Advertisement

ಉಚ್ಚೆಂಗೆಮ್ಮದೇವಿ ಹುಂಡಿಯಲ್ಲಿ 21 ಲಕ್ಷ ರೂ. ಸಂಗ್ರಹ

11:57 AM May 31, 2019 | Naveen |

ಹರಪನಹಳ್ಳಿ: ಮಧ್ಯ ಕರ್ನಾಟಕದ ಅಸಂಖ್ಯಾತ ಭಕ್ತರಿಂದ ಅರಾಧಿಸಲ್ಪಡುವ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಉಚ್ಚೆಂಗೆಮ್ಮದೇವಿ ದೇವಸ್ಥಾನದಲ್ಲಿ ಗುರುವಾರ ಹುಂಡಿ ಎಣಿಕೆ ಮಾಡಲಾಗಿದ್ದು, 21,49,110 ಲಕ್ಷ ರೂ. ಕಾಣಿಕೆ ಹಣ ಸಂಗ್ರಹವಾಗಿದೆ.

Advertisement

ಮುಜರಾಯಿ ಇಲಾಖೆ ಅಧಿಕಾರಿಗಳು ಹಾಗೂ ಉಚ್ಚೆಂಗೆಮ್ಮದೇವಿ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. ಕೇವಲ 68 ದಿನಗಳಲ್ಲಿ 21,49,110 ರೂ. ಸಂಗ್ರಹವಾಗಿದೆ. ಈ ಹಣವನ್ನು ಹರಪನಹಳ್ಳಿಯ ಎಸ್‌ಬಿಎಂ ಬ್ಯಾಂಕ್‌ನ ದೇವಸ್ಥಾನದ ಖಾತೆಗೆ ಜಮಾ ಮಾಡಲಾಯಿತು. ಕಳೆದ 25 ಮಾರ್ಚ್‌ 2019ರಂದು ಹುಂಡಿ ಎಣಿಕೆ ಮಾಡಲಾಗಿದ್ದ ಸಮಯದಲ್ಲಿ 15,70,509 ಲಕ್ಷ ರೂ. ಸಂಗ್ರಹವಾಗಿತ್ತು ಎಂದು ಉತ್ಸವಾಂಭ ದೇವಸ್ಥಾನ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎಂ. ಶಿವಕುಮಾರಸ್ವಾಮಿ ತಿಳಿಸಿದ್ದಾರೆ.

ಹುಂಡಿ ಎಣಿಕೆ ಕಾರ್ಯವನ್ನು ಉಪವಿಭಾಗಾಧಿಕಾರಿ ಬಿ.ಎಸ್‌.ಮಂಜುನಾಥಸ್ವಾಮಿ ಪರಿಶೀಲಿಸಿ ನಂತರ ದೇವಿಯ ದರ್ಶನ ಪಡೆದರು. ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎಂ. ಶಿವಕುಮಾರಸ್ವಾಮಿ, ರಾಜಸ್ವನಿರೀಕ್ಷಕ ಶ್ರೀಧರ್‌, ಮುಜರಾಯಿ ಇಲಾಖೆ ಸಿಬ್ಬಂದಿ ಶಾಂತಮ್ಮ, ಉಪ ತಹಶೀಲ್ದಾರ್‌ ಪಾತಿಮಾ, ಎಸ್‌ಬಿಎಂ ಬ್ಯಾಂಕ್‌ ಮ್ಯಾನೇಜರ್‌ ಹರೀಶ್‌, ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಕೆ.ಕೆಂಚಪ್ಪ, ಗುಮಾಸ್ತ ರಮೇಶ್‌, ಸಮಿತಿ ಸದಸ್ಯರಾದ ಕೆ.ಸಿದ್ದೇಶ್ವರಗೌಡ, ಅರ್ಚಕರು ಹಾಗೂ ಸೇವಾದಳ ಮಾಸ್ತರ್‌ ಚೆನ್ನವೀರಸ್ವಾಮಿ ಇತರರು ಇದ್ದರು.

ಹರಕೆ ಪತ್ರಗಳು ಪತ್ತೆ
ಕಾಣಿಕೆ ಹುಂಡಿಯಲ್ಲಿ ದೇವಿಗೆ ವಿವಿಧ ಭಕ್ತರು ಪತ್ರ ಬರೆದು ಸಮಸ್ಯೆ ನಿವಾರಿಸುವಂತೆ ಬೇಡಿಕೊಂಡಿದ್ದಾರೆ. ಹುಂಡಿ ಎಣಿಕೆ ಸಮಯದಲ್ಲಿ ಪತ್ರಗಳು ಲಭ್ಯವಾಗಿವೆ. ಅಕ್ಕನ ಗಂಡನಿಗೆ ಜ್ವರ ಬಂದಿದ್ದು, ಬೇಗ ಗುಣಮುಖ ಮಾಡಿ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡುವಂತೆ ಮತ್ತು ತಾಯಿಗೆ ಬೇಗ ಹುಷಾರು ಮಾಡುವಂತೆ ಒಂದು ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ. ಮತ್ತೂಂದು ಪತ್ರದಲ್ಲಿ ಮನೆ ಬಿಟ್ಟು ಕೊಡುವಂತೆ, ಸಾಲಗಾರರು ಗಂಡನಿಗೆ ಯಾವುದೇ ರೀತಿಯಲ್ಲಿ ತೊಂದರೆ ಕೊಡದಂತೆ ಕಾಪಾಡಬೇಕೆಂದು ಬೇಡಿಕೊಂಡಿದ್ದಾರೆ. ನನ್ನ ಮತ್ತು ನನ್ನ ಅಣ್ಣನನ್ನು ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಪಾಸ್‌ ಮಾಡಬೇಕು, ಓದುವುದಕ್ಕೆ, ಬರಿಯಲಿಕ್ಕೆ ತೊಂದರೆಯಬಾರದು, ಮನೆಯಲ್ಲಿರುವ ಜಗಳ, ತೊಂದರೆ ದೂರವಾಗಲಿ, ಮನೆಯಲ್ಲಿರುವವ ಎಲ್ಲರೂ ಕ್ಷೇಮವಾಗಿರಲಿ, ನನಗೆ ಪೊಲೀಸ್‌ ಕೆಲಸ ಸಿಗಲಿ. ಎಲ್ಲರನ್ನು ಚೆನ್ನಾಗಿರಲಿ ಎಂದು ಮತ್ತೂಬ್ಬ ಭಕ್ತ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next