Advertisement

ಪತಿ ಮನೆಯಲ್ಲಿ ಕಿರುಕುಳ: 3 ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

11:39 PM Aug 21, 2019 | Lakshmi GovindaRaj |

ಸಿರವಾರ (ರಾಯಚೂರು): ಪತಿಯ ಮನೆಯವರ ದೈಹಿಕ-ಮಾನಸಿಕ ಕಿರುಕುಳ ತಾಳದೆ ಮಹಿಳೆಯೊಬ್ಬಳು ಮೂವರು ಮಕ್ಕಳೊಂದಿಗೆ ಕೃಷ್ಣಾ ಬಲದಂಡೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಅತ್ತನೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ. ನಸೀಮಾ (28), ಅವರ ಮಕ್ಕಳಾದ ಮಹ್ಮದ್‌ ಅನೀಫ್‌ (5), ಅಯಾನ್‌ (3) ಮತ್ತು ರಿಗಾನ್‌ (1) ಮೃತರು. ಮೃತದೇಹ ಗಳು ದೇವದುರ್ಗ ತಾಲೂಕಿನ ಕೊತ್ತದೊಡ್ಡಿ ಗ್ರಾಮದಲ್ಲಿ ಸಿಕ್ಕಿವೆ.

Advertisement

ದೇವದುರ್ಗ ತಾಲೂಕಿನ ದೇವತಗಲ್‌ ಗ್ರಾಮದ ನಸೀಮಾ ಅವರನ್ನು ಅತ್ತನೂರಿನ ಮಹಿಬೂಬ್‌ ತಂದೆ ಮಹ್ಮದ್‌ನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ ಮೂವರು ಮಕ್ಕಳಿದ್ದರು. ನಸೀಮಾಳಿಗೆ ಗಂಡನ ಮನೆಯಲ್ಲಿ ಪತಿ, ಅತ್ತೆ ಹಮೀದಾ, ಮೈದುನ ಮುಸ್ತಾಫ್‌ ಮತ್ತು ಆತನ ಪತ್ನಿ ಮಮ್ತಾಜ್‌ ನಿತ್ಯ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದರು.

ಇದರಿಂದ ಬೇಸತ್ತ ಆಕೆ ತನ್ನ ಮೂವರು ಮಕ್ಕಳೊಂದಿಗೆ ಸೋಮವಾರ ತವರು ಮನೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದರು. ಆದರೆ, ಅಲ್ಲಿಗೆ ಹೋಗದೆ ಮೂವರು ಮಕ್ಕಳೊಂದಿಗೆ ಕೃಷ್ಣಾ ಬಲದಂಡೆ ಕಾಲುವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ಸಂಬಂಧ ಪತಿ, ಅತ್ತೆ, ಮೈದುನ ಹಾಗೂ ಆತನ ಪತ್ನಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next