆಯುತ್ತಿದೆ.

ಅವಕಾಶ ಸಿಕ್ಕಿದಾಗ ಕ್ರಮ
ಕರ್ಕಶ ಹಾರ್ನ್ಗಳ ಜತೆಗೆ ಸೈಲೆನ್ಸರ್‌ಗಳ ಬಳಕೆಯ ಕುರಿತು ಕೂಡ ಸಾಕಷ್ಟು ಸಮಸ್ಯೆಗಳಿದ್ದು ಇವೆಲ್ಲ ನಗರದ ಮಧ್ಯೆಯೇ ನಡೆಯುವುದರಿಂದ ಅವುಗಳನ್ನು ಹಿಡಿಯುವುದಕ್ಕೆ ಸಮಸ್ಯೆಯಾಗುತ್ತಿದೆ. ಅದರ ವಿರುದ್ಧ ಕಾರ್ಯಾಚರಣೆಗೆ ಪ್ರಯತ್ನ ಮಾಡುತ್ತಿದ್ದು, ಅವಕಾಶ ಸಿಕ್ಕಿದರೆ ಖಂಡಿತವಾಗಿಯೂ ಕ್ರಮಕೈಗೊಳ್ಳುತ್ತೇವೆ..
-ಮೂರ್ತಿ, ಪಿಎಸ್‌ಐ, ಸಂಚಾರ ಪೊಲೀಸ್‌ ಠಾಣೆ, ಬಂಟ್ವಾಳ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next